Saturday, 12 May 2012

ನೇಗಿಲ ಯೋಗಿಗೆ ’ಕೃಷಿ ವಿಜ್ಞಾನಿ’ ಸನ್ಮಾನ


ಲೇಖಕಿ:-ಅನಿತಾ ಸಿ ಪಿ
ಕೃಪೆ:-ದ ಸಂಡೇ ಇಂಡಿಯನ್

ರಾಯಚೂರು ಎಂದಾಕ್ಷಣ ಕಣ್ಣಿಗೆ ಕಟ್ಟುವುದು ಬಿಸಿಲ ಝಳ. ಒಣಒಣ ಭೂಮಿ, ಕಣ್ಣು ಹಾಯಿಸಿದಲ್ಲೆಲ್ಲಾ ಬಯಲು. ಆದರೆ ಇದಕ್ಕೆ ತದ್ವಿರುದ್ಧವಾಗಿ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಟ್ಟ್ಟೂರು ಗ್ರಾಮದ ರೈತ ಮಲ್ಲೇಶಗೌಡ ಅಮರೇಗೌಡ ಪಾಟೀಲ್ ಅವರ ತೋಟಕ್ಕೊಮ್ಮೆ ನೀವು ಕಾಲಿಟ್ಟರೆ ದೊಡ್ಡ ಅಚ್ಚರಿಯೇ ನಿಮ್ಮನ್ನ ಎದುರುಗೊಳ್ಳುತ್ತದೆ! ಮಲೆನಾಡ ತಂಪು, ಕೊಟ್ಟಿಗೆಯಲ್ಲಿ ಸೊಂಪಾಗಿ ಹಸಿರುಂಡು ಬೆಳೆದ ಜಾನುವಾರುಗಳು ನಿಮ್ಮನ್ನು ಎದುರುಗೊಳ್ಳುತ್ತವೆ. 


ಹೌದು. ಆ ಬಯಲು ಸೀಮೆಯಲ್ಲಿ ಇಂಥಹ ಹಸಿರಿನ ಸಮೃದ್ಧತೆಯನ್ನು ಕಾಯ್ದುಕೊಂಡು ಪೋಷಿಸಿರುವ ಇವರ ಕೃಷಿ ವೈಖರಿಗೆ ಮಾರು ಹೋಗದವರಿಲ್ಲ. ಒಟ್ಟು ೪೩ ಎಕರೆ ಜಮೀನು ಹೊಂದಿರುವ ಮಲ್ಲೇಶ್‌ಗೌಡ ಪಾಟೀಲರು ಕೃಷಿ, ತೋಟಗಾರಿಕೆ, ಮೀನು ಸಾಕಾಣಿಕೆ, ಹೈನುಗಾರಿಕೆ, ರೇಷ್ಮೆ, ಮೇವಿನಬೆಳೆ, ಅರಣ್ಯ ಬೆಳೆ, ಎರೆಗೊಬ್ಬರ ಉತ್ಪಾದನೆ ಸೇರಿದಂತೆ ಹಲವು ರೀತಿಯ ಬೆಳೆ ತೆಗೆಯುತ್ತಿದ್ದಾರೆ. 

ಒಟ್ಟು ೨೫ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡುತ್ತಿದ್ದು, ೧೩ ಎಕರೆಯಲ್ಲಿ ಸಮೃದ್ಧ ರೇಷ್ಮೆ ಬೆಳೆ ತೆಗೆಯುತ್ತಿದ್ದಾರೆ. ಒಂದೂವರೆ ಎಕರೆಯಲ್ಲಿ ನಿಂಬು, ಸಪೋಟ ಹಾಕಿದ್ದಾರೆ. ಎರಡೂವರೆ ಎಕರೆಯಲ್ಲಿ ಪೇರಲೆಕಾಯಿ ಹಾಗೂ ನುಗ್ಗೆಕಾಯಿ ಮಿಶ್ರ ಬೆಳೆ ಮಾಡುತ್ತಿದ್ದಾರೆ. ಇನ್ನು ೭೦ ತೆಂಗಿನ ಮರಗಳೂ ಇವೆ. ಇನ್ನು ೪ ಎಕರೆ ಜಮೀನಿನಲ್ಲಿ ಕೋಯ್ಮತ್ತೂರು-೩, ಡಿ ಹೆಚ್‌ಆರ್ ನೇಪಿಯರ್, ಪ್ಯಾರಾ ಹುಲ್ಲು, ಗ್ಲಿರಿಸೀಡಿಯಾ ಹಾಗೂ ಆತಿ ಗ್ರಾಸ್, ಮೆಕ್ಕೆ ಜೋಳ ಇತ್ಯಾದಿ ಹುಲ್ಲು ಜಾತಿಯ ಸೊಪ್ಪನ್ನು ದನಕರುಗಳ ಮೇವಿಗಾಗಿ ಬೆಳೆಯುತ್ತಿದ್ದಾರೆ. ಇನ್ನು ಹೊಲದ ಬದುವಿನಲ್ಲಿ ಗ್ಲೇಸರ್ ಡೇ, ಸುಬಾಬುಲ್ (ಹಸುವಿಗೆ ಆಹಾರ ಮತ್ತು ಗೊಬ್ಬರಕ್ಕೂ ಉಪಯುಕ್ತ) ಮರಗಳು, ೩೦೦ ಸಾಗುವಾನಿ, ೪೦ ಹುಣಸೆ ಮರಗಳನ್ನು ಸಾಕಿದ್ದಾರೆ. ೧೮ ಎಕರೆ ಒಣ ಜಮೀನಿನಲ್ಲಿ ಕಡಲೆ, ಬಿಳಿಜೋಳ, ಸೂರ್ಯಕಾಂತಿಯನ್ನು ಬೆಳೆಯುತ್ತಾರೆ. ಹಚ್ಚಹಸಿರು ಅವರ ಹೊಲದ ಮೂಲೆ ಮೂಲೆಯನ್ನು ಆವರಿಸಿ ಮೈದುಂಬಿ ಕಾಣುತ್ತದೆ. ಇವರು ತಮ್ಮ ಹೊಲದಲ್ಲಿ ಮಣ್ಣು ಹಾಗೂ ನೀರು ಸಂರಕ್ಷಣೆಗಾಗಿ ಅಳವಡಿಸಿಕೊಂಡಿರುವ ವಿಧಾನಗಳು ಕೂಡ ಯಾವ ವಿಜ್ಞಾನಿಗಳ ಯೋಜನೆ, ಸಂಶೋಧನೆ ಹಾಗೂ ಚಿಂತನೆಗಳಿಗೂ ಕಮ್ಮಿ ಇಲ್ಲ. ನೀರು ಇಂಗುವ ಗುಂಡಿ, ಹಳ್ಳಕ್ಕೆ ಹಾಕಿದ ತಡೆಗೋಡೆ, ಹೊಲದಲ್ಲಿ ನಿರ್ಮಿಸಿರುವ ನೈಸರ್ಗಿಕ ಕೆರೆ ಇವು ಅವರ ಪರಿಶ್ರಮ ಹಾಗೂ ಕೃಷಿ ಕಾಳಜಿಗೆ ಕನ್ನಡಿಯಾಗಿದ್ದರೆ, ಕೃಷಿ ಯಾಂತ್ರಿಕರಣ, ಸುಧಾರಿತ ನೇಗಿಲು, ಯಾಂತ್ರಿಕ ಸಿಂಪಡಕಗಳು, ಕಳೆ ಯಂತ್ರಗಳು, ಧಾನ್ಯ ಸಂಸ್ಕರಣಾ ಯಂತ್ರಗಳ ಬಳಕೆ ಕೂಡಾ ಇನ್ನೊಂದು ಬಗೆಯದ್ದಾಗಿವೆ. 

ಮಲ್ಲೇಶ್‌ಗೌಡರ ಹೊಲದ ಸಮೀಪದಲ್ಲಿ ಮಳೆಗಾಲದಲ್ಲಿ ಹರಿಯುವ ಹಳ್ಳವೊಂದಿದೆ. ಆ ಹಳ್ಳಕ್ಕೆ ತಡೆಗೋಡೆಯೊಂದನ್ನು ನಿರ್ಮಿಸಿದ್ದು, ಅದರಿಂದ ತಮ್ಮ ಹೊಲದಲ್ಲಿ ೧ ಎಕರೆ ಪ್ರದೇಶದಲ್ಲಿ ಕೆರೆಯೊಂದನ್ನು ನಿರ್ಮಿಸಿ ಹಳ್ಳದಿಂದ ಕೆರೆಗೆ ನೀರು ಹಾಯಿಸುತ್ತಾರೆ. ಈ ಕೆರೆ ೪೦೦ ಅಡಿ ಉದ್ದ, ೧೦೦ ಅಡಿ ಅಗಲ, ೨೦ ಅಡಿ ಆಳವಿದೆ. ಮಳೆಗಾಲದಲ್ಲಿ ಹಳ್ಳ ಹರಿಯುವಾಗ ಈ ಕೆರೆಯಲ್ಲಿ ನೀರು ಸಂಗ್ರಹಿಸುತ್ತಾರೆ. ಸದ್ಯ ಇವರ ಕೆರೆಯಲ್ಲಿ ೫ ಅಡಿ ನೀರು ಇದೆ. ಏಕೆಂದರೆ ಕಳೆದ ವರ್ಷ ಈ ಭಾಗದಲ್ಲಿ ಮಳೆಯಾಗಿದ್ದು ತುಂಬಾ ಕಡಿಮೆ. ಹೀಗಾಗಿ ೨೦೧೦ರಲ್ಲಿ ಬಂದ ಮಳೆಯ ನೀರೇ ಇನ್ನೂ ಇವರ ಕೆರೆಯಲ್ಲಿದೆ. ಇಲ್ಲಿಗೆ ಸರಿಯಾಗಿ ಮಳೆ ನೀರು ತುಂಬಿಸಿ ೧ ವರ್ಷ ೮ ತಿಂಗಳಾಗಿದೆ ಎನ್ನುತ್ತಾರೆ ಮಲ್ಲೇಶ್‌ಗೌಡರು. ಅಚ್ಚರಿಯೆಂದರೆ ಇವರ ಊರಿನಲ್ಲೇ ಇರುವ ಇನ್ನೆರಡು ಕೆರೆಗಳಲ್ಲಿ ಸರ್ಕಾರ ಹೂಳೆತ್ತಿಸಿದ್ದರೂ ನೀರಿಲ್ಲ. ಆದರೆ ಇವರ ಹೊಲದ ಕೆರೆಯಲ್ಲಿ ಮಾತ್ರ ನೀರು ತುಂಬಿದೆ. ಮಳೆಗಾಲದಲ್ಲಿ ಕೆರೆಗೆ ನೀರು ತುಂಬಿಸಿದ ಕಾರಣಕ್ಕೆ ಕೆರೆ ಪಕ್ಕದಲ್ಲಿರುವ ಎರಡು ತೆರದ ಬಾವಿಗಳಲ್ಲೂ ನೀರಿದೆ. ಇನ್ನು ೩ ಕೊಳವೆ ಬಾವಿಗಳಿದ್ದು ಅವುಗಳಲ್ಲಿ ೨೦ ಎಕರೆ ಹೊಲಕ್ಕೆ ಆಗುವಷ್ಟು ನೀರಿದೆ. ಹೀಗಾಗಿಯೇ ಒಂದು ವರ್ಷ ಮಳೆ ಕೈಕೊಟ್ಟರೂ ಇವರಿಗೆ ಅಂಥಹ ನಷ್ಟವೇನೂ ಅಗಿಲ್ಲ. ಕೆರೆಯಿಂದಾಗಿ ಅಂತರ್ಜಲ ಮಟ್ಟವೂ ಕುಸಿದಿಲ್ಲ. ಇದಕ್ಕೆ ನಿದರ್ಶನವೆಂಬಂತೆ ೧೫೦ರಿಂದ ೨೦೦ ಅಡಿ ಬೋರ್ ತೆಗಸಿದರೆ ಸಾಕು ಇಲ್ಲಿ ನೀರು ಬೀಳುತ್ತದೆ. ೨೦ ಅಡಿ ತೆಗೆದರೆ ತೆರದ ಬಾವಿಗಳಲ್ಲೂ ನೀರು ಬರುತ್ತದೆ. ಈ ಕೆರೆಯಲ್ಲೂ ಇವರು ವಾಣಿಜ್ಯ ಲಾಭ ಗಿಟ್ಟಿಸುತ್ತಿದ್ದಾರೆ. ವಿಶೇಷವೆಂದರೆ ತಮ್ಮ ಕೆರೆಯಲ್ಲಿ ಮೀನು ಸಾಕಾಣಿಕೆಯನ್ನೂ ಮಾಡಿದ್ದಾರೆ. ಪ್ರತಿ ವರ್ಷ ೨೫ ಸಾವಿರ ಲಾಭ ಪಡೆಯುತ್ತಾರೆ. 

ರೇಷ್ಮೆ ಸಾಕಾಣಿಕೆ ಎಂದರೆ ಕರ್ನಾಟಕದ ಮಟ್ಟಿಗೆ ಅದು ಮೈಸೂರು ಸೀಮೆಯ ಕೃಷಿ ಪದ್ಧತಿ ಎನ್ನುವ ನಂಬಿಕೆ ಇಂದಿಗೂ ಇದೆ. ಆದರೆ ಮಲ್ಲೇಶ್‌ಗೌಡರು ಈ ಮಾತನ್ನು ಅಕ್ಷರಶಃ ಹುಸಿಯಾಗಿಸಿದ್ದಾರೆ. ೧೯೭೮ರಲ್ಲಿ ಮೊದಲ ಬಾರಿಗೆ ರಾಯಚೂರು ಭಾಗದಲ್ಲಿ ರೇಷ್ಮೆ ಬೆಳೆ ಪರಿಚಯವಾಯ್ತು. ಇಂದು ೧೩ ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆಯುವ ಇವರು ತಮ್ಮ ಆದಾಯದ ಬಹಳಷ್ಟು ಪಾಲನ್ನು ರೇಷ್ಮೆಯಿಂದಲೇ ಪಡೆಯುತ್ತಿದ್ದಾರೆ. ವರ್ಷಕ್ಕೆ ಸರಾಸರಿ ೪೬೮೪ ಕೆಜಿ ರೇಷ್ಮೆ ಗೂಡು ಉತ್ಪಾದಿಸಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಈ ಭಾಗದಲ್ಲೇ ಅತೀ ’ಹೆಚ್ಚು ರೇಷ್ಮೆ ಉತ್ಪಾದಿಸುವ ರೈತ’ ಎಂಬ ಹೆಗ್ಗಳಿಕೆ ಇವರದ್ದು. ರೇಷ್ಮೆ ಸಾಕಾಣಿಕೆಗಾಗಿ ಮೂರು ಪ್ರತ್ಯೇಕ ಮನೆಗಳನ್ನು ನಿರ್ಮಿಸಿದ್ದಾರೆ. 


ವ್ಯವಸಾಯಕ್ಕೆ ಪೂರಕವಾಗಿ ತಮ್ಮ ತೋಟದಲ್ಲಿ ಹೈನುಗಾರಿಕೆಯನ್ನು ಮಾಡಿಯೂ ಯಶಸ್ವಿಯಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲೇ ಅತಿ ಹೆಚ್ಚು ಹಾಲು ಹಾಕುತ್ತಿರುವ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ. ದಿನಕ್ಕೆ ಇವರು ಮಾರಾಟ ಮಾಡುವ ಹಾಲಿನ ಪ್ರಮಾಣ ೧೫೦ ಲೀಟರ್! ಇವರ ವಿಶೇಷ ಪ್ರಯತ್ನದಿಂದಾಗಿ ಲಿಂಗಸುಗೂರಿನಲ್ಲಿ ’ಕರ್ನಾಟಕ ಹಾಲು ಮಂಡಳಿ’ಯೂ ಸ್ಥಾಪನೆಯಾಗಿದೆ. ಇದರ ಉಪಯೋಗವನ್ನು ಮಟ್ಟೂರು ಗ್ರಾಮ ಸೇರಿದಂತೆ ಇತರ ಗ್ರಾಮಗಳೂ ಪಡೆಯುತ್ತಿವೆ. ಇವರ ಪರಿಶ್ರಮದಿಂದಾಗಿ ಸದ್ಯ ತಾಲೂಕಿನಲ್ಲಿ ೧೨ ಹಾಲು ಸೊಸೈಟಿಗಳು ತಲೆ ಎತ್ತಿವೆ. ೪೦ ಸಂಘಗಳು ಇವೆ. ಸದ್ಯ ಹಾಲಿನ ಬೆಲೆ ೨೩ ರೂಪಾಯಿ ಇದ್ದು ಸಾಕಷ್ಟು ಲಾಭ ಸಿಗುತ್ತದೆ ಎನ್ನುತ್ತಾರೆ ಮಲ್ಲೇಶ್‌ಗೌಡರು. ಮೊದಲು ಮುರ್ರಾ ಎಮ್ಮೆಗಳು ಹಾಗೂ ಜವಾರಿ ದನಗಳನ್ನು ಸಾಕಿದ್ದ ಇವರು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಹಾಲು ಕೊಡುವ ಸೀಮೆ ಹಸುಗಳನ್ನು ಸಾಕುತ್ತಿದ್ದಾರೆ. ತಮ್ಮ ಜಾನುವಾರುಗಳ ಮೇವಿಗಾಗಿ ೪ ಎಕರೆ ಪ್ರದೇಶದಲ್ಲಿ ವಿವಿಧ ರೀತಿಯ ಹುಲ್ಲು ಬೆಳೆಯುತ್ತಾರೆ. ಅಲ್ಲದೇ ಹುಲ್ಲಿನ ಗಡ್ಡೆ ಹಾಗೂ ಬೀಜಗಳನ್ನು ಇತರ ರೈತರಿಗೂ ನೀಡಿ ಪ್ರೇರೇಪಿಸುತ್ತಾರೆ. ಮಲ್ಲೇಶಪ್ಪ ಅವರು ತಮ್ಮ ಹೊಲಕ್ಕಾಗಿ ಎರೆಹುಳಗೊಬ್ಬರವನ್ನು ತಯಾರಿಸುತ್ತಾರಲ್ಲದೇ ಇತರೇ ರೈತರಿಗೂ ಅದನ್ನು ೨೫೦ ಕೆಜಿಗೆ ೫೦ ರೂಪಾಯಿಯಂತೆ ಮಾರಾಟ ಮಾಡುತ್ತಾರೆ. 

ಜಾನುವಾರುಗಳ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದಕ್ಕಾಗಿ ದನ-ಕರುಗಳ ಸಗಣಿ- ಗಂಜಲವೆಲ್ಲಾ ಒಂದು ದೊಡ್ಡ ಟ್ಯಾಂಕ್‌ಗೆ ಬಂದು ಸೇರುವಂತೆ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಜಾನುವಾರುಗಳ ಸಗಣಿ- ಗಂಜಲ ಹಾಗೂ ಅವುಗಳಿಗೆ ಸ್ನಾನ ಮಾಡಿಸಿದ ನೀರು ಎಲ್ಲವೂ ಹೋಗಿ ಸೇರುವಂತೆ ಪೈಪ್ ಜೋಡಿಸಿದ್ದು ಹೊಲಕ್ಕೆ ಬೇಕಾಗುವಷ್ಟು ಗೊಬ್ಬರವನ್ನು ಪಡೆಯುತ್ತಾರೆ. ಅಲ್ಲದೇ ಹೊಲದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಗೊಬ್ಬರ ಅನಿಲ ಬಳಕೆಗೆ ವ್ಯವಸ್ಥೆಯನ್ನು ಮಾಡಿಸಿದ್ದಾರೆ. 

ಇಷ್ಟೆಲ್ಲಾ ಕೃಷಿಯಲ್ಲಿ ಸಾಧನೆ ಮಾಡಿರುವ ಮಲ್ಲೇಶ್ ಅವರು ತಮ್ಮ ಆದಾಯ ಹಾಗೂ ವೆಚ್ಚದ ಬಗ್ಗೆ ಹೀಗೆ ವಿವರಿಸುತ್ತಾರೆ: ನಾಲ್ಕು ದನದ ಕೊಟ್ಟಿಗೆಗೆ ಹಾಗೂ ಗೊಬ್ಬರ ನಿರ್ವಹಣೆಗೆ ಮಾಡಿರುವ ಖರ್ಚು ಅಂದಾಜು ೫೦ ಲಕ್ಷ ರೂಪಾಯಿಗಳು. ಕೆರೆ ನಿರ್ವಹಣೆಗೆ ಹಾಗೂ ಹೊಲದ ಸುತ್ತಲು ಹಾಕಿರುವ ಪ್ಲಾಂಟೇಷನ್ ಇತ್ಯಾದಿಗಾಗಿ ೫೦ ಲಕ್ಷ ರೂಪಾಯಿ ಒಟ್ಟು ೧ ಕೋಟಿ ಬಂಡವಾಳ ಹಾಕಿರುವುದಾಗಿ ಹೇಳುತ್ತಾರೆ. ಇದಕ್ಕಾಗಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ೨೫ ಲಕ್ಷ ಸಹಾಯಧನ ಮತ್ತು ಬ್ಯಾಂಕ್ ಲೋನ್ ೨೫ ಲಕ್ಷ ರೂಪಾಯಿಯನ್ನು ಪಡೆದಿದ್ದಾರೆ. ಉಳಿದಿದ್ದು ತಮ್ಮ ಸ್ವಂತ ಬಂಡವಾಳ ಹಾಕಿರುವುದಾಗಿ ಹೇಳುತ್ತಾರೆ. ವಾರ್ಷಿಕ ೨೫ ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಅತೀ ಹೆಚ್ಚು ಅಂದರೆ ೧೩ ಲಕ್ಷದಷ್ಟು ರೇಷ್ಮೇ ಸಾಕಾಣಿಕೆಯಿಂದ, ಹಾಲು ಹಾಗೂ ಹಸು ಮಾರಾಟದಿಂದ ೭ ಲಕ್ಷ ಹಾಗು ಪೇರಲೆ, ಸಪೋಟೋ ಮಾರಾಟ ಇತ್ಯಾದಿ ತೋಟಗಾರಿಕೆಯಿಂದ ೨ ಲಕ್ಷ ಲಾಭವಾಗುತ್ತದೆ ಎಂದು ತಮ್ಮ ಪ್ರತೀ ಆದಾಯ ಮೂಲಗಳನ್ನು ಯಾವುದೇ ಮುಚ್ಚುಮರೆಯಿಲ್ಲದೇ ಬಿಚ್ಚಿಡುತ್ತಾರೆ. 

ಈ ಮಣ್ಣಿನ ಯೋಗಿಯ ಪರಿಶ್ರಮಕ್ಕೆ ಹಾಗೂ ಕೃಷಿ ಸಾಧನೆಗೆ ಸಾಕಷ್ಟು ಪುರಸ್ಕಾರಗಳು ಕೂಡಾ ಲಭಿಸಿವೆ. ತಮ್ಮ ತೋಟದಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಮಲ್ಲೇಶ್ ಅವರನ್ನು ಗುರುತಿಸಿರುವ ರಾಜ್ಯ ಸರ್ಕಾರ ೨೦೧೦-೨೦೧೧ ಸಾಲಿನ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯ ೨೦೧೨ರ ಏಪ್ರಿಲ್ ೨೨ ರಂದು ಇವರ ಸಾಧನೆಯನ್ನು ಕಂಡು ಮೊಟ್ಟಮೊದಲ ಬಾರಿಗೆ ’ಕೃಷಿ ವಿಜ್ಞಾನಿ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಷ್ಟೇ ಅಲ್ಲದೇ ಸಾಕಷ್ಟು ಸನ್ಮಾನಗಳೂ ಇವರನ್ನು ಅರಸಿ ಬಂದಿವೆ. 

ಧಾರವಾಡ ವಿಶ್ವವಿದ್ಯಾಲಯ ಕೂಡಾ ಇವರಿಗೆ ’ಶ್ರೇಷ್ಠ ಕೃಷಿಕ’ ಪುರಸ್ಕಾರ ನೀಡಿದೆ. ರಾಯಚೂರು ಜಿಲ್ಲಾ ಘಟಕ ಇವರ ಸಾವಯವ ಕೃಷಿ ಪದ್ಧತಿಯನ್ನು ಮೆಚ್ಚಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಲ್ಲೇಶ್‌ಗೌಡ ಪಾಟೀಲ್ ಅವರ ಸಾಧನೆ ನಿಜಕ್ಕೂ ಪ್ರತಿಯೊಬ್ಬ ರೈತರಿಗೂ ಮಾದರಿ. ಹೀಗಾಗಿಯೇ ಅವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಅವರ ಈ ಹೆಗ್ಗಳಿಕೆಯ ಹಿಂದೆ ಸಾಕಷ್ಟು ಪರಿಶ್ರಮವೂ ಇದೆ. ಇದೇ ಅವರ ಕಣ್ಮುಂದೆ ನಿಂತಿದೆ ಎಂದರೆ ತಪ್ಪಿಲ್ಲ. ಈ ಮಣ್ಣಿನ ಮಗನ ಯಶೋಗಾಥೆ ನಿಜಕ್ಕೂ ರೈತರಿಗೆ ಸ್ಫೂರ್ತಿದಾಯಕವಾಗಿದೆ.


ಮೂಲತಃ ನಮ್ಮದು ಕೃಷಿ ಕುಟುಂಬ ಹುಟ್ಟುತ್ತಲೇ ನಾನು ಮಣ್ಣಿನ ಒಡನಾಟವನ್ನು ಬೆಳೆಸಿಕೊಂಡು ಬೆಳೆದೆ. ನನಗೀಗ ೫೬ ವರ್ಷ. ತಿಳುವಳಿಕೆ ಬಂದಾಗಿನಿಂದ ನಾನು ಕೃಷಿಯನ್ನೇ ನೆಚ್ಚಿಕೊಂಡು ಅಂಟಿಕೊಂಡು ಬದುಕುತ್ತಿದ್ದೇನೆ. ಭೂಮಿ ತಾಯಿ ನನ್ನನ್ನು ಎಂದೂ ಕೈಬಿಟ್ಟಿಲ್ಲ. ಕೃಷಿಯಲ್ಲಿ ನಾನು ಮಾಡಿರುವ ಎಲ್ಲ ಸಂಶೋಧನೆ, ಆವಿಷ್ಕಾರಗಳು ಏನೇ ಇದ್ದರೂ ಎಲ್ಲವೂ ನನ್ನ ಅನುಭವದ ಹಾಗೂ ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡದ್ದರ ಫಲ. ಕೃಷಿಯಲ್ಲಾಗಲೀ ಅಥವಾ ಇನ್ನಾವುದೇ ವಿಷಯದಲ್ಲಿ ನಾನು ಯಾವುದೇ ಪದವಿ ಪಡೆದಿಲ್ಲ ನಾನು ಓದಿದ್ದು ಕೇವಲ ೧೦ನೇ ತರಗತಿ ಎನ್ನುವ ಸರಳ ವ್ಯಕ್ತಿತ್ವ ಅವರದ್ದು. 

ಇದಕ್ಕೆ ಇರಬೇಕು ಗಾಂಧೀಜಿಯವರು ಅನುಭವವೇ ಶಿಕ್ಷಣ ಎಂದು ಹೇಳಿದ್ದು. ಅವರ ಮಾತು, ಕೃತಿ, ಎಲ್ಲವೂ ಹೊಲ, ಉಳಿಮೆ, ಬೆಳೆಯ ಸುತ್ತಲೇ. ೫೬ರ ಹರೆಯದಲ್ಲೂ ಹೊಸತನದ ಹುರುಪು ಎದ್ದು ಕಾಣುತ್ತದೆ. ಇಂದಿಗೂ ಕೂಡಾ ಕೃಷಿಗೆ ಸಂಬಂಧಿಸಿದಂತೆ ರಾಜ್ಯದ ಯಾವುದೇ ಮೂಲೆಯಲ್ಲಾಗಲೀ ಕಾರ್ಯಗಾರ, ಉಪನ್ಯಾಸಗಳು, ತರಬೇತಿ ನಡೆದರೆ ಮರು ಮಾತಾಡದೇ ಹೊಗುವ ಅವರ ಉತ್ಸಾಹಕ್ಕೆ ಎಣೆ ಇಲ್ಲ. 

ಮಲ್ಲೇಶ್‌ಗೌಡ ಪಾಟೀಲ್ ಅವರಿಗೆ ’ಕೃಷಿ ವಿಜ್ಞಾನಿ’ ಪ್ರಶಸ್ತಿ ಪ್ರದಾನ ಮಾಡಿದ ರಾಯಚೂರು ಕೃಷಿ ವಿವಿ ಕುಲಪತಿ ಡಾ.ಬಿ.ವಿ.ಪಾಟೀಲ್ ದೇಶದಲ್ಲಿಯೇ ಕೃಷಿ ವಿವಿಯೊಂದು ‘ರೈತ ವಿಜ್ಞಾನಿ’ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು ಇದೇ ಮೊದಲು. ಅದನ್ನು ಪಡೆದ ಕೀರ್ತಿ ಇವರದ್ದು. ಇದಕ್ಕೆ ಅವರ ಪರಿಶ್ರಮ ಹಾಗೂ ಕೃಷಿ ಕ್ಷೇತ್ರದಲ್ಲಿ ಅವರು ಮಾಡಿರುವ ಅಲಿಖಿತ ಸಂಶೋಧನೆ ಕಾರಣ ಎನ್ನುತ್ತಾರೆ. 
ವಿವಿಯ ನಿರ್ದೇಶಕರಲ್ಲೊಬ್ಬರಾದ ಎಸ್.ಎನ್. ಹಂಚಿನಾಳ್ ಅವರೂ ಕೂಡಾ, ಮನಸ್ಸಿದ್ದಲ್ಲಿ ಮಾರ್ಗ ಎನ್ನುವ ಮಾತನ್ನು ಇವರನ್ನು ನೋಡಿ ನಮ್ಮ ರೈತರು ಅರಿಯಬೇಕು. ಇವರ ಕೃಷಿ ಪದ್ಧತಿ ಎಲ್ಲ ರೈತರಿಗೂ ಮಾದರಿ ಇವರ ಸಲಹೆ ಸೂಚನೆಗಳು ರೈತರಿಗೊಂದು ಕೊಡುಗೆಯೇ ಸರಿ ಎಂದಿದ್ದಾರೆ. ಕಾಲೇಜಿನ ಅಧ್ಯಾಪಕ ಬಸವರಾಜ್ ಹುಲಗೂರು ಇವರ ಕೃಷಿ ಪದ್ಧತಿಗಳು ಯಾವುದೇ ಸಂಶೋಧನೆ, ವಿಜ್ಞಾನಿಗೂ ಕಮ್ಮಿ ಇಲ್ಲ ಎಂಬ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. 

ಮಾಡುವ ಕೆಲಸದಲ್ಲಿ ಬದ್ಧತೆ, ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಇದ್ದರೆ ಸಾಮಾನ್ಯನೂ ಅಸಮಾನ್ಯ ಸಾಧನೆ ಮಾಡಬಲ್ಲ ಎನ್ನುವುದಕ್ಕೆ ಮಲ್ಲೇಶ್‌ಗೌಡ ಪಾಟೀಲ್ ಒಂದು ಜೀವಂತ ಉದಾಹರಣೆ.

1 comment:

  1. ನಿಮ್ಮ ವರದಿ ಇತರೆ ರೈತರಿಗೆ ಮಾರ್ಗದರ್ಶಿಯಾಗಿದೆ, ಮಲ್ಲೇಶಗೌಡರಿಗೆ ಹಾಗೂ ನಿಮಗೂ ಅನಂತ ಧನ್ಯವಾದಗಳು.
    ನಂದಿ,ಮಲೆಬೆನ್ನೂರು.ದಾವಣಗೆರೆ.
    nandimbr@gmail.com

    ReplyDelete