Thursday, 10 May 2012

ಇಂದು ಸಾದತ್ ಹಸನ್ ಮಾಂಟೋ ಜನ್ಮಶತಮಾನೋತ್ಸವ ದಿನ



ಮೇ೧೧. ಇಂದು ಸಾದತ್ ಹಸನ್ ಮಾಂಟೋ ಜನ್ಮಶತಮಾನೋತ್ಸವ ದಿನ (ಮೇ ೧೧, ೧೯೧೨- ಜನವರಿ ೧೮, ೧೯೫೫) ಭಾರತ-ಪಾಕಿಸ್ತಾನ ಉಪಖಂಡ ಕಂಡಂತಹ ಮಹಾನ್ ಲೇಖಕ ಮಾಂಟೋ. ಭಾರತ- ಪಾಕಿಸ್ತಾನ ವಿಭಜನೆ ಕಾಲದ ಘೋರ ನರಹತ್ಯೆ ಮತ್ತು ಭೀಭತ್ಸಗಳನ್ನು ಮಾಂಟೋನಷ್ಟು ಹರಿತವಾಗಿ ಸಶಕ್ತವಾಗಿ ಬರೆದವರು ಮತ್ತೊಬ್ಬರಿಲ್ಲ. ಮಾಂಟೋ ಅವರಷ್ಟು ಪ್ರಸಿದ್ಧಿ ಪಡೆದ ಉರ್ದು ಕತೆಗಾರರಿಲ್ಲ. ಹಾಗೆಯೇ ಅವರಷ್ಟು ವಿವಾದಕ್ಕೊಳಗಾದವರೂ ಇಲ್ಲ. ’ಅಶ್ಲೀಲ’ ಸಾಹಿತ್ಯ ರಚಿಸಿದ್ದಕ್ಕಾಗಿ ಪಾಕಿಸ್ತಾನ ಸರ್ಕಾರ ಅವರ ವಿರುದ್ಧ ಕೇಸು ದಾಖಲಿಸಿತ್ತು. ಮಾಂಟೋ ತಮ್ಮ ಬದುಕನ್ನೇ ಕತೆಯಾಗಿಸಿದರು. ’ನನ್ನ ಅನಿಸಿಕೆಗಳು ಅಕ್ಷರದ ಉಡುಗೆ ತೊಟ್ಟರೂ ಹಸಿಹಸಿಯಾಗಿರುತ್ತವೆ’ ಎಂದ ಹೇಳುತ್ತಿದ್ದ ಮಾಂಟೋ ತಮ್ಮ ಹೃದಯದಾಳದ ನೋವು, ತಳಮಳ ಹಾಗೂ ರೋಷವನ್ನು ಕತೆಗಳ ಮೂಲಕ ಹೊರಹಾಕಿದರು. ಅದವರಿಗೆ ಅನಿರ್ವಾವೂ ಆಗಿತ್ತು. ದೇಶವಿಭಜನೆಯ ಕಾಲದಲ್ಲಿ ಮತಾಂಧತೆ ಹಾಗೂ ಅಧಿಕಾರದ ಹಪಾಹಪಿಗಳು ಹುಟ್ಟುಹಾಕಿದ ದುರಂತದಿಂದ ಜನಸಾಮಾನ್ಯರು ಹೇಗೆ ತತ್ತರಿಸಿದರೆಂಬುದನ್ನು ಅವರು ತಮ್ಮ ಬರಹಗಳಲ್ಲಿ ಕಾಣಿಸಿದ್ದಾರೆ. 

ದೇಶವಿಭಜನೆ ಮಾಂಟೀನಂತಹ ಸೂಕ್ಷ್ಮ ಮನಸ್ಸಿನ ಮಾನವತಾವಾದಿಯನ್ನು ’ಒಡೆದ ವ್ಯಕ್ತಿತ್ವ’ )ಸಿಜೋಫ್ರೇನಿಯಾ ದಂತಹ ಭಯಂಕರ ಮನೋರೋಗಕ್ಕೆ ದೂಡಿತು. ಮಾಂಟೋ ಅವರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋದರೂ ಅತ್ತ ಭಾರತದವರೂ ಆಗದ ಪಾಕಿಸ್ತಾನದವನೂ ಆಗದೆ ಗೊಂದಲದಲ್ಲಿ ಮುಳುಗಿಬಿಟ್ಟಿದ್ದರು. ಅವರ ಪ್ರಸಿದ್ಧ ಕತೆ ತೊ ಬಾಕ್ ತೇ ಸಿಂಗ್ (ಹುಚ್ಚರ ದರ್ಬಾರ್) ಕತೆಯಲ್ಲಿ ಅಂತಿಮವಾಗಿ ಭಾರತಕ್ಕೂ ಸೇರದ ಪಾಕಿಸ್ತಾನಕ್ಕೂ ಸೇರದ ’ನೋ ಮ್ಯಾನ್ ಲ್ಯಾಂಡ್’ ನಲ್ಲಿ ಪ್ರಾಣ ಬಿಡುವ ಹುಚ್ಚನ ಸ್ಥಿತಿಯೇ ಮಾಂಟೋನ ಬದುಕೂ ಆಗಿಬಿಟ್ಟಿತು. ಪಾಕಿಸ್ತಾನ ಸರ್ಕಾರ ಮಾಂಟೋರನ್ನು ಅಕ್ಷರಶಃ ಹುಚ್ಚಾಸ್ಪತ್ರೆಯಲ್ಲಿ ಇಟ್ಟಿತ್ತು. ಅಗಾಧ ಮಾನವಪ್ರೇಮಿ ಪಾಕಿಸ್ತಾನದಲ್ಲಿ ಅನಾಥರಾದರು. ಭಾರತದಲ್ಲೂ ಪರಕೀಯರೆನಿಸಿಕೊಂಡರು. 

ರಾಜಕಾರಣ ಹಾಗೂ ಧರ್ಮಗಳು ಹುಟ್ಟಿಸುವ ಕ್ರೌರ್ಯವನ್ನು ಮಾತ್ರ ಮಾಂಟೋ ಕತೆಗಳು ಹೇಳುವುದಿಲ್ಲ. ಅವು ಬದುಕಿನ ಅಪಾರ ಚೆಲುವನ್ನು ಕುರಿತೂ ಹೇಳುತ್ತವೆ. ಇದಕ್ಕೆ ಅವರ ’ಏಜಿದ್’ ಕತೆ ಸಾಕ್ಷಿ. 
ದೇಶ ವಿಭಜನೆಯಾಗಿ ಆರು ದಶಕಗಳ ನಂತರವೂ ಮತಾಂಧರೆ, ದೇಶ ದುರಭಿಮಾನಗಳಲ್ಲಿ ಮುಳುಗಿ ಹೋಗಿರುವ ಭಾರತೀಯರು, ಪಾಕಿಸ್ತಾನೀಯರು ಸಾದತ್ ಹಸನ್ ಮಾಂಟೋನನ್ನು ಅವರು ಪ್ರತಿಪಾದಿಸಿದ ದೇಶ-ಧರ್ಮಗಳನ್ನು ಮೀರಿದ ಮಾನವೀಯತೆಗಾಗಿ ನೆನಪಿಸಿಕೊಳ್ಳುವ ಜರೂರಿದೆ

- ಸಮಾನ


ಸಾದತ್ ಹಸನ್ರವರ ಕೆಲವು ಕಿರು ಕಥೆಗಳು ಇಂತಿವೆ:-


ಮಿಸ್ಟೇಕ್

ಚೂರಿ ಹೊಟ್ಟೆ ಇರಿಯುತ್ತಾ ಮೂಗಿನ ತುದಿ ತಲುಪಿತು. ಎವೆಯಿಕ್ಕುವುದರೊಳಗೆ ಅದು ಚೂರಿ ಹಿಡಿದವನ ಇಜಾರದ ಲಾಡಿಯನ್ನು ಕತ್ತರಿಸಿಬಿಟ್ಟಿತು. ತಕ್ಷಣ ಅವನ ಬಾಯಿಯಿಂದ ಹೊರಟ ವಿಷಾದದ ಶಬ್ದಗಳು: ಛೇ...ಛೇ.. ಮಿಸ್ಟೇಕ್ ಆಯಿತು! 


ವಿಶ್ರಾಂತಿಯ ಅವಶ್ಯಕತೆ
ಸತ್ತಿಲ್ಲ..... ನೋಡು ಇನ್ನೂ ಜೀವ ಐತಿ
ಹೋಗಲಿ ಬಿಡೋ ಮಾರಾಯ....ನನಗ ಸುಸ್ತಾಗಿ ಬಿಟ್ಟೈತಿ.

ದೂರು

ಏನೋ ಗೆಳೆಯ, ಬ್ಲಾಕ್ ಮಾರ್ಕೆಟ್ ರೇಡಿನಲ್ಲೇ ನ್ನನಿಂದ ಹಣ ಕಿತ್ತುಕೊಂಡೆ. ಆದರೆ ಪೆಟ್ರೋಲ್ ಎಷ್ಟ ಹೊಲಸ ಐತಲ್ಲೊ ಮಾರಾಯ. ಅದು ಒಂದು ಮನೆಯನ್ನೂ ಸುಡಲಿಲ್ಲ.



ಚಪ್ಪಲಿ

ಜನಸಮೂಹದ ದಿಕ್ಕು ಬದಲಾಯಿತು. ಜನ ಗಂಗಾರಾಮನ ಪುತ್ಥಳಿ ಮೇಲೆ ಹಠಾತ್ತನೇ ಎರಗಿದರು. ದೊಣ್ಣೇ ಬೀಸಿದರು. ಕಲ್ಲು ಇಟ್ಟಿಗೆಗಳನ್ನು ತೂರಿದರು. ಒಬ್ಬ ಮುಖಕ್ಕೆ ಡಾಂಬರ್ ಬಳಿದ. ಇನ್ನೊಬ್ಬ ಹಳೆಯ ಚಪ್ಪಲಿಗಳ ಹಾರ ಮಾಡಿ ಪುತ್ಥಳಿಯ ಕೊರಳಿಗೆ ಹಾಕಲು ಮುನ್ನುಗ್ಗಿದ. ಅಷ್ಟರಲ್ಲಿ ಪೊಲೀಸರು ಬಂದರು. ಗೋಳೀಬಾರ್ ಆಯಿತು.
ಚಪ್ಪಲಿ ಹಾರ ಹಾಕಬೇಕೆಂದುಕೊಂಡವ ಗಾಯಗೊಂಡ. ಹೀಗಾಗಿ ಚಿಕಿತ್ಸೆಗೆಂದು ಅವನನ್ನು ಸರ್ ಗಂಗಾರಾಮ ಆಸ್ಪತ್ರೆಗೆ ಸಾಗಿಸಲಾಯಿತು.


ಮೋಸ

ಇಬ್ಬರು ಗೆಳೆಯರು ಹತ್ತಿಪ್ಪತ್ತು ಯುವತಿಯರಲ್ಲಿ ಒಬ್ಬಳನ್ನು ಆಯ್ಕೆ ಮಾಡಿಕೊಂಡರು. ೪೨ ರೂಪಾಯಿ ಕೊಟ್ಟು ಖರೀದಿಸಿದರು. ರಾತ್ರಿ ಕಳೆದ ಮೇಲೆ ಒಬ್ಬ ’ನಿನ್ನ ಹೆಸರೇನು?’ ಎಂದು ಯುವತಿಯನ್ನು ಕೇಳಿದ.
ಯುವತಿ ತನ್ನ ಹೆಸರು ಹೇಳಿದೊಡನೆ ಅವನಿಗೆ ತುಂಬ ಬೇಸರವಾಯಿತು. ನೀನು ಬೇರೆ ಧರ್ಮದವಳೆಂದು ಅವನು ಹೇಳಿದ್ದನಲ್ಲ.
ಅವನು ಸುಳ್ಳು ಹೇಳಿದ್ದ ಆಕೆ ಉತ್ತರಿಸಿದಳು.
ಇದನ್ನು ಕೇಳುತ್ತಲೇ ಅವನು ಗೆಳೆಯನ ಬಳಿ ದಾವಿಸಿ ಹೋದ. ಅವನು ಹೀಗೆಂದ ಆ ಹರಾಮಖೋರ ನಮಗೆ ಮೋಸ ಮಾಡಿದ್ದಾನೆ. ನಮ್ಮ ಧರ್ಮದ ಹುಡುಗಿಯನ್ನೇ ನಮಗೆ ಮಾರಿದ್ದಾನೆ. ನಡೀ ವಾಪಸ್ಸು ಕೊಟ್ಟು ಬರೋಣ.



ಉಪಚಾರ

ಓಡುತ್ತಿದ್ದ ರೈಲನ್ನು ತಡೆಯಲಾಯಿತು. ಬೇರೆ ಧರ್ಮಕ್ಕೆ ಸೇರಿದವರನ್ನು ಹೊರಗೆ ಎಳೆದೆಳೆದು ಖಡ್ಗ ಹಾಗೂ ಬಂದೂಕಿನಿಂದ ಕೊಲ್ಲಲಾಯಿತು. ಈ ಕೆಲಸ ಪೂರೈಸಿದ ನಂತರ ಉಳಿದ ಪ್ರಯಾಣಿಕರಿಗೆ ಹಾಲು, ಹಣ್ಣು, ಹಲ್ವಾ ನೀಡಿ ಉಪಚರಿಸಲಾಯಿತು.
ರಲು ಹೊರಡುವುದಕ್ಕೆ ಮೊದಲು ಉಪಚಾರದ ವ್ಯವಸ್ಥೆ ಮಾಡಿದವನು ಪ್ರಯಾಣಿಕರನ್ನುದ್ದೇಶಿಸಿ ಹೀಗೆಂದ, ಸೋದರ ಸೋದರಿಯರೆ, ರೈಲಿನ ಆಗಮನದ ಬಗ್ಗೆ ನಮಗೆ ಮಾಹಿತಿ ಸ್ವಲ್ಪ ಮೊದಲೇ ಸಿಕ್ಕಿದ್ದರೆ ನಾವು ನಮಗೆ ತೃಪ್ತಿ ಎನಿಸುವಂತೆ ನಿಮಗೆ ಉಪಚರಿಸಬಹುದಿತ್ತು. ಅದಕ್ಕಾಗಿ ವಿಷಾದಿಸುತ್ತೇನೆ. 



ಪಶುತ್ವ

ದಂಪತಿಗಳು ಬಲು ಪ್ರಯಾಸದಿಂದ ತಮ್ಮ ಮನೆಯ ಒಂದಷ್ಟು ಸಾಮಾನುಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅವರಿಗೆ ಒಬ್ಬ ಹರೆಯದ ಮಗಳಿದ್ದಳು. ಆಕೆಯ ಸುಳಿವೇ ಸಿಗಲಿಲ್ಲ. ಪುಟ್ಟ ಹೆಣ್ಣು ಮಗುವೊಂದಿತ್ತು. ಅದನ್ನು ತಾಯಿ ಎದೆಗವಚಿಕೊಂಡಿದ್ದಳು. ಒಂದು ಬಿಳಿ ಎಮ್ಮೆ ಇತ್ತು. ಗಲಭೆಕೋರರು ಅದನ್ನು ಅಟ್ಟಿಸಿಕೊಂಡು ಹೋಗಿದ್ದರು. ಆಕಳು ಉಳಿದುಕೊಂಡಿತ್ತು. ಆದರೆ ಕರುವು ಕಾಣೆಯಾಗಿತ್ತು.
ಗಂಡ, ಹೆಂಡತಿ ಹಾಗೂ ಅವರ ಪುಟ್ಟ ಮಗು ಒಂದೆಡೆ ಅಡಗಿಕೊಂಡಿದ್ದರು ಆಕಳು ಸಹ ಅವರ ಜೊತೆಗೇ ಇತ್ತು. ಕಗ್ಗತ್ತಲ ರಾತ್ರಿ ಅದು. ಮಗು ಹೆದರಿ ಅಳಲಾರಂಭಿಸಿದಾಗ ಬಿಕೋ ಎನ್ನುತ್ತಿದ್ದ ಪರಿಸರದಲ್ಲಿ ಡೋಲು ಬಾರಿಸಿದಂತಾಯಿತು. ವೈರಿಗಳು ಕೇಳಿಯಾರೆಂದು ಹೆದರಿದ ತಾಯಿ ಮಗುವಿನ ಬಾಯಿ ಮೇಲೆ ಕೈ ಇಟ್ಟಳು. ದನಿ ತಗ್ಗಿತು. ಸುರಕ್ಷತೆಯ ದೃಷ್ಟಿಯಿಂದ ತಂದೆ ಹೊಲಸಾಗಿದ್ದ ದಪ್ಪ ಚಾದರನ್ನು ಅದರ ಮೇಲೆ ಹೊದಿಸಿದ.’
ಸ್ವಲ್ಪ ಸಮಯದ ನಂತರ ದೂರದಿಂದ ಒಂದು ಕರುವು ’ಅಂಬಾ’ ಎನ್ನುವ ಸದ್ದು ಕೇಳಿ ಬಂತು. ಆಕಳ ಕಿವಿಗಳು ನಿಮಿರಿ ನಿಂತವು, ಅದು ಎದ್ದು ಹುಚ್ಚೆದ್ದು ಅತ್ತಿತ್ತ ಓಡಾಡುತ್ತಾ ಒದರತೊಡಗಿತು. ಅದು ಒದರದಂತೆ ಮಾಡಲು ಎಷ್ಟು ಪ್ರಯತ್ನಿಸದರೂ ಪ್ರಯೋಜನವಾಗಲಿಲ್ಲ.
ಸದ್ದು ಕೇಳಿದ ವೈರಿಗಳು ಯಾವುದೇ ಕ್ಷಣದಲ್ಲಿ ಹಲ್ಲೆ ಮಾಡಬಹುದಿತ್ತು. ದೂರದಲ್ಲಿ ಪಂಜಿನ ಬೆಳಕು ಕಂಡಿತು. ಹೆಂಡತಿ ತನ್ನ ಗಂಡನ ಮೇಳೆ ಸಿಟ್ಟಿಗೆದ್ದು ಈ ಪೀಡಾ ದನ ನಿನಗ ಯಾಕ ಬೇಕಾಗಿತ್ತೋ? ಎಂದಳು

ಸೌಜನ್ಯ: ಸದ್ಯಕಿದು ಹುಚ್ಚರ ಸಂತಿ, ಅನುವಾದ: ಹಸನ್ ನಯೀಂ ಸುರಕೋಡ

1 comment:

  1. ಇಂದು ಮಾಂಟೋನ ಜಾತ್ಯಾತೀತ ಚಿಂತನೆಗಳನ್ನು ಚರ್ಚಿಸುವ ಅಗತ್ಯವಿದೆ.ಏಕೆಂದರೆ ಇಂಡಿಯಾದಲ್ಲಿ ಧರ್ಮಾತೀತನಾಗಿ ಕತೆಗಳನ್ನು ಬರೆದ ಕೆಲವೇ ಕೆಲವರಲ್ಲಿ ಮಾಂಟೋ ಮುಖ್ಯನಾಗಿದ್ದಾನೆ.ಅವನ ಕತೆಗಳು ಧರ್ಮ ಮತ್ತು ರಾಜಕಾರಣ ಮನುಷ್ಯರ ಮೇಲೆ ನಡೆಸುವ ದೌರ್ಜನ್ಯವನ್ನು ಖಂಡಿಸುತ್ತವೆ.ಅವನ ಕತೆಗಳು ಪುಟ್ಟದಾಗಿದ್ದರೂ ಅವು ಬಹು ದೊಡ್ಡ ರಾಜಕೀಯ ಸತ್ಯಗಳನ್ನು ತೆರೆದಿಟ್ಟಿವೆ.
    -ಸುಭಾಷ್ ರಾಜಮಾನೆ

    ReplyDelete