ಸೌಜನ್ಯ:-ಅನಿತಾ ಚಿನ್ನಪ್ಪಳ್,
"ದ ಸಂಡೆ ಇಂಡಿಯನ್"
ಮೊದಲಿನಿಂದಲೂ ನಿಮಗೆ ರಾಜಕೀಯ ಸೇರಬೇಕೆಂಬ ಆಸಕ್ತಿ ಇತ್ತೆ?
ಮೊದಲಿನಿಂದ ನನಗೆ ರಾಜಕೀಯದಲ್ಲಿ ಆಸಕ್ತಿಯೇನೂ ಇರಲಿಲ್ಲ. ಬಾಲ್ಯದ ದಿನಗಳಲ್ಲಿ ರಾಜಕೀಯ ಸೇರುವ ಬಗ್ಗೆ ನಾನು ಚಿಂತಿಸಿರಲಿಲ್ಲ. ಆದರೆ ಕ್ರಮೇಣ ರಾಜಕೀಯ ವಿದ್ಯಮಾನಗಳ ಬಗ್ಗೆ ತಿಳಿವಳಿಕೆ ಮೂಡಿದಂತೆಲ್ಲಾ ಆಸಕ್ತಿ ಮೂಡಿತು. ಅಲ್ಲದೇ ನಾಲ್ಕೈದು ವರ್ಷಗಳಿಂದ ನನಗೆ ಪಕ್ಷಗಳ ಆಹ್ವಾನವೂ ಇತ್ತು. ಪಕ್ಷ ನನ್ನ ಸೇವೆಯ ನಿರೀಕ್ಷೆಯಲ್ಲಿರುವಾಗ ಪಕ್ಷ ಸೇರುವುದರಲ್ಲಿ ಅಥವಾ ಸೇವೆ ನೀಡುವುದರಲ್ಲಿ ತಪ್ಪೇನಿದೆ. ಈ ದೇಶದ ಪ್ರಜೆಯಾಗಿ ಸಮಾಜಕ್ಕೆ, ಸಾರ್ವಜನಿಕರಿಗೆ ನನ್ನಿಂದ ಏನನ್ನಾದರೂ ಕೊಡುಗೆ ನೀಡಲು ರಾಜಕೀಯ ಒಂದು ಸೂಕ್ತ ವೇದಿಕೆ. ಆ ವೇದಿಕೆಯನ್ನು ನನಗೆ ಕಾಂಗ್ರೆಸ್ ಪಕ್ಷ ಕಲ್ಪಿಸಿಕೊಟ್ಟಿದೆ. ರಾಜಕೀಯ ಸೇರುತ್ತಿರುವುದರ ಬಗ್ಗೆ ನನಗೆ ತುಂಬಾ ಸಂತೋಷವಿದೆ. ಇದು ನನ್ನ ಅದೃಷ್ಟವೂ ಕೂಡ.
ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ?
ಕಾಂಗ್ರೆಸ್ ಪಕ್ಷಕ್ಕೆ ಒಂದು ಐತಿಹಾಸಿಕ ಹಿನ್ನೆಲೆ ಇದೆ. ರಾಷ್ಟ್ರೀಯ ಪಕ್ಷ ಕೂಡ. ಸ್ವಾತಂತ್ರ್ಯ ಪೂರ್ವದಲ್ಲಿ ಉದಯಿಸಿದ ಈ ಪಕ್ಷ ಹೋರಾಟಗಳಿಗೆ ಹೆಸರಾಗಿದ್ದು. ದೇಶಕ್ಕೆ ಅದ್ವಿತೀಯ ನಾಯಕರನ್ನು ಕೊಡುಗೆಯಾಗಿ ನೀಡಿದ ಪಕ್ಷ. ಕಾಂಗ್ರೆಸ್ ಜನನಾಯಕರ ಕೊಡುಗೆ ಬಗ್ಗೆ ನನಗೆ ಮೊದಲಿನಿಂದಲೂ ಅಪಾರ ಗೌರವವಿದೆ. ಅಲ್ಲದೇ ಕಾಂಗ್ರೆಸ್ ಪಕ್ಷದ ತತ್ವ-ನೀತಿಗಳು ಜನಸಾಮಾನ್ಯರ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ ಎನ್ನುವುದು ನನ್ನ ಅಭಿಪ್ರಾಯ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಪಕ್ಷದ ಹಿರಿಯರು ಎಂದಿಗೂ ಪಕ್ಷ ಸೇರುವ ಯುವಕರಿಗೆ ಮಾದರಿಯೂ ಹೌದು, ಪ್ರೇರಣೆಯೂ ಹೌದು.
ನೀವು ಒಬ್ಬ ಒಳ್ಳೆ ನಟಿ ಅನ್ನೋದರಲ್ಲಿ ಅನುಮಾನವಿಲ್ಲ. ಆದರೆ ಮುಂದೆ ಒಬ್ಬ ಒಳ್ಳೆ ರಾಜಕಾರಣಿಯಾಗಿ ಗುರುತಿಸಿಕೊಳ್ಳಬಲ್ಲಿರಾ? ಈ ನಿಟ್ಟಿನಲ್ಲಿ ನಿಮ್ಮ ಯೋಜನೆಗಳೇನು?
ಹೌದು. ಜನರು ನನ್ನ ಅಭಿನಯವನ್ನು ಮೆಚ್ಚಿದ್ದಾರೆ. ಸಿನಿಮಾ ರಂಗ ನನಗೆ ಹೆಸರು ತಂದುಕೊಟ್ಟಿದೆ. ಅದಕ್ಕೇ ಈಗ ರಾಜಕೀಯದಲ್ಲೂ ಅವಕಾಶ ಅರಸಿ ಬಂದಿದೆ. ನಾನು ಸಾಕಷ್ಟು ಯೋಚಿಸಿಯೇ ರಾಜಕೀಯಕ್ಕೆ ಬರುವ ನಿರ್ಧಾರಕ್ಕೆ ಬಂದಿದ್ದೇನೆ. ನಟಿ ಎನ್ನುವುದಕ್ಕಿಂತ ಹೆಚ್ಚಾಗಿ ನಾನೊಬ್ಬ ದೇಶದ ಸಾಮಾನ್ಯ ಪ್ರಜೆ. ರಾಜಕೀಯ ಪ್ರವೇಶ ನನಗೆ ಜನಸಾಮಾನ್ಯರ ಸೇವೆಗೆ ಸಿಕ್ಕ ಒಂದು ಅದ್ಭುತ ಅವಕಾಶ. ಸೇವೆ ಸಲ್ಲಿಸಲು ನಾನು ಸದಾ ಸಿದ್ಧವಾಗಿದ್ದೇನೆ. ಪಕ್ಷಕ್ಕೆ ಬದ್ಧವಾಗಿರುತ್ತೇನೆ. ಮುಂದೆ ಒಳ್ಳೆ ರಾಜಕಾರಣಿಯಾಗುವ ಎಲ್ಲಾ ಭರವಸೆಗಳನ್ನು ನಾನು ನೀಡುತ್ತೇನೆ.
ನಿಮ್ಮ ಮೇಲೆ ಪ್ರಭಾವ ಬೀರಿರುವ ರಾಜಕಾರಣಿ ಯಾರು? ನಿಮ್ಮ ರಾಜಕೀಯ ಗುರು ಯಾರು?
ಇಂದಿರಾಗಾಂಧಿ. ಅವರ ನಾಯಕತ್ವ ಗುಣ, ದಕ್ಷ ಆಡಳಿತ ನಿಲುವುಗಳು ನನಗೆ ಮಾತ್ರವಲ್ಲ. ರಾಜಕೀಯಕ್ಕೆ ಬರುವ ಎಲ್ಲ ಮಹಿಳೆಯರಿಗೂ ಮಾದರಿ ಹಾಗೂ ಮಾರ್ಗದರ್ಶಿ. ಅವರಿಂದ ನಾನು ಸಮಾಜಮುಖಿ ಕಾರ್ಯಗಳಲ್ಲಿ ಪ್ರೇರೇಪಿತಳಾಗಿದ್ದೇನೆ. ಕಾಂಗ್ರೆಸ್ ಯುವ ನಾಯಕ ರಾಹುಲ್ಗಾಂಧಿಯವರು ರಾಜಕೀಯದಲ್ಲಿ ಇಂದು ಹೊಸ ಕಾರ್ಯಸೂಚಿಯನ್ನು ಸೃಷ್ಠಿಸಿದ್ದಾರೆ. ಹೀಗಾಗಿ ಹೆಚ್ಚೆಚ್ಚು ಯುವಕರು ರಾಜಕೀಯದತ್ತ ಆಕರ್ಷಿತರಾಗುತ್ತಿದ್ದಾರೆ. ಯುವಕರು ರಾಜಕೀಯಕ್ಕೆ ಬರಬೇಕು ಕೂಡ.
ನಿಮ್ಮ ಅಭಿಪ್ರಾಯದಲ್ಲಿ ಕರ್ನಾಟಕದ ಮಟ್ಟಿಗೆ ಯಾವ ಕ್ಷೇತ್ರದಲ್ಲಿ ಅಗತ್ಯ ಸುಧಾರಣೆ ತರಬೇಕು?
ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ ತಲೆ ಎತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದರ ನಿಯಂತ್ರಣದ ಅನಿವಾರ್ಯತೆ ಇದೆ. ರಾಜಕಾರಣದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಲೆ ಎತ್ತಿದೆ. ಇದನ್ನು ಹತ್ತಿಕ್ಕಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ?
ರಾಜಕೀಯದಲ್ಲಿ ನಾನಿನ್ನೂ ಹಸುಳೆ. ಈಗಷ್ಟೇ ಅಂಬೆಗಾಲಿಡುತ್ತಿದ್ದೇನೆ. ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಾನು ಯೋಚಿಸಿಲ್ಲ. ಇದು ಆರಂಭವಷ್ಟೇ. ಹಿರಿಯರ, ಪಕ್ಷದ ಮುಖಂಡರ ನಿರ್ಧಾರಗಳು ಸಲಹೆಗಳಂತೆ ಮುಂದಿನ ಹೆಜ್ಜೆಯಿಡುತ್ತೇನೆ.
ರಾಜಕೀಯದಲ್ಲಿ ಅಧಿಕಾರ ಸಿಕ್ಕರೆ ತುರ್ತಾಗಿ ಯಾವ ಕೆಲಸ ಮಾಡುವ ಹಂಬಲ ನಿಮಗಿದೆ?
ನಾನು ಈಗಷ್ಟೇ ಪಕ್ಷವನ್ನು ಪ್ರವೇಶಿಸಿದ್ದೇನೆ. ಅಧಿಕಾರದ ಮೋಹವಿಲ್ಲ. ಒಂದು ವೇಳೆ ಅವಕಾಶ ಸಿಕ್ಕರೆ ಜನಸಾಮಾನ್ಯರ ಎಲ್ಲಾ ನೋವುಗಳಿಗೆ ಹೃತ್ಪೂರ್ವಕವಾಗಿ ಸ್ಪಂದಿಸುವೆ. ಅವರ ಸಮಸ್ಯೆಗಳು ಅಗತ್ಯಗಳನ್ನು ಮನಗಾಣುವ ನಿಟ್ಟಿನಲ್ಲಿ ಪಕ್ಷದ ಪರವಾಗಿ ಶ್ರಮಿಸುವೆ. ರಾಜಕೀಯ ಪ್ರವೇಶಿಸಿದ್ದಕ್ಕೆ ನಾನು ಖಂಡಿತ ನ್ಯಾಯ ಒದಗಿಸಿಕೊಡುವೆ.
ರಾಜಕೀಯದತ್ತ ನಟಿಯರ ಒಲವು ಹೆಚ್ಚುತ್ತಿದೆಯೇ? ಅಥವಾ ಚಿತ್ರರಂಗದಲ್ಲಿ ಬೇಡಿಕೆ ಕಡಿಮೆ ಎಂಬ ಕಾರಣಕ್ಕೆ ಹುಡುಕಿಕೊಳ್ಳುವ ಹೊಸ ಪ್ರಯತ್ನವೇ?
ಖಂಡಿತ ಅಲ್ಲ. ಇದು ಒಲವಿನ ಪ್ರಶ್ನೆಯಾಗಲೀ ಅಥವಾ ಹೊಸರಂಗ ಹುಡುಕುವ ಪ್ರಶ್ನೆಯಾಗಲೀ ಅಲ್ಲ. ನನ್ನ ವಿಷಯದಲ್ಲಿ ಆಯ್ಕೆ ಎಂದಿಗೂ ನನ್ನ ಕೈಯಲ್ಲಿರುತ್ತದೆ. ಅಷ್ಟಕ್ಕೂ ಅಭಿನಯದ ಆಯ್ಕೆಯಲ್ಲೂ ನಾನು ತುಂಬಾ ಚ್ಯೂಸಿಯಾಗಿದ್ದೇನೆ. ಚಿತ್ರರಂಗದಲ್ಲಿ ನನಗೆ ಎಂದಿಗೂ ಅಭದ್ರತೆ ಕಾಡಿಲ್ಲ. ಅಲ್ಲದೇ ರಾಜಕೀಯದ ಮೂಲಕ ನಾನು ಪ್ರಚಾರಕ್ಕೆ ಬರಬೇಕು ಎಂಬ ಆಸೆಯೂ ನನಗಿಲ್ಲ. ಹೀಗಿರುವಾಗ ರಾಜಕೀಯದಲ್ಲಿ ಭವಿಷ್ಯ ಹುಡುಕುವ ಅಗತ್ಯ ನನಗೆ ಎಂದಿಗೂ ಕಾಣಿಸಿಕೊಂಡಿಲ್ಲ. ನಾನು ರಾಜಕೀಯಕ್ಕೆ ಬಂದಿರುವುದು ಯಾವುದೇ ಒತ್ತಡ ಅಥವಾ ಬಲವಂತದಿಂದಲ್ಲ. ಸ್ವಂತ ಇಚ್ಛೆಯಿಂದ ಆಸಕ್ತಿಯಿಂದ ನಾನು ರಾಜಕೀಯ ಪ್ರವೇಶಿಸಿದ್ದೇನೆ. ಇದಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾನು ಹೆಜ್ಜೆಯಿಡುವ ಭರವಸೆ ನನಗಿದೆ.
ರಾಜಕೀಯದಲ್ಲಿ ಮಹಿಳೆಯರ ಆದ್ಯತೆಯ ಬಗ್ಗೆ ನಿಮ್ಮ ಅಭಿಪ್ರಾಯ?
ಮಹಿಳೆಯರು ಹೆಚ್ಚು ಸ್ವಾಭಿಮಾನಿಗಳಾಗಬೇಕು. ತಮ್ಮ ಹಕ್ಕಿನ ಉಳಿವಿಗಾಗಿ ಹೋರಾಡಬೇಕು. ಒಬ್ಬ ಮಹಿಳೆಯ ಸಮಸ್ಯೆ ಇನ್ನೊಬ್ಬ ಮಹಿಳೆಗಷ್ಟೇ ಅರ್ಥವಾಗಲು ಸಾಧ್ಯ. ನಾನು ಮಹಿಳೆಯ ಅಗತ್ಯತೆಗಳ ಹಕ್ಕುಗಳ ಪರ ಹೋರಾಟಕ್ಕೆ ಎಂದೆಂದಿಗೂ ಕೈ ಜೋಡಿಸುವೆ.
No comments:
Post a Comment