Thursday, 17 May 2012

ಮೋದೂರ ತೇಜ ಬರೆದ ವೇದಾವತಿ ತೀರದಲ್ಲಿ' ಕಾದಂಬರಿ:ಅರುಣ್ ಜೋಳದ ಪರಿಚಯ

ಪುಸ್ತಕ ಪರಿಚಯ:-ಅರುಣ್ ಜೋಳದ ಕೂಡ್ಲಿಗಿ
ಕೃಪೆ:- ಕೆಂಡಸಂಪಿಗೆ




ಚಳ್ಳಕೆರೆ ಸಮೀಪದ ಮೋದೂರು ಗ್ರಾಮದ ದಲಿತ ಯುವಕ ದುರುಗಪ್ಪ (ಮೋದೂರು ತೇಜ) ಅವರ ‘ವೇದಾವತಿ ತೀರದಲ್ಲಿ’ ಕಾದಂಬರಿಯ ಘಟನೆಯೊಂದು ಹೀಗಿದೆ: ಹಳ್ಳಿಯೊಂದರ ಶಿಕ್ಷಿತ ದಲಿತ ಯುವಕ ಗೋವಿಂದ ತನಗಿಂತ ಮೇಲು ಜಾತಿಯ ಗೆಳೆಯನ ಮದುವೆಯ ಊಟದ ಪಂಕ್ತಿಯಲ್ಲಿ ಕೂತಿರುತ್ತಾನೆ. ಆಗ ಮೇಲ್ಜಾತಿಯ ಯಜಮಾನ ಬಂದು ಒಂದೇ ಪಂಕ್ತಿಯಲ್ಲಿ ದಲಿತರಿಗೆ ಊಟ ಹಾಕಿ ಊರ ಮಾನ ತೆಗೆಯುತ್ತಿದ್ದೀರಿ ಎಂದು ಕಿಡಿಕಾರುತ್ತಾನೆ. ಇದಕ್ಕೆ ಗೆಳೆಯರು ಸೊಪ್ಪುಹಾಕದೆ ಗೋವಿಂದನನ್ನು ಸಂತೈಸಿ ಊಟ ಮಾಡುವಂತೆ ಒತ್ತಾಯಿಸುತ್ತಾರೆ. ಗೋವಿಂದ ಅವಮಾನದಿಂದ ಬೇಯುತ್ತಾನೆ. ಊಟ ಹೊಟ್ಟೆಯೊಳಗೆ ಇಳಿಯುವುದಿಲ್ಲ. ಇದು ಬದಲುಗೊಂಡ ಗ್ರಾಮೀಣ ಬದುಕಿನಲ್ಲಿ ಜಾತಿ ಶ್ರೇಣೀಕರಣದ ಹೊಸ ಮುಖವೊಂದನ್ನು ಅನಾವರಣ ಮಾಡುತ್ತದೆ. ಇಂದಿನ ದಲಿತ ಯುವಕರ ಸಾಹಿತ್ಯ ಅಭಿವ್ಯಕ್ತಿ ಯಾವ ತೆರನಾಗಿರುತ್ತದೆ ಎನ್ನುವುದಕ್ಕೆ ಈ ಘಟನೆ ಉತ್ತರದಂತೆ ಬಂದಿದೆ.

ಹೊಸ ತಲೆಮಾರಿನ ಬರಹಗಾರ ಮೋದೂರು ತೇಜ ಅವರು ಮರದೊಳಗಳ ಕಿಚ್ಚು ಎನ್ನುವ ಕಥಾ ಸಂಕಲನ, ಬುದ್ಧನ ಮೇಲೂ ಯುದ್ಧ, ಭೂಮಿ ತೂಕದ ಪ್ರೀತಿ ಎಂಬ ಕವನ ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಅವರ ಮೊದಲ ಕಾದಂಬರಿ ವೇದಾವತಿ ತೀರದಲ್ಲಿ. ಕಾದಂಬರಿ ಕ್ಷೇತ್ರಕ್ಕೆ ಹೆಚ್ಚು ತೆರೆದುಕೊಳ್ಳದ ಯುವ ಲೇಖಕರ ಮಧ್ಯೆ ತೇಜ ಅವರು ಭಿನ್ನರಾಗಿ ಕಾಣುತ್ತಾರೆ. ಈ ಕಾದಂಬರಿಯಲ್ಲಿ ಚಳ್ಳಕೆರೆ ಭಾಗದ ವೇದಾವತಿ ನದಿ ತೀರದ ಗ್ರಾಮೀಣ ಬದುಕಿನ ಚಿತ್ರಣವನ್ನು ಕಟ್ಟಿಕೊಡಲು ಯತ್ನಿಸಿದ್ದಾರೆ. ಇದು ೩೨೧ ಪುಟದ ೨೫ ಉಪ ಘಟಕಗಳನ್ನೊಳಗೊಂಡ ದೀರ್ಘ ಕಾದಂಬರಿ.

ಈ ಕಾದಂಬರಿ ಹಲವು ಕುಟುಂಬಗಳ ಬದುಕಿನ ಚಲನವಲನಗಳನ್ನು ದಾಖಲಿಸುತ್ತದೆ. ಯುಗಾದಿಯ ಬೇಟೆಯೊಂದಿಗೆ ಆರಂಭವಾಗಿ, ಮತ್ತೊಂದು ಯುಗಾದಿ ಬೇಟೆಯೊಂದಿಗೆ ಮುಕ್ತಾಯವಾಗುತ್ತದೆ. ಈ ಒಂದು ವರ್ಷದ ಅವಧಿಯಲ್ಲಿನ ಗ್ರಾಮೀಣ ಬದುಕಿನ ನಾಲ್ಕು ಕುಟುಂಬಗಳ ನಡುವೆ ನಡೆವ ಕೌಟುಂಬಿಕ ಏರುಪೇರುಗಳನ್ನು ಇಲ್ಲಿ ದಾಖಲಿಸಲಾಗಿದೆ. ಮುಖ್ಯವಾಗಿ ವೇದಾವತಿ ನದಿ ತೀರದ ಹಳ್ಳಿಗಳ ಹಬ್ಬ ಆಚರಣೆ ಜಗಳ ವೈಷಮ್ಯ ಮುಂತಾದವುಗಳ ಮೂಲಕ ಇಲ್ಲಿನ ಜನಜೀವನದ ದಟ್ಟ ವಿವರಗಳನ್ನು ಕಟ್ಟಿಕೊಡುತ್ತಾರೆ. ಹಾಗಾಗಿ ಇಲ್ಲಿ ಗ್ರಾಮೀಣ ಬದುಕಿನ ಸದ್ಯದ ಪಲ್ಲಟಗಳನ್ನು ಗ್ರಹಿಸಬಹುದು. ಇಡೀ ಕಾದಂಬರಿ ವಿವರಣೆಯಲ್ಲಿ ವಾಚ್ಯವಾದರೂ ಮಾತುಕತೆಯಲ್ಲಿ ಬರುವ ಗಾದೆಗಳೆ ಇಲ್ಲಿನ ಒಳ ದ್ವನಿಯಂತೆ ಬಳಕೆಯಾಗಿದೆ.

ಇಂದು ಗ್ರಾಮೀಣ ಪ್ರದೇಶದಲ್ಲಿ ಅರೆವಿದ್ಯಾವಂತರ ಸಂಖ್ಯೆ ಹೆಚ್ಚಿದೆ. ಅಂದರೆ ಇತ್ತ ನೌಕರಿಗೆ ಹೋಗುವಷ್ಟು ವಿದ್ಯೆಯೂ ಇಲ್ಲದೆ, ಇತ್ತ ಕೃಷಿ ಮಾಡುವ ಕೌಶಲ್ಯ, ಮನಸ್ಸೂ ಇಲ್ಲದೆ ಅಂಡಲೆಯುವ ಒಂದು ಯುವ ವರ್ಗ ಕರ್ನಾಟಕದಲ್ಲಿ ಹೆಚ್ಚಾಗಿದೆ. ಈ ವರ್ಗದ ಆಯ್ಕೆ ಏನಾಗಿದೆ? ಈ ವರ್ಗ ಆಯ್ದುಕೊಳ್ಳುವ ಹೊಸ ಉದ್ಯೋಗ ಯಾವ ಬಗೆಯದು, ಈ ವರ್ಗ ಬದುಕನ್ನು ಕಟ್ಟಿಕೊಳ್ಳಲು ತಾನು ಕಲೆತ ವಿದ್ಯೆಯನ್ನು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದನ್ನು ಅಭ್ಯಸಿಸುವ ಅಗತ್ಯವಿದೆ.

ತೇಜ ಅವರ ಕಾದಂಬರಿಯಲ್ಲಿ ಇಪ್ಪತ್ತರಿಂದ ಮುವತ್ತೈದು ವರ್ಷದ ಒಳಗಿನ ಯುವ ಸಮುದಾಯದ ತಳಮಳಗಳ ಪ್ರಾತಿನಿಧಿಕವಾಗಿ ಇಲ್ಲಿನ ಬಸವರಾಜು, ಮೇಘರಾಜು, ರಘುರಾಮ, ಆನಂದ, ಗೋವಿಂದ, ಸಾರಿಕಾ, ವೇದಾವತಿ ಮುಂತಾದವರ ಪಾತ್ರಗಳು ಬರುತ್ತವೆ. ಈ ವರ್ಗದ ತಳಮಳಗಳನ್ನು ಹುಡುಕಾಟ ಮಾಡುವ ಕಾರಣಕ್ಕೆ ಈ ಕಾದಂಬರಿ ಮುಖ್ಯವಾಗುತ್ತದೆ.

ಪ್ರಾದೇಶಿಕ ವಿವರಗಳ ಸಾವಯವ ಸಂಬಂಧದೊಂದಿಗೆ ನಮ್ಮ ಕಾಲದ ಗ್ರಾಮೀಣ ಬದುಕನ್ನು ಕಟ್ಟಿಕೊಡುವಲ್ಲಿ ಮೋದುರು ತೇಜ ಪಟ್ಟಿರುವ ಶ್ರಮ ಮೆಚ್ಚುವಂಥದ್ದು. ಆದರೆ ಈ ಕಾದಂಬರಿಗೆ ಗಂಭೀರ ಮಿತಿಗಳಿವೆ. ಸಮೃದ್ಧ ಜೀವನಾನುಭವವನ್ನು ಒಂದು ತಾತ್ವಿಕ ಎಳೆಯಲ್ಲಿ ಪೋಣಿಸುವಲ್ಲಿ ಕಾದಂಬರಿ ಸೋತಿದೆ. ಇಲ್ಲಿನ ಬಹುತೇಕ ಪಾತ್ರಗಳು ಆದರ್ಶ ವ್ಯಕ್ತಿಚಿತ್ರಣದಂತೆ ಕಾಣುತ್ತವೆ. ತೇಜ (ದುರುಗಪ್ಪ) ಸ್ವತಃ ದಲಿತನಾಗಿ ತನ್ನದೇ ಹಳ್ಳಿಗಳಲ್ಲಿ ಅನುಭವಿಸಿದ ಅಸ್ಪೃಶ್ಯತೆಯ ನೋವುಗಳನ್ನು ಕಾದಂಬರಿಯಲ್ಲಿ ದಾಖಲಿಸಲು ಸಾಧ್ಯವಾಗಿಲ್ಲ. ಇಲ್ಲಿ ಲೇಖಕರು ದಲಿತ ಐಡೆಂಟಿಟಿಯಲ್ಲಿ ಗುರುತಿಸಿಕೊಳ್ಳದ ಇಕ್ಕಟ್ಟನ್ನು ಅನುಭವಿಸಿದಂತೆ ಕಾಣುತ್ತದೆ.

ದಲಿತ ಯವಕನೊಬ್ಬ ಗ್ರಾಮೀಣ ಬದುಕನ್ನು ನೋಡುವ ವಿಶಿಷ್ಟ ನೋಟಕ್ರಮವೂ ಇಲ್ಲಿ ಕಾಣುವುದಿಲ್ಲ. ಹಾಗೆಯೆ ಗ್ರಾಮೀಣ ಭಾಗದ ಸಾಮಾಜಿಕ ನಾಟಕಗಳ ಪ್ರಭಾವ ಕಾದಂಬರಿಯ ಸಂಭಾಷಣೆಗಳಲ್ಲಿ ಎದ್ದು ಕಾಣುತ್ತದೆ. ಈ ಬಗೆಯ ನಾಟಕೀಯತೆಯನ್ನು ಮೀರುವ ಅಗತ್ಯವಿತ್ತು. ಪ್ರಾದೇಶಿಕ ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾದಂಬರಿಕಾರ ಸೋತಿದ್ದಾನೆ. ಎಲ್ಲವೂ ಕಳೆದುಹೋಗುತ್ತಿವೆ ಅವುಗಳನ್ನು ಸಂಗ್ರಹಿಸಿಡಬೇಕು, ಹಳೆಯದೆಲ್ಲಾ ಸಮೃದ್ಧವಾದುದು, ಸಾಮರಸ್ಯದ್ದು ಎನ್ನುವ ಹಳಹಳಿಕೆ ಕಾದಂಬರಿಯ ನಿರೂಪಣೆಯಲ್ಲಿದೆ. ಇದು ಕೂಡ ಕಾದಂಬರಿಯ ಮಿತಿಯಾಗಿದೆ. ಇಂತಹ ಹಲವು ಮಿತಿಗಳು ಈ ಕಾದಂಬರಿಗಿವೆ.
ಮೋದೂರು ತೇಜ

ಮೋದೂರು ತೇಜ ಅವರ ಮೊದಲ ಕಾದಂಬರಿ ಇದಾಗಿದ್ದರಿಂದ ಇಂತಹ ಮಿತಿಗಳು ಉಳಿದಿರಬಹುದು. ತೇಜ ಅವರ ಕಥೆಗಳಲ್ಲಿ ಕಾಣುವ ಬಿಗಿ ಬಂಧ, ಕಥನ ಕ್ರಮ, ನಿರೂಪಣೆಯ ತಂತ್ರ ಇಲ್ಲಿಯೂ ಸಾಧ್ಯವಾಗಿದ್ದರೆ, ಇದೊಂದು ಮಹತ್ವದ ಕಾದಂಬರಿಯಾಗುತ್ತಿತ್ತು. ತೇಜ ಅವರು ತಮ್ಮ ಮುಂದಿನ ಬರಹದಲ್ಲಿ ಇಂತಹ ಮಿತಿಗಳನ್ನು ಮೀರಿದರೆ ಅವರಿಂದ ಮಹತ್ವದ ಕಾದಂಬರಿಯನ್ನು ನಿರೀಕ್ಷಿಸಬಹುದು. ಕಾದಂಬರಿಯಂತಹ ದೊಡ್ಡ ಕ್ಯಾನ್ವಾಸಿನಲ್ಲಿ ತನ್ನ ಸೃಜನಶೀಲ ಹುಡುಕಾಟ ಮಾಡಿದ ತೇಜ ಅವರನ್ನು ಈ ಕಾರಣಕ್ಕೆ ಅಭಿನಂದಿಸಬೇಕು.

ಕೃತಿ: ವೇದಾವತಿ ತೀರದ ಜನಬದುಕಿನ ಚಿತ್ರಲೋಕ (ಕಾದಂಬರಿ)
ಲೇಖಕರು: ಮೋದುರು ತೇಜ
ಪುಟ:೩೪೦, ಬೆಲೆ: ರೂ.೨೦೦
ಪ್ರ: ಅಕ್ಷಯ ಪ್ರಕಾಶನ, ಚಿತ್ರದುರ್ಗ

No comments:

Post a Comment