ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಬೇಕೋ/ಬೇಡ್ವೋ? ಈ ವಿಷಯದ ಕುರಿತಾಗಿ ಸಮಾನದಲ್ಲಿ ನಡೆದ ಚರ್ಚೆಯನ್ನು ಇಲ್ಲಿ ಲಗತ್ತಿಸಲಾಗಿದೆ. ಎನ್ ಎ ಇಸ್ಮಾಯಿಲ್ ಎತ್ತಿರುವ ಪ್ರಶ್ನೆಗೆ ನಡೆದ ಚರ್ಚೆಗಳು ಈ ಕೆಳಗಿನಂತಿವೆ
-ಸಮಾನ.
ಎನ್ ಎ ಇಸ್ಮಾಯಿಲ್:-
ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದನ್ನು ಬೇಡ ಎನ್ನುವುದಕ್ಕೆ ಕನ್ನಡದ ಅನೇಕ ಬುದ್ಧಿಜೀವಿಗಳು ಒಂದಾಗಿದ್ದಾರೆ. ಸದ್ಯದ ಪ್ರವೇಶಾನುಪಾತವನ್ನು ನೋಡಿದರೆ ಖಾಸಗಿ ಶಾಲೆಗಳಿಗೆ ಹೋಗುವವರ ಸಂಖ್ಯೆಯೇ ಹೆಚ್ಚು. ಅಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮವಿದೆ. ಈಗ ಸರ್ಕಾರಿ ಶಾಲೆಗೆ ಹೋಗುತ್ತಿರುವವರು ಗ್ರಾಮೀಣ ಪ್ರದೇಶದವರು ಮತ್ತು ಪಟ್ಟಣ ಮತ್ತು ನಗರಗಳ ಬಡವರು. ನಮ್ಮ ಕನ್ನಡಾಭಿಮಾನಿ ಬುದ್ಧಿಜೀವಿಗಳು ಉದ್ದೇಶ ಪೂರ್ವಕವಾಗಿ ಬಡವರು ಇಂಗ್ಲಿಷ್ ಕಲಿಯುವುದನ್ನು ತಡೆಯುತ್ತಿದ್ದಾರೆ ಅನ್ನಿಸುತ್ತಿಲ್ಲವೇ???
ರೇಣುಕಾ ಮಂಜುನಾಥ್
ಉದ್ದೇಶ ಪೂರ್ವಕವಾಗಿ ತಡೆಯೊಲ್ಲ,ಬುದ್ದಿಜೇವಿಗಳು ಎಂದು ಬ್ರಾಂಡ್ ಆಗಿರುವವರಿಗೆ ಆಗಾಗ ಜನರ ಮುಂದೆ ಕಾಣಿಸಿಕೊಳ್ಳಲಿಕ್ಕೆ ಸಿಕ್ಕ ಅವಕಾಶ ಅಥವಾ ಕೊಡುವ ಅವಕಾಶ! ಖಾಸಗಿ ಶಾಲೆಯವರ್ಯಾರು ಇವರನ್ನು ಬುದ್ದಿಜೀವಿಗಳು ಎಂದು ಅಟ್ಟಕೇರಿಸೊಲ್ಲ.ಪಾಪ....ಈ ಸರ್ಕಾರಿ...ಈ ಕನ್ನಡ ಮಾಧ್ಯಮ...ಅನ್ನೊ ವಿಚಾರಗಳೆ ಇವರ 'ಬುದ್ದಿಜೀವಿ ರೋಲ್' ಅನ್ನು ಜೀವಂತವಾಗಿರಿಸುತ್ತದೆ.ಯಾರು ಏನ್ ಬಡ್ಕೊಂಡ್ರು ಗ್ರೌಂಡ್ ರಿಯಾಲಿಟಿಗಳೆ ವಿಷಯದ ದಿಕ್ಕನ್ನು ನಿರ್ಧರಿಸುತ್ತವೆ!!ಓಮ್ಮೆ ತೇಜಸ್ವಿ ಹೇಳಿದ್ದರು, ನಾನು ಕುಪ್ಪಳ್ಳಿ ಶಿಬಿರಾರ್ಥಿಯಾಗಿ ಹೋಗಿದ್ದಾಗ.ನೋಡಿ CET-Engg- Medical ಇದಕ್ಯಾಕೆ ಜನ ಗಂಟು ಬೀಳ್ತಾರೆ?ಅದೇ ಬದುಕಾ??ಅಂತ ಮಾತಾಡೋದು ಸುಲಭ ... ಆದರೆ ನಮ್ಮ ಮಧ್ಯಮ ವರ್ಗದ ಪೋಷಕರಿಗೆ ಗೊತ್ತು...ಅದರ ಹಿಂದೆ ದುಡ್ಡಿದೆ ಹಾಗು ಅದು ನಮ್ಮ ಮುಂದಿನ ಬದುಕನ್ನು ಹಸನಾಗಿಸುತ್ತೆ ಅಂತ.ನಮ್ಮಂತವರಿಗೆ there are still serious issues to be addressed ಅಂತನಿಸುತ್ತೆ!!!!
ಆನಂದ್
ಸಮಾನ ಶಿಕ್ಷಣದ ಗುರಿಗೆ ಮಾರಕವಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆ... ವೈಜ್ಞಾನಿಕವಾದ ದಿಟಗಳಿಗೆ ವಿರುದ್ಧವಾಗಿರುವ ಪರಭಾಷಾ ಮಾಧ್ಯಮದಲ್ಲಿನ ಕಲಿಕೆಗೆ ಒತ್ತು ನೀಡಿರುವ ಇಂದಿನ ವ್ಯವಸ್ಥೆ... ಭಾಷೆಯ ಕಲಿಕೆಗೂ, ಕಲಿಕಾ ಮಾಧ್ಯಮಕ್ಕೂ ವ್ಯತ್ಯಾಸ ಮರೆಮಾಡುತ್ತಿರುವ, ಕಲಿಕಾ ಮಾಧ್ಯಮವನ್ನೇ ಇಂಗ್ಲೀಶ್ ಮಾಡಿಬಿಟ್ಟರೆ ಜಗ ಗೆಲ್ಲಬಹುದು ಎನ್ನುವ ಭ್ರಮೆಯನ್ನೇ ತಮ್ಮ ಶಿಕ್ಷಣ ಸಂಸ್ಥೆಗಳ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳ ನಡುವೆ ಸರ್ಕಾರವೊಂದು ಯಾವ ದಿಕ್ಕಿನಲ್ಲಿ ಸಾಗಬೇಕು? ಸರಿಯಿಲ್ಲದ ವ್ಯವಸ್ಥೆಯನ್ನು ತಾನೇ ಬೆನ್ನುಹತ್ತಿ ಹೋಗಬೇಕೋ? ಸರಿಮಾಡುವ ದಿಕ್ಕಿನೆಡೆಗೆ ಎಡರು ತೊಡರುಗಳನ್ನು ಮೆಟ್ಟುತ್ತಾ ಸಾಗಬೇಕೋ? ಈ ಬಗ್ಗೆ ಯಾವ ಬುದ್ಧಿಜೀವಿಯಾದರೂ ಅಭಿಪ್ರಾಯ ಕೊಡಬೇಕೇ? ಸಮಾಜದ ಹಿತ, ಕನ್ನಡಿಗರ ಭವಿಶ್ಯ ರೂಪಿಸುವ ಹೊಣೆ ಹೊತ್ತಿರುವ ಸರ್ಕಾರ ಯಾವ ನಿಲುವು ಹೊಂದಿರಬೇಕು ಎಂದೆಲ್ಲಾ ನೋಡಿದರೆ.... ಈಗಿನ ಸರ್ಕಾರದ ನಿಲುವು ಒಪ್ಪಲಾಗದ್ದು! ದೀರ್ಘಾವಧಿಯಲ್ಲಿ ಇದು ನಾಡಿನ ಸಾಮಾನ್ಯ ಕನ್ನಡಿಗರೆಲ್ಲರ ಹಿತಕ್ಕೆ ಮಾರಕವಾದದ್ದು...
ಬೇರೆ ರೀತಿಯಾಗಿ ವಾದ ತಿರುಗದಿರಲಿ ಅಂತ ಹೇಳ್ತಿದೀನಿ: ನನಗೆ ಇಬ್ಬರು ಗಂಡುಮಕ್ಕಳು. ಇಬ್ಬರೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು! ಬೆಂಗಳೂರಿನಲ್ಲಿರೋ ನಾವು ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಿದ್ದು ಯಾವುದೇ ಆದರ್ಶಕ್ಕಾಗಿಯಲ್ಲ. ಮೊದಲ ಕಲಿಕೆ ತಾಯ್ನುಡಿಯಲ್ಲಿ ಅತ್ಯುತ್ತಮ ಎನ್ನುವ ಕಾರಣದಿಂದಲೇ...
ಮಹದೇವ್ ಹಡಪದ್
ಆಮರಣಾಂತ ಉಪವಾಸದ ಬೆದರಿಕೆ ಹಾಕೋರು ತುಳಸಿ ಕಟ್ಟೆಗೆ ಸುತ್ತ ಹಾಕೋರು ಒಂದೇ ಥರ ಕಾಣ್ತಾರೆ. ನನಗಂತು ಇಸ್ಮಾಯಿಲ್ ಸರ್ ಅನಿಸಿಕೆ ಸರಿಯಾಗಿದೆ.
ಆನಂದ್
ಕಲಿಕಾ ಮಾಧ್ಯಮ ಮತ್ತು ಭಾಷಾ ಕಲಿಕೆ ಎರಡನ್ನೂ ಬೆರೆಸಿ ನೋಡುವುದರ ಅಗತ್ಯವಿಲ್ಲ. ಇಂಗ್ಲೀಶನ್ನು ಒಂದು ಭಾಷೆಯಾಗಿ ಕಲಿಸೋದು ಖಂಡಿತಾ ತಪ್ಪಲ್ಲಾ... ಯಾವ ವಯಸ್ಸಿನಿಂದ ಕಲಿಸಬೇಕೆನ್ನುವುದನ್ನು ಸರ್ಕಾರ, ಈಗಾಗಲೇ ಇರುವ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ತೀರ್ಮಾನಿಸುವುದು ಸರಿಯಾದ ವಿಧಾನ. ಇನ್ನು ಕನ್ನಡಿಗರಿಗೆ ಇಂಗ್ಲೀಶ್ ಮಾಧ್ಯಮವೇ ಅತ್ಯುತ್ತಮವೆನ್ನುವುದಕ್ಕೆ ಯಾವ ವೈಜ್ಞಾನಿಕ ಅಧ್ಯಯನದ ತಳಹದಿ ಇದೆ ಎನ್ನುವುದನ್ನು ಸರ್ಕಾರ ಘೋಷಿಸಲಿ. ಅದು ಪರಭಾಷಾ ಮಾಧ್ಯಮದ ಪರವಾಗಿದ್ದರೆ ಧೈರ್ಯವಾಗಿಯೇ ಇಂತಹ ಸಾಬೀತಾದ ವರದಿಗಳ/ ಅಧ್ಯಯನಗಳ ಆಧಾರದ ಮೇರೆಗೆ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದ್ದೇವೆ ಎನ್ನಲಿ.
ಹರ್ಷಕುಮಾರ್ ಕುಗ್ವೆ
ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದೇನೋ ಸರಿ ಅಂತಾನೇ ಹೇಳೋಣ. ಆದರೆ ಯಾರು ಕಲಿಸ್ತಾರೆ? ನಗರಗಳ ಖಾಸಗಿ ಕಾನ್ವೆಂಟ್ ಗಳಲ್ಲಿ ಪಾಠ ಮಾಡೋರಿಗೇ ಇಂಗ್ಲಿಷ್ ನೆಟ್ಟಗೆ ಬರಲ್ಲ. ಅಂತಾದ್ರಲ್ಲಿ ಸರ್ಕಾರ ಅದೆಂಗೆ ದಿಡೀರ್ ಅಂತ ಸಾವಿರಾರು ಜನ ಇಂಗ್ಲಿಷ್ ನಾಗೆ ಪಾಠ ಮಾಡೋರನ್ನ ತರ್ತದೆ ಇದು ಮೊದಲ ಪ್ರಶ್ನೆ. ಇವತ್ತಿಗೂ ಬಹಳಷ್ಟು ಹಳ್ಳಿಗಳಲ್ಲಿ ನಾಲ್ಕೈದು ತರಗತಿಗಳಿಗೆ ಪಾಠ ಮಾಡೋದು ಒಬ್ಬನೇ ಶಿಕ್ಷಕ. ಅಗತ್ಯ ಕೊಠಡಿಗಳೂ ಇಲ್ಲ. ಇಂತಾದ್ರಲ್ಲಿ ಅವರಿಗೆ ಕನ್ನೆಡದಲ್ಲಿ ಪಾಠ ಮಾಡೋದೇ ಕಷ್ಟ. ಮತ್ತೆ ಇಂಗ್ಲಿಷಲ್ಲಿ ಪಾಠ ಮಾಡಿ ಅಂದರೆ ಅದೆಂಗೆ ಮಾಡ್ತಾರೆ? ಬಡ, ದಲಿತ ವಿದ್ಯಾರ್ಥಿಗಳು ಇಂಗ್ಲಿಷ್ ಕಲೀಬೇಕು ಅನ್ನೋದನ್ನು ನಾನೂ ಒಪ್ತೀನಿ. ಆದರೆ ಇವತ್ತಿನ ನಮ್ಮ ಶಿಕ್ಷಣದ ಪದ್ಧತಿಗಳಲ್ಲಿ ಅದು ಅಸಾಧ್ಯದ ಮಾತು. ಅಷ್ಟಕ್ಕೂ ಹಳ್ಳಿಗಳ ವಾತಾವರಣವೇ ಇಂಗ್ಲಿಷಿಗೆ ಪೂರಕವಾಗಿರುವುದಲ್ಲ. ಅತ್ತ ಇಂಗ್ಲಿಷೂ ಅಲ್ಲದೆ ಇತ್ತ ಕನ್ನೆವೂ ಅಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ನಮ್ಮ ವಿದ್ಯಾರ್ಥಿಗಳು ನೇತಾಡೋ ಸ್ಥಿತಿ ಬಂದುಬಿಡುತ್ತಾ ಅಂತ ಒಂದು ಆತಂಕ ನಂಗೆ. ಅದಕ್ಕೆ 7 ನೇ ಕ್ಲಾಸು ಮುಗಿಯೋವರೆಗೂ ಮಕ್ಕಳಿಗೆ ಒಳ್ಳೇ ರೀತಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಸಿಗಲಿ. ಆದರೆ ಅಗತ್ಯವಾಗಿ ಒಂದನೇ ತರಗತಿಯಿಂದಲೂ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲಿ. ಎಂಟನೇ ತರಗತಿಯಿಂದ ಮುಂದುಕ್ಕೆ ಇಂಗ್ಲಿಷ್ ಮಾಧ್ಯಮ ಕಲಿಸಲಿ.
ಜಗತ್ತಿನ ಎಲ್ಲಾ ಶಿಕ್ಷಣ ತಜ್ಞರೂ ಮಾತೃಭಾಷಾ ಶಿಕ್ಷಣವನ್ನೇ ಎತ್ತಿ ಹಿಡಿಯುತ್ತಾರೆ. ಅದುವೇ ಮಗುವನ್ನು ಮತ್ತು ಅದರ ಭಾಷೆಗೆ ಸಹಜ ಸಂಬಂಧ ಕಲ್ಪಿಸಿ ಆ ಮಗುವಿನ ಬೆಳವಣೀಗೆಗೆ ಸಹಾಯಕ. ಆದರೆ ಸಾಹಿತಿ ಬುದ್ದೀಜೀವಿಗಳು ಇಂಗ್ಲಿಷ್ ಕಲಿಕೆ ವಿರೋಧಿಸಿದೊಡನೆ ದಲಿತ ಸಮುದಾಯಗಳು ವಿರೋಧಿಸಲು ಇರುವ ಸಕಾರಣಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಇಂಗ್ಲಿಷ್ ಎನ್ನುವುದು ಮುಂದುವರಿದವರು ಮುಂದುವರಿಯಲು ಇರುವ ಒಂದು ಸಾಧನವೇ ಆಗಿರುವಾಗ ಅದನ್ನು ದಲಿತರಿಗೆ ನಿರಾಕರಿಸುವ ಹುನ್ನಾರವಿದು ಎಂದು ಅನ್ನಿಸುವುದು ತೀರಾ ಸಹಜ. ಹೀಗಾಗಿ ಎಲ್ಲಾ ಮುಂದುವರಿದವರಂತೆ ದಲಿತರೂ ಬಡವರೂ ಇಂಗ್ಲಿಷ್ ನ್ನು ಒಂದು ಭಾಷೆಯಾಗಿ ಕಲಿಯುವ ಅವಕಾಶ ಇರಬೇಕು. ಆದರೆ ಇವೆಲ್ಲವನ್ನು ನಾವು ನೀತಿ ನಿರೂಪಣೆಗಳ ಮಟ್ಟದಲ್ಲಿ ಮಾತನಾಡುವುದಕ್ಕಿಂತ ವಸ್ತುಸ್ಥಿತಿಗಳ ಮಟ್ಟದಲ್ಲಿ ಮಾತನಾಡುವುದು ಅವಶ್ಯಕ.
ಎನ್ ಎ ಇಸ್ಮಾಯಿಲ್
ಪ್ರಿಯ Harshakumar Kugwe ಈ ಮಾತೃಭಾಷಾ ಶಿಕ್ಷಣ ಎಂದರೇನು? ತುಳವರಿಗೆ, ಬ್ಯಾರಿಗಳಿಗೆ, ಕೊಡವರಿಗೆ, ಕೊಂಕಣಿಗಳಿಗೆ ಅವರವರ ಭಾಷೆಯಲ್ಲಿ ಶಿಕ್ಷಣ ಕೊಡಬೇಕು ತಾನೇ? ಅದು ಸಾಧ್ಯವೇ? ಅವರು ತಮ್ಮದಲ್ಲದ ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಸರಿ ಎನ್ನುವುದಾದರೆ ಇಂಗ್ಲಿಷ್ನಲ್ಲೂ ಕಲಿಯಬಹುದಲ್ಲವೇ? ಮಾತೃಭಾಷೆ ಎನ್ನುವುದಕ್ಕಿಂತ ಮಗು ಇರುವ ವಾತಾವರಣ ಭಾಷೆ ಎನ್ನುವುದು ಹೆಚ್ಚು ಸರಿ ಎನ್ನಬಹುದೇನೋ. Anand Enguru ಸರ್ಕಾರ ಇಂಗ್ಲಿಷ್ ಮಾಧ್ಯಮ ಬೇಕು ಎಂದು ಹೇಳುತ್ತಿರುವುದರ ಹಿಂದಿರುವ ಅಧ್ಯಯನಗಳಿವೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಇಂಗ್ಲಿಷ್ ಶಾಲೆಗಳಿಗೆ ಹೋಗುತ್ತಿರುವ ಮಕ್ಕಳನ್ನು ಆಸೆಗಣ್ಣಿನಿಂದ ನೋಡುತ್ತಾ ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪರಿತಪಿಸುತ್ತಿರುವ ಸಾಮಾನ್ಯರಂತೂ ಸರ್ಕಾರದ ನಿರ್ಧಾರದ ಹಿಂದಿದ್ದಾರೆ. ಏಕೆಂದರೆ ಅವರೆಲ್ಲಾ ಅಧಿಕಾರಕ್ಕೇರ ಬಯಸುವವರಿಗೆ ಓಟುಗಳು.
ರೇಣುಕಾ ಮಂಜುನಾಥ್
ಇಸ್ಮಾಯಿಲ್ ಅವರು ಹೇಳುವುದು ಸರಿ! ಇನ್ನು ನನಗೆ ಹೇಳಬೇಕೆನಿಸಿರುವುದು, ಮಾತೃಭಾಷೆ ಉಳಿಸಿಕೊಳ್ಳುವುದೇನಿದ್ದರೂ ಅವರವರ ಮಾತೃವಲಯದಲ್ಲಿ ಕಾಳಜಿ ಇರುವವರು ಮಾಡಿಕೊಳ್ಳಬೇಕಿದೆ!now a days, anybody to develop and grow globally is not a big issue...since everything is very handy, if you are average intelligent you can achieve a lot.! that way, we the parents are comfortable and we are in 'no confusion' zone! local ಆಗಿ ಬೆಳೆಯಬೇಕೆಂದರೆ ನಾವು ನಮ್ಮ ಮಕ್ಕಳನ್ನು ಯಾರೊಡನೆ ಸ್ಪರ್ಧಿಸಲು ಬಿಡಬೇಕೆಂಬುದು ಬಹು ಮುಖ್ಯವಾಗುತ್ತದೆ! ಇಲ್ಲಿ might is right! real estate, political field, cinema...ಹೀಗೆ! ಹಾಗಾಗಿ ನಾವು ನಮ್ಮ ಮಕ್ಕಳಿಗಾಗಿ , ಭಾಷೆಯನ್ನು ಬದಿಗಿಟ್ಟು survivalಗಾಗಿ ಹೆಣಗಬೇಕಾದ ಪರಿಸ್ಥಿತಿ! global platform nalli ಸಶಕ್ತ ಭಾಷೆಗಷ್ಟೇ ಉಳಿಯುವ...ಉಳಿಸುವ ಸಾಮರ್ಥ್ಯ! ಹಾಗಾಗಿ ಇಂಗ್ಲೀಷ್ ಮೇಲುಗೈ ಸಾಧಿಸಿದ್ದರೆ ಆಶ್ಚರ್ಯವಿಲ್ಲ! ಇನ್ನು ಮುಂದೆ ನಮ್ಮ ಭಾಷೆ ಉಳಿಸಿಕೊಳ್ಳುವುದೆಂದರೆ ಅದು ನಮ್ಮ ವೈಯಕ್ತಿಕ ಕಾಳಜಿಯಾಗಿಬಿಡುವ ಸಾಧ್ಯತೆಯಿದೆ! ಲಿಪಿಯಿಲ್ಲದ ತುಳು, ಕೊಂಕಣಿ, ಕೊಡವ ಭಾಷೆಗಳು ಜೀವಂತವಾಗಿದ್ದಾವೆಂದಮೇಲೆ...ಕನ್ನಡಕ್ಕೆ ಯಾವ ತೊಂದರೆಯೂ ಇಲ್ಲ! ಅಮ್ಮಂದಿರ ಸಾಲಿನಲ್ಲಿ ನಿಲ್ಲುವ ನಮ್ಮಂತಹವರಿಗೆ , ನಮ್ಮ ಮಕ್ಕಳು ಸ್ಥಳೀಯ ದೈತ್ಯರಾಗಿರುವ ರಿಯಲ್ ಎಸ್ಟೇಟ್ ಮುಂತಾದ ಕುಳರನ್ನು ನೋಡಿ ನಮ್ಮ 'ಓದು' ಯಾವುದಕ್ಕೂ ಸಲ್ಲುತ್ತಿಲ್ಲ ಎಂದು 'ಕೀಳರಿಮೆ" ಅನುಭವಿಸುವುದಕ್ಕಿಂತ....ಭಾಷೆ ಯಾವುದಾದರೇನು .....ನಡೆಮುಂದೆ...ನಡೆಮುಂದೆ ಎನ್ನುತ್ತಾ ಮುನ್ನುಗ್ಗಬೇಕಿದೆ! ಬಾಷೆ ಉಳಿಸುವುದು ಸಮುದಾಯದ , ಸಮಾಜದ , ಸರ್ಕಾರದ ಜವಾಬ್ದಾರಿಯಾದಾಗ ಅದಕ್ಕೆ ಬೇರೆ ಆಯಾಮಗಳಲ್ಲಿ ಪ್ರಯತ್ನಿಸಬೇಕಿದೆ! ಶಿಕ್ಷಣದ ಹೊರತಾಗಿ....ಸಾಂಸ್ಕ್ೃತಿಕ. ಸಾಮಾಜಿಕ, ಕೌಟುಂಬಿಕ, ಧಾರ್ಮಿಕ, ಸಿನಿಮಾ, ನಾಟಕ, ...ಮುಂತಾದ ನೆಲೆಯಲ್ಲಿ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಿದೆ!
ಆನಂದ್
ಪ್ರಿಯ N A Mahamed Ismail ಸರ್,
ನೀವು ಹೇಳುವಂತೆ ಕೊಡವ, ತುಳು, ಬ್ಯಾರಿ ಎಲ್ಲರಿಗೂ ಅವರವರ ತಾಯ್ನುಡಿಯಲ್ಲಿ ಶಿಕ್ಷಣ ಸಿಗಬೇಕಾದ್ದು ಸರಿಯಾದದ್ದು. ಹಾಗೆ ಕೊಡುವ ಏರ್ಪಾಟು ಮಾಡಬೇಕಾದ್ದು ಸರ್ಕಾರದ ಸಹಯೋಗದೊಂದಿಗೆ ಆಯಾ ಭಾಷಿಕ ಜನರು ಮಾತ್ರವೇ. ಇಂದು ಹಾಗೆ ಕೊಡಲಾಗುತ್ತಿಲ್ಲವಾದರೆ ಕೊಡುವ ದಿಕ್ಕಿನಲ್ಲಿ ಕೆಲಸಗಳಾಗಬೇಕು. ಅದಕ್ಕೆ ವಿಪರೀತವಾಗಿ ಈಗ ಕನ್ನಡದಲ್ಲಿರುವ ಏರ್ಪಾಟನ್ನೂ ಕೈಬಿದುವುದಲ್ಲ. ಜನರ ಬಯಕೆಗಳು ಇಂಗ್ಲೀಶ್ ಮಾಧ್ಯಮದ ಕಡೆಗಿದ್ದರೆ ಅದಕ್ಕೆ ಸರ್ಕಾರ ಕನ್ನಡದ ವ್ಯವಸ್ಥೆಯನ್ನು ಅಂಥಾ ಭರವಸೆ ಹುಟ್ಟಿಸುವ ಬಗೆಯಲ್ಲಿ ಕಟ್ಟಿಲ್ಲದಿರುವುದು ಕಾರಣ. ಈ ದಿಕ್ಕಿನಲ್ಲಿ ಪಾಲಿಸಿ ರೂಪಿಸಬೇಕಾದ ಹೊಣೆಗಾರಿಕೆ ಸರ್ಕಾರದ್ದು. ಅಂದರೆ ಗುಣಮಟ್ಟದ ಕಾರಣದಿಂದಾಗಿ ಕನ್ನಡ ಜನತೆ ಕನ್ನಡ ಮಾಧ್ಯಮ ಅಪ್ಪುವಮ್ತೆ ಮಾಡಬೇಕಾದ sarkaara ಇದನ್ನು ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಸರಿಯಲ್ಲ. ತನ್ನ ನಿಲುವಿಗೆ/ ಕ್ರಮಕ್ಕೆ ವೈಜ್ಞಾನಿಕ ಅಧ್ಯಯನದ ಬೆಂಬಲ ಇದ್ದಲ್ಲಿ ಯಾಕೆ ಆರನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ? ಒಂದನೇ ತರಗತಿಯಿಂದಲೇ ಆರಂಭಿಸಲಿ.. ನಮಗೇನು? ಒಟ್ಟಲ್ಲಿ ಕನ್ನಡಿಗರ ಏಳಿಗೆ ಮುಖ್ಯ!
ಮುಂದುವರಿದು............................
ಎನ್ ಎ ಇಸ್ಮಾಯಿಲ್
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಪರಿಚಯಿಸುವ ಪ್ರಸ್ತಾಪಕ್ಕೆ ಭಾವುಕವಾಗಿ ಪ್ರತಿಕ್ರಿಯಿಸುವ ನಾವೇಕೆ ಸಾಮಾನ್ಯ ಶಾಲೆಗಳು ಮತ್ತು ಸಮಾನ ಶಿಕ್ಷಣದ ಬೇಡಿಕೆಯನ್ನು ಇಷ್ಟೇ ಬಲವಾಗಿ ಮಂಡಿಸುತ್ತಿಲ್ಲ. ಇದು ಕನ್ನಡ ಮಾಧ್ಯಮದ ಪರವಾಗಿ ಮಾತನಾಡುತ್ತಿರುವವರು ಬಡವರು ಕಲಿಯುವ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಉಳಿಸಲು ಹೊರಟವರು ಎಂಬ ಭಾವನೆಗೆ ಕಾರಣವಾಗುತ್ತಿದೆ. ಸಾಮಾಜಿಕ/ಆರ್ಥಿಕ ಅಸಮಾನತೆ ಎಂಬುದು ಒಂದು ವಾಸ್ತವ. ಹಾಗೆಯೇ ನಗರದ ಮಧ್ಯಮ ವರ್ಗ(ಅಪವಾದಗಳನ್ನು ಹೊರತು ಪಡಿಸಿ) ತಮ್ಮ ಮಕ್ಕಳನ್ನು 'ಒಳ್ಳೆಯ ಶಾಲೆ'ಗಳಿಗೆ (ಸರಿಯಾಗಿ ಇಂಗ್ಲಿಷ್ ಕಲಿಸುವ ಖಾಸಗಿ ಶಾಲೆಗಳಿಗೆ)ಸೇರಿಸುತ್ತಿದೆ ಎಂಬುದು ವಾಸ್ತವವೇ. ಈ ಎರಡೂ ವಾಸ್ತವಗಳನ್ನು ದೃಷ್ಟಿಯಲ್ಲಿಟ್ಟುಕೊಂಡರೆ 'ಕನ್ನಡ ಮಾಧ್ಯಮ'ಕ್ಕಾಗಿ ಮಂಡಿಸುವ ವಾದವು ಸಮಾನ ಶಿಕ್ಷಣವನ್ನು ನೆಲೆಗಟ್ಟಾಗಿಸಿಕೊಳ್ಳದೇ ಹೋದರೆ ಅದು ಉಳ್ಳವರ ಆಷಾಡಭೂತಿತನದಂತೆ ಬಡವರಿಗೆ/ದಲಿತರಿಗೆ ಕಾಣಿಸುವುದು ಸಹಜವಲ್ಲವೇ?
ಆನಂದ್
ನಿಮ್ಮ ಮಾತಿಗೆ ನನ್ನ ಪೂರ್ಣ ಒಪ್ಪಿಗೆ. ಸಮಾನ ಶಿಕ್ಷಣ ಮತ್ತು ಕನ್ನಡ ಮಾಧ್ಯಮದ ಶಿಕ್ಷಣಗಳೆರಡೂ ನಮಗೆ ಮುಖ್ಯ. ಈ ವಿಷಯವಾಗಿ ಅನಂತಮೂರ್ತಿಯವರ ವಿಚಾರಗಳು ಆಸಕ್ತಿಕರವಾಗಿವೆ. ನನ್ನ ಮಾತೇನೆಂದರೆ ಸರ್ಕಾರದ ಹೊಣೆಗಾರಿಕೆ ಈಗ ಈ ಆಶಯಗಳಿಗೆ ವಿರುದ್ಧವಾಗಿ ಸಾಗುವಂತಹ ನೀತಿ ರೂಪಿಸುದೆ, ಇವುಗಳಿಗೆ ಪೂರಕವಾಗುವ, ಏನಾಗಬೇಕೋ ಅದನ್ನಾಗಿಸುವೆಡೆಗಿನ ಹೆಜ್ಜೆ ಇಡಲಿ ಎನ್ನುವುದು ನಮ್ಮ ಕಾಳಜಿ.. ಒತ್ತಾಯ!
ಮಂಜುನಾಥ್ ಸೋನು
ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಕೆಲವು ಖಾಸಗಿ ಸಂಸ್ಥೆಗಳಲ್ಲಿ ಜವಾನನ ಹುದ್ದೆ ತಗೋಬೇಕಂದ್ರೂ ಇಂಗ್ಲಿಷ್ ಬರಬೇಕು ಅಂತ ಅನ್ನೋ ಈ ಜಾಗತೀಕರಣದ ಸಂದರ್ಭದಲ್ಲಿ ಸರ್ಕಾರವೇ ಇಂಗ್ಲಿಷ್ ಶಿಕ್ಷಣ ಕೊಟ್ಟರೆ ತಪ್ಪೇನು? ಹಾಗೆ ಕೆಲವು ಕನ್ನಡಪರ ಹೋರಾಟಗಾರರಿಗೆ ಒಂದು ಪ್ರಶ್ನೆ ಇವತ್ತು ಕನ್ನಡ ಕನ್ನಡ ಎನ್ನುವವರ ಮನೆ ಮಕ್ಕಳು ಎಷ್ಟು ಜನ ನಮ್ಮ ಊರುಗಳ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿದ್ದಾರೆ ಅಯ್ಯೋ ಸ್ವಾಮಿ ನಮ್ಮ ಮನೆಯ ಮಕ್ಕಳಿಗೆ ಸರ್ಕಾರಿ ಹುದ್ದೆಗಳಂತೂ ಕನಸಿನ ಮಾತು ಹಾಗಾಗಿ ಸರ್ಕಾರವೇ ಇಂಗ್ಲಿಷ್ ಶಿಕ್ಞಣ ಸಂಸ್ಥೆಗಳನ್ನು ಪ್ರಾರಂಭಿಸಿದರೆ ನಾವು ಅನ್ಯಾಯವಾಗಿ ಸಾವಿರಾರು ರೂಪಾಯಿಗಳನ್ನು ಪೀಕುತ್ತಿರುವ ಕಾನ್ವೆಂಟುಗಳಿಂದ ಉಳಿಯಬಹುದು ಕಡೆಯದಾಗಿ ಹೇಳೋದಾದರೆ ಯಾವುದೇ ಭಾಷೆ ನಾವು ಕಲಿತರೂ ಅದು ನಮಗೆ ಅರ್ಥ ಆಗೋದು ನನ್ನ ಅಮ್ಮ ಕಲಿಸಿದ ಭಾಷೆಯಲ್ಲಿಯೇ ಹಾಗಾಗಿ ಮಾತೃಭಾಷೆಯ ಜೊತೆಗೆ ಅನ್ನ ಕೊಡೋ ಭಾಷೆನೂ ಬೇಕು.