Monday 10 September 2012

ಸಕೀನಾಬಾಯಿ ನಂಬಿಕೆ ಉಳಿಸಿದ ಶಿವ

ಲೇಖಕರು:- ದಿನೇಶ್ ಅಮೀನ್ ಮಟ್ಟು

ನರೋಡಾ ಪಾಟಿಯಾ ಹತ್ಯಾಕಾಂಡದ ಅಪರಾಧಿಗಳಿಗೆ ಗುಜರಾತ್ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದ್ದನ್ನು ಕೇಳಿದಾಗ ನನಗೆ ನೆನಪಾದವರು ಸಕೀನಾ ಬಾಯಿ. ಐದು ವರ್ಷಗಳ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆಯ ಸಮೀಕ್ಷೆಗೆಂದು ಹೋದವನಿಗೆ ನರೋಡಾ ಪಾಟಿಯಾದಲ್ಲಿ ಭೇಟಿಯಾಗಿದ್ದ ಸಕೀನಾಬಾಯಿ ಹಳೆಯ ದಿನಗಳನ್ನು ಮೆಲುಕುಹಾಕುತ್ತಾ `ನಾವೆಲ್ಲ ಒಂದು ಕುಟುಂಬದ ರೀತಿ ಇದ್ದವರು, ಆ ಕಾಲ ಹೊರಟೋಯ್ತು, ಈಗ ಎಲ್ಲೋ ಗಲಭೆ ನಡೆದ ಗಾಳಿಸುದ್ದಿ ಬಂದರೂ ಎದೆ ನಡ್‌ಗತೈತಿ. ಯಾರ ಮೇಲೂ ನಂಬಿಕೆ ಬರೋಲ್ಲ, ಆ ಶಿವನೇ ಕಾಯಬೇಕು` ಎಂದಿದ್ದರು ಅಚ್ಚ ಕನ್ನಡದಲ್ಲಿ. (ಪ್ರಜಾವಾಣಿ ವರದಿ: 15.12.2007). ಮುಸ್ಲಿಂ ಧರ್ಮಕ್ಕೆ ಸೇರಿದವರೆಂಬ ಕಾರಣಕ್ಕಾಗಿ `ಹಿಂದೂ ಶಿವ` ಯಾದಗೀರ್ ತಾಲ್ಲೂಕಿನ ಅತ್ತಿಗುಣಿಯ ಸಕೀನಾಬಾಯಿಯ ಕೈಬಿಡಲಿಲ್ಲ. ಅವರು ತನ್ನ ಮೇಲೆ ಇಟ್ಟ ನಂಬಿಕೆಯನ್ನು ಹುಸಿಮಾಡದೆ `ನ್ಯಾಯದೇವತೆಯ ಕಣ್ಣು ತೆರೆಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ.`

ಆದರೆ ನ್ಯಾಯಕ್ಕೆ ಸಿಕ್ಕಿದ ಈ ಜಯಕ್ಕಾಗಿ ಉಳಿದೆಲ್ಲರಿಗಿಂತ ಹೆಚ್ಚು ಸಂತಸ ಪಡಬೇಕಾದವರು ತಾವು ಎಂದು ಕರ್ನಾಟಕದ ಬಹಳಷ್ಟು ಜನರಿಗೆ ತಿಳಿದಿಲ್ಲ. 35 ಮಕ್ಕಳು, 32 ಮಹಿಳೆಯರು ಮತ್ತು 30 ಗಂಡಸರು ಸೇರಿದಂತೆ ನರೋಡಾ ಪಾಟಿಯಾದಲ್ಲಿ ಹತ್ಯೆಗೀಡಾದವರ ಅಧಿಕೃತ ಸಂಖ್ಯೆ 97. ಇವರಲ್ಲಿ ಹೆಚ್ಚಿನವರು ಕರ್ನಾಟಕ ಮತ್ತು ಮಹಾರಾಷ್ಟ್ರ ಮೂಲದವರು. ಹುಬ್ಬಳ್ಳಿ, ಧಾರವಾಡ, ಹಾನಗಲ್, ಸುರಪುರ, ಶಹಪುರ, ಜೇವರ್ಗಿ, ಯಾದಗೀರ್ ಕಡೆಗಳಿಂದ ವರ್ಷಗಳ ಹಿಂದೆ ಅಲ್ಲಿಗೆ ವಲಸೆ ಹೋದವರಿದ್ದಾರೆ. ಸಕೀನಾಬಾಯಿಯಂತೆ ಅಚ್ಚಕನ್ನಡ ಮಾತನಾಡುವವರು ಈಗಲೂ ಅಲ್ಲಿದ್ದಾರೆ. ಇದಕ್ಕಾಗಿಯೇ ಸ್ಥಳೀಯರು ನರೋಡಾ ಪಾಟಿಯಾಕ್ಕೆ `ಛೋಟಾ ಕರ್ನಾಟಕ್` ಎನ್ನುತ್ತಾರೆ. ಊರಲ್ಲಿ ನೇಕಾರಿಕೆ ಮಾಡುತ್ತಿದ್ದ ಇವರು ಕೈಮಗ್ಗ ನಿಂತುಹೋದ ಮೇಲೆ ಅಹಮದಾಬಾದ್‌ಗೆ ಹೋಗಿ ಬಟ್ಟೆಗಿರಣಿಗಳಲ್ಲಿ ಸೇರಿಕೊಂಡಿದ್ದರು. ಗಿರಣಿಗಳು ಯಾಂತ್ರಿಕೃತಗೊಳ್ಳುತ್ತಿದ್ದಂತೆಯೇ ಅದಕ್ಕೆ ಬೇಕಾದ ಕೌಶಲ ಇಲ್ಲದೆ ನಿರುದ್ಯೋಗಿಗಳಾಗಿ ಅನಿವಾರ್ಯವಾಗಿ ಟೈಲರಿಂಗ್, ಲಾರಿ-ಅಟೋರಿಕ್ಷಾ ಓಡಿಸುವುದು, ಮಾಂಸ ಮಾರಾಟ, ಎಲೆಕ್ಟ್ರಿಕಲ್ ರಿಪೇರಿ ಮೊದಲಾದ ಸಣ್ಣಪುಟ್ಟ ವೃತ್ತಿಯಲ್ಲಿ ತೊಡಗಿಸಿಕೊಂಡು ಬಡತನದ ನಡುವೆಯೂ ತಮ್ಮ ಪಾಡಿಗೆ ತಾವಿದ್ದರು. ಹತ್ತು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಒಂದು ದಿನ ಅವರ ಬದುಕಿಗೆ ಬೆಂಕಿ ಬಿತ್ತು. ಕೋಮುಗಲಭೆಯ ನಂತರ ಶಹಾ ಅಲಂ ನಿರಾಶ್ರಿತರ ಶಿಬಿರದಲ್ಲಿ ಭೇಟಿಯಾಗಿದ್ದ ಸುರಪುರ ತಾಲ್ಲೂಕಿನ ಜೈನುಲ್ಲಾ ನನ್ನ ಕೈಹಿಡಿದು `ಸಾಯಲಿಕ್ಕೆ ಇಲ್ಲಿಗೆ ಬರಬೇಕಿತ್ತಾ?` ಎಂದು ಕೇಳಿದ್ದು (ಪ್ರಜಾವಾಣಿ ವರದಿ, ಮಾರ್ಚ್ 8, 2002) ಕಿವಿಯಲ್ಲಿ ಈಗಲೂ ಗುಂಯ್‌ಗುಡುತ್ತಿದೆ.

ಅಹಮದಾಬಾದ್ ನಗರದಿಂದ ಸುಮಾರು 15 ಕಿ.ಮೀ.ದೂರದ ಹೊರವಲಯದಲ್ಲಿರುವ ನರೋಡಾ ಪಾಟಿಯಾಕ್ಕೂ ಗೋಧ್ರಾಹತ್ಯಾಕಾಂಡಕ್ಕೂ ಸಂಬಂಧವೇ ಇಲ್ಲ. ಇದು ಆ ಪ್ರಕರಣದ ವಿಚಾರಣೆಯಲ್ಲಿಯೂ ಸಾಬೀತಾಗಿದೆ. `ಪ್ರತೀಕಾರ`ಕ್ಕಾಗಿ ನರೋಡಾಪಾಟಿಯಾವನ್ನೇ ಆರಿಸಿಕೊಳ್ಳಲು ಮುಖ್ಯವಾಗಿ ಎರಡು ಕಾರಣ. ಮೊದಲನೆಯದು ಒಂದೇ ಕಡೆ ಸುಲಭದಲ್ಲಿ ನೂರಾರು ಮುಸ್ಲಿಂ ತಲೆಗಳು ಸಿಗುತ್ತವೆ ಎಂಬ ದುಷ್ಟ ಮನಸ್ಸಿನ ಯೋಚನೆ. ಸುಮಾರು 15 ಸಾವಿರ ಜನಸಂಖ್ಯೆಯ ನರೋಡಾಪಾಟಿಯಾ ಬಡಾವಣೆಗೆ ಸೇರಿರುವ ಹುಸೇನ್‌ನಗರ, ಜವಾಹರ ನಗರ, ಪಂಡಿತ್ ಕೀ ಚಾಳ್, ಮಸ್ಜೀದ್‌ಗಲ್ಲಿಗಳಲ್ಲಿ ಸುಮಾರು 250-300 ಮುಸ್ಲಿಂ ಕುಟುಂಬಗಳಿವೆ. ಅಲ್ಲಿರುವ ಹಿಂದೂ ಕುಟುಂಬಗಳ ಸಂಖ್ಯೆ 25 ಕೂಡಾ ದಾಟಲಾರದು. ನರೋಡಾ ಪಾಟಿಯಾದ ಈ ಚಾಳ್‌ಗಳನ್ನು ಗಂಗೋತ್ರಿ ಸೊಸೈಟಿ ಮತ್ತು ಗೋಪಿನಾಥ್ ಸೊಸೈಟಿ ಎಂಬ ಎರಡು ವಸತಿಸಂಕೀರ್ಣಗಳು ಸುತ್ತುವರಿದಿವೆ. 

`ರಕ್ಷಣೆ ಕೋರಿ ಓಡಿ ಬಂದ ನಮ್ಮನ್ನು ಪೊಲೀಸರು ಕತ್ತಲಾದ ಮೇಲೆ ಬೇರೆ ಕಡೆ ಸಾಗಿಸುತ್ತೇವೆ ಎಂದು ಹೇಳಿ ಒಂದು ಕಡೆ ಸೇರಿಸಿಬಿಟ್ಟಿದ್ದರು. ಎರಡು ವಸತಿಸಂಕೀರ್ಣಗಳ ನಡುವಿನ ಓಣಿಯಲ್ಲಿ ಸೇರಿದ್ದ ನಮ್ಮ ಮೇಲೆ ಕಟ್ಟಡಗಳ ಮೇಲಿನಿಂದ ಪೆಟ್ರೋಲ್-ಸೀಮೆ ಎಣ್ಣೆ ಸುರಿಯತೊಡಗಿದ್ದರು. ಆಗ ಪ್ರತ್ಯಕ್ಷವಾದ ಬೆಂಕಿ ಕೊಳ್ಳಿ ಹಿಡಿದುಕೊಂಡ ಗುಂಪು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದವರನ್ನೆಲ್ಲ ಬೆಂಕಿಗೆ ದೂಡಿತ್ತು. ಅವರೆಲ್ಲ ಮೊದಲೇ ಪ್ಲಾನ್ ಮಾಡಿದ್ದರು ಸಾಬ್...` ಎಂದು ಕುರೇಷಿಲಾಲ್ ಆ ಕರಾಳ ದಿನದ ಘಟನಾವಳಿಗಳನ್ನು ಗಲಭೆಯ ನಂತರ ವಿವರಿಸಿದ್ದರು.

ಎರಡನೆ ಕಾರಣ ಈಗ ಜೈಲು ಸೇರಿರುವ ಮಾಯಾಬೆನ್ ಕೊಡ್ನಾನಿಯ ಬೆಂಬಲ. ಸ್ಥಳೀಯ ಶಾಸಕರ ನಿಯಂತ್ರಣದಲ್ಲಿ ಪೊಲೀಸರು ಇರುವುದರಿಂದ ಅಪರಾಧಿಗಳಿಗೆ ರಕ್ಷಣೆ ನೀಡುವುದು ಮತ್ತು ಜನಬಲ-ಸಂಪನ್ಮೂಲ ಹೊಂದಿಸಿಕೊಳ್ಳುವುದು ಸುಲಭ. ಈ ಲೆಕ್ಕಾಚಾರ ಕೂಡಾ ಹುಸಿಯಾಗಲಿಲ್ಲ. ನರೋಡಾ ಪಾಟಿಯಾದ ಎದುರಿನ ರಸ್ತೆಯಲ್ಲಿಯೇ ರಾಜ್ಯ ಮೀಸಲು ಪಡೆಯ ಕೇಂದ್ರ ಕಚೇರಿ ಇದ್ದರೂ ಯಾವ ಪೊಲೀಸರೂ 2002ರ ಫೆಬ್ರವರಿ 28ರಂದು ಬೆಳಿಗ್ಗೆಯಿಂದ ಸಂಜೆ ವರೆಗೆ ರಕ್ಷಣೆಗೆ ಬಂದಿರಲಿಲ್ಲ. ರಕ್ಷಣೆ ಕೋರಿ ಓಡಿಬಂದ ಮಹಿಳೆಯರು ಮತ್ತು ಮಕ್ಕಳ ಮೇಲೆಯೇ ಪೊಲೀಸರು ಅಶ್ರುವಾಯು ಸಿಡಿಸಿದ್ದರು. ಖಾಕಿಧಾರಿ ಖಳನಾಯಕರಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿರುವ ಸ್ಥಳೀಯ ಇನ್‌ಸ್ಪೆಕ್ಟರ್ ಎಂ.ಕೆ.ಮೈಸೂರ್‌ವಾಲಾ ಒಬ್ಬರು. ಇಷ್ಟೆ ಅಲ್ಲ, ನರೋಡಾಪಾಟಿಯಾದ ಅಗ್ನಿಕಾಂಡಕ್ಕೆ ಬಳಸಿದ್ದು ಎದುರಿನ ರಸ್ತೆಯಲ್ಲಿರುವ ರಾಜ್ಯ ರಸ್ತೆಸಾರಿಗೆಯ ದಾಸ್ತಾನು ಮಳಿಗೆಯಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್.

ಅಲ್ಲಿ ಬದುಕುಳಿದವರ ಬಾಯಿಯಿಂದಲೇ ಕೇಳದೆ ಇದ್ದರೆ ಎಲ್ಲರಂತೆ ತಾಯಿಯ ಹೊಟ್ಟೆಯಿಂದ ಬಂದ ಮನುಷ್ಯರು ಈ ರೀತಿ ವರ್ತಿಸಲು ಸಾಧ್ಯ ಎನ್ನುವುದನ್ನು ನಂಬುವುದು ಕಷ್ಟ. ಗುಜರಾತ್‌ನಲ್ಲಿ ಕೋಮುಗಲಭೆಯ ನಂತರ ಅಲ್ಲಿನ ನಿರಾಶ್ರಿತರು ಹೇಳಿದ್ದ ಕತೆಗಳನ್ನು ನಾನು ಕೂಡಾ ಆಗ ಸಂಪೂರ್ಣವಾಗಿ ನಂಬಿರಲಿಲ್ಲ. ಇಂತಹ ಘಟನೆಗಳು ನಡೆದಿದ್ದರೂ ಅದು ಕೋಮುದ್ವೇಷದಿಂದ ಕುರುಡರಾಗಿರುವ ಹುಚ್ಚರು ಮತ್ತು ಒಂದಷ್ಟು ಪುಂಡರು ಇದನ್ನು ನಡೆಸಿರಬಹುದೆಂದು ಬಹಳ ಮಂದಿಯಂತೆ ನಾನು ತಿಳಿದಿದ್ದೆ. ಆದರೆ ನಂತರದ ದಿನಗಳಲ್ಲಿ ಹೊರಬರತೊಡಗಿದ ಸತ್ಯಸಂಗತಿಗಳು ಬೆಚ್ಚಿಬೀಳಿಸುವಂತಹದ್ದು. 

28 ವರ್ಷಗಳ ಜೈಲುಶಿಕ್ಷೆಗೆ ಒಳಗಾಗಿರುವ ಮಾಯಾ ಕೊಡ್ನಾನಿ ಮಹಿಳೆ ಮತ್ತು ಸ್ಥಳೀಯ ಶಾಸಕಿ ಮಾತ್ರವಲ್ಲ, ಸ್ತ್ರೀರೋಗ ತಜ್ಞೆ ಕೂಡಾ. ದೇಶ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಸಿಂಧಿ ಸಮುದಾಯಕ್ಕೆ ಸೇರಿರುವ ಮಾಯಾ ಕೊಡ್ನಾನಿ ವಿದ್ಯಾರ್ಥಿದೆಸೆಯಿಂದಲೇ ಆರ್‌ಎಸ್‌ಎಸ್ ಜತೆ ಗುರುತಿಸಿಕೊಂಡವರು ಮತ್ತು ನರೇಂದ್ರ ಮೋದಿಯವರ ಜತೆಗಿದ್ದವರು. ಈ ಪ್ರಕರಣದ ವಿಚಾರಣೆಯ ಪ್ರಾರಂಭದ ದಿನಗಳಲ್ಲಿ ಮಾಯಾ ಕೊಡ್ನಾನಿ ಹೆಸರು ಹೆಚ್ಚು ಕೇಳಿಬಂದಿರಲಿಲ್ಲ. ಆದರೆ ಈಕೆಯ ಬೆನ್ನುಹತ್ತಿದ ರಾಹುಲ್ ಶರ್ಮಾ ಎಂಬ ದಿಟ್ಟ ಪೊಲೀಸ್ ಅಧಿಕಾರಿ 2002ರ ಫೆಬ್ರವರಿ 28ರಂದು ಮಾಯಾ ಕೊಡ್ನಾನಿ ಮತ್ತು ಬಾಬು ಬಜರಂಗಿ ನರೋಡಾಪಾಟಿಯಾದ ಆಸುಪಾಸಿನಲ್ಲಿಯೇ ಇದ್ದರೆನ್ನುವ ಮಾಹಿತಿಯನ್ನು ಮೊಬೈಲ್ ಸಿಗ್ನಲ್‌ಗಳ ದಾಖಲೆಗಳಿಂದ ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಮಾಹಿತಿಯನ್ನು ರಾಜ್ಯಸರ್ಕಾರಕ್ಕೆ ನೀಡದೆ ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರೆಂಬ ಕಾರಣಕ್ಕೆ ನರೇಂದ್ರಮೋದಿ ಸರ್ಕಾರ ಶರ್ಮಾ ಅವರನ್ನು ದುರ್ವರ್ತನೆಯ ಆರೋಪದಡಿ ಶಿಕ್ಷಿಸಲು ಪ್ರಯತ್ನಿಸಿತ್ತು. ಶರ್ಮಾ ಅವರ ಪ್ರಯತ್ನ ವಿಫಲವಾಗಲಿಲ್ಲ.

`ಗುಜರಾತ್ ಕೋಮುಗಲಭೆ ಗೋಧ್ರಾ ಹತ್ಯಾಕಾಂಡಕ್ಕೆ ಸಹಜವಾಗಿ ವ್ಯಕ್ತವಾದ ಪ್ರತಿಕ್ರಿಯೆ, ಇದರಲ್ಲಿ ಸರ್ಕಾರ ಇಲ್ಲವೇ ಪಕ್ಷದ ಪಾತ್ರ ಇಲ್ಲ` ಎಂದು ಕಳೆದ ಹತ್ತುವರ್ಷಗಳಲ್ಲಿ ಹೇಳುತ್ತಾ ಬಂದಿರುವ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಸಮರ್ಥನೆಯನ್ನು ಕೂಡಾ ವಿಶೇಷ ನ್ಯಾಯಾಲಯ ಸುಳ್ಳೆಂದು ಸಾಬೀತುಮಾಡಿದೆ. 

ಗೋಧ್ರಾ ಹತ್ಯಾಕಾಂಡ ನಂತರ ಮುಸ್ಲಿಮರನ್ನೇ ಗುರಿಯಾಗಿಟ್ಟುಕೊಂಡು ನಡೆದ ಕೊಲೆ,ಸುಲಿಗೆ, ಅತ್ಯಾಚಾರಗಳೆಲ್ಲವೂ ಪೂರ್ವಯೋಜಿತ ಮತ್ತು ಅದರಲ್ಲಿ ತೊಡಗಿದ್ದ ಅಪರಾಧಿಗಳಿಗೆಲ್ಲ ಸರ್ಕಾರ ರಕ್ಷಣೆ ನೀಡುತ್ತ ಬಂದಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ನರೇಂದ್ರಮೋದಿ ನಿರಾಕರಿಸುವ ಸ್ಥಿತಿಯಲ್ಲಿ ಈಗ ಇಲ್ಲ. ಗಲಭೆಯ ಸಂದರ್ಭದಲ್ಲಿ ಕೇವಲ ಶಾಸಕಿಯಾಗಿದ್ದ ಮಾಯಾ ಕೊಡ್ನಾನಿಯನ್ನು 2007ರಲ್ಲಿ ಸಚಿವರನ್ನಾಗಿ ನೇಮಿಸಿದ್ದಾಗ ಗಲಭೆಯಲ್ಲಿ ಆಕೆಯ ಪಾತ್ರದ ಬಗ್ಗೆ ಮೋದಿ ಅವರಿಗೆ ತಿಳಿದಿರಲಿಲ್ಲ ಎಂದು ಹೇಳಿದರೂ ಯಾರೂ ನಂಬಲಾರರು.

ನರೋಡಾ ಪಾಟಿಯಾ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಇನ್ನೂ ಒಂದು ಕಾರಣಕ್ಕಾಗಿ ಮಹತ್ವಪೂರ್ಣವಾದುದು. ಸಾಮಾನ್ಯವಾಗಿ ಕೋಮುಗಲಭೆಗಳ ಪ್ರಕರಣದಲ್ಲಿ ಗೂಂಡಾಗಳು, ನಿರುದ್ಯೋಗಿಗಳು, ಬಡವರು, ನಿರ್ಗತಿಕರು, ಹಿಂದುಳಿದವರು, ದಲಿತರೇ ಅಪರಾಧಿಗಳೆನಿಸಿಕೊಂಡು ಶಿಕ್ಷೆ ಅನುಭವಿಸುತ್ತಾರೆ. ಹಿಂದೂ ಧರ್ಮದ ರಕ್ಷಣೆಗಾಗಿ ನಡೆದ ಉತ್ತರಪ್ರದೇಶದ ಬಾಬ್ರಿಮಸೀದಿ ಧ್ವಂಸದ ಕಾರ್ಯಾಚರಣೆಯಿಂದ ಹಿಡಿದು ಮಂಗಳೂರಿನ ಹೋಂಸ್ಟೇ ಮೇಲಿನ ದಾಳಿವರೆಗಿನ ಎಲ್ಲ ಪ್ರಕರಣಗಳಲ್ಲಿಯೂ ಇದು ಸತ್ಯ. ಇದನ್ನು ಯಾರಿಗಾದರೂ ಪರಾಮರ್ಶಿಸಿಕೊಳ್ಳಬೇಕೆಂದು ಅನಿಸಿದರೆ ಸ್ವಾತಂತ್ರ್ಯಾನಂತರ ದೇಶದಲ್ಲಿ ನಡೆದ ಕೋಮುಗಲಭೆಗಳಿಗೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿ ಮತ್ತು ಆರೋಪಪಟ್ಟಿಗಳಲ್ಲಿ ಇರುವ ಹೆಸರುಗಳನ್ನು ಪರಿಶೀಲಿಸಬಹುದು. 

ಆರೋಪಿಗಳಾದವರಲ್ಲಿ ಶೇಕಡಾ 99ರಷ್ಟು ಮಂದಿ ಬರೀ `ಪಾತ್ರಧಾರಿಗಳು`. `ಸೂತ್ರಧಾರಿಗಳು` ತಮ್ಮ ಸುತ್ತ ಭದ್ರತೆಗಾಗಿ ಪೊಲೀಸರನ್ನು ಇಟ್ಟುಕೊಂಡು ಸುರಕ್ಷಿತವಾಗಿರುತ್ತಾರೆ. `ಪಾತ್ರಧಾರಿಗಳು` ಜೈಲು ಸೇರುತ್ತಾರೆ, ಅವರ ಕುಟುಂಬಗಳು ಬೀದಿಗೆ ಬೀಳುತ್ತವೆ. ಇದು ಹಿಂದೂ ಮತ್ತು ಮುಸ್ಲಿಂ ಧರ್ಮಗಳೆರಡಕ್ಕೂ ಸೇರಿರುವ ಸತ್ಯ.ಆದರೆ ಇದೇ ಮೊದಲ ಬಾರಿಗೆ `ಸೂತ್ರದಾರರು` ಕೂಡಾ ಶಿಕ್ಷೆಗೊಳಗಾಗಿದ್ದಾರೆ. ಹಾಲಿ ಶಾಸಕಿ ಮಾಯಾ ಕೊಡ್ನಾನಿಗೆ ನ್ಯಾಯಾಲಯ ವಿಧಿಸಿರುವ 28 ವರ್ಷಗಳ ಸೆರೆವಾಸದ ಶಿಕ್ಷೆ `ಕಂಡವರ ಮಕ್ಕಳನ್ನು ಬಾಯಿಗೆ ತಳ್ಳುವ` ದುಷ್ಟ ಮನಸ್ಸುಗಳಿಗೆಲ್ಲ ಎಚ್ಚರಿಕೆಯ ಗಂಟೆಯಂತಿದೆ.

ಬಾಬ್ರಿ ಮಸೀದಿ ಧ್ವಂಸದ ನಂತರ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋಮುದ್ವೇಷದ ಜ್ವಾಲೆ ನಿಯಂತ್ರಣಕ್ಕೆ ಬರಬಹುದೇನೋ ಎಂಬ ಸಣ್ಣ ಆಸೆಯ ಬೆಳಕು ಕೂಡಾ ಗುಜರಾತ್‌ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿದೆ. ಹಿಂದೂ ಕೋಮುವಾದಕ್ಕೆ ವಿರುದ್ಧವಾಗಿ ಅಷ್ಟೇ ಅಪಾಯಕಾರಿಯಾಗಿ ಮುಸ್ಲಿಂ ಕೋಮುವಾದ ಇತ್ತೀಚೆಗೆ ಬೆಳೆಯುತ್ತಿದೆ. ಮುಸ್ಲಿಂ ಕೋಮುವಾದವನ್ನು ಬೆಳೆಸುವವರು ಕೂಡಾ ಇಲ್ಲಿಯ ವರೆಗೆ ಬಳಸುತ್ತಾ ಬಂದಿರುವುದು ಗುಜರಾತ್ ಮತ್ತಿತರ ಕಡೆಗಳಲ್ಲಿ ನಡೆದಿರುವ ಕೋಮುಗಲಭೆಗಳ ಅತಿರಂಜಿತ ವರದಿಗಳನ್ನು. ಇವರು ಮುಸ್ಲಿಂ ಯುವಕರ ತಲೆಕೆಡಿಸುವುದೇ `ಗುಜರಾತ್‌ನಲ್ಲಿ ಸರ್ಕಾರವೇ ಮುಂದೆ ನಿಂತು ಸಾವಿರಾರು ಮುಸ್ಲಿಮರ ಮಾರಣ ಹೋಮ ನಡೆಸಿದರೂ ನೊಂದವರಿಗೆ ಇಲ್ಲಿಯ ವರೆಗೆ ನ್ಯಾಯ ಸಿಕ್ಕಿಲ್ಲ. ನ್ಯಾಯಾಲಯಗಳಿಂದಲೂ ರಕ್ಷಣೆ ಸಿಗದೆ ಇದ್ದರೆ ಈ ದೇಶದ ಮೇಲೆ ಹೇಗೆ ಭರವಸೆ ಇಟ್ಟುಕೊಳ್ಳಲು ಸಾಧ್ಯ?` ಎನ್ನುವ ಪ್ರಶ್ನೆಯೊಂದಿಗೆ. ಇಂತಹದ್ದೇ ಪ್ರಶ್ನೆಯನ್ನು ನರೋಡಾ ಪಾಟಿಯಾದ ಇಸ್ಲಾಮಿಕ್ ಪರಿಹಾರ ಸಮಿತಿಯ ಕಾರ್ಯದರ್ಶಿ ನಜೀರ್‌ಖಾನ್ ಪಠಾಣ್ ಐದು ವರ್ಷಗಳ ಹಿಂದೆ ನನಗೂ ಕೇಳಿದ್ದರು. ಆಗ ನನ್ನಲ್ಲಿಯೂ ಉತ್ತರ ಇರಲಿಲ್ಲ, ಈಗ ಕೈಯಲ್ಲಿರುವ ಗುಜರಾತ್ ವಿಶೇಷ ನ್ಯಾಯಾಲಯದ ತೀರ್ಪನ್ನು ತೋರಿಸಿ ಉತ್ತರಿಸ ಬಲ್ಲೆ.

ಇತ್ತೀಚೆಗೆ ಮದರಸಾಕ್ಕೆ ಬರುತ್ತಿರುವ ಹುಡುಗರೆಲ್ಲ ಮಾತೆತ್ತಿದರೆ ಸದ್ದಾಂಹುಸೇನ್, ಒಸಾಮ ಬಿನ್ ಲಾಡೆನ್ ಎನ್ನುತ್ತಿದ್ದಾರೆ..` ಎಂದು ವಿಷಾದದಿಂದ ಅದೇ ಪಠಾಣ್ ಹೇಳಿದ್ದರು. ಆ ಹುಡುಗರೆಲ್ಲ ಮಾತನಾಡಿಕೊಳ್ಳಲು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೊತ್ನಾ ಯಾಗ್ನಿಕ್‌ನಿಂದ ಹಿಡಿದು ನಿವೃತ್ತ ನ್ಯಾಯಮೂರ್ತಿಗಳಾದ ಜೆ.ಎಸ್.ವರ್ಮಾ, ಅರಿಜಿತ್ ಪಸಾಯತ್ ಮತ್ತು ಹೊಸಬೆಟ್ಟು ಸುರೇಶ್, ಪೊಲೀಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್, ರಾಹುಲ್ ಶರ್ಮಾ ಮತ್ತು ಸಂಜೀವ್ ಭಟ್, ವಕೀಲರಾದ ಮುಕುಲ್ ಸಿನ್ಹಾ ಮತ್ತು ಗೋವಿಂದ್ ಪರಮಾರ್, ಸಾಮಾಜಿಕ ಕಾರ್ಯಕರ್ತರಾದ ತೀಸ್ತಾ ಸೆಟಲ್‌ವಾದ್, ಕಲಾವಿದೆ ಮಲ್ಲಿಕಾ ಸಾರಾಭಾಯ್, ಇಳಿವಯಸ್ಸಿನಲ್ಲಿಯೂ ಹಿಂದೂ-ಮುಸ್ಲಿಂ ಸೌಹಾರ್ದತೆಗಾಗಿ ಶ್ರಮಿಸುತ್ತಿರುವ ಪ್ರೊ.ಬಂದೂಕ್‌ವಾಲಾ ಸೇರಿದಂತೆ ಎಷ್ಟೊಂದು ಹೆಸರುಗಳಿವೆಯಲ್ಲಾ ಎಂದು ಅವರಿಗೆ ಹೇಳಬೇಕೆಂದಿದ್ದೇನೆ.

ನಿಮ್ಮ ಅನಿಸಿಕೆ ತಿಳಿಸಿ:

Sunday 29 July 2012

ಮಂಗಳೂರು ಘಟನೆಯಲ್ಲಿ ಪತ್ರಕರ್ತನಾಗಿ ನಾನು ಸರಿಯಾಗಿದ್ದೀನಾ?


ನವೀನ್ ಸೂರಿಂಜೆ


ಜುಲೈ 28 ಸಂಜೆ 6.45 ರ ವೇಳೆ. ನನ್ನ ಸುದ್ದಿ ಮೂಲ ಯುವಕನೊಬ್ಬ ನನಗೆ ಕರೆ ಮಾಡಿದ್ದ. ಆತ ಪಡೀಲ್ ನಿವಾಸಿ. ಆತ ನನಗೆ ತಿಳಿಸಿದ್ದಿಷ್ಟು. “ನವೀನಣ್ಣ, ನಮ್ಮ ಪಡೀಲ್ ಜಂಕ್ಷನ್ನಲ್ಲಿ ಒಂದು ಟಿಂಬರ್ ಯಾರ್ಡ್ ಇದೆಯಲ್ವ. ಅಲ್ಲಿ ಒಂದು ಸುಮಾರು 30 ಮಂದಿ ಯುವಕರು ನಿಂತುಕೊಂಡು ಮಾತನಾಡುತ್ತಿದ್ದರು. ಇನ್ಯಾರನ್ನೋ ಕರೆಯಲು ಇನ್ಯಾರಿಗೋ ಒತ್ತಾಯಿಸುತ್ತಿದ್ದರು. ಬೈಕುಗಳನ್ನು ರೆಡಿ ಇಟ್ಟುಕೊಳ್ಳಿ ಎನ್ನುತ್ತಿದ್ದರು. ಬಹುಷಃ ಅವರು ನಮ್ಮ ಮೇಲಿನ ಗುಡ್ಡೆಯಲ್ಲಿರುವ ಗೆಸ್ಟ್ ಹೌಸ್ಗೆ ದಾಳಿ ಮಾಡಲು ಯೋಚಿಸುತ್ತಿದ್ದಾರೆ ಎನಿಸುತ್ತದೆ. ಬ್ಯಾರಿ ಹುಡುಗರು, ಹಿಂದೂ ಹುಡುಗಿಯರು ಎಂದೆಲ್ಲಾ ಮಾತನಾಡುತ್ತಿದ್ದರು” ಎಂದ. ಅವರು ಯಾವ ಸಂಘಟನೆಯವರು ಅಂತಿ ತಿಳ್ಕೋ ಮಾರಾಯ ಎಂದೆ ನಾನು. ಅವರು ಹಿಂದೂ ಸಂಘಟನೆಗಳು ಎಂಬುದಷ್ಟೇ ಅವನಿಗೆ ಖಚಿತವಾಯ್ತೆ ವಿನಹ ನಿಖರವಾಗಿ ಯಾವ ಸಂಘಟನೆ ಎಂಬುದು ತಿಳಿಯಲಿಲ್ಲ.

ತಕ್ಷಣ ನನ್ನ ಮನಸ್ಸಿಗೆ ಬಂದ ಪ್ರಶ್ನೆ “ಈ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕೇ ಬೇಡವೇ”‘ ಎಂಬುದು. ದಾಳಿ ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಯಾಕಾಗಿ, ಯಾರ ಮೇಲೆ, ಯಾವ ಸಂಘಟನೆ, ಎಲ್ಲಿಗೆ ದಾಳಿ ಮಾಡುತ್ತಿದೆ ಎಂಬುದೂ ಗೊತ್ತಿಲ್ಲ. ಒಂದು ತೀರಾ ಪ್ರಾಥಮಿಕ ಮಾಹಿತಿಯಷ್ಠೆ ತಿಳಿದಿದೆ. ಸಂಘಟನೆಯ ಕಾರ್ಯಕರ್ತರೇ ಫೋನಾಯಿಸಿದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು. ನನ್ನ ಸುದ್ದಿಮೂಲ ಮಾಹಿತಿ ನೀಡಿದ್ದರಿಂದ ಆ ಸುದ್ದಿಯನ್ನು ಖಚಿತಪಡಿಸಿಕೊಂಡೇ ಪೊಲೀಸರಿಗೆ ಮಾಹಿತಿ ನೀಡೋಣ ಎಂದುಕೊಂಡು ನಾನು ಮತ್ತು ನನ್ನ ಕ್ಯಾಮರಮೆನ್ ಪಡೀಲ್ ಗುಡ್ಡೆಯ ಮೇಲಿರುವ ಗೆಸ್ಟ್ ಹೌಸ್ ಕಡೆ ಬೈಕಿನಲ್ಲಿ ತೆರಳಿದೆ.

ಒಂದೈದು ನಿಮಿಷದಲ್ಲಿ ಪಡೀಲ್ ಗುಡ್ಡೆಯಲ್ಲಿರುವ ಮಾನರ್ಗ್ಂಗ್ ಮಿಸ್ಬಾ ಎನ್ನುವ ಹೋಂ ಸ್ಟೇ ಅಥವಾ ಗೆಸ್ಟ್ ಹೌಸ್ ಹೊರಭಾಗದಲ್ಲಿ ನಾನು ಮತ್ತು ನನ್ನ ಕ್ಯಾಮರಮೆನ್ ಇದ್ದೆವು. ಆಗ ಅಲ್ಲಿ ಯಾವ ದಾಳಿಕೋರರೂ ಇರಲಿಲ್ಲ. ಐದು ನಿಮಿಷ ಅಲ್ಲೇ ಕಾದು ನಿಂತೆವು. ಯಾರು ಯಾಕಾಗಿ ಈ ಹೋಂ ಸ್ಟೇಗೆ ದಾಳಿ ಮಾಡಲು ಸಿದ್ದತೆ ಮಾಡುತ್ತಾರೆ ಎಂಬುದು ಗೊತ್ತೇ ಆಗಲಿಲ್ಲ. ಪಡೀಲ್ ಹೆದ್ದಾರಿಯಿಂದ ಅಂದಾಜು ಅರ್ಧ ಕಿಮಿ ರಸ್ತೆ ದಾರಿಯಲ್ಲಿ ಈ ಹೋಂ ಸ್ಟೇ ಇದೆ. ಇದರ ಸುತ್ತಲೂ ದೊಡ್ಡದಾದ ಕಂಪೌಂಡ್ ಇದೆ. ಒಂದೇ ಒಂದು ಗೇಟ್ ಇದೆ. ಗೇಟ್ನಿಂದ 60 ಮೀಟರ್ ದೂರದಲ್ಲಿ ಹೋಂ ಸ್ಟೇ ಬಂಗಲೆ ಇದೆ. ನಾನು ಗೇಟ್ ಹತ್ತಿರ ನಿಂತು ಒಮ್ಮೆ ಇಡೀ ಬಂಗಲೆಯತ್ತಾ ಕಣ್ಣಾಡಿಸಿದೆ. ಅಲ್ಲಿ ದಾಳಿ ಮಾಡಲು ಕಾರಣವಾಗುವಂತಹ ಯಾವುದೇ ಆ್ಯಕ್ಟಿವಿಟೀಸ್ ನನಗೆ ಗೋಚರಿಸಲಿಲ್ಲ. ಒಬ್ಬಳು ಹುಡುಗಿ ಹೊರಗೆ ಚೇರ್ನಲ್ಲಿ ಕುಳಿತಿದ್ದಳು. ಇನ್ನಿಬ್ಬರು ಹುಡುಗರು ಬಂಗಲೆಯ ಮತ್ತೊಂದು ಮೂಲೆಯಲ್ಲಿ ನಿಂತುಕೊಂಡು ಮೊಬೈಲ್ನಲ್ಲಿ ಆಟವಾಡುತ್ತಿದ್ದರು. ಅವರು ಯಾವುದೇ ರೀತಿಯಲ್ಲೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರಲಿಲ್ಲ. ಆದುದರಿಂದ ದಾಳಿಕೋರರು ಬಯಸುವ ಸನ್ನಿವೇಶ ಅಲ್ಲಿರಲಿಲ್ಲ. ಆದುದರಿಂದ ಆಗಲೂ ನನಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಅನ್ನಿಸಲಿಲ್ಲ. ನನ್ನ ಮಾಹಿತಿ ತಪ್ಪಾದರೆ ಒಂದಿಡೀ ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಮತ್ತು ಹೋಂ ಸ್ಟೇಯಲ್ಲಿದ್ದವರಿಗೆ ವಿನಾಕಾರಣ ಪೊಲೀಸ್ ಕಿರುಕುಳ ನೀಡಲು ಕಾರಣನಾಗುವಂತಾಗುತ್ತೇನೆ ಎಂಬ ಆತಂಕದಿಂದಲೇ ಮಾಹಿತಿ ನೀಡಲಿಲ್ಲ. ನಾನು ಈ ರೀತಿ ಯೋಚಿಸುತ್ತಿರುವಾಗಲೇ ಸುಮಾರು ಮೂವತ್ತೂ ಅಧಿಕ ಇದ್ದ ತಂಡವೊಂದು ಹೋಂ ಸ್ಟೇಯ ಗೇಟಿನತ್ತಾ ಬರುತ್ತಿತ್ತು. ನಾನು ತಕ್ಷಣ ಕುತೂಹಲದಿಂದಲೇ ಕೇಳಿದೆ. “ಏನು ವಿಷಯ? ಏನಾಗ್ತಾ ಇದೆ ಇಲ್ಲಿ ?” ಎಂದು ತುಳುವಿನಲ್ಲಿ ಪ್ರಶ್ನಿಸಿದೆ. ತಕ್ಷಣ ಯುವಕನೊಬ್ಬ “ಬ್ಯಾರಿಗಳು ನಮ್ಮ ಹಿಂದೂ ಹುಡುಗಿಯರನ್ನು ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಅವರನ್ನು ಬಿಡಬಾರದು”‘ ಎಂದ. ಅಷ್ಟರಲ್ಲಿ ಗುಂಪಿನಲ್ಲಿದ್ದ ಇನ್ನಿತರ ಯುವಕರು ಹೊರಗೆ ಕುಳಿತಿದ್ದ ಹುಡುಗಿಯತ್ತಾ ಕೈ ತೋರಿಸಿ, :ಅಲ್ಲಿ ಅಲ್ಲಿ ಇದ್ದಾಳೆ ಹುಡುಗಿ, ಅಗೋ ಹುಡುಗರು ಅಲ್ಲಿದ್ದಾರೆ ” ಎಂದು ಯುವಕ ಯುವತಿಯರತ್ತಾ ಓಡಿಕೊಂಡು ದಾಳಿಗೆ ಸಿದ್ದರಾದರು. ತಕ್ಷಣ ದಾಳಿ ಅರಿವಾದ ಯುವತಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಬಂಗಲೆಯ ಒಳ ಹೋದಳು. ಮತ್ತು ಬಾಗಿಲು ಹಾಕಲು ಯತ್ನಿಸಿದಳು. ಆಗ ಸುಮಾರು 30 ರಷ್ಟಿದ್ದ ದಾಳಿಕೋರರು ಬಾಗಿಲನ್ನು ಬಲವಾಗಿ ದೂಡಿ ಬಾಗಿಲು ತೆರೆಯುವಲ್ಲಿ ಸಫಲರಾದರು.

ಈಗ ನನ್ನ ಪ್ರಜ್ಞೆ ನಿಜವಾಗಿಯೂ ಜಾಗೃತವಾಗಿತ್ತು. ತಕ್ಷಣ ನನ್ನ ಕಚೇರಿ ಮೊಬೈಲ್ 9972570044 ನಿಂದ ಮಂಗಳೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕ ರವೀಶ್ ನಾಯಕ್ಗೆ 9480805330 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ. ಆಗ ಸುಮಾರು 7.15 ರ ಸಂಜೆ ಸಮಯ. ರವೀಶ್ ನಾಯಕ್ ನನ್ನ ಕರೆ ಸ್ವೀಕರಿಸಲೇ ಇಲ್ಲ. ಒಂದು ಕಡೆಯಿಂದ ದಾಳಿ ಪ್ರಾರಂಭವಾಗಿದೆಯಷ್ಟೆ. ಇನ್ನೇನು ಆಗುತ್ತೋ ಎಂಬ ಆತಂಕದ ನಡುವೆಯೇ ಕಕ್ಕಾಬಿಕ್ಕಿಯಾದ ಹುಡುಗಿಯರು ಎಲ್ಲೆಲ್ಲೋ ಓಡಲು ಶುರುವಿಟ್ಟುಕೊಂಡಿದ್ದರು. ಪೊಲೀಸರಿಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಬೇರೆ ದಾರಿ ಕಾಣದೆ ಟಿವಿ 9 ವರದಿಗಾರನಾಗಿರುವ ನನ್ನ ಗೆಳೆಯ ರಾಜೇಶ್ ರಾವ್ ಬಳಿ ಪೊಲೀಸರಿಗೆ ಫೋನ್ ಮಾಡುವಂತೆ ಹೇಳಿದೆ. ರಾಜೇಶ್ ರಾವ್ ಅವರ ಮೊಬೈಲ್ನಿಂದ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್ಗೆ ಕರೆ ಮಾಡಿದರು. ಆಗಲೂ ರವೀಶ್ ನಾಯಕ್ ಕರೆ ಸ್ವೀಕರಿಸಲೇ ಇಲ್ಲ.

ನಾವು ಇನ್ಸ್ಸ್ಪೆಕ್ಟರ್ಗೆ ಫೋನ್ ಕರೆ ಮಾಡುತ್ತಿದ್ದಂತೆ ನಮ್ಮ ಕ್ಯಾಮರಾಮೆನ್ ದಾಳಿಕೋರರ ಹಿಂದೆಯೇ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದ. ನಾನು ಮತ್ತು ನನ್ನ ಕ್ಯಾಮರಮೆನ್ ಮಾತ್ರ ಅಲ್ಲಿದ್ದೆವು. ಅಷ್ಟರಲ್ಲಿ ಸ್ಥಳೀಯ ಸಹಾಯ ಎಂಬ ಕೇಬಲ್ ಚಾನೆಲ್ ಕ್ಯಾಮರಮೆನ್ ಶರಣ್ ಮತ್ತು ಫೋಟೋಗ್ರಾಫರ್ ವಿನಯ ಕೃಷ್ಣ ಅಲ್ಲಿಗೆ ಬಂದಿದ್ದರು. ನಾನು ಎಲ್ಲವನ್ನೂ ಮೂಕ ಪ್ರೇಕ್ಷಕನಾಗಿ ನೋಡುತ್ತಿದ್ದೇನೆ. ನನಗೇನೂ ಮಾಡಲಾರದ ಅಪರಾಧಿ ಮನೋಭಾವ ನನ್ನಲ್ಲಿ ಮೂಡಿತ್ತು. ದಾಳಿಕೋರರಲ್ಲಿ ಶೇಕಡಾ 50ಕ್ಕೂ ಅಧಿಕ ಮಂದಿ ಮಧ್ಯಪಾನ ಮಾಡಿದ್ದರು. ನಾನು ಹೇಳಿದರೂ ಕೇಳೋ ಸ್ಥಿತಿಯಲ್ಲಿ ಇರಲಿಲ್ಲ. ಈ ಜಗತ್ತಿನಲ್ಲಿ ಏನೇನೋ ಹಿಂಸೆಗಳು ನಡೆದಿರಬಹುದು. ಆದರೆ ನನ್ನ ಜೀವಮಾನದಲ್ಲಿ ಇಂತಹ ಹಿಂಸೆಯನ್ನು ನೋಡಿರಲಿಲ್ಲ. ನನ್ನ ಕ್ಯಾಮರಾಮೆನ್ ಎಲ್ಲೆಲ್ಲಿ ಹೊಡೆಯುತ್ತಾರೋ ಅಲ್ಲಲ್ಲಿ ಓಡುತ್ತಿದ್ದ. ನಾನು ನೋಡುತ್ತಿದ್ದೆ ಮತ್ತು ಸಾಧ್ಯವಾದಷ್ಟೂ ಕಿರಿಚುತ್ತಿದ್ದೆ. “ಏ ಹುಡುಗಿರಿಗೆ ಹೊಡಿಬೇಡ್ರಿ” ಎಂತ ಬೊಬ್ಬೆ ಹೊಡೆಯುತ್ತಿದ್ದೆ. ನನ್ನ ಬೊಬ್ಬೆ ನನ್ನ ಕ್ಯಾಮರಾದಲ್ಲಿ ದಾಖಲಾಗಿದೆಯೇ ವಿನಹ ದಾಳಿಕೋರರ ಹೃದಯಕ್ಕೆ ತಟ್ಟಲೇ ಇಲ್ಲ. ಹಲ್ಲೆಗೆ ಒಳಗಾದ ಯುವಕರು ಗೋಗೆರೆಯುತ್ತಿದ್ದರು. “ಪ್ಲೀಸ್ ಬಿಟ್ಟುಬಿಡಿ. ನಾವು ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದೇವೆ, ಪ್ಲೀಸ್” ಎಂದು ಕಾಲಿಗೆ ಬೀಳುತ್ತಾನೆ. ಆದರೂ ಕ್ರೂರಿ ದಾಳಿಕೋರರ ಮನಸ್ಸು ಕರಗುವುದಿಲ್ಲ. ಇಷ್ಟೇ ಆಗಿದ್ದರೆ ನಾನು ಮರೆತುಬಿಡುತ್ತಿದ್ದೆ. ಆದರೆ ಮುಂದೆ ನನ್ನ ಕಣ್ಣ ಮುಂದೆ ಬಂದಿದ್ದು ಭೀಭತ್ಸ ದೃಶ್ಯಗಳು.

ನಾಲ್ವರು ಹುಡುಗರಿಗೆ ದಾಳಿಕೋರರು ಬಡಿಯುತ್ತಿರುವ ದೃಶ್ಯ ನೋಡಿ ಶಾಕ್ಗೆ ಒಳಗಾದ ಯುವತಿಯರು ದಿಕ್ಕಾಪಾಲಾಗಿ ಓಡಲು ಶುರುವಿಟ್ಟುಕೊಂಡರು. ಬಂಗಲೆಯ ತುಂಬಾ ಓಡುತ್ತಿರುವ ಯುವತಿಯರ ಹಿಂದೆ ಒಂದಷ್ಟು ದಾಳಿಕೋರರ ಓಟ ನಡೆಯುತ್ತಿತ್ತು. ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಒಬ್ಬಳು ಹುಡುಗಿ ಒಂದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಅವಳನ್ನು ಹಿಡಿದುಕೊಂಡ ಇಪ್ಪತ್ತೂ ಅಧಿಕ ದಾಳಿಕೋರ ಕಾರ್ಯಕರ್ತರು ಆಕೆಯ ವಸ್ತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆಕೆಯ ಕೆನ್ನೆಗೆ ಬಿಗಿದು, ಗೋಡೆಗೆ ನೂಕಿದ್ದಾರೆ. ಅಷ್ಟರಲ್ಲಿ ಪಿಂಕ್ ಡ್ರೆಸ್ ತೊಟ್ಟುಕೊಂಡಿದ್ದ ಹುಡುಗಿಯೊಬ್ಬಳು ಓಡಲು ಶುರುವಿಟ್ಟುಕೊಂಡಳು. ಆಕೆಯನ್ನು ಹಿಡಿದ ಗೂಂಡಾ ದಾಳಿಕೋರರು ಅಕ್ಷರಶ ಆಕೆಯನ್ನು ಬೆತ್ತಲು ಮಾಡಿದ್ದಾರೆ. ಒಂದು ತುಂಡು ವಸ್ತ್ರ ಹೊರತುಪಡಿಸಿ ವಿವಸ್ತ್ರ ಮಾಡಿದ ನಂತರ ಆಕೆಯ ಅಂಗಾಂಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ. ಇದು ನನ್ನನ್ನು ಅಕ್ಷರಶ ಅಧೀರನನ್ನಾಗಿಸಿದ ಧೃಶ್ಯ. ಈ ರೀತಿಯ ದೃಶ್ಯವನ್ನು ನಾನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಕೇಳಿದ್ದೆ. ಇವೆಲ್ಲವೂ ವಿಶುವಲ್ ಆಗದೇ ಇರುವಂತದ್ದು. ಶೂಟಿಂಗ್ ಆಗಿದ್ದು ಸ್ವಲ್ಪವೇ ಸ್ವಲ್ಪ ಭಾಗ. ಆನಂತರ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹುಡುಗ ಹುಡುಗಿಯರನ್ನು ಒಂದೇ ಕೋಣೆಯಲ್ಲಿ ಹಾಕಿ ಚಿಲಕ ಹಾಕಿದರು. ಇವೆಲ್ಲವೂ ನಡೆದಿದ್ದು ಮಿಂಚಿನ ವೇಗದಲ್ಲಿ. ಹೆಚ್ಚೆಂದರೆ 15 ನಿಮಿಷದಲ್ಲಿ ಇವೆಲ್ಲವೂ ಮುಗಿದು ಹೋಗಿತ್ತು.

ದಾಳಿಕೋರರ ಕಾರ್ಯಾಚರಣೆ ಒಂದು ಹಂತಕ್ಕೆ ಮುಗಿದ ನಂತರ ಪೊಲೀಸ್ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್, ಪೊಲೀಸ್ ಎಸೈ ಮುನಿಕಂಠ ನೀಲಸ್ವಾಮಿ ಮತ್ತು ಪೋಲೀಸ್ ಪೇದೆಗಳು ಬಂದಿದ್ದಾರೆ. ವಿಶೇಷ ಎಂದರೆ ಪೊಲೀಸರಿಗೆ ದಾಳಿಕೋರರ ಜೊತೆ ಮೊದಲೇ ಸಂಪರ್ಕ ಇರೋ ರೀತಿಯಲ್ಲಿ ಪೊಲೀಸರು ವತರ್ಿಸಿದ್ದಾರೆ. ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಪೊಲೀಸರು ದಾಳಿಕೋರರ ಜೊತೆ ಮಾತಕತೆಯಲ್ಲಿ ತಲ್ಲೀನರಾಗಿದ್ದರು. ದಾಳಿಕೋರರ ಬಂಧಿಸುವ ಬದಲು ಅವರ ಜೊತೆ ಹರಟೆ ಹೊಡೆಯುತ್ತಿರುವುದು ನನಗೆ ಆಶ್ಚರ್ಯ ಉಂಟು ಮಾಡಿತ್ತು. ಇವೆಲ್ಲಾ ನಡೆಯುತ್ತಿರಬೇಕಾದರೆ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ. ತಕ್ಷಣ ಪೊಲೀಸರು ಆ ಯುವಕನನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರ ವಶದಲ್ಲಿದ್ದ ಯುವಕನಿಗೆ ದಾಳಿಕೋರರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದರು.

ಅಷ್ಟರಲ್ಲಿ ನಮ್ಮ ಇನ್ನಷ್ಟೂ ಕ್ಯಾಮರಮೆನ್ಗಳು ಬಂದಿದ್ದರು. ನಾನು ನನ್ನ ಕ್ಯಾಮರಮೆನ್ ಜೊತೆ ಕಚೇರಿಗೆ ಬಂದು ಎಲ್ಲಾ ವಿಝುವಲ್ಸ್ ಬೆಂಗಳೂರು ಕಚೇರಿಗೆ ಅಪ್ಲಿಂಕ್ ಮಾಡಿದೆ. 7.45 ಕ್ಕೇ ವರದಿ ಪ್ರಕಟವಾಯಿತು. ವರದಿ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ನಮ್ಮ ಚಾನೆಲ್ನಲ್ಲಿ ಬರುತ್ತಿದ್ದ ವರದಿ ಮತ್ತು ದೃಶ್ಯಗಳನ್ನು ರಾಷ್ಟ್ರೀಯ ವಾಹಿನಿಗಳು ಬಳಕೆ ಮಾಡಿಕೊಂಡು ಸುದ್ಧಿ ಪ್ರಕಟಿಸಿದವು. ತಕ್ಷಣ ಇದೊಂದು ರಾಷ್ಟ್ರೀಯ ಸುದ್ಧಿಯಾಗಿ ಮಾರ್ಪಡಾಗಿತ್ತು. ಇದರಿಂದ ತೀವ್ರ ಕೋಪಗೊಂಡಿದ್ದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನನ್ನ ಗೆಳೆಯ, ಟಿವಿ 9 ವರದಿಗಾರ ರಾಜೇಶ್ ರಾವ್ಗೆ ದೂರವಾಣಿ ಕರೆ ಮಾಡಿದ್ದಾರೆ. ರಾಜೇಶ್ಗೆ ಸೀಮಂತ್ ಕುಮಾರ್ ಸಿಂಗ್ ಕರೆ ಮಾಡಿದಾಗ ನಾನೂ ಕೂಡಾ ರಾಜೇಶ್ ಜೊತೆಗಿದ್ದೆ. ಸೀಮಂತ್ ಮಾತುಗಳನ್ನು ರಾಜೇಶ್ ಲೌಡ್ ಸ್ಪೀಕರ್ ಇಟ್ಟು ನನಗೆ ಕೇಳಿಸುತ್ತಿದ್ದ. “ನವೀನ ನ್ಯೂಸ್ ಯಾಕೆ ಮಾಡಬೇಕಿತ್ತು. ಅವನಿಗೆ ಅಕ್ಕ ತಂಗಿ ಇಲ್ಲವಾ ? ಅವರಿಗೆ ಹೊಡೆಯಲ್ವ ? ಅದನ್ನು ಟಿವಿಯಲ್ಲಿ ತೋರಿಸ್ತಾರಾ ? ನೋಡ್ಕೋತೀನಿ ನಾನು ಅವನನ್ನು. ಅವನು ಮಂಗಳೂರಿನಲ್ಲಿ ತಾಲೀಬಾನ್ ಸಂಸ್ಕೃತಿ ಇದೆ ಎಂದು ಹೇಳಿದ. ಅಸ್ಸಾಂನ ಘಟನೆಗೆ ಈ ಘಟನೆಯನ್ನು ಹೋಲಿಸಿ ಲೈವ್ ಕೊಟ್ಟ. ಈ ಬಾರಿ ಅವನನ್ನು ಬಿಡುವುದಿಲ್ಲ. ಈ ಕೇಸ್ನಲ್ಲಿ ಅವನನ್ನು ಫಿಕ್ಸ್ ಮಾಡುತ್ತೇನೆ. ಅವನಿಗೆ ಎಷ್ಟು ಬೇಕಾದರೂ ಇಂಪ್ಲ್ಯೂಯನ್ಸ್ ಇರಲಿ. ಫಿಕ್ಸ್ ಮಾಡುವುದು ಮಾಡೋದೆ” ಎಂದು ಸೀಮಂತ್ ಹೇಳುತ್ತಿದ್ದರು. “ಹುಡುಗಿಯರಿಗೆ ಮತ್ತು ಹುಡುಗರಿಗೆ ಹೊಡೆದಿದ್ದು ದೊಡ್ಡ ವಿಷಯ ಅಲ್ಲ. ಅದನ್ನು ಚಿತ್ರೀಕರಿಸಿದ್ದು ಮಹಾ ಅಪರಾಧ,” ಎಂಬುದಷ್ಟೇ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತಿನ ಅರ್ಥ ಎಂಬುದಂತೂ ಸ್ಪಷ್ಟ.

ಇಂದು ಬೆಳಿಗ್ಗೆ ನನಗೆ ಇನ್ನೊಂದು ಶಾಕ್ ಕಾದಿತ್ತು. ನಾನು ಯಾರ ಪರವಾಗಿ ಸುದ್ದಿ ಮಾಡಿದ್ದೇನೋ ಅವರೇ ನನ್ನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಹಲ್ಲೆಗೊಳಗಾದ ಯಾವುದೇ ಹುಡುಗ ಹುಡುಗಿ ಸ್ವ ಇಚ್ಚೆಯಿಂದ ನನ್ನ ವಿರುದ್ಧ ದೂರು ನೀಡಲು ಸಾದ್ಯವಿಲ್ಲ. ಪ್ಲೀಸ್ ಹೊಡಿಯಬೇಡಿ ಎಂದು ನಾನು ಸಾಧ್ಯವಾದಷ್ಟು ಬೊಬ್ಬೆ ಹಾಕುತ್ತಿದ್ದದ್ದು ಹಲ್ಲೆಗೊಳಗಾದ ಯುವತಿಯರಿಗೆ ಗೊತ್ತಿತ್ತು ಅಂದುಕೊಳ್ಳುತ್ತೇನೆ. ಸಂಜೆಯಾಗುವಾಗ ನನ್ನ ಡೌಟ್ ಕ್ಲೀಯರ್ ಆಗಿತ್ತು. ಮಾಧ್ಯಮದ ಜೊತೆ ಮಾತನಾಡಿದ ಹಲ್ಲೆಗೊಳಗಾದ ಯುವಕರು “ನಾವು ಮಾಧ್ಯಮ ಮಂದಿ ವಿರುದ್ಧ ದೂರು ನೀಡಿಲ್ಲ. ನಮಗೆ ಮಾಧ್ಯಮದವರು ಸಪೋಟರ್್ ಮಾಡಿದ್ದಾರೆ” ಎಂದರು.

ಅದೇನೇ ಇರಲಿ. ಮಂಗಳೂರು ಗ್ರಾಮಾಂತರ ಪೊಲೀಸರು ನನ್ನ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನಾವು ಚಿತ್ರೀಕರಿಸಿದ ವಿಝುವಲ್ಸ್ ಆಧಾರದಲ್ಲೇ ಈವರೆಗೆ 8 ಮಂದಿ ದಾಳಿಕೋರರನ್ನು ಬಂಧಿಸಿದ್ದಾರೆ. ನಾವು ಒಂದು ಆಕ್ಷೇಪಾರ್ಹ ಘಟನೆಯನ್ನು ಚಿತ್ರೀಕರಿಸಿ ಸುದ್ದಿ ಪ್ರಸಾರ ಮಾಡಿದ್ದೇವೆಯೇ ಹೊರತು ಆಕ್ಷೇಪಾರ್ಹ ದೃಶ್ಯವನ್ನಲ್ಲ ಎಂಬುದು ನನಗೆ ಸ್ಪಷ್ಟತೆ ಇದೆ. ಮಂಗಳೂರಿನಲ್ಲಿ ಜುಲೈ 28 ರಾತ್ರಿ ನಡೆದ ದಾಳಿ ಹೊಸದೇನೂ ಅಲ್ಲ. ಪ್ರತೀ ವಾರಕ್ಕೊಂದು ಇಂತಹ ಘಟನೆ ನಡೆಯುತ್ತದೆ. ಮುಸ್ಲಿಂ ಹುಡುಗ ಹಿಂದೂ ಹುಡುಗಿ ಒಟ್ಟಿಗಿದ್ದರೆ ಹಿಂದೂ ಮತೀಯವಾದಿಗಳು ಅವರಿಗೆ ಹಲ್ಲೆ ಮಾಡಿ ಮತೀಯವಾದಿಗಳೇ ಅವರನ್ನು ಠಾಣೆಗೆ ಕೊಂಡೊಯ್ದು ಪೊಲೀಸರ ವಶಕ್ಕೆ ನೀಡುತ್ತಾರೆ. ಪೊಲೀಸರು ಪ್ರೇಮಿ(ಗೆಳೆಯರು)ಗಳ ತಂದೆ ತಾಯಿಯನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸುತ್ತಾರೆ. ನಾವು ಶೂಟಿಂಗ್ ಮಾಡದೇ ಇದ್ದರೆ ಇಲ್ಲೂ ಅಷ್ಟೇ ನಡೆಯುತ್ತಿತ್ತು. ನಮ್ಮ ಶೂಟಿಂಗ್ನಿಂದ ಕೋಮುವಾದಿಗಳ ಒಂದು ಕ್ರೂರ ಮುಖ ಬಯಲಾಗಿದೆ ಮತ್ತು ಎಂಟು ಮಂದಿ ಬಂಧಿತರಾಗುವಂತೆ ಮಾಡಿದೆ. ಯಾರು ಏನೇ ಅನ್ನಲ್ಲಿ. ಯಾವ ಕೇಸೇ ಬೀಳಲಿ. ನಾನು ಪತ್ರಕರ್ತನಾಗಿ ಸಮಾಜಕ್ಕೆ ಏನೋ ನ್ಯಾಯ ನೀಡಿದ್ದೇನೆ ಅನ್ನಿಸುತ್ತಿದೆ. ಅಳುತ್ತಿರುವ ನನ್ನ ಮನಸ್ಸಿಗೆ ಸಧ್ಯ ಅಂತಹ ಸಮಾಧಾನ ಸಾಕು.

ನನ್ನ ಮೇಲೆ ದೂರು ನೀಡಿರುವುದು ಮತ್ತು ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದು ದೊಡ್ಡ ವಿಷಯವೇ ಅಲ್ಲ. ನನ್ನ ಮೇಲಿನ ಎಫ್ಐಆರ್ನಿಂದ ದಾಳಿಕೋರ ಕ್ರೂರಿ ಮೃಗಗಳಿಗೆ ಶಿಕ್ಷೆಯಾಗುವುದಾದರೆ ನನ್ನ ಮೇಲಿನ ಎಫ್ಐಆರನ್ನು ನಾನು ಖುಷಿ ಪಡುತ್ತೇನೆ. ಯಾವುದಾದರೂ ಒತ್ತಡಕ್ಕೆ ಮಣಿದು ಆರೋಪದಿಂದ ನನ್ನನ್ನು ಬಿಡುಗಡೆ ಮಾಡುವಾಗ ಅಂತಹ ಬಿಡುಗಡೆಯಿಂದ ಆರೋಪಿ ದಾಳಿಕೋರರಿಗೆ ಲಾಭವಾಗುವುದಾದರೆ ಆಂತಹ ಬಿಡುಗಡೆ ನನಗೆ ಬೇಕಾಗಿಲ್ಲ. ನನ್ನ ಸಮ್ಮುಖದಲ್ಲೇ ನನ್ನ ಸಹೋದರಿಯರ ಮೇಲೆ ದಾಳಿ ನಡೆಸಿದ ದಾಳಿಕೋರರಿಗೆ ನ್ಯಾಯಾಲಯ ಅದೆಂತಹ ಶಿಕ್ಷೆ ನೀಡಿದರೂ ನ್ಯಾಯ ನೀಡಿದಂತಾಗುವುದಿಲ್ಲ. ಆದರೂ ಅವರಿಗೆ ಶಿಕ್ಷೆಯಾಗಬೇಕು.
***
ಇನ್ನಷ್ಟೂ ಬರೆಯಲು ಇದೆ. ಬರೆಯಲು ಸಮಯ ಸಾಕಾಗಿಲ್ಲ. ಯಾವುದೇ ವ್ಯಕ್ತಿ ಯಾ ಸಂಘಟನೆಗೆ ಈ ದಾಳಿ ವಿರುದ್ದ ಹೋರಾಟ ಮಾಡುವುದಾದರೆ ಇನ್ನಷ್ಟೂ ಮಾಹಿತಿ ಬೇಕಾಗಿದ್ದಲ್ಲಿ ಅಥವಾ ಯಾವುದೇ ತನಿಖಾ ಸಂಸ್ಥೆಗೆ ಮಾಹಿತಿ ಬೇಕಾದ್ದಲ್ಲಿ ಯಾವುದೇ ಅವಧಿಯಲ್ಲಿ ನನ್ನನ್ನು ಸಂಪಕರ್ಿಸಬಹುದು.

ನನ್ನ ವಿಳಾಸ :
ನವೀನ್ ಸೂರಿಂಜೆ
ಪತ್ರಕರ್ತ
ಕಸ್ತೂರಿ ನ್ಯೂಸ್ 24
ಮಂಗಳೂರು
ಮೊಬೈಲ್ : 9972570044, 8971987904

Wednesday 20 June 2012

ರಾಜ್ಯದಲ್ಲಿ ಅರ್ಧ ಬೆಲೆಗೆ ಔಷಧಿ: ಅಮೀರ್ ಎಫೆಕ್ಟ್!



ಇದೊಂದು ಸಂತೋಷದ ಸುದ್ದಿ. ರಾಜಸ್ಥಾನ ಸರ್ಕಾರದ ಮಾದರಿಯಲ್ಲಿ ಮಹಾರಾಷ್ಟ್ರ ಸರ್ಕಾರವೂ ಬಡವರಿಗೆ ಅನುಕೂಲವಗುವಂತೆ ಜನೆರಿಕ್ ಔಷಧಿಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದಂತೆ ಕರ್ನಾಟಕ ಸರ್ಕಾರವೂ ತಾನೂ ಆಸ್ಪತ್ರೆಗಳಲ್ಲಿ ಜನೆರಿಕ್ ಔಷಧಿಗಳನ್ನು ಒದಗಿಸುವ ನಿಟ್ಟಿನಲ್ಲಿ ಜನತಾ ಬಜಾರ್ ಔಷಧಿ ಅಂಗಡಿಗಳನ್ನು ಪ್ರಾರಂಭಿಸುವ ಯೋಜನೆಯನ್ನು ಇದೇ ಜೂನ್ ೨೧ರಿಂದ ವಿಕ್ಟೋರಿಯಾ ಆಸ್ಪತ್ರೆಯಿಂದ ಪ್ರಾರಂಭಿಸಲಿದೆ. 

ನಟ ಅಮೀರ್‌ಖಾನ್ ಅವರು ಸತ್ಯಮೇವ ಜನತೆ ಕಾರ್ಯಕ್ರಮದ ಮೂಲಕ ಬಡಜನತೆಗೆ ಸುಲಭ ದರಗಳಲಿ ಎಟುಕುವ ಜರೆರಿಕ್ ಔಷಧಿಗಳನ್ನು ಒದಗಿಸಲಾರದ ಸರ್ಕಾರಗಳ ಜಾಣಕುರುಡು ನೀತಿಯನ್ನು ಬಯಲಿಗೆಳೆದಿದ್ದರು. ಈ ನಿಟ್ಟಿನಲ್ಲಿ ರಾಜಾಸ್ತಾನ ಸರ್ಕಾರ ಮಾದರಿಯಾಗಿ ನಿಂತಿದ್ದನ್ನು ತಿಳಿಸುತ್ತಾ ಅದೇ ಮಾದರಿಯನ್ನು ಎಲ್ಲಾ ಸರ್ಕಾರಗಳೂ ಅನುಸರಿವುವಂತೆ ವಿನಂತಿಸಿಕೊಂಡಿದ್ದರು. ಪರಿಣಾಮವಾಗಿ ಮಹಾರಾಷ್ಟ್ರ ಸರ್ಕಾರವು ತಾನೂ ಜನೆರಿಕ್ ಔಷಧಿಗಳನ್ನು ಕಡಿಮೆ ಬೆಲೆಯಲ್ಲಿ ವಿತರಿಸುವ ಕ್ರಮಕ್ಕೆ ಮುದಮಾಗಿತ್ತು. ಈಗ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವ ಸಚಿವ ಎಸ್.ಎ.ರಾಮದಾಸ್ ಕೂಡಾ ಇಂತಹ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಎಲ್ಲಾ ಸರ್ಕಾರಿ ವೈದ್ಯರೂ ಸಹ ಜನೆರಿಕ್ ಔಷಧಗಳನ್ನೇ ಶಿಫಾರಸ್ಸು ಮಾಡುವ ಕುರಿತು ಆದೇಶ ಹೊರಡಿಸುವ ಮಾತನ್ನೂ ಸಚಿವರು ಹೇಳಿದ್ದಾರೆ. ಈ ಕೆಲಸ ಮೊದಲು ಆಗಬೇಕಿದೆ. ಸರ್ಕಾರಿ ವೈದ್ಯರುಗಳೇ ಏಕೆ ಎಲ್ಲಾ ವೈದ್ಯರೂ ಸಹ ಔಷಧಿ ಕಂಪನಿಗಳ ಆಮಿಷ ಆಸೆಗಳಿಂದ ಹೊರಬಂದು ನಿವಾದ ಅರ್ಥದಲ್ಲಿ 'ವೈದ್ಯೋನಾರಾಯಣ ಹರಿ'ಗಳಾಗಬೇಕಿದೆ. ಆಯ್ದ ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರ ಈ ವ್ಯವಸ್ಥೆಗೆ ಅವರು ಮುದಾಗಿರುವುದು ಸರಿಯಲ್ಲ. ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಈ ಪ್ರಯೋಜನ ಬಡ ರೋಗಿಗಳಿಗೆ ದಕ್ಕುವಂತಾಗಬೇಕು. 

ಏನೇ ಇರಲಿ. ಅಮೀರ್‌ಖಾನ್ ಕಾರ್ಯಕ್ರಮದ ಬಗ್ಗೆ ಮನಬಂದಂತೆ ಟೀಕಿಸಿ, ಆತನ ಉದ್ದೇಶವನ್ನು ಸಂಶಯದಿಂದ ನೋಡುವಂತೆ ಮಾಡಲು ಯತ್ನಿಸಿದ್ದವರಿಗೆ ಉತ್ತರ ಸಿಗುತ್ತಿದೆ. 

ಕೊನೆ ಚುಟುಕು: ವೈದ್ಯರ ಕುರಿತ ಅಮೀರ್ ಕಾರ್ಯಕ್ರಮಕ್ಕೆ ಅನೇಕ ಅಪ್ರಮಾಣಿಕ ವೈದ್ಯರೂ ತೀರಾ ಆಕ್ರೋಶ ವ್ಯಕ್ತಪಡಿಸಿ ಅಮೀರ್ ಕ್ಷಮೆ ಯಾಚಿಸಬೇಕು ಎಂದೆಲ್ಲಾ ಎಗರಾಡಿದ್ದರು. ಆದರೆ ಈ ಕುರಿತು ಸಂಸತ್ತಿನಲ್ಲಿ ಮಾತನಾಡಲು ಗುರುವಾರ ಅಮೀರ್‌ಖಾನ್‌ಗೆ ಅವಕಾಶ ಕಲಿಸಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ.


ಸತ್ಯ ಮೇವ ಜಯತೇ!


Tuesday 12 June 2012

ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಬೇಕೋ/ಬೇಡ್ವೋ? ಸಮಾನ ಚರ್ಚೆ

ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಬೇಕೋ/ಬೇಡ್ವೋ? ಈ ವಿಷಯದ ಕುರಿತಾಗಿ ಸಮಾನದಲ್ಲಿ ನಡೆದ ಚರ್ಚೆಯನ್ನು ಇಲ್ಲಿ ಲಗತ್ತಿಸಲಾಗಿದೆ. ಎನ್ ಎ ಇಸ್ಮಾಯಿಲ್ ಎತ್ತಿರುವ ಪ್ರಶ್ನೆಗೆ ನಡೆದ ಚರ್ಚೆಗಳು ಈ ಕೆಳಗಿನಂತಿವೆ
-ಸಮಾನ.


ಎನ್ ಎ ಇಸ್ಮಾಯಿಲ್:-
ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದನ್ನು ಬೇಡ ಎನ್ನುವುದಕ್ಕೆ ಕನ್ನಡದ ಅನೇಕ ಬುದ್ಧಿಜೀವಿಗಳು ಒಂದಾಗಿದ್ದಾರೆ. ಸದ್ಯದ ಪ್ರವೇಶಾನುಪಾತವನ್ನು ನೋಡಿದರೆ ಖಾಸಗಿ ಶಾಲೆಗಳಿಗೆ ಹೋಗುವವರ ಸಂಖ್ಯೆಯೇ ಹೆಚ್ಚು. ಅಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮವಿದೆ. ಈಗ ಸರ್ಕಾರಿ ಶಾಲೆಗೆ ಹೋಗುತ್ತಿರುವವರು ಗ್ರಾಮೀಣ ಪ್ರದೇಶದವರು ಮತ್ತು ಪಟ್ಟಣ ಮತ್ತು ನಗರಗಳ ಬಡವರು. ನಮ್ಮ ಕನ್ನಡಾಭಿಮಾನಿ ಬುದ್ಧಿಜೀವಿಗಳು ಉದ್ದೇಶ ಪೂರ್ವಕವಾಗಿ ಬಡವರು ಇಂಗ್ಲಿಷ್ ಕಲಿಯುವುದನ್ನು ತಡೆಯುತ್ತಿದ್ದಾರೆ ಅನ್ನಿಸುತ್ತಿಲ್ಲವೇ???

ರೇಣುಕಾ ಮಂಜುನಾಥ್
ಉದ್ದೇಶ ಪೂರ್ವಕವಾಗಿ ತಡೆಯೊಲ್ಲ,ಬುದ್ದಿಜೇವಿಗಳು ಎಂದು ಬ್ರಾಂಡ್ ಆಗಿರುವವರಿಗೆ ಆಗಾಗ ಜನರ ಮುಂದೆ ಕಾಣಿಸಿಕೊಳ್ಳಲಿಕ್ಕೆ ಸಿಕ್ಕ ಅವಕಾಶ ಅಥವಾ ಕೊಡುವ ಅವಕಾಶ! ಖಾಸಗಿ ಶಾಲೆಯವರ್ಯಾರು ಇವರನ್ನು ಬುದ್ದಿಜೀವಿಗಳು ಎಂದು ಅಟ್ಟಕೇರಿಸೊಲ್ಲ.ಪಾಪ....ಈ ಸರ್ಕಾರಿ...ಈ ಕನ್ನಡ ಮಾಧ್ಯಮ...ಅನ್ನೊ ವಿಚಾರಗಳೆ ಇವರ 'ಬುದ್ದಿಜೀವಿ ರೋಲ್' ಅನ್ನು ಜೀವಂತವಾಗಿರಿಸುತ್ತದೆ.ಯಾರು ಏನ್ ಬಡ್ಕೊಂಡ್ರು ಗ್ರೌಂಡ್ ರಿಯಾಲಿಟಿಗಳೆ ವಿಷಯದ ದಿಕ್ಕನ್ನು ನಿರ್ಧರಿಸುತ್ತವೆ!!ಓಮ್ಮೆ ತೇಜಸ್ವಿ ಹೇಳಿದ್ದರು, ನಾನು ಕುಪ್ಪಳ್ಳಿ ಶಿಬಿರಾರ್ಥಿಯಾಗಿ ಹೋಗಿದ್ದಾಗ.ನೋಡಿ CET-Engg- Medical ಇದಕ್ಯಾಕೆ ಜನ ಗಂಟು ಬೀಳ್ತಾರೆ?ಅದೇ ಬದುಕಾ??ಅಂತ ಮಾತಾಡೋದು ಸುಲಭ ... ಆದರೆ ನಮ್ಮ ಮಧ್ಯಮ ವರ್ಗದ ಪೋಷಕರಿಗೆ ಗೊತ್ತು...ಅದರ ಹಿಂದೆ ದುಡ್ಡಿದೆ ಹಾಗು ಅದು ನಮ್ಮ ಮುಂದಿನ ಬದುಕನ್ನು ಹಸನಾಗಿಸುತ್ತೆ ಅಂತ.ನಮ್ಮಂತವರಿಗೆ there are still serious issues to be addressed ಅಂತನಿಸುತ್ತೆ!!!!

ಆನಂದ್
ಸಮಾನ ಶಿಕ್ಷಣದ ಗುರಿಗೆ ಮಾರಕವಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆ... ವೈಜ್ಞಾನಿಕವಾದ ದಿಟಗಳಿಗೆ ವಿರುದ್ಧವಾಗಿರುವ ಪರಭಾಷಾ ಮಾಧ್ಯಮದಲ್ಲಿನ ಕಲಿಕೆಗೆ ಒತ್ತು ನೀಡಿರುವ ಇಂದಿನ ವ್ಯವಸ್ಥೆ... ಭಾಷೆಯ ಕಲಿಕೆಗೂ, ಕಲಿಕಾ ಮಾಧ್ಯಮಕ್ಕೂ ವ್ಯತ್ಯಾಸ ಮರೆಮಾಡುತ್ತಿರುವ, ಕಲಿಕಾ ಮಾಧ್ಯಮವನ್ನೇ ಇಂಗ್ಲೀಶ್ ಮಾಡಿಬಿಟ್ಟರೆ ಜಗ ಗೆಲ್ಲಬಹುದು ಎನ್ನುವ ಭ್ರಮೆಯನ್ನೇ ತಮ್ಮ ಶಿಕ್ಷಣ ಸಂಸ್ಥೆಗಳ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳ ನಡುವೆ ಸರ್ಕಾರವೊಂದು ಯಾವ ದಿಕ್ಕಿನಲ್ಲಿ ಸಾಗಬೇಕು? ಸರಿಯಿಲ್ಲದ ವ್ಯವಸ್ಥೆಯನ್ನು ತಾನೇ ಬೆನ್ನುಹತ್ತಿ ಹೋಗಬೇಕೋ? ಸರಿಮಾಡುವ ದಿಕ್ಕಿನೆಡೆಗೆ ಎಡರು ತೊಡರುಗಳನ್ನು ಮೆಟ್ಟುತ್ತಾ ಸಾಗಬೇಕೋ? ಈ ಬಗ್ಗೆ ಯಾವ ಬುದ್ಧಿಜೀವಿಯಾದರೂ ಅಭಿಪ್ರಾಯ ಕೊಡಬೇಕೇ? ಸಮಾಜದ ಹಿತ, ಕನ್ನಡಿಗರ ಭವಿಶ್ಯ ರೂಪಿಸುವ ಹೊಣೆ ಹೊತ್ತಿರುವ ಸರ್ಕಾರ ಯಾವ ನಿಲುವು ಹೊಂದಿರಬೇಕು ಎಂದೆಲ್ಲಾ ನೋಡಿದರೆ.... ಈಗಿನ ಸರ್ಕಾರದ ನಿಲುವು ಒಪ್ಪಲಾಗದ್ದು! ದೀರ್ಘಾವಧಿಯಲ್ಲಿ ಇದು ನಾಡಿನ ಸಾಮಾನ್ಯ ಕನ್ನಡಿಗರೆಲ್ಲರ ಹಿತಕ್ಕೆ ಮಾರಕವಾದದ್ದು...
ಬೇರೆ ರೀತಿಯಾಗಿ ವಾದ ತಿರುಗದಿರಲಿ ಅಂತ ಹೇಳ್ತಿದೀನಿ: ನನಗೆ ಇಬ್ಬರು ಗಂಡುಮಕ್ಕಳು. ಇಬ್ಬರೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು! ಬೆಂಗಳೂರಿನಲ್ಲಿರೋ ನಾವು ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಿದ್ದು ಯಾವುದೇ ಆದರ್ಶಕ್ಕಾಗಿಯಲ್ಲ. ಮೊದಲ ಕಲಿಕೆ ತಾಯ್ನುಡಿಯಲ್ಲಿ ಅತ್ಯುತ್ತಮ ಎನ್ನುವ ಕಾರಣದಿಂದಲೇ...

ಮಹದೇವ್  ಹಡಪದ್
ಆಮರಣಾಂತ ಉಪವಾಸದ ಬೆದರಿಕೆ ಹಾಕೋರು ತುಳಸಿ ಕಟ್ಟೆಗೆ ಸುತ್ತ ಹಾಕೋರು ಒಂದೇ ಥರ ಕಾಣ್ತಾರೆ. ನನಗಂತು ಇಸ್ಮಾಯಿಲ್ ಸರ್ ಅನಿಸಿಕೆ ಸರಿಯಾಗಿದೆ.

ಆನಂದ್
ಕಲಿಕಾ ಮಾಧ್ಯಮ ಮತ್ತು ಭಾಷಾ ಕಲಿಕೆ ಎರಡನ್ನೂ ಬೆರೆಸಿ ನೋಡುವುದರ ಅಗತ್ಯವಿಲ್ಲ. ಇಂಗ್ಲೀಶನ್ನು ಒಂದು ಭಾಷೆಯಾಗಿ ಕಲಿಸೋದು ಖಂಡಿತಾ ತಪ್ಪಲ್ಲಾ... ಯಾವ ವಯಸ್ಸಿನಿಂದ ಕಲಿಸಬೇಕೆನ್ನುವುದನ್ನು ಸರ್ಕಾರ, ಈಗಾಗಲೇ ಇರುವ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ತೀರ್ಮಾನಿಸುವುದು ಸರಿಯಾದ ವಿಧಾನ. ಇನ್ನು ಕನ್ನಡಿಗರಿಗೆ ಇಂಗ್ಲೀಶ್ ಮಾಧ್ಯಮವೇ ಅತ್ಯುತ್ತಮವೆನ್ನುವುದಕ್ಕೆ ಯಾವ ವೈಜ್ಞಾನಿಕ ಅಧ್ಯಯನದ ತಳಹದಿ ಇದೆ ಎನ್ನುವುದನ್ನು ಸರ್ಕಾರ ಘೋಷಿಸಲಿ. ಅದು ಪರಭಾಷಾ ಮಾಧ್ಯಮದ ಪರವಾಗಿದ್ದರೆ ಧೈರ್ಯವಾಗಿಯೇ ಇಂತಹ ಸಾಬೀತಾದ ವರದಿಗಳ/ ಅಧ್ಯಯನಗಳ ಆಧಾರದ ಮೇರೆಗೆ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದ್ದೇವೆ ಎನ್ನಲಿ.

ಹರ್ಷಕುಮಾರ್ ಕುಗ್ವೆ
ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದೇನೋ ಸರಿ ಅಂತಾನೇ ಹೇಳೋಣ. ಆದರೆ ಯಾರು ಕಲಿಸ್ತಾರೆ? ನಗರಗಳ ಖಾಸಗಿ ಕಾನ್ವೆಂಟ್ ಗಳಲ್ಲಿ ಪಾಠ ಮಾಡೋರಿಗೇ ಇಂಗ್ಲಿಷ್ ನೆಟ್ಟಗೆ ಬರಲ್ಲ. ಅಂತಾದ್ರಲ್ಲಿ ಸರ್ಕಾರ ಅದೆಂಗೆ ದಿಡೀರ್ ಅಂತ ಸಾವಿರಾರು ಜನ ಇಂಗ್ಲಿಷ್ ನಾಗೆ ಪಾಠ ಮಾಡೋರನ್ನ ತರ್ತದೆ ಇದು ಮೊದಲ ಪ್ರಶ್ನೆ. ಇವತ್ತಿಗೂ ಬಹಳಷ್ಟು ಹಳ್ಳಿಗಳಲ್ಲಿ ನಾಲ್ಕೈದು ತರಗತಿಗಳಿಗೆ ಪಾಠ ಮಾಡೋದು ಒಬ್ಬನೇ ಶಿಕ್ಷಕ. ಅಗತ್ಯ ಕೊಠಡಿಗಳೂ ಇಲ್ಲ. ಇಂತಾದ್ರಲ್ಲಿ ಅವರಿಗೆ ಕನ್ನೆಡದಲ್ಲಿ ಪಾಠ ಮಾಡೋದೇ ಕಷ್ಟ. ಮತ್ತೆ ಇಂಗ್ಲಿಷಲ್ಲಿ ಪಾಠ ಮಾಡಿ ಅಂದರೆ ಅದೆಂಗೆ ಮಾಡ್ತಾರೆ? ಬಡ, ದಲಿತ ವಿದ್ಯಾರ್ಥಿಗಳು ಇಂಗ್ಲಿಷ್ ಕಲೀಬೇಕು ಅನ್ನೋದನ್ನು ನಾನೂ ಒಪ್ತೀನಿ. ಆದರೆ ಇವತ್ತಿನ ನಮ್ಮ ಶಿಕ್ಷಣದ ಪದ್ಧತಿಗಳಲ್ಲಿ ಅದು ಅಸಾಧ್ಯದ ಮಾತು. ಅಷ್ಟಕ್ಕೂ ಹಳ್ಳಿಗಳ ವಾತಾವರಣವೇ ಇಂಗ್ಲಿಷಿಗೆ ಪೂರಕವಾಗಿರುವುದಲ್ಲ. ಅತ್ತ ಇಂಗ್ಲಿಷೂ ಅಲ್ಲದೆ ಇತ್ತ ಕನ್ನೆವೂ ಅಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ನಮ್ಮ ವಿದ್ಯಾರ್ಥಿಗಳು ನೇತಾಡೋ ಸ್ಥಿತಿ ಬಂದುಬಿಡುತ್ತಾ ಅಂತ ಒಂದು ಆತಂಕ ನಂಗೆ. ಅದಕ್ಕೆ 7 ನೇ ಕ್ಲಾಸು ಮುಗಿಯೋವರೆಗೂ ಮಕ್ಕಳಿಗೆ ಒಳ್ಳೇ ರೀತಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಸಿಗಲಿ. ಆದರೆ ಅಗತ್ಯವಾಗಿ ಒಂದನೇ ತರಗತಿಯಿಂದಲೂ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲಿ. ಎಂಟನೇ ತರಗತಿಯಿಂದ ಮುಂದುಕ್ಕೆ ಇಂಗ್ಲಿಷ್ ಮಾಧ್ಯಮ ಕಲಿಸಲಿ.
ಜಗತ್ತಿನ ಎಲ್ಲಾ ಶಿಕ್ಷಣ ತಜ್ಞರೂ ಮಾತೃಭಾಷಾ ಶಿಕ್ಷಣವನ್ನೇ ಎತ್ತಿ ಹಿಡಿಯುತ್ತಾರೆ. ಅದುವೇ ಮಗುವನ್ನು ಮತ್ತು ಅದರ ಭಾಷೆಗೆ ಸಹಜ ಸಂಬಂಧ ಕಲ್ಪಿಸಿ ಆ ಮಗುವಿನ ಬೆಳವಣೀಗೆಗೆ ಸಹಾಯಕ. ಆದರೆ ಸಾಹಿತಿ ಬುದ್ದೀಜೀವಿಗಳು ಇಂಗ್ಲಿಷ್ ಕಲಿಕೆ ವಿರೋಧಿಸಿದೊಡನೆ ದಲಿತ ಸಮುದಾಯಗಳು ವಿರೋಧಿಸಲು ಇರುವ ಸಕಾರಣಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಇಂಗ್ಲಿಷ್ ಎನ್ನುವುದು ಮುಂದುವರಿದವರು ಮುಂದುವರಿಯಲು ಇರುವ ಒಂದು ಸಾಧನವೇ ಆಗಿರುವಾಗ ಅದನ್ನು ದಲಿತರಿಗೆ ನಿರಾಕರಿಸುವ ಹುನ್ನಾರವಿದು ಎಂದು ಅನ್ನಿಸುವುದು ತೀರಾ ಸಹಜ. ಹೀಗಾಗಿ ಎಲ್ಲಾ ಮುಂದುವರಿದವರಂತೆ ದಲಿತರೂ ಬಡವರೂ ಇಂಗ್ಲಿಷ್ ನ್ನು ಒಂದು ಭಾಷೆಯಾಗಿ ಕಲಿಯುವ ಅವಕಾಶ ಇರಬೇಕು. ಆದರೆ ಇವೆಲ್ಲವನ್ನು ನಾವು ನೀತಿ ನಿರೂಪಣೆಗಳ ಮಟ್ಟದಲ್ಲಿ ಮಾತನಾಡುವುದಕ್ಕಿಂತ ವಸ್ತುಸ್ಥಿತಿಗಳ ಮಟ್ಟದಲ್ಲಿ ಮಾತನಾಡುವುದು ಅವಶ್ಯಕ. 

ಎನ್ ಎ ಇಸ್ಮಾಯಿಲ್
ಪ್ರಿಯ Harshakumar Kugwe ಈ ಮಾತೃಭಾಷಾ ಶಿಕ್ಷಣ ಎಂದರೇನು? ತುಳವರಿಗೆ, ಬ್ಯಾರಿಗಳಿಗೆ, ಕೊಡವರಿಗೆ, ಕೊಂಕಣಿಗಳಿಗೆ ಅವರವರ ಭಾಷೆಯಲ್ಲಿ ಶಿಕ್ಷಣ ಕೊಡಬೇಕು ತಾನೇ? ಅದು ಸಾಧ್ಯವೇ? ಅವರು ತಮ್ಮದಲ್ಲದ ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಸರಿ ಎನ್ನುವುದಾದರೆ ಇಂಗ್ಲಿಷ್‌ನಲ್ಲೂ ಕಲಿಯಬಹುದಲ್ಲವೇ? ಮಾತೃಭಾಷೆ ಎನ್ನುವುದಕ್ಕಿಂತ ಮಗು ಇರುವ ವಾತಾವರಣ ಭಾಷೆ ಎನ್ನುವುದು ಹೆಚ್ಚು ಸರಿ ಎನ್ನಬಹುದೇನೋ. Anand Enguru ಸರ್ಕಾರ ಇಂಗ್ಲಿಷ್ ಮಾಧ್ಯಮ ಬೇಕು ಎಂದು ಹೇಳುತ್ತಿರುವುದರ ಹಿಂದಿರುವ ಅಧ್ಯಯನಗಳಿವೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಇಂಗ್ಲಿಷ್ ಶಾಲೆಗಳಿಗೆ ಹೋಗುತ್ತಿರುವ ಮಕ್ಕಳನ್ನು ಆಸೆಗಣ್ಣಿನಿಂದ ನೋಡುತ್ತಾ ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪರಿತಪಿಸುತ್ತಿರುವ ಸಾಮಾನ್ಯರಂತೂ ಸರ್ಕಾರದ ನಿರ್ಧಾರದ ಹಿಂದಿದ್ದಾರೆ. ಏಕೆಂದರೆ ಅವರೆಲ್ಲಾ ಅಧಿಕಾರಕ್ಕೇರ ಬಯಸುವವರಿಗೆ ಓಟುಗಳು.

ರೇಣುಕಾ ಮಂಜುನಾಥ್
ಇಸ್ಮಾಯಿಲ್ ಅವರು ಹೇಳುವುದು ಸರಿ! ಇನ್ನು ನನಗೆ ಹೇಳಬೇಕೆನಿಸಿರುವುದು, ಮಾತೃಭಾಷೆ ಉಳಿಸಿಕೊಳ್ಳುವುದೇನಿದ್ದರೂ ಅವರವರ ಮಾತೃವಲಯದಲ್ಲಿ ಕಾಳಜಿ ಇರುವವರು ಮಾಡಿಕೊಳ್ಳಬೇಕಿದೆ!now a days, anybody to develop and grow globally is not a big issue...since everything is very handy, if you are average intelligent you can achieve a lot.! that way, we the parents are comfortable and we are in 'no confusion' zone! local ಆಗಿ ಬೆಳೆಯಬೇಕೆಂದರೆ ನಾವು ನಮ್ಮ ಮಕ್ಕಳನ್ನು ಯಾರೊಡನೆ ಸ್ಪರ್ಧಿಸಲು ಬಿಡಬೇಕೆಂಬುದು ಬಹು ಮುಖ್ಯವಾಗುತ್ತದೆ! ಇಲ್ಲಿ might is right! real estate, political field, cinema...ಹೀಗೆ! ಹಾಗಾಗಿ ನಾವು ನಮ್ಮ ಮಕ್ಕಳಿಗಾಗಿ , ಭಾಷೆಯನ್ನು ಬದಿಗಿಟ್ಟು survivalಗಾಗಿ ಹೆಣಗಬೇಕಾದ ಪರಿಸ್ಥಿತಿ! global platform nalli ಸಶಕ್ತ ಭಾಷೆಗಷ್ಟೇ ಉಳಿಯುವ...ಉಳಿಸುವ ಸಾಮರ್ಥ್ಯ! ಹಾಗಾಗಿ ಇಂಗ್ಲೀಷ್ ಮೇಲುಗೈ ಸಾಧಿಸಿದ್ದರೆ ಆಶ್ಚರ್ಯವಿಲ್ಲ! ಇನ್ನು ಮುಂದೆ ನಮ್ಮ ಭಾಷೆ ಉಳಿಸಿಕೊಳ್ಳುವುದೆಂದರೆ ಅದು ನಮ್ಮ ವೈಯಕ್ತಿಕ ಕಾಳಜಿಯಾಗಿಬಿಡುವ ಸಾಧ್ಯತೆಯಿದೆ! ಲಿಪಿಯಿಲ್ಲದ ತುಳು, ಕೊಂಕಣಿ, ಕೊಡವ ಭಾಷೆಗಳು ಜೀವಂತವಾಗಿದ್ದಾವೆಂದಮೇಲೆ...ಕನ್ನಡಕ್ಕೆ ಯಾವ ತೊಂದರೆಯೂ ಇಲ್ಲ! ಅಮ್ಮಂದಿರ ಸಾಲಿನಲ್ಲಿ ನಿಲ್ಲುವ ನಮ್ಮಂತಹವರಿಗೆ , ನಮ್ಮ ಮಕ್ಕಳು ಸ್ಥಳೀಯ ದೈತ್ಯರಾಗಿರುವ ರಿಯಲ್ ಎಸ್ಟೇಟ್ ಮುಂತಾದ ಕುಳರನ್ನು ನೋಡಿ ನಮ್ಮ 'ಓದು' ಯಾವುದಕ್ಕೂ ಸಲ್ಲುತ್ತಿಲ್ಲ ಎಂದು 'ಕೀಳರಿಮೆ" ಅನುಭವಿಸುವುದಕ್ಕಿಂತ....ಭಾಷೆ ಯಾವುದಾದರೇನು .....ನಡೆಮುಂದೆ...ನಡೆಮುಂದೆ ಎನ್ನುತ್ತಾ ಮುನ್ನುಗ್ಗಬೇಕಿದೆ! ಬಾಷೆ ಉಳಿಸುವುದು ಸಮುದಾಯದ , ಸಮಾಜದ , ಸರ್ಕಾರದ ಜವಾಬ್ದಾರಿಯಾದಾಗ ಅದಕ್ಕೆ ಬೇರೆ ಆಯಾಮಗಳಲ್ಲಿ ಪ್ರಯತ್ನಿಸಬೇಕಿದೆ! ಶಿಕ್ಷಣದ ಹೊರತಾಗಿ....ಸಾಂಸ್ಕ್ೃತಿಕ. ಸಾಮಾಜಿಕ, ಕೌಟುಂಬಿಕ, ಧಾರ್ಮಿಕ, ಸಿನಿಮಾ, ನಾಟಕ, ...ಮುಂತಾದ ನೆಲೆಯಲ್ಲಿ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಿದೆ!

ಆನಂದ್
ಪ್ರಿಯ N A Mahamed Ismail ಸರ್,
ನೀವು ಹೇಳುವಂತೆ ಕೊಡವ, ತುಳು, ಬ್ಯಾರಿ ಎಲ್ಲರಿಗೂ ಅವರವರ ತಾಯ್ನುಡಿಯಲ್ಲಿ ಶಿಕ್ಷಣ ಸಿಗಬೇಕಾದ್ದು ಸರಿಯಾದದ್ದು. ಹಾಗೆ ಕೊಡುವ ಏರ್ಪಾಟು ಮಾಡಬೇಕಾದ್ದು ಸರ್ಕಾರದ ಸಹಯೋಗದೊಂದಿಗೆ ಆಯಾ ಭಾಷಿಕ ಜನರು ಮಾತ್ರವೇ. ಇಂದು ಹಾಗೆ ಕೊಡಲಾಗುತ್ತಿಲ್ಲವಾದರೆ ಕೊಡುವ ದಿಕ್ಕಿನಲ್ಲಿ ಕೆಲಸಗಳಾಗಬೇಕು. ಅದಕ್ಕೆ ವಿಪರೀತವಾಗಿ ಈಗ ಕನ್ನಡದಲ್ಲಿರುವ ಏರ್ಪಾಟನ್ನೂ ಕೈಬಿದುವುದಲ್ಲ. ಜನರ ಬಯಕೆಗಳು ಇಂಗ್ಲೀಶ್ ಮಾಧ್ಯಮದ ಕಡೆಗಿದ್ದರೆ ಅದಕ್ಕೆ ಸರ್ಕಾರ ಕನ್ನಡದ ವ್ಯವಸ್ಥೆಯನ್ನು ಅಂಥಾ ಭರವಸೆ ಹುಟ್ಟಿಸುವ ಬಗೆಯಲ್ಲಿ ಕಟ್ಟಿಲ್ಲದಿರುವುದು ಕಾರಣ. ಈ ದಿಕ್ಕಿನಲ್ಲಿ ಪಾಲಿಸಿ ರೂಪಿಸಬೇಕಾದ ಹೊಣೆಗಾರಿಕೆ ಸರ್ಕಾರದ್ದು. ಅಂದರೆ ಗುಣಮಟ್ಟದ ಕಾರಣದಿಂದಾಗಿ ಕನ್ನಡ ಜನತೆ ಕನ್ನಡ ಮಾಧ್ಯಮ ಅಪ್ಪುವಮ್ತೆ ಮಾಡಬೇಕಾದ sarkaara ಇದನ್ನು ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಸರಿಯಲ್ಲ. ತನ್ನ ನಿಲುವಿಗೆ/ ಕ್ರಮಕ್ಕೆ ವೈಜ್ಞಾನಿಕ ಅಧ್ಯಯನದ ಬೆಂಬಲ ಇದ್ದಲ್ಲಿ ಯಾಕೆ ಆರನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ? ಒಂದನೇ ತರಗತಿಯಿಂದಲೇ ಆರಂಭಿಸಲಿ.. ನಮಗೇನು? ಒಟ್ಟಲ್ಲಿ ಕನ್ನಡಿಗರ ಏಳಿಗೆ ಮುಖ್ಯ!

ಮುಂದುವರಿದು............................


ಎನ್ ಎ ಇಸ್ಮಾಯಿಲ್
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಪರಿಚಯಿಸುವ ಪ್ರಸ್ತಾಪಕ್ಕೆ ಭಾವುಕವಾಗಿ ಪ್ರತಿಕ್ರಿಯಿಸುವ ನಾವೇಕೆ ಸಾಮಾನ್ಯ ಶಾಲೆಗಳು ಮತ್ತು ಸಮಾನ ಶಿಕ್ಷಣದ ಬೇಡಿಕೆಯನ್ನು ಇಷ್ಟೇ ಬಲವಾಗಿ ಮಂಡಿಸುತ್ತಿಲ್ಲ. ಇದು ಕನ್ನಡ ಮಾಧ್ಯಮದ ಪರವಾಗಿ ಮಾತನಾಡುತ್ತಿರುವವರು ಬಡವರು ಕಲಿಯುವ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಉಳಿಸಲು ಹೊರಟವರು ಎಂಬ ಭಾವನೆಗೆ ಕಾರಣವಾಗುತ್ತಿದೆ. ಸಾಮಾಜಿಕ/ಆರ್ಥಿಕ ಅಸಮಾನತೆ ಎಂಬುದು ಒಂದು ವಾಸ್ತವ. ಹಾಗೆಯೇ ನಗರದ ಮಧ್ಯಮ ವರ್ಗ(ಅಪವಾದಗಳನ್ನು ಹೊರತು ಪಡಿಸಿ) ತಮ್ಮ ಮಕ್ಕಳನ್ನು 'ಒಳ್ಳೆಯ ಶಾಲೆ'ಗಳಿಗೆ (ಸರಿಯಾಗಿ ಇಂಗ್ಲಿಷ್ ಕಲಿಸುವ ಖಾಸಗಿ ಶಾಲೆಗಳಿಗೆ)ಸೇರಿಸುತ್ತಿದೆ ಎಂಬುದು ವಾಸ್ತವವೇ. ಈ ಎರಡೂ ವಾಸ್ತವಗಳನ್ನು ದೃಷ್ಟಿಯಲ್ಲಿಟ್ಟುಕೊಂಡರೆ 'ಕನ್ನಡ ಮಾಧ್ಯಮ'ಕ್ಕಾಗಿ ಮಂಡಿಸುವ ವಾದವು ಸಮಾನ ಶಿಕ್ಷಣವನ್ನು ನೆಲೆಗಟ್ಟಾಗಿಸಿಕೊಳ್ಳದೇ ಹೋದರೆ ಅದು ಉಳ್ಳವರ ಆಷಾಡಭೂತಿತನದಂತೆ ಬಡವರಿಗೆ/ದಲಿತರಿಗೆ ಕಾಣಿಸುವುದು ಸಹಜವಲ್ಲವೇ?

ಆನಂದ್
ಪ್ರಿಯ N A Mahamed Ismail ಸಾರ್,
ನಿಮ್ಮ ಮಾತಿಗೆ ನನ್ನ ಪೂರ್ಣ ಒಪ್ಪಿಗೆ. ಸಮಾನ ಶಿಕ್ಷಣ ಮತ್ತು ಕನ್ನಡ ಮಾಧ್ಯಮದ ಶಿಕ್ಷಣಗಳೆರಡೂ ನಮಗೆ ಮುಖ್ಯ. ಈ ವಿಷಯವಾಗಿ ಅನಂತಮೂರ್ತಿಯವರ ವಿಚಾರಗಳು ಆಸಕ್ತಿಕರವಾಗಿವೆ. ನನ್ನ ಮಾತೇನೆಂದರೆ ಸರ್ಕಾರದ ಹೊಣೆಗಾರಿಕೆ ಈಗ ಈ ಆಶಯಗಳಿಗೆ ವಿರುದ್ಧವಾಗಿ ಸಾಗುವಂತಹ ನೀತಿ ರೂಪಿಸುದೆ, ಇವುಗಳಿಗೆ ಪೂರಕವಾಗುವ, ಏನಾಗಬೇಕೋ ಅದನ್ನಾಗಿಸುವೆಡೆಗಿನ ಹೆಜ್ಜೆ ಇಡಲಿ ಎನ್ನುವುದು ನಮ್ಮ ಕಾಳಜಿ.. ಒತ್ತಾಯ!

ಮಂಜುನಾಥ್ ಸೋನು
ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಕೆಲವು ಖಾಸಗಿ ಸಂಸ್ಥೆಗಳಲ್ಲಿ ಜವಾನನ ಹುದ್ದೆ ತಗೋಬೇಕಂದ್ರೂ ಇಂಗ್ಲಿಷ್ ಬರಬೇಕು ಅಂತ ಅನ್ನೋ ಈ ಜಾಗತೀಕರಣದ ಸಂದರ್ಭದಲ್ಲಿ ಸರ್ಕಾರವೇ ಇಂಗ್ಲಿಷ್ ಶಿಕ್ಷಣ ಕೊಟ್ಟರೆ ತಪ್ಪೇನು? ಹಾಗೆ ಕೆಲವು ಕನ್ನಡಪರ ಹೋರಾಟಗಾರರಿಗೆ ಒಂದು ಪ್ರಶ್ನೆ ಇವತ್ತು ಕನ್ನಡ ಕನ್ನಡ ಎನ್ನುವವರ ಮನೆ ಮಕ್ಕಳು ಎಷ್ಟು ಜನ ನಮ್ಮ ಊರುಗಳ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿದ್ದಾರೆ ಅಯ್ಯೋ ಸ್ವಾಮಿ ನಮ್ಮ ಮನೆಯ ಮಕ್ಕಳಿಗೆ ಸರ್ಕಾರಿ ಹುದ್ದೆಗಳಂತೂ ಕನಸಿನ ಮಾತು ಹಾಗಾಗಿ ಸರ್ಕಾರವೇ ಇಂಗ್ಲಿಷ್ ಶಿಕ್ಞಣ ಸಂಸ್ಥೆಗಳನ್ನು ಪ್ರಾರಂಭಿಸಿದರೆ ನಾವು ಅನ್ಯಾಯವಾಗಿ ಸಾವಿರಾರು ರೂಪಾಯಿಗಳನ್ನು ಪೀಕುತ್ತಿರುವ ಕಾನ್ವೆಂಟುಗಳಿಂದ ಉಳಿಯಬಹುದು ಕಡೆಯದಾಗಿ ಹೇಳೋದಾದರೆ ಯಾವುದೇ ಭಾಷೆ ನಾವು ಕಲಿತರೂ ಅದು ನಮಗೆ ಅರ್ಥ ಆಗೋದು ನನ್ನ ಅಮ್ಮ ಕಲಿಸಿದ ಭಾಷೆಯಲ್ಲಿಯೇ ಹಾಗಾಗಿ ಮಾತೃಭಾಷೆಯ ಜೊತೆಗೆ ಅನ್ನ ಕೊಡೋ ಭಾಷೆನೂ ಬೇಕು.

ಇಂಗ್ಲೀಶ್ ಬಲ್ಲ, ಆದರೆ ಅರೆಬರೆ ಅರಿಮೆಯ ನಾಡು ಕಟ್ಟಬೇಕೇ?

ಆನಂದ್
ಕೃಪೆ:-ಬನವಾಸಿ ಬಳಗ ಬ್ಲಾಗ್ ಏನ್ ಗುರು ಕಾಫಿ ಆಯ್ತಾ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯಸರ್ಕಾರವು ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ತಾನೇ ಆರಂಭಿಸಲು ಮುಂದಾಗಿದೆ. ಈ ನಡೆಯು ಕನ್ನಡ ಮಾಧ್ಯಮ ಕಲಿಕೆಯ ಬಗ್ಗೆ ನಂಬಿಕೆಯಾಗಲೀ, ಈಗಿರುವ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಯೋಚನೆಯಾಗಲೀ ಸರ್ಕಾರಕ್ಕಿಲ್ಲವೆಂಬುವಂತಿದೆ. ಸರ್ಕಾರದ ಈ ನಡೆಯು ದೀರ್ಘಾವಧಿಯಲ್ಲಿ ನಾಡಿನ ಏಳಿಗೆಯನ್ನು ಮಣ್ಣುಪಾಲುಮಾಡಬಲ್ಲುದಾಗಿದೆ.

ರಾಜ್ಯಸರ್ಕಾರದ ಕನ್ನಡಪರತೆ!

೨೦೦೮ರಲ್ಲಿ ರೂಪುಗೊಂಡ ರಾಜ್ಯಸರ್ಕಾರವು ಕಲಿಕೆಯ ವಿಷಯದಲ್ಲಿ ಮೊದಲಿನಿಂದಲೂ ಕನ್ನಡ ವಿರೋಧಿಯನ್ನು ಧೋರಣೆಯನ್ನು ತೋರಿಸುತ್ತಿರುವ ಅನುಮಾನವಿದೆ. ಎರಡುವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿಶಾಲೆಯನ್ನು ಭಾರತೀಯ ವಿದ್ಯಾಭವನ ಎನ್ನುವ ಖಾಸಗಿ ಸಂಸ್ಥೆಗೆ ಕೇಂದ್ರೀಯ ಪಠ್ಯಕ್ರಮದ ಆಂಗ್ಲಮಾಧ್ಯಮ ಶಾಲೆಯನ್ನು ನಡೆಸಲು ಒಪ್ಪಿಸಿಬಿಟ್ಟಿತು. ಆ ಮೂಲಕ ರಾಜ್ಯಸರ್ಕಾರದ ಪಠ್ಯಕ್ರಮದಲ್ಲಿ ತನಗೆ ನಂಬಿಕೆ ಇಲ್ಲವೆಂಬುದನ್ನು ತೋರಿಸಿಕೊಂಡಿತ್ತು. ಹೀಗೆ ನಡೆದುಕೊಳ್ಳಲು “ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು” ಎನ್ನುವ ಕಾರಣವನ್ನು ನೀಡಿತ್ತು. ಇದಾದ ಕೆಲದಿನಗಳಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂದು ಸುಮಾರು ಮೂರು ಸಾವಿರ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಮುಂದಾಯಿತು. ಈ ಬಗ್ಗೆ ಜನರಿಂದ ವಿರೋಧ ಬಂದಾಗ “ಮುಚ್ಚುವಿಕೆ ಅಲ್ಲಾ... ಹತ್ತಿರದ ಶಾಲೆಯೊಂದಿಗೆ ವಿಲೀನ” ಎಂದಿತು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆ? ಎನ್ನುವುದಕ್ಕೆ “ಹಳ್ಳಿಗಳಿಂದ ನಗರಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ” ಎಂದಿತು. “ಹಾಗಾದರೆ ಹಳ್ಳಿಗಾಡಿನ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೇಗೆ ಹೆಚ್ಚುತ್ತಿದೆ?” ಎನ್ನುವ ಪ್ರಶ್ನೆಗೆ ಉತ್ತರವಿಲ್ಲದಾಯ್ತು. ಸರ್ಕಾರಿ ಶಾಲೆಗಳನ್ನು ಮುಚ್ಚಲು ಮಕ್ಕಳ ಸಂಖ್ಯೆ ಐದಕ್ಕಿಂತಾ ಕಡಿಮೆಯಿದೆ ಎನ್ನುವ ಕಾರಣ ನೀಡುತ್ತಾ “ಇದು ಕೇಂದ್ರಸರ್ಕಾರದ ಆದೇಶ, ನಮ್ಮ ತಪ್ಪೇನೂ ಇಲ್ಲಾ” ಎಂದು ತಿಪ್ಪೆ ಸಾರಿಸಲಾಯಿತು. ಇಷ್ಟೇ ಅಲ್ಲದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸಲು ಇರುವ ಕಟ್ಟುಪಾಡುಗಳನ್ನೆಲ್ಲಾ ಗಾಳಿಗೆ ತೂರಿ ನಿರಾಕ್ಷೇಪಣಾ ಪತ್ರಗಳನ್ನು ನೀಡುವುದನ್ನು ಮುಂದುವರೆಸಲಾಯಿತು, ಇದು ಬೀದಿಗೊಂದು ಕೇಂದ್ರಪಠ್ಯಕ್ರಮದ ಶಾಲೆ ಆರಂಭವಾಗಲು ಕಾರಣವಾಯಿತು. ಇವಿಷ್ಟೂ ಒಂದು ಹಂತದ ಕಥೆಯಾದರೆ ಈಗಿನದ್ದು ಮತ್ತೊಂದು.

ಹೊಸ ನಿರ್ಧಾರ!

ಈಗ ರಾಜ್ಯಸರ್ಕಾರದ ೩೪೧ ಶಾಲೆಗಳಲ್ಲಿ ಆಂಗ್ಲಮಾಧ್ಯಮವನ್ನು ಶುರುಮಾಡಲು ಮುಂದಾಗಿದೆ. “ಇದಕ್ಕೆ ಜನರಿಂದ ಬೇಡಿಕೆಯಿದೆ, ಬಡಮಕ್ಕಳು ಖಾಸಗಿ ಶಾಲೆಗಳನ್ನು ಸೇರಲಾಗದ ಕಾರಣದಿಂದ ಆಂಗ್ಲಮಾಧ್ಯಮದಲ್ಲಿ ಕಲಿಯುವುದರಿಂದ ವಂಚಿತರಾಗಬಾರದು, ಇದು ರಾಜ್ಯಸರ್ಕಾರದ ಭಾಷಾನೀತಿಯನ್ನು ಉಲ್ಲಂಘಿಸುತ್ತಿಲ್ಲಾ” ಇತ್ಯಾದಿ ಕಾರಣಗಳನ್ನು ಕೊಡಲಾಗುತ್ತಿದೆ. ಕರ್ನಾಟಕದ ಭಾಷಾನೀತಿ ಕನ್ನಡ ಮಾಧ್ಯಮದಲ್ಲಿನ ಕಲಿಕೆಯನ್ನು ೫ನೇ ತರಗತಿಯವರೆಗೆ ಕಡ್ಡಾಯ ಮಾಡಿರುವುದನ್ನು “ಕನಿಷ್ಠ ೫ನೇ ತರಗತಿಯವರೆಗೆ” ಎಂದು ಪರಿಗಣಿಸದೇ “ಗರಿಷ್ಠ ೫ನೇ ತರಗತಿಯವರೆಗೆ” ಎಂದು ಸರ್ಕಾರ ಪರಿಗಣಿಸಿದಂತಿದೆ.

ಕನ್ನಡದ ಬಗ್ಗೆ ಕನ್ನಡಸರ್ಕಾರಕ್ಕೇ ನಂಬಿಕೆಯಿಲ್ಲ!

ಇದೆಲ್ಲದರ ಅರ್ಥವು ನೇರವೂ ಸರಳವೂ ಆಗಿದೆ. ಕನ್ನಡನಾಡಿನ ಭವಿಷ್ಯ ರೂಪಿಸಲು ಅಗತ್ಯವಾಗಿರುವ ’ಕನ್ನಡಿಗರ ಕಲಿಕೆ’ಗೆ ‘ಕನ್ನಡ ನುಡಿ’ ಯೋಗ್ಯವಾಗಿದೆ ಎನ್ನುವ ನಂಬಿಕೆಯೇ ಸರ್ಕಾರಕ್ಕಿಲ್ಲ. ಈಗಿರುವ ಕಲಿಕೆ ಏರ್ಪಾಟಿನಲ್ಲಿರುವ ಕುಂದುಕೊರತೆಗಳನ್ನು ನೀಗಿಸಿಕೊಂಡು “ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿರುವ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ”ಯನ್ನು ಕಟ್ಟಬೇಕೆಂಬ ಸಣ್ಣ ಹಂಬಲವೂ ಸರ್ಕಾರಕ್ಕಿರುವಂತೆ ತೋರುತ್ತಿಲ್ಲ. ಬದಲಾಗಿ ಕನ್ನಡಕ್ಕೆ ಕಲಿಕಾ ಮಾಧ್ಯಮವಾಗುವ ಯೋಗ್ಯತೆಯಿಲ್ಲಾ ಎಂದೂ, ಕನ್ನಡಿಗರಿಗೆ ಆಂಗ್ಲಮಾಧ್ಯಮದಲ್ಲಿನ ಕಲಿಕೆಯೇ ಒಳಿತೆಂದೂ ತಿಳಿದಿರುವಂತಿದೆ. ಪ್ರಪಂಚದಲ್ಲಿ “ತಾಯ್ನುಡಿಯಲ್ಲಿ ಕಲಿಕೆ ನೀಡುವುದೇ ಅತ್ಯುತ್ತಮ” ಎನ್ನದಿರುವ ಯಾವುದಾದರೂ ನಾಡಿದ್ದರೆ ಬಹುಶಃ ಅದು ನಮ್ಮದೇ! ವೈಜ್ಞಾನಿಕ ಅಧ್ಯಯನಗಳು, ವಿಶ್ವಸಂಸ್ಥೆಯ ಅಂಗವಾಗಿರುವ ಯುನೆಸ್ಕೋ ನಿಲುವುಗಳೆಲ್ಲವೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನು ಹೇಳುತ್ತಿವೆಯೋ ಅದು ನಮ್ಮ ಸರ್ಕಾರಕ್ಕೆ ಮನವರಿಕೆಯಾಗಿಲ್ಲ. ಬದಲಾಗಿ ಯಾರದೋ ಮಕ್ಕಳು - ಮೊಮ್ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವುದನ್ನು ಎತ್ತಿ ತೋರಿಸುತ್ತಾ... ಕೆಲವರ ಆಯ್ಕೆಯ ಉದಾಹರಣೆಯನ್ನು ರಾಜ್ಯಸರ್ಕಾರದ ನೀತಿ-ನಿಲುವನ್ನು ರೂಪಿಸಲು, ಸಮರ್ಥಿಸಿಕೊಳ್ಳಲು ಬಳಸುತ್ತಿರುವುದು ದುರಂತ.

ಕೈಬಿಡಲಿ ಭಾಷಾನೀತಿಯನ್ನು!

ಸರ್ಕಾರ ಈಗಿನ ನಂಬಿಕೆಯನ್ನೇ ಖಚಿತವಾಗಿ ಹೊಂದಿದ್ದರೆ ತನ್ನ ಭಾಷಾನೀತಿಯನ್ನೂ, ಶಿಕ್ಷಣನೀತಿಯನ್ನು ಬದಲಾಯಿಸಲಿ. ಯಾಕಾಗಿ ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶುರುವಾಗಬೇಕು? ಅದು ಒಂದನೇ ತರಗತಿಯಿಂದಲೇ ಆಗಲಿ. ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಕಲಿಕಾ ವ್ಯವಸ್ಥೆಯನ್ನು ಕಟ್ಟುತ್ತಿರುವ ಸರ್ಕಾರಕ್ಕೆ ಸುಮ್ಮನೆ ಕನ್ನಡಪರ ಸರ್ಕಾರ ಎಂದು ತೋರಿಸುವ ಹಂಬಲವೇಕೆ? ಕನ್ನಡ ಅಭಿವೃದ್ಧಿ ಪ್ರಾಧಿಕಾರವೇಕೆ? ಆಡಳಿತ ಭಾಷೆಯಾಗಿ ಕನ್ನಡ ಏಕೆ? ಕನ್ನಡ ಸಂಸ್ಕೃತಿ ಇಲಾಖೆ ಏಕೆ? ವಾರ್ಷಿಕ ಪ್ರಶಸ್ತಿಗಳೇಕೆ? ಕನ್ನಡದ ಜಾತ್ರೆಗಳೇಕೇ? ಸುಮ್ಮನೇ ತೆರಿಗೆ ಹಣ ಪೋಲು ಮಾಡುವುದಾದರೂ ಏಕೆ? ಕನ್ನಡದಿಂದ ಜ್ಞಾನಾರ್ಜನೆ ಅಸಾಧ್ಯವೆನ್ನುವ, ಕನ್ನಡದಿಂದ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ, ಕನ್ನಡದಲ್ಲಿ ಉನ್ನತ ಕಲಿಕೆ ಸಾಧ್ಯವಿಲ್ಲ, ಉದ್ಯೋಗಾವಕಾಶ ಸಾಧ್ಯವಿಲ್ಲ ಎನ್ನುವ ನಂಬಿಕೆ ನಮ್ಮ ಸರ್ಕಾರಕ್ಕಿರುವುದಾದರೆ… ನಾಡಿನ ಜನರ ಒಳಿತು ಆಂಗ್ಲಮಾಧ್ಯಮದ ಕಲಿಕೆಯಿಂದಲೇ ಎನ್ನುವುದಾದರೆ ಅದನ್ನೇ ಮಾಡಲಿ.

ಬೇಕು ಏಳಿಗೆಗೆ ಸಾಧನ

ಈಗಿನ ಕರ್ನಾಟಕ ರಾಜ್ಯಸರ್ಕಾರ ಮುಂದಿನ ಗೊತ್ತುಗುರಿಯಿಲ್ಲದೆ ತೀರಾ ಹತ್ತಿರದ ನೋಟ ಹೊಂದಿದ್ದು ನಾಡಿನ ಕಲಿಕಾ ವ್ಯವಸ್ಥೆಯನ್ನು ಶಾಶ್ವತವಾಗಿ ಹಾಳುಗೆಡವುವ ಕ್ರಮಕ್ಕೆ ಮುಂದಾಗಿದೆ ಮತ್ತು ಮುಂದೆ ಇದರಿಂದಾಗಿ ಕನ್ನಡ ಜನಾಂಗಕ್ಕಾಗುವ ಹಾನಿಗೆ ಸರ್ಕಾರವೇ ಹೊಣೆಯಾಗಿದೆ. ಒಂದು ಒಳ್ಳೆಯ ಕಲಿಕಾ ವ್ಯವಸ್ಥೆಯನ್ನು ಕಟ್ಟಲು ಶ್ರಮಿಸಬೇಕಾಗಿದ್ದ ಸರ್ಕಾರವು ಈ ರೀತಿ ಅರೆನುರಿತ ಕ್ರಮಗಳನ್ನು ತೆಗೆದುಕೊಳ್ಳುವುದು ನಾಡಿಗೆ ಒಳಿತಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವತ್ತ ಗಮನಹರಿಸಬೇಕಾಗಿರುವ ಜೊತೆಯಲ್ಲೇ ಖಾಸಗಿ ಶಾಲೆಯಾದರೂ ಕನ್ನಡ ಮಾಧ್ಯಮವಾಗಿದ್ದಲ್ಲಿ ಅವುಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ. ಬದಲಾಗಿ ನಮ್ಮ ರಾಜ್ಯಸರ್ಕಾರವು ಕನ್ನಡ ಶಾಲೆಗಳನ್ನೇ ಮುಚ್ಚುವುದರಿಂದಾಗಲೀ, ಕಲಿಕಾ ಮಾಧ್ಯಮವನ್ನೇ ಬದಲಾಯಿಸುವುದರಿಂದಾಗಲೀ ಯಾವುದೇ ಉಪಯೋಗವಿಲ್ಲ. ಇಂಗ್ಲೀಶ್ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಇಂಗ್ಲೀಶ್ ಭಾಷೆಯನ್ನರಿತ ಆದರೆ ಅರಿಮೆಯ ವಿಷಯಗಳನ್ನು ಅರೆಬರೆ ತಿಳಿದ ಪೀಳಿಗೆಯಾಗಿಬಿಡುವ ಅಪಾಯವಿದೆ. ನಮ್ಮ ನಾಡಿಗೆ ಬೇಕಿರುವುದು, ಅರಿಮೆಯ ವಿಷಯಗಳನ್ನು ಚೆನ್ನಾಗಿ ತಿಳಿದ, ಕನ್ನಡದ ಜೊತೆಗೆ ಇಂಗ್ಲೀಶನ್ನೂ ಬಲ್ಲ ಜನರು. ನಮಗೆ ಬೇಕಿರುವುದು ಸಮಾನ ಶಿಕ್ಷಣದ ಕನ್ನಡ ಮಾಧ್ಯಮದ ಸಮುದಾಯ ಶಾಲೆಗಳು.

88 ವರ್ಷಗಳ ನಂತರ ಸಮಾಧಿ ಸೇರಲಿದೆ ಲೆನಿನ್ ಕಳೇಬರ!



ಲಂಡನ್: ಕಾಯ ಅಳಿದರೂ ಕಾರ್ಯ ಉಳಿಯುವುದು ಎಂಬ ಮಾತು ಜನಜನಿತ. ಆದರೆ ಸೋವಿಯತ್ ರಷ್ಯಾದ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಲೆನಿನ್ ವಿಷಯಕ್ಕೆ ಬಂದಾಗ ಕಾರ್ಯದೊಂದಿಗೆ ಕಾಯವೂ ಉಳಿದಿರುವುದು ಮಾತ್ರ ಸೋಜಿಗ!


ಲೆನಿನ್ ಮೃತಪಟ್ಟು 88 ವರ್ಷಗಳಾದರೂ ಅವರ ಕಳೇಬರಕ್ಕೆ ಇನ್ನೂ ಅಂತ್ಯಕ್ರಿಯೆ ನಡೆದಿಲ್ಲ. 1924ರಲ್ಲಿ 53ನೆಯ ವಯಸ್ಸಿನಲ್ಲಿ ನಿಧನರಾದ ಲೆನಿನ್‌ರ ಮೃತದೇಹವನ್ನು ಶವಸಂಸ್ಕಾರ ಮಾಡದೆ ಮಾಸ್ಕೊದ ರೆಡ್ ಸ್ಕೇರ್‌ನ ಸಮಾಧಿಯಲ್ಲಿ ಕಳೆದ 88 ವರ್ಷಗಳಿಂದ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ.

ಪುತಿನ್ ಸರಕಾರದಲ್ಲಿ ನೂತನ ಸಾಂಸ್ಕೃತಿಕ ಸಚಿವರಾಗಿರುವ ವ್ಲಾಡಿಮಿರ್ ಮೆಡಿಂಸ್ಕಿ ಲೆನಿನ್ ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಲೆನಿನ್ ಶವ ಸಂಸ್ಕಾರಕ್ಕೆ ತಯಾರಿ ನಡೆಯುತ್ತಿದ್ದು ಪೂರ್ಣ ಪ್ರಮಾಣದ ಸರಕಾರಿ ಮರ್ಯಾದೆಗಳೊಂದಿಗೆ ಅಂತ್ಯಕ್ರಿಯೆ ನಡೆಯಬೇಕು ಎಂದು ಹೇಳಿದ್ದಾರೆ. ಲೆನಿನ್ ಅಪೇಕ್ಷೆಯಂತೆಯೇ ಸಾಮಾನ್ಯ ಸಮಾಧಿಯಲ್ಲಿ ಶವ ಸಂಸ್ಕಾರ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

'ಈ ಕಾಲಕ್ಕೆ ಅನುಗುಣವಾಗಿ ಸ್ವಲ್ಪ ಮಟ್ಟಿನ ಬದಲಾವಣೆಯಾಗಬಹುದು. ಸಂಭಾವ್ಯ ಟೀಕೆಗಳನ್ನು ತಪ್ಪಿಸಲು ಎಚ್ಚರಿಕೆಯಿಂದ ಅಂತ್ಯಕ್ರಿಯೆ ನಡೆಸಲಾಗುವುದು. ಲೆನಿನ್ ಸಮಾಧಿ ಸೋವಿಯತ್‌ನ ಪಾರಂಪರಿಕ ತಾಣವಾಗಲಿದೆ ಎಂದು ಹೇಳಿದ್ದಾರೆ. ಕ್ರೆಮ್ಲಿನ್‌ನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಲೆನಿನ್ ತಾಯಿ ಸಮಾಧಿ ಬಳಿಯೇ ಲೆನಿನ್ ಸಮಾಧಿಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

Tuesday 5 June 2012

ಹೂ ಜೊತೆಗೆ ನಾರು...

ಕೃಪೆ:-ಗಿರೀಶ್ ಕೆ ಅವರ ಬಯಲಬಿತ್ತಿ ಬ್ಲಾಗ್


ಅಮೀರ್ ಖಾನ್ನ ಸತ್ಯಮೇವ ಜಯತೇ' ಕಾರ್ಯಕ್ರಮ ಜಡ್ಡುಗಟ್ಟಿರುವ ಭಾರತದ ಮಧ್ಯಮ ವರ್ಗದ ಮನಸ್ಸುಗಳನ್ನು ಅಲ್ಲಾಡಿಸಲು ಶುರು ಮಾಡಿದೆ. ಜೊತೆಗೇ ಕಳೆದುಹೋಗಿರುವ ಟಿವಿ ಚಾನೆಲ್ಗಳ ಬದ್ಧತೆಯನ್ನೂ ಹುಡುಕಿ ತಂದು ಕನ್ನಡಿಯಂತೆ ಮುಖಕ್ಕೆ ಹಿಡಿಯುತ್ತಿದೆ.

ಇಂಥಾ ಹೊತ್ತಲ್ಲೇ ಅಮೀರ್ ಖಾನ್ ಜೊತೆಗೆ ಕಾರ್ಯಕ್ರಮದ ಸಾಚಾತನವನ್ನೇ ಸಿನಿಕತನದಿಂದ ಹೀಗೆಳೆಯುವ ಪ್ರಯತ್ನಗಳೂ ಶುರುವಾಗಿವೆ. ಡಬ್ಬಿಂಗ್ ಇಲ್ಲದೆ ಕನರ್ಾಟಕದಲ್ಲೂ ಆಪಾರವಾಗಿ ನೋಡುಗರನ್ನು ಸೃಷ್ಟಿಸಿಕೊಂಡಿರುವ ಕಾರ್ಯಕ್ರಮವನ್ನು ಹೊಟ್ಟೆಕಿಚ್ಚಿನ ಕಾರಣಕ್ಕೆ ವಿರೋಧಿಸುವ ಗೊಡ್ಡುಗಳೂ ಹುಟ್ಟುಕೊಂಡಿದ್ದಾರೆ. ಅಲ್ಲದೆ ಅಮೀರ್ ಖಾನ್ನ ವಾಣಿಜ್ಯ ಉದ್ದೇಶ ಹಾಗೂ ಶೋನ ನಾಟಕೀಯತೆಯನ್ನು ಬೊಟ್ಟು ಮಾಡಿ, ಕಾರ್ಯಕ್ರಮದ ಒಟ್ಟಾರೆ ಪರಿಣಾಮ ಮತ್ತು ಫಲಿತಾಂಶವನ್ನು ಮರೆಮಾಚುವ ಪ್ರಯತ್ನಗಳೂ ಶುರುವಾಗಿವೆ.

ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸೈದ್ಧಾಂತಿಕ ಚರ್ಚೆಯ ಚೌಕಟ್ಟಿನಲ್ಲಿ ನಿರ್ದೇಶಕ ಬಿ.ಸುರೇಶ್ ಮತ್ತು ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಗಂಗಾಧರ್ ಮೊದಲಿಯಾರ್ ಅವರು ಎತ್ತಿರುವ ಪ್ರಶ್ನೆಯನ್ನು ನಿಷ್ಠುರವಾಗಿ ಚರ್ಚಿಸಲೇಬೇಕಿದೆ.

ಇವರಿಬ್ಬರ ವಾದದಲ್ಲೂ ಸಾಮಾನ್ಯವಾಗಿದ್ದ ಸಂಗತಿ ಅಂದರೆ ಕನ್ನಡದಲ್ಲೂ ಕೂಡಾ ಇಂತಹ ಕಾರ್ಯಕ್ರಮ ಈಗಾಗಲೇ ಮಾಳವಿಕಾ ಮತ್ತು ಶಿವರಾಜ್ಕುಮಾರ್ ಅವರು ನಡೆಸಿಕೊಟ್ಟಿದ್ದಾರೆ ಅನ್ನುವುದು ಮೊದಲನೆಯದು.ಸತ್ಯಮೇವ ಜಯತೇ'ಯಲ್ಲೂ ವಾಣಿಜ್ಯ ಉದ್ದೇಶಗಳಿವೆ. ಸಾಮಾಜಿಕ ಕಳಕಳಿ ಕಾಣುವುದಿಲ್ಲ. ಲಾಭಕ್ಕಾಗಿ ವಾಸ್ತವವನ್ನು ನಾಟಕೀಯಗೊಳಿಸಿ ಸಮಸ್ಯೆಯನ್ನು ಪರಿಹಾರ ಇಲ್ಲದೆ ಸರಳೀಕೃತಗೊಳಿಸಲಾಗುತ್ತಿದೆ ಅನ್ನುವುದು ಎರಡನೆಯದು.
ಅಮೀರ್ ಖಾನ್ ಜೊತೆಗೆ ಮಾಳವಿಕಾ ಅವರನ್ನು ಹೋಲಿಸಿರುವುದೇ ಅಸಹ್ಯ. ಏಕೆಂದರೆ ಮಾಳವಿಕಾ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಅವರೊಬ್ಬ ನಿರೂಪಕಿ ಅಷ್ಟೇ. ಕುಟುಂಬದ ಸಮಸ್ಯೆಗೆ ಸಾಮಾಜಿಕವಾಗಿ ಪರಿಹಾರ ಕಂಡುಹಿಡಿಯುವ ಕನಿಷ್ಠ ಪ್ರಯತ್ನವನ್ನೂ ಮಾಡದೆ ನಾಲ್ಕು ಗೋಡೆ ಯೊಳಗಿದ್ದುದನ್ನು ಬೀದಿಗೆ ತಂದು ಹಾದಿರಂಪ ಮಾಡಿದಂತಿತ್ತು ಅವರ ಕಾರ್ಯಕ್ರಮ. ಅದೆಷ್ಟೇ ಹೃದಯ ಹಿಂಡುವ ಸಮಸ್ಯೆ ಇದ್ದರೂ ಮಾಳವಿಕಾ ಅವರ ಗ್ಲಾಮರ್ ಕೊಂಚವೂ ಕಡಿಮೆಯಾಗದಂತೆ ಒಂದೂವರೆ ಕೆಜಿ ರೇಷ್ಮೆ ಸೀರೆ, ಮೇಕಪ್, ಲಿಪ್ಸ್ಟಿಕ್ ಸಮೇತ ಆ ಚಾನೆಲ್ ಅವರನ್ನು ನಿರೂಪಕಿಯಾಗಿ ಪ್ರದರ್ಶಿಸಿತ್ತು. ಇದರ ಆಚೆಗೆ ಕಾರ್ಯಕ್ರಮಕ್ಕೆ ಸಾಮಾಜಿಕ ಪ್ರಸ್ತುತತೆಯೇ ಇರಲಿಲ್ಲ.

ಅಮೀರ್ ಖಾನ್ ಎತ್ತಿಕೊಂಡಿರುವ ಸಮಸ್ಯೆಗಳು ಯಾರಿಗೂ ಗೊತ್ತಿಲ್ಲದ್ದಲ್ಲ. ಹಾಗೆಯೇ ಯಾರು ಬೇಕಾದರೂ ಕಾರ್ಯಕ್ರಮ ಮಾಡಬಹುದಾದದ್ದು. ಆದರೆ ಅದಕ್ಕೆ ಬೇಕಾಗಿರುವ ಇಚ್ಛಾಶಕ್ತಿ, ಅಧ್ಯಯನಶೀಲತೆ, ಕಾಳಜಿ ಮತ್ತು ಪರಿಣಾಮಕಾರಿಯಾಗಿ ಜನರನ್ನು ಮುಟ್ಟಿಸಲು ಬೇಕಾದ ಕಲಾವಂತಿಕೆ. ಇದಿಷ್ಟನ್ನೂ ಅಮೀರ್ ಖಾನ್ ತನ್ನ ತಂಡದ ಸಮೇತ ಜಾರಿಗೊಳಿಸಿದ್ದಾನೆ.
ತನ್ನ ಸ್ಟಾರ್ಗಿರಿಯನ್ನು ಸಾಮಾಜಿಕ ಹೋರಾಟ ವಾಗಿ, ಸಾಮಾಜಿಕ ಚಟುವಟಿಕೆಯಾಗಿ ಪರಿವರ್ತಿಸುತ್ತಿರುವುದು ಅಮೀರ್ ಖಾನ್ನ ಹೆಗ್ಗಳಿಕೆ. ತನ್ನ ಸಿನಿಮಾಗಳಲ್ಲಿ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ನರ್ಮದಾ ಹೋರಾಟ, ಹಜಾರೆ ಉಪವಾಸಗಳಲ್ಲಿ ಪ್ರಚಾರವಿಲ್ಲದೆ ಭಾಗವಹಿಸಿ ಈಗಾಗಲೇ ತನ್ನನ್ನು ಸಾಬೀತುಗೊಳಿಸಿಕೊಂಡಿರುವ ಸ್ಟಾರ್, ಅಮೀರ್.ಸತ್ಯಮೇವ ಜಯತೇ' ಹೇಳುತ್ತಿರುವ ಸತ್ಯವನ್ನೇ ಪತ್ರಕರ್ತ ಪಿ.ಸಾಯಿನಾಥ್, ಅರುಂಧತಿ ರಾಯ್ ಅವರೂ ಹಲವು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಆದರೆ ಅವರ ಮಾತು ಮತ್ತು ಮಾಧ್ಯಮ ಎಷ್ಟು ಜನರಿಗೆ ತಲುಪಿದೆ? ಹಾಗಂದ ಮಾತ್ರಕ್ಕೆ ಅವರು ಸಂವೇದನಾ ಶೀಲರಲ್ಲ, ಕಾಳಜಿಯುಳ್ಳವರಲ್ಲ ಎಂದು ಹೇಳಲಾಗುತ್ತದೆಯೇ?

ಅಮೀರ್ನ ಶ್ರೀಮಂತಿಕೆ ಇರುವುದು ಇಲ್ಲೇ. ಸತ್ಯವನ್ನು ತಲುಪಿಸಬೇಕಾಗಿ ರುವ ಜನಕ್ಕೆ ತಲುಪಿಸಬೇಕಾದ ರೀತಿಯಲ್ಲಿ ತಲುಪಿಸಿರುವ ಕಾರಣಕ್ಕೇ ಕಾರ್ಯಕ್ರಮ ಸಾರ್ಥಕತೆ ಕಂಡು ಕೊಂಡಿರುವುದು. ಅಮೀರ್ ಖಾನ್ ಸಾಯಿನಾಥ್, ಅರುಂಧತಿ ರಾಯ್ ರಷ್ಟು ಅಣ್ಣಾ ಹಜಾರೆ ಪ್ರಬುದ್ಧರಲ್ಲ. ಬುದ್ಧಿವಂತರೂ ಅಲ್ಲ. ಆದರೆ ಅತ್ಯಂತ ಸರಳವಾಗಿ ಬದುಕಿರುವ ಒಳ್ಳೆಯ ಮನುಷ್ಯ. ಹೆಚ್ಚಿನ ಮಾತಿಲ್ಲದೆ ಮೌನದಲ್ಲೇ ದೇಶವನ್ನು ಅಲ್ಲಾಡಿಸಿ ಬಿಡಲಿಲ್ಲವೇ?

ಇದರ ಅರ್ಥ ಇಷ್ಟೇ. ಜನಸಾಮಾನ್ಯರಿಗೆ ಒಣ ಸಿದ್ಧಾಂತ, ಪಾಂಡಿತ್ಯದ ಪ್ರಹಾರ ಬೇಕಿಲ್ಲ. ಅತೀ ಸರಳವಾಗಿ ಅವರ ಹೃದಯ ಮುಟ್ಟುವಂತೆ ಅವರನ್ನು ಕಾಡುತ್ತಿರುವ ನೋವನ್ನು, ಅದರ ಹಿಂದಿರುವ ಹುನ್ನಾರವನ್ನು ತೆರೆದು ತೋರಿಸಬೇಕಷ್ಟೇ. ತೋರಿಸುವುದರ ಜೊತೆಗೆ ತೋರಿಸುವವರ ಯೋಗ್ಯತೆ ಕೂಡಾ ಮುಖ್ಯವಾಗುತ್ತದೆ. ಇದೇ ಸತ್ಯಮೇವ ಜಯತೇ'ಯನ್ನು ಸಲ್ಮಾನ್ ನಡೆಸಿಕೊಟ್ಟಿದ್ದರೆ ಅದರ ಸಾಂದ್ರತೆ ಎಷ್ಟು ಕೆಳಮಟ್ಟದಲ್ಲಿ ಇರುತ್ತಿತ್ತು?
ಇದೇ ಅಮೀರ್ನ ಶಕ್ತಿ ಮತ್ತು ತಾಕತ್ತು.
ಹೀಗಿರುವಾಗ ಮಾಳವಿಕಾರನ್ನು ಅಮೀರ್ ಮಟ್ಟಕ್ಕೆ ಹೋಲಿಸುವುದು ಅತ್ಯಂತ ಅಸಭ್ಯ. ನವಿರಾಗಿ ಹೇಳಬಹುದಾದರೆ ಹೂ'ವಿನ ಜೊತೆಗೆ ನಾರೂ ಕೂಡಾ ಸ್ವರ್ಗ ಸೇರಿದಂತೆ!ಇನ್ನು ಕಾರ್ಯಕ್ರಮದ ವಾಣಿಜ್ಯ ಉದ್ದೇಶ ಹಾಗೂ ಅಮೀರ್ನ ಲಾಭ'ದ ಗುರಿಯನ್ನು ಪ್ರಶ್ನಿಸಲಾಗಿದೆ. ಕಾರ್ಯಕ್ರಮದ ಪ್ರಾಯೋಜಕರಾದ ಕಂಪನಿ ಯವರನ್ನು ಮುಂದಿಟ್ಟು ಅಮೀರ್ನ ಸಾಚಾತನವನ್ನು ಪ್ರಶ್ನಿಸಲಾಗಿದೆ.
ಗಾಂಧಿಯನ್ನು ಬಡವನ ರೀತಿ ಕಾಣಿಸಲು ಬಿರ್ಲಾ ತಿಂಗಳಿಗೆ 500 ಡಾಲರ್ ಖಚರ್ು ಮಾಡುತ್ತಿದ್ದರು ಎಂದು ಸರೋಜಿನಿ ನಾಯ್ಡು ಅವರು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.ಇಲ್ಲಿ ಗಾಂಧಿ ಸುಳ್ಳಾ? ಸರೋಜಿನಿ ನಾಯ್ಡು ಸುಳ್ಳಾ?
ಎರಡೂ ಸತ್ಯವೇ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಬಿರ್ಲಾರ ಷಾಮಿಯಾನವನ್ನು ಗಾಂಧಿ ಆಶ್ರಯಿಸಿದ್ದರು. ಅಷ್ಟೇ ಏಕೆ ಬ್ರಿಟಿಷರೇ ತಂದ ಪ್ರಿಂಟಿಂಗ್ ಪ್ರೆಸ್ಗಳಲ್ಲೇ ಅಲ್ಲವೇ ಭಗತ್ ಸಿಂಗ್ನ ಕರಪತ್ರಗಳು ಮುದ್ರಿತ ವಾಗಿದ್ದು?ಹೀಗೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಣ್ಣ-ಪುಟ್ಟ ರಾಜಿಗಳ ಜೊತೆಗೇ ನಮ್ಮ ಕಾಳಜಿಗಳನ್ನು ಜಾರಿಗೊಳಿಸಬೇಕಾದ್ದು ಅನಿವಾರ್ಯ.ಹಾಗಂತ ಅಂಬಾನಿ ಅವರದ್ದೇ ಡ್ರಗ್ಸ್ ಕಂಪನಿ ಇದೆ. ಅವರದ್ದೇ ಆಸ್ಪತ್ರೆಯಲ್ಲಿ ವೈದ್ಯರ ತಂಡವೇ ಇದೆ.ಸತ್ಯಮೇವ ಜಯತೇ'ಯಲ್ಲಿ ಅಂಬಾನಿ ಆಸ್ಪತ್ರೆಯ ಯಾವ ವೈದ್ಯರೂ ಮೂತಿ ತೂರಿಸಿಲ್ಲ. ಇಡೀ ಮಹಾರಾಷ್ಟ್ರದಲ್ಲಿ ದೇವರ ಮಗ' ಎಂದು ಆರಾಧಿಸಲ್ಪಡುವ ಡಾ.ರವಿ ಬಾಪಟ್ರವರನ್ನು ತೋರಿಸಲಾಯಿತು. ಇವರ ಇಡೀ ಕುಟುಂಬ ಖಾಸಗೀ ವೈದ್ಯಕೀಯ ಕ್ಷೇತ್ರದ ಕುತಂತ್ರ, ಲಾಭಕೋರತನ, ಮೋಸ, ವಂಚನೆ ವಿರುದ್ಧ ಹೋರಾಡುತ್ತಲೇ ಬಂದಿದೆ. ಇವರು ಬರೆದಿರುವ ವಾರ್ಡ್ ನಂ.5 ಏಇಒ' ಹಾಗೂ ಪೋಸ್ಟ್ ಮಾರ್ಟಂ ಅನ್ನುವ ಎರಡು ಕಾದಂಬರಿಗಳು ವೈದ್ಯಲೋಕದ ನರಹಂತಕತನವನ್ನು ಬಿಚ್ಚಿಡುತ್ತವೆ.

ಭಾರತದ ಮಾಧ್ಯಮ ಜಗತ್ತಿನಲ್ಲಿ ಡ್ರಗ್ಸ್ ಮತ್ತು ವೈದ್ಯಲೋಕದ ಮಾಫಿಯಾಗಳ ವಿರುದ್ಧ ತನಿಖಾ ವರದಿಗಳು ಆಗ ಬೇಕಾದಷ್ಟು ಪ್ರಮಾಣದಲ್ಲಿ ಆಗಿಲ್ಲ. ಅದರಲ್ಲೂ ವಿದೇಶಿ ಕಂಪನಿಗಳ ಕ್ರೈಂ ಮತ್ತು ಮಾಫಿಯಾವನ್ನು ಬಿಚ್ಚಿಟ್ಟಿರು ವುದು ಕೂಡಾ ಕಡಿಮೆಯೇ.
ಇಂಥಾ ಹೊತ್ತಲ್ಲಿ ಎಲ್ಲಾ ಮಾಫಿಯಾಗಳಿಂದಲೂ ಟಾಗರ್ೆಟ್ ಆಗಿಸಿಕೊಳ್ಳುವ ಅಪಾಯವನ್ನು ಲೆಕ್ಕಿಸದೆ ಅಮೀರ್ ನಿಷ್ಠುರ ಸತ್ಯಗಳನ್ನು ಮಧ್ಯಮ ವರ್ಗದ ಜಡ್ಡುತನಕ್ಕೆ ಚಾಟಿ ಬೀಸುವ ರೀತಿಯಲ್ಲಿ ಬಿಚ್ಚಿಡುತ್ತಿದ್ದಾರೆ.
ನಾವು ಸಿನಿಕತನ ಬಿಡದಿದ್ದರೆ ಹೇಗೆ?