Tuesday 29 May 2012

ಆರೋಗ್ಯ ಕ್ಷೇತ್ರದ ಅನಾರೋಗ್ಯಕ್ಕೆ ಮದ್ದೇನು?



ಅಮೀರ್ ಖಾನ್ ಅಂಕಣ ಬರಹ

 ನಾನೊಂಥರಾ ಕನಸುಗಾರ. ನಾವೆಲ್ಲರೂ ಸಹ ಬಡವರು, ಶ್ರೀಮಂತರೆಂಬ ಭೇಧವಿಲ್ಲದೆ ಎಲ್ಲರೂ ಒಂದೇ ಬಗೆಯ ಆರೋಗ್ಯ ಸೌಲಭ್ಯಗಳನ್ನು ಪಡೆಯುವಂತಹ ದಿನ ನಮ್ಮ ದೇಶದಲ್ಲಿ ಬರುತ್ತದೆ ಎನ್ನುವುದು ನನ್ನ ಕನಸು. ಅನೇಕರಿಗೆ ಇದೊಂದು ಬಗೆಯಲ್ಲಿ ಅವಾಸ್ತವವಾದ ಹಾಗೂ ಅಸಾಧ್ಯವಾದಂತಹ ಹುಚ್ಚುಕನಸು ಎನ್ನಿಸಬಹದು. ಆದರೆ ಇದು ಖಂಡಿತವಾಗಿಯೂ ಕಾಣಬೇಕಾದಂತಹ ಕನಸು ಹಾಗೂ ಇಂತಹ ಕನಸೊಂದು ನನಸಾಗಲೇಬೇಕೆನ್ನಲು ಕಾರಣಗಳಿವೆ ಎನ್ನುವುದು ನನ್ನ ನಂಬುಗೆ.
ನೀವು ಬಡವರಿರಲಿ, ಶ್ರೀಮಂತರಿರಲಿ, ನಿಮ್ಮ ಪ್ರೀತಿಪಾತ್ರೊಬ್ಬರನ್ನು ಕಳೆದುಕೊಂಡಾಗ ಉಂಟಾಗುವ ದು:ಖ ದುಮ್ಮಾನಗಳಿಗೆ ಭಿನ್ನಭೇಧವಿರುವುದಿಲ್ಲ. ನನ್ನ ಮಗು ವಾಸಿಯಾಗದ ಖಾಯಿಲೆಗೆ  ತುತ್ತಾಗಿ ನರಳಿ ನರಳಿ ತೀರಿಕೊಳ್ಳುವಾಗ, ಆಗ ನನಗೇನೂ ಮಾಡಲು ಸಾಧ್ಯವಾಗದಿರುವಾಗ ನಿಜಕ್ಕೂ ದು:ಖವಾಗುತ್ತದೆ. ಆದರೆ ಆ ಮಗುವಿನ ಖಾಯಿಲೆಯನ್ನು ಗುಣಪಡಿಸಬಹದಾದ ಔಷಧವೊಂದಿದೆ ಎಂದು ತಿಳಿದೂ ನನಗೆ ಆ ಔಷಧಿಯನ್ನು ಕೊಳ್ಳಲಾಗದಿರುವ ಕಾರಣಕ್ಕೆ ನನ್ನ ಮಗುವು ನರಳಿ ಸಾಯುತ್ತದೆ ಎಂದಾದಾಗ, ಅದನ್ನು ನಾನು ನೋಡಿ ಸುಮ್ಮನಿರಬೇಕಾಗಿ ಬಂದಾಗ - ಅಂತಹ ಒಂದು ಸ್ಥಿತಿ ನಿಜಕ್ಕೂ ದುರಂತಮಯ.
ಒಂದು ಒಳ್ಳೆಯ ಆರೋಗ್ಯ ಆರೈಕೆ ವ್ಯವಸ್ಥೆಯೊಂದು ನಮ್ಮಲ್ಲಿಲ್ಲದಿರುವಂತೆ ಮಾಡಿರುವ ಕಾರಣವಾದರೂ ಏನು?
ನಾವು ಅಸಂಖ್ಯ ಜನರು ತೆರಿಗೆ ಕಟ್ಟುತ್ತೇವೆ. ಕೆಲವರು ಕಟ್ಟುವುದಿಲ್ಲ. ಹಾಗೆಯೇ ಬಹುತೇಕ ಜನರಿಗೆ ಪ್ರತ್ಯಕ್ಷ ತೆರಿಗೆ ಕಟ್ಟುವಷ್ಟು ಆದಾಯವೇ ಇರುವುದಿಲ್ಲ. ಆದರೆ,  ಪ್ರತಿ ರಾಜ್ಯವೂ ವಿವಿಧ ಬಗೆಯಲ್ಲಿ ಪರೋಕ್ಷ ತೆರಿಗೆಯನ್ನು ಸಂಗ್ರಹಿಸುತ್ತದೆ. ಅದು ಸಣ್ಣಮೊತ್ತವಿರಲಿ, ದೊಡ್ಡಮೊತ್ತವಿರಲಿ, ಪ್ರತಿ ಸಲ ನಾವೇನಾದರೂ ಕೊಂಡುಕೊಳ್ಳುವಾಗಲೂ ಒಂದಲ್ಲಾ ಒಂದು ಬಗೆಯ ತೆರಿಗೆಯನ್ನು ಕಟ್ಟುತ್ತಲೇ ಇರುತ್ತೇವೆ. ಅಂದರೆ, ಅದರರ್ಥ ಅಗ್ದಿ ಬಡವರೂ ಸಹ ತೆರಿಗೆ ನೀಡುತ್ತಿರುತ್ತಾರಲ್ಲದೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಾಗಿ ಅವರ ಪಾಲೂ ಸಂದಾಯವಾಗುತ್ತಿರುತ್ತದೆ. ಆದರೆ ಅದಕ್ಕೆ ತಕ್ಕಂತೆ ಅವರಿಗೆ ಪ್ರತಿಫಲವೆಂಬುದು ದಕ್ಕುವುದಿಲ್ಲ ಅಷ್ಟೆ. ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇಕಡಾ ೧.೪ ರಷ್ಟನ್ನು ಮಾತ್ರ ಈ ದೇಶದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತದೆ.
ಯಾಕೆ ಹೀಗೆ?
ಈ ಕ್ಷೇತ್ರದಲ್ಲಿ ಪರಿಣಿತರಾದವರು ಹೇಳುವ ಪ್ರಕಾರ ನಮ್ಮ ದೇಶದಲ್ಲಿ ಮೂಲಭೂತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆಗೆಂದೇ ಕನಿಷ್ಠ ಶೇಕಡ ೬ ರಷ್ಟನ್ನಾದರೂ ಮೀಸಲಿಡಬೇಕು. ನಾನು ಅರ್ಥಶಾಸ್ತ್ರಜ್ಞನೂ ಅಲ್ಲ ವೈದ್ಯನೂ ಅಲ್ಲ. ಆದರೂ ಸ್ವಲ್ಪ ಸೇಫರ್ ಸೈಡ್‌ನಲ್ಲಿದ್ದುಕೊಂಡೇ ಮಾತನಾಡುವುದಾದರೆ ನನ್ನ ಪ್ರಕಾರ ಇದು ಶೇಕಡ ೮ ರಿಂದ ೧೦ ರಷ್ಟಂತೂ ಇರಬೇಕು.
ಒಂದು ಸಮಾಜದ ಆರೋಗ್ಯವೇ ಸರಿಯಿಲ್ಲ ಅಂದ ಮೇಲೆ ಅಲ್ಲಿ ಸಾಧಿಸುವ ಭಾರೀ ಜಿಡಿಪಿ ಕಟ್ಟಿಕೊಂಡು  ಆಗಬೇಕಾಗಿದ್ದಾದರೂ ಏನು ಹೇಳೀ? ನಾವು ಆರೋಗ್ಯವಾಗಿದ್ದು, ನಾವು ಸಾಧಿಸುವ ಆರ್ಥಿಕ ಸಾಮರ್ಥ್ಯವನ್ನು ಅನುಭವಿಸಲು ನಮಗೆ ಶಕ್ಯವಿದ್ದಾಗ ಮಾತ್ರವೇ ಆರ್ಥಿಕ ಸಾಮರ್ಥ್ಯ ಬರಲು ಸಾಧ್ಯ ಎಂಭುದನ್ನು ನಾವು ಅರಿಯಬೇಕು.
ಮುಖ್ಯವಾಗಿ, ಆರೋಗ್ಯ ಕೂಡಾ ರಾಜ್ಯವೊಂದರ ವಿಷಯ. ನಮ್ಮ ಹಣದಲ್ಲಿ ಹೆಚ್ಚೆಚ್ಚು ಪ್ರಮಾಣ ಸಾರ್ವಜನಿಕ ಆಸ್ಪತ್ರೆಗಳನ್ನು ಸ್ಥಾಪಿಸುವುದಕ್ಕೆ, ಮುಖ್ಯವಾಗಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಯಾಕೆ ಬಳಕೆಯಾಗುತ್ತಿಲ್ಲ? ಸಾರ್ವತ್ರಿಕ ಆಸ್ಪತ್ರೆಗಳಿಗೆ ಹೊಂದಿಕೊಂಡಂತೆ ಇಲ್ಲಿ ಯಾಕೆ ಹೆಚ್ಚು ಪ್ರಮಾಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲ?

ಹುಮ್ಮಸ್ಸಿನ ಯುವಕರರನ್ನು ಹೊಂದಿರುವ ನಮ್ಮ ದೇಶದಲ್ಲಿ ಹೆಚ್ಚೆಚ್ಚು ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕಾಗಿರುವುದು ಈ ಕ್ಷಣದ ತುರ್ತು. ಆದರೆ ಕೇಂದ್ರದಲ್ಲಿರುವ ಮತ್ತು ಎಲ್ಲಾ ರಾಜ್ಯಗಳಲ್ಲಿರುವ ಸರ್ಕಾರಗಳು ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಬಗ್ಗೆ ಯಾವ ಉತ್ಸಾಹವನ್ನೂ ಹೊಂದಿಲ್ಲ. ಹೀಗಾಗಿ ವೈದ್ಯರಾಗಬೇಕೆಂದು ಬಯಸುವ ತರುಣರ ಅಗತ್ಯತೆಗಳನ್ನು ಪೂರೈಸುತ್ತಿರುವವರು ಬೇರಾರೂ ಅಲ್ಲ. ನೀವು ಸರಿಯಾಗಿ ಊಹಿಸಿದಂತೆಯೇ ಖಾಸಗಿ ವೈದ್ಯಕೀಯ ಕಾಲೇಜುಗಳು. ಅಲ್ಲಿ ತಲಾ ವಿದ್ಯಾರ್ಥಿಗೆ ೫೦ ರಿಂದ ೬೦ ಲಕ್ಷ ರೂಪಾಯಿಗಳಷ್ಟು ಹಣವನ್ನು ಅನಧಿಕೃತವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ನಾನು ಕೇಳಿದ್ದೇನೆ.
ಹೆಚ್ಚಿನ ಪ್ರಕರಣಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಒಂದು ಉದ್ದಿಮೆ ಎಂದು ಪರಿಗಣಿಸಿ ಬೆಳೆಸಲಾಗುತ್ತದೆ. ಅದರಲ್ಲಿ ಬಹಳಷ್ಟಕ್ಕೆ ಕಾರ್ಯನಿರತ ಆಸ್ಪತ್ರೆಗಳೊಂದಿಗೆ ಸಂಬಂಧವೇ ಇರುವುದಿಲ್ಲ. ಆದರೆ ವೈದ್ಯಕೀಯ ಕಾಲೇಜುಗಳಿಗೆ ಇದು  ಬಹಳ ಮುಖ್ಯವಾಗಿ ಇರಬೇಕಾಗಿರುತ್ತದೆ. ಇಂತಹ ಖಾಸಗಿ ಕಾಲೇಜುಗಳಿಂದ ಹೊರ ಬರುವ ವೈದ್ಯರು ಎಷ್ಟರ ಮಟ್ಟಿಗೆ ಸ್ಪರ್ಧಾಸಮರ್ಥರಾಗಿರಬಲ್ಲರು ಎಂಬ ಕುರಿತು ನನಗೆ ಆಗಾಗ ಪ್ರಶ್ನೆಯುಂಟಾಗುತ್ತದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಿರುವ ಹೆಚ್ಚೆಚ್ಚು ಸಾರ್ವಜನಿಕ ಆಸ್ಪತ್ರೆಗಳನ್ನು ತೆರೆಯಬೇಕಿದೆ ಎಂಬುದನ್ನು ನಾವೀಗ ದೃಢವಾಗಿ ಹೇಳುವ ಅಗತ್ಯವಿದೆ.
ಖಾಸಗಿ ಆಸ್ಪತ್ರೆಗಳನ್ನೂ ಸ್ವಾಗತಿಸೋಣ. ಆದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುರಿತು ಗಮನ ಕೇಂದ್ರೀಕರಿಸೋಣ ಹಾಗೂ ಖಾಸಗಿ ಆಸ್ಪತ್ರೆಗಳು ಅವುಗಳೊಂದಿಗೆ ಸ್ಪರ್ಧಿಸಲು ಹೆಣಗಾಡುವಂತೆ ಮಾಡೋಣ. ಆಗ ಸಮಾಜಕ್ಕೆ ಉತ್ತಮ ಗುಣಮಟ್ಟದ ಸೇವೆಗಳು ಲಭ್ಯವಾಗುತ್ತವೆ.
ಒಬ್ಬ ಎಂಬಿಬಿಎಸ್ ಪರೀಕ್ಷೆ ಬರೆಯಲು ಕುಳಿತ ವಿದ್ಯಾರ್ಥಿ/ ವಿದ್ಯಾರ್ಥಿನಿಗೆ ಮಧುಮೇಹಕ್ಕೆ ನೀಡಬೇಕಾದ ಔಷಧಿ ಯಾವುದು ಎಂಬ  ಪ್ರಶ್ನೆ ಕೇಳಿದರೆ ಆತ/ ಆಕೆ ’ಗ್ಲಿಮೆಪಿರೈಡ್’ ಎಂದು ಉತ್ತರ ನೀಡಬಹುದು. ಮಧುಮೇಹಕ್ಕೆ ಚಿಕಿತ್ಸೆ ನೀಡುವ ಲವಣ ಇದು. ಆದರೆ ಅದೇ ವಿದ್ಯಾರ್ಥಿ ವೈದ್ಯನಾದ/ಳಾದ ಮೇಲೆ ಮಧುಮೇಹಿ ರೋಗಿಯೊಬ್ಬ ಆತನ/ಆಕೆಯ ಬಳಿ ಹೋದಾಗ ಬರೆದುಕೊಡುವ ಔಷಧಿ ’ಅಮಾರಿಲ್’ ಎಂದು. ಹಾಗಾದರೆ, ಆ ಯುವ ವೈದ್ಯ/ ವೈದ್ಯೆ ತಪ್ಪಾದ ಔಷಧಿ ಬರೆದುಕೊಟ್ಟರಾ? ಇಲ್ಲ. ’ಗ್ಲಿಮೆಪಿರೈಡ್’ ಲವಣವನ್ನು ಮಾರುವ ಹಲವು ಬ್ರಾಂಡ್‌ಗಳಲ್ಲಿ ಅಮಾರಿಲ್ ಕೂಡ ಒಂದು. ಹೀಗಾದಾಗ ಇವೆರಡರ ನಡುವಿನ ವ್ಯತ್ಯಾಸವಾದರೂ ಏನು? ಇಲ್ಲಿ ನೋಡಿ, ಅಮಾರಿಲ್‌ನ ೧೦ ಮಾತ್ರೆಗಳಿರುವ ಒಂದು ಪಟ್ಟಿಗೆ ಸುಮಾರು ೧೨೫ ರೂಪಾಯಿ. ಅದೇ ’ಗ್ಲಿಮೆಪಿರೈಡ್’ ಲವಣದ ಹತ್ತು ಮಾತ್ರೆಗಳ ಪಟ್ಟಿಗೆ ಕೇವಲ ೨ ರೂಪಾಯಿ. ಎರಡೂ ಸಾರದಲ್ಲಿ ಒಂದೇ. ಆದರೆ ಕೇವಲ ಬ್ರಾಂಡ್ ಹೆಸರಿಗೇ ನಾವು ೧೨೩ ರೂಪಾಯಿಗಳ ಅಧಿಕ ಹಣವನ್ನು ತೆರಬೇಕಾಗಿದೆ.
 ಅಂಥವೇ ಮತ್ತೊಂದಷ್ಟು ಉದಾಹರಣೆಗಳು ಇಲ್ಲಿವೆ.
ಶೀತ ನೆಗಡಿ ಸರ್ವಸಾಮಾನ್ಯ ಖಾಯಿಲೆ. ಇದಕ್ಕೆ ನೀಡಲಾಗುವ ಲವಣದ ಹೆಸರು ಸಿಟ್ರಿಜೈನ್ ಅಂತ. ಈ ಜನರಿಕ್ ಔಷಧಿಯ ತಯಾರಿ, ಪ್ಯಾಕೇಜಿಂಗ್, ಸಾಗಾಣಿಕೆ, ಮತ್ತು ಒಂದಷ್ಟು ಮಾರ್ಜಿನ್ ಕೂಡಾ ಸೇರಿ ಹತ್ತು ಮಾತ್ರೆಗಳಿಗೆ ೧ ರೂಪಾಯಿ ೨೦ ಪೈಸೆ ತಗುತ್ತದೆ. ಆದರೆ ಇದನ್ನೇ ನಾವು ಸೆಟ್‌ಜೈನ್‌ನಂತಹ ಬ್ರಾಂಡ್ ಹೆಸರಲ್ಲಿ ಕೊಂಡಾಗ ಹತ್ತು ಗುಳಿಗೆಗಳಿಗೆ ೩೫ ರೂಪಾಯಿ ನೀಡುತ್ತೇವೆ.

ಹೃದಯಾಘಾತವುಂಟುವ ಬ್ಲಾಕೇಜ್‌ಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸುವ ಇಂಜೆಕ್ಷನ್ ಹೆಸರು ಸ್ಟೆಪ್ಟೋಕಿನೇಸ್ ಅಥವಾ ’ಯುರೋಕಿನೇಸ್’. ಇವಕ್ಕೆ ತಲಾ ೧೦೦೦ ರೂಪಾಯಿ ವೆಚ್ಚವಾಗುತ್ತದೆ. ಆದರೆ ಅವುಗಳ ಬ್ರಾಂಡ್ ಹೆಸರುಗಳಿಗೆ ನಾವು ಔಷಧಿ ಅಂಗಡಿಗಳಲ್ಲಿ ತಲಾ ೫೦೦೦ ರೂಪಾಯಿ ನೀಡಬೇಕು.
ಭಾರತದಲ್ಲಿ ಮಲೇರಿಯಾ ಬಹಳ ಜನರನ್ನು ಅದರಲ್ಲೂ ಮಕ್ಕಳನ್ನು ಕೊಲ್ಲುತ್ತದೆ. ಈ ಮಲೇರಿಯಾ ಪ್ರತಿಬಂಧಕ ಚಿಕಿತ್ಸೆಗೆ ಉಪಯೋಗಿಸುವ ಮೂರು ಇಂಜೆಕ್ಷನ್‌ಗಳ ಒಂದು ಪ್ಯಾಕ್‌ಗೆ ೨೫ ರೂಪಾಯಿ ತಗುಲುತ್ತದೆ. ಆದರೆ ಬ್ರಾಂಡ್ ಹೆಸರುಗಳು ೩೦೦ ರೂಪಾಯಿಯಿಂದ ೪೦೦ ರೂಪಾಯಿಗಳನ್ನು ಸುಲಿಯುತ್ತವೆ.
ಅತಿಸಾರ ಕೂಡಾ ಭಾರತದ ಬಹಳಷ್ಟು ಮಕ್ಕಳನ್ನು ಬಲಿತೆಗೆದುಕೊಳ್ಳುತ್ತದೆ. ದೇಹದ ನೀರಿನಂಶವನ್ನು ಕಡಿಮೆ ಮಾಡುವ ವಾಂತಿಯನ್ನು ನಿಯಂತ್ರಿಸಲು ಡಾಂಪೆರಿಡೋನ್ ಎಂಬ ಲವಣವನ್ನು ಉಪಯೋಗಿಸಲಾಗುತ್ತದೆ. ಅದರ ಬೆಲೆ ಹತ್ತು ಮಾತ್ರೆಗಳಿಗೆ ೧.೨೦ ರೂಪಾಯಿ. ಡಾಮ್‌ಸ್ಟಾಲ್ ಎಂಬ ಅದರ ಬ್ರಾಂಡ್ ಹೆಸರಿಗೆ ೩೩ ರೂಪಾಯಿ
ನಮ್ಮ ಬಡಜನತೆ, ಅಥವಾ ಮಧ್ಯಮವರ್ಗದಳು ಚಿಕಿತ್ಸೆ ಪಡೆಯಲು ಹೇಗೆ ಸಾಧ್ಯ?
ಇದಕ್ಕಿರುವ ಒಂದೇ ಉತ್ತರ ಜನೆರಿಕ್ ಔಷಧಗಳು
ಈ ವಿಚಾರದಲ್ಲಿ ನಾವು ರಾಜಾಸ್ತಾನ ಸರ್ಕಾರದ ಪ್ರಯತ್ನಗಳನ್ನು ಮೆಚ್ಚಿಕೊಳ್ಳಬೇಕು. ಅಲ್ಲಿ ಸರ್ಕಾರವೇ ಜನೆರಿಕ್ ಔಷಧಿಗಳನ್ನು ಮಾರುವ ಅಂಗಡಿಗಳನ್ನು ರಾಜ್ಯದಾದ್ಯಂತ ಸ್ಥಾಪಿಸಿದೆ. ಜನತೆಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ಔಷಧಿ ಚಿಕಿತ್ಸೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಇದು.
ಔಷಧಿಗಳ ದುಬಾರಿ ಬೆಲೆಯನ್ನು ಭರಿಸಲಾಗದೆ ಭಾರತದಲ್ಲಿ ಶೇಕಡ ೨೫ರಷ್ಟು ಖಾಯಿಲೆಗಳಿಗೆ ಚಿಕಿತ್ಸೆಯೇ ದೊರೆಯುವುದಿಲ್ಲ. ಪ್ರತಿ ಭಾರತೀಯನಿಗೆ ಈ ಜನೆರಿಕ್ ಔಷಧಗಳು ಮಾಡಬಹುದಾದ ಸಹಾಯವನ್ನು ಯೋಚಿಸಿ. ಇಂತಹ ಒಂದು ಕೆಲಸವನ್ನು ರಾಜಸ್ತಾನ ಸರ್ಕಾರ ಮಾಡುತ್ತಿದೆಯೆಂದಾದರೆ ಉಳಿದ ಸರ್ಕಾರಗಳು ಮಾಡಲಿಕ್ಕೆ ಏನಡ್ಡಿ?
ಒಂದು ಕುತೂಹಲಕಾರಿ ಮಾಹಿತಿ: ರಾಸಾಯನಿಕಗಳು ಹಾಗೂ ಗೊಬ್ಬರಗಳ ಸಚಿವಾಲಯವು ಯಾರೆಲ್ಲಾ ಜನೆರಿಕ್ ಔಷಧಗಳನ್ನು ಮಾರಲು ಮುಂದೆ ಬರುತ್ತಾರೋ ಅಂತವರಿಗೆ ೫೦,೦೦೦ ರೂಪಾಯಿ ಕೊಡುಗೆ ನೀಡುತ್ತೇವೆಂದು ಘೋಷಿಸಿದೆಯಲ್ಲದೆ ಅಂತಹ ಅಂಗಡಿಗೆ ಜಾಗವನ್ನೂ ನೀಡುತ್ತದೆ.
ಒಳ್ಳೆಯ, ಗುಣಮಟ್ಟದ ಸಾರ್ವಜನಿಕ ಆರೋಗ್ಯ ಆರೈಕೆ ಬಡವಶ್ರೀಮಂತರೆನ್ನದೆ ಎಲ್ಲರಿಗೂ ಒಂದೇ ರೀತಿಯಲ್ಲಿ ಲಭ್ಯವಾಗುತ್ತದೆ ಎಂಬ ನನ್ನ ಕನಸು ನನಸಾಗುವಂತೆ ತೋರುತ್ತದೆ.
ವಿ.ಸೂ. ನಮ್ಮ ವೈದ್ಯರು ಔಷಧಿಗಳನ್ನು ಸೂಚಿಸುವಾಗ ಜನೆರಿಕ್ ಔಷಧಿಗಳ ಹೆಸರನ್ನ ಬರೆದು ಬ್ರಾಂಡ್ ಔಷಧಿಗಳು ಬೇಕೇ ಬೇಡವೇ ಎಂದು ನಾವೇ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಬಲ್ಲರಾ?
ಜೈ ಹಿಂದ್. ಸತ್ಯ ಮೇವ ಜಯತೇ
ಕೃಪೆ: ದ ಹಿಂದೂ ದಿನ ಪತ್ರಿಕೆ
: ಕನ್ನಡಕ್ಕೆ: ಹರ್ಷಕುಮಾರ್ ಕುಗ್ವೆ



Sunday 27 May 2012

ಉಗ್ರ ಚಳವಳಿಯ ಸೌಮ್ಯ ನಾಯಕ

-ಜಿ.ಪಿ.ಬಸವರಾಜ್
ಕೃಪೆ:- ಅವಧಿ

ಚರಿತ್ರೆಯಲ್ಲಿ ದಾಖಲಾಗದ ಒಂದು ಪುಟ್ಟ ಘಟನೆಯನ್ನು ಇಲ್ಲಿ ಕಾಣಿಸುವುದರ ಮೂಲಕ ಈ ಲೇಖನವನ್ನು ಆರಂಭಿಸಬೇಕೆನ್ನಿಸುತ್ತದೆ. ಅದು ರೈತ ಚಳವಳಿ ಬಿರುಸಾಗಿದ್ದ ಕಾಲ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರೈತರು ರಸ್ತೆ ತಡೆ ಚಳವಳಿಯನ್ನು ನಡೆಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಂತೂ ಈ ಚಳವಳಿ ಎಷ್ಟು ಜೋರಾಗಿತ್ತೆಂದರೆ, ಒಂದೇ ಒಂದು ವಾಹನವೂ ರೈತರ ಕಣ್ಣುತಪ್ಪಿಸಿ ಹೋಗುವುದು ಸಾಧ್ಯವಿರಲಿಲ್ಲ. ರೋಗಿಗಳಿಗೆ, ಮಕ್ಕಳಿಗೆ, ಅಗತ್ಯ ಸೇವಾ ಸಿಬ್ಬಂದಿಗೆ ಒಂದಿಷ್ಟು ಕರುಣೆಯನ್ನು ತೋರಿಸಿ ಅಂಥ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡುವಷ್ಟು ರೈತರು ಉದಾರಿಗಳಾಗಿದ್ದರು. ಉಳಿದಂತೆ ಯಾವ ವಾಹನವನ್ನೂ ಬಿಡುತ್ತಿರಲಿಲ್ಲ. ವಾಹನಗಳು ಸಾಲುಗಟ್ಟಿ ರಸ್ತೆಯಲ್ಲಿ ನಿಂತಿರುವುದು ರೈತ ಚಳವಳಿಯ ಶಕ್ತಿಯನ್ನು ಸೂಚಿಸುವಂತಿರುತ್ತಿತ್ತು.


ಆಗ ನಾನು ಶಿವಮೊಗ್ಗದಲ್ಲಿ ಪ್ರಜಾವಾಣಿಯ ವರದಿಗಾರ. ನಮ್ಮ ಸಂಪಾದಕರಾದ ವೈಯನ್ಕೆ (ವೈ. ಎನ್.ಕೃಷ್ಣಮೂರ್ತಿ) ತೀರ್ಥಹಳ್ಳಿಯಲ್ಲಿ ಕೆಲಸವಿತ್ತೆಂದು ಬಂದು ಶಿವಮೊಗ್ಗದ ಜ್ಯುಯೆಲ್ ರಾಕ್ ಹೋಟೆಲಿನಲ್ಲಿ ತಂಗಿದ್ದರು. ಅವರು ಬೆಂಗಳೂರಿಗೆ ವಾಪಸು ಹೋಗಬೇಕಾಗಿತ್ತು. ಒಂದು ಬೆಳಗ್ಗೆ ಅವರು ಬೆಂಗಳೂರಿಗೆ ಹೊರಟು, ಭದ್ರಾವತಿಯನ್ನೂ ಮುಟ್ಟಲಾಗದೆ ಶಿವಮೊಗ್ಗಕ್ಕೆ ವಾಪಸು ಬಂದು, ಮತ್ತೆ ಅದೇ ಹೋಟೆಲಿನಲ್ಲಿ ವಾಸ್ತವ್ಯ ಮಾಡಿದರು. ಪೊಲೀಸರ ನೆರವು, ಸಂಪಾದಕರ ಹುದ್ದೆ ಇದು ಯಾವುದೂ ವೈಯನ್ಕೆ ಅವರ ಸುಗಮ ಸಂಚಾರಕ್ಕೆ ಸಹಕಾರಿಯಾಗಲಿಲ್ಲ. ಅವರು ನನ್ನನ್ನು ಕರೆದು ಏನು ಮಾಡುವುದೆಂದು ಕೇಳಿದರು. ನಾನು ನಿಮ್ಮ ನಿರಾತಂಕ ಪ್ರಯಾಣಕ್ಕೆ ಒಂದು ಪಾಸ್ ಪೋರ್ಟ್ ಅಗತ್ಯ ಎಂದೆ. ಎಂಥ ಪಾಸ್ ಪೋರ್ಟ್ ಎಂದರು ಕುತೂಹಲದಿಂದ. ಈ ಪಾಸ್ ಪೋರ್ಟ್ ಕೊಡುವ ಅಧಿಕಾರ ಇರುವುದು ಒಬ್ಬರಿಗೇ; ಅದು ರೈತ ಸಂಘದ ಅಧ್ಯಕ್ಷ ಎಚ್.ಎಸ್. ರುದ್ರಪ್ಪನವರಿಗೆ ಎಂದೆ. ಇದು ವೈಯನ್ಕೆ ಅವರಿಗೆ ತಮಾಷೆಯಾಗಿ ಕಾಣಿಸಿರಬೇಕು. ‘ಅದೇನು ಮಾಡುತ್ತೀರೋ ಮಾಡಿ, ನಾನು ಬೆಂಗಳೂರಿಗೆ ನಾಳೆ ಹೋದರೆ ಸಾಕು’ ಎಂದರು.


ನಾನು ಸೀದಾ ರುದ್ರಪ್ಪನವರ ಹತ್ತಿರ ಹೋಗಿ ಈ ಪಾಸ್ಪೋರ್ಟನ್ನು ಕೊಡಲು ವಿನಂತಿಸಿಕೊಂಡೆ. ರುದ್ರಪ್ಪನವರು ನಕ್ಕರು. ಪ್ರಜಾವಾಣಿಯ ಬಗ್ಗೆ ರುದ್ರಪ್ಪನವರೂ ಸೇರಿದಂತೆ ರೈತಮುಖಂಡರಿಗೆಲ್ಲ ಒಳ್ಳೆಯ ಅಭಿಪ್ರಾಯವಿತ್ತು. ರೈತ ಚಳವಳಿ ಒಂದು ಬಲಿಷ್ಠ ಚಳವಳಿಯಾಗಿ ರೂಪಗೊಳ್ಳಲು ಪ್ರಜಾವಾಣಿಯ ಕೊಡುಗೆಯೂ ಮುಖ್ಯವಾಗಿತ್ತು. ಆರಂಭದ ಹಂತದಿಂದಲೂ ರೈತ ಚಳವಳಿಯನ್ನು ನಾನು ಗ್ರಹಿಸಿದ ರೀತಿ ಮತ್ತು ನೀಡುತ್ತಿದ್ದ ವರದಿಗಳು ಪ್ರಜಾವಾಣಿಯಲ್ಲಿ ಪ್ರಮುಖವಾಗಿಯೇ ಪ್ರಕಟವಾಗುತ್ತಿದ್ದವು. ಇದರಿಂದಾಗಿ ರೈತರಲ್ಲಿ ಪ್ರಜಾವಾಣಿಯ ಬಗ್ಗೆ ಒಂದು ರೀತಿಯ ಪ್ರೀತಿಯೂ ಬೆಳೆದು, ಪ್ರಜಾವಾಣಿಯ ಪ್ರಸಾರ ಸಂಖ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಗಣನೀಯವಾಗಿ ಹೆಚ್ಚಿತ್ತು. ರೈತಮುಖಂಡರಂತೂ ಪ್ರಜಾವಾಣಿಯನ್ನು ತುಂಬ ವಿಶ್ವಾಸದಿಂದಲೇ ನೋಡುತ್ತಿದ್ದರು.

ರುದ್ರಪ್ಪನವರು ಸಂಘದ ಲೆಟರ್ಹೆಡ್ನಲ್ಲಿ ನಾಲ್ಕು ಸಾಲು ಬರೆದರು. ಪ್ರಜಾವಾಣಿಯ ಮತ್ತು ರೈತ ಚಳವಳಿಯ ಸಂಬಂಧವನ್ನು ಹೇಳಿ, ರೈತ ಚಳವಳಿ ಬೆಳೆಯಲು ಅದರ ಕೊಡುಗೆಯನ್ನೂ ಪ್ರಸ್ತಾಪಿಸಿ, ಪ್ರಜಾವಾಣಿಯ ಸಂಪಾದಕರಾದ ವೈಯನ್ಕೆ ಅವರ ವಾಹನವನ್ನು ತಡೆಯಬಾರದು; ಅವರ ಓಡಾಟ ನಿರಾತಂಕವಾಗಿರಬೇಕೆಂದು ಚಳವಳಿಗಾರರಿಗೆ ಸೂಚಿಸಿ, ಸಹಿ ಹಾಕಿಕೊಟ್ಟರು.

ಈ ಕಾಗದವನ್ನು ವೈಯನ್ಕೆ ಅವರಿಗೆ ಕೊಟ್ಟೆ. ಇದೊಂದು ಪಾಸ್ ಪೋರ್ಟ್ ರೀತಿಯಲ್ಲಿ ಕೆಲಸ ಮಾಡಬಹುದೆಂಬ ನಂಬಿಕೆ ಅವರಿಗೆ ಹುಟ್ಟಿದಂತೆ ಕಾಣಲಿಲ್ಲ. ಅಂತೂ ಕಾಗದವನ್ನು ತಮ್ಮ ಬ್ಯಾಗ್ನಲ್ಲಿ ಹಾಕಿಕೊಂಡರು.

ನನಗಂತೂ ನಂಬಿಕೆ ಇತ್ತು. ಆದರೂ ಮರುದಿನ ಬೆಳಗ್ಗೆ ವೈಯನ್ಕೆ ಅವರು ಹೊರಡುವ ಹೊತ್ತಿಗೆ ಸರಿಯಾಗಿ ನಾನೂ ಹೊರಟು ಅವರನ್ನು ಹಿಂಬಾಲಿಸಿದೆ. ಭದ್ರಾವತಿಯವರೆಗೂ ತಡೆಯಂತೂ ಇತ್ತು. ಅಲ್ಲೆಲ್ಲ ವೈಯನ್ಕೆ ಈ ಕಾಗದವನ್ನು ತೋರಿಸುತ್ತಿದ್ದರು. ಹಸಿರು ಟವಲಿನ ಚಳವಳಿಗಾರರು ಕಾಗದವನ್ನು ಓದಿಕೊಂಡು, ತಮ್ಮಲ್ಲೇ ಚರ್ಚಿಸಿಕೊಂಡು, ವಾಹನವನ್ನು ಹೋಗಲು ಬಿಡುತ್ತಿದ್ದರು. ಹಳ್ಳಿಹಳ್ಳಿಗೂ ಈ ವಾಹನ ನಿಲ್ಲುತ್ತಿತ್ತು. ಆದರೆ ಓಡಾಟಕ್ಕೆ ತಡೆಯಂತೂ ಎಲ್ಲೂ ಆಗಲಿಲ್ಲ. ಹಿಂದೆ ಹಿಂದೆಯೇ ಹೋಗುತ್ತ, ದೂರದಿಂದಲೇ ಇದನ್ನೆಲ್ಲ ಗಮನಿಸುತ್ತಿದ್ದ ನಾನು, ವೈಯನ್ಕೆ ಅವರು ಭದ್ರಾವತಿಯನ್ನು ದಾಟಿದ ನಂತರ ಶಿವಮೊಗ್ಗಕ್ಕೆ ಮರಳಿ ಬಂದೆ. ಅಂದು ರಾತ್ರಿ ಫೋನ್ನಲ್ಲಿ ವಿಚಾರಿಸಿಕೊಂಡಾಗ ವೈಯನ್ಕೆ ನಗುನಗುತ್ತಾ, ಹೌದು ಅದು ಪಾಸ್ಪೋರ್ಟೇ, ಎಲ್ಲಿಯೂ ತೊಂದರೆಯಾಗಲಿಲ್ಲ ಎಂದು ಉತ್ತರಿಸಿದರು.

2

ಕರ್ನಾಟಕ ರಾಜ್ಯ ರೈತ ಸಂಘ ರುದ್ರಪ್ಪನವರನ್ನು ತಮ್ಮ ನೇತಾರ ಎಂದು ಪರಿಭಾವಿಸುವ ಹೊತ್ತಿಗೆ ರುದ್ರಪ್ಪನವರ ಬದುಕಿನ ಹಲವು ಮಜಲುಗಳು ಮುಗಿದು ಹೋಗಿದ್ದವು. ರಾಜ್ಯ ಸಕರ್ಾರದಲ್ಲಿ ಅವರು ಮಂತ್ರಿ ಪದವಿಯನ್ನು ನಿಭಾಯಿಸಿ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮರಳಿ ಸಾಕಷ್ಟು ಕಾಲವಾಗಿತ್ತು. ಒಮ್ಮೆ ಮಂತ್ರಿಯಾದವರು ಬೆಂಗಳೂರಿನಲ್ಲಿಯೇ ಬೇರುಬಿಟ್ಟು ಸಕಲ ವೈಭೋಗಗಳಲ್ಲಿಯೇ ಮೈಮರೆಯುವ ರಾಜಕಾರಣ ಪರಂಪರೆಯೇ ನಮ್ಮಲ್ಲಿರುವಾಗ ರುದ್ರಪ್ಪನವರು ಶಿವಮೊಗ್ಗಕ್ಕೆ ಮರಳಿದ್ದು, ಒಂದರ್ಥದಲ್ಲಿ ಅವರ ಜೀವನ ತತ್ವವನ್ನು ಸ್ವಯಂ ನಿವೇದಿಸುತ್ತದೆ. ತೆಳ್ಳಗೆ ತಾಳೆಮರದಂತಿದ್ದ ರುದ್ರಪ್ಪನವರು ಸರಳ ಜೀವಿ. ಬಿಳಿ ಪಂಚೆ, ಜುಬ್ಬ, ಗಾಂಧೀ ಟೋಪಿಯ ಅವರು ಗಾಂಧೀ ತತ್ವಕ್ಕೆ ಹತ್ತಿರವಿದ್ದಂತೆ ಕಾಣುತ್ತಿದ್ದರು. ಅವರ ಸುತ್ತ ಮಾಜಿ ಮಂತ್ರಿಯ ವೈಭವದ ಪ್ರಭಾವಳಿ ಇರಲಿಲ್ಲ; ಅಂಥ ಗತ್ತೂ ಅವರಿಂದ ಬಹಳ ದೂರವಿತ್ತು. ಹಳ್ಳಿಯ ರೈತನೂ ಅವರನ್ನು ಸುಲಭವಾಗಿ ಸಂಪಕರ್ಿಸಬಹುದಾದ, ಸಹಜವಾಗಿ ಮಾತುಕತೆಯಾಡಲು ಸಾಧ್ಯವಾಗಬಹುದಾದ, ಹಿಂದೊಂದು ಮುಂದೊಂದು ಇಲ್ಲದ ನೇರ, ಸರಳ, ಸಜ್ಜನ ನಡವಳಿಕೆ ಅವರದು. ಅವರೊಂದಿಗೆ ಯಾರೂ ಕಷ್ಟ ಸುಖಗಳನ್ನು ಹೇಳಿಕೊಳ್ಳಬಹುದಾಗಿತ್ತು. ಅಂಥ ಆಪ್ತ ವ್ಯಕ್ತಿತ್ವ ಅವರದು. ಜೊತೆಗೆ ರುದ್ರಪ್ಪನವರದು, ಅವರ ಉಡುಗೆಯಂತೆಯೇ, ಶುಭ್ರ ಶೀಲ. ಯಾವ ಹಗರಣಗಳೂ ಅವರ ಸುತ್ತ ಇರಲಿಲ್ಲ. ಭ್ರಷ್ಟಾಚಾರದ ಪ್ರಕರಣಗಳಂತೂ ಅವರಿಂದ ದೂರವೇ. ಹೀಗಾಗಿಯೇ ಅವರು ಜನತೆಯ ಪ್ರೀತಿ, ವಿಶ್ವಾಸ, ಗೌರವಗಳಿಗೆ ಪಾತ್ರರಾಗಿದ್ದರು. ರೈತ ಸಂಘ ಅಧ್ಯಕ್ಷತೆಯ ಪಟ್ಟವನ್ನು ರುದ್ರಪ್ಪನವರಿಗೆ ಕಟ್ಟಲು ಇದೂ ಮುಖ್ಯ ಕಾರಣವಾಗಿರಬಹುದು.

ರುದ್ರಪ್ಪನವರದು ಬಹಳ ಸೌಮ್ಯ ಮತ್ತು ಶಾಂತ ಸ್ವಭಾವ. ಪ್ರೊ.ನಂಜುಂಡಸ್ವಾಮಿ ಅವರ ಭಾಷಣಗಳು ಕೆಂಡದುಂಡೆಯನ್ನೇ ಉಗುಳುತ್ತಿದ್ದರೆ ರುದ್ರಪ್ಪನವರ ಭಾಷಣಗಳು ಅದಕ್ಕೆ ತೀರ ತದ್ವಿರುದ್ಧ. ಹಾಗೆ ನೋಡಿದರೆ ರುದ್ರಪ್ಪನವರು ಭಾಷಣಕಾರರೇ ಆಗಿರಲಿಲ್ಲ. ತಮಿಳ್ನಾಡಿನ ನಾರಾಯಣಸ್ವಾಮಿ ನಾಯ್ಡು ಅವರಂತೆ ಅಥವಾ ಉತ್ತರ ಭಾರತದಿಂದ ಬರುತ್ತಿದ್ದ ಟಿಕಾಯತ್ ಮೊದಲಾದ ರೈತ ನಾಯಕರಂತೆ ರುದ್ರಪ್ಪನವರು ರೈತರನ್ನು ಬಡಿದೇಳಿಸುವಂತೆ ಮಾತನಾಡುತ್ತಿರಲಿಲ್ಲ. ಅಂಥ ಮಾತುಗಾರಿಕೆಯೂ ಅವರಿಗೆ ತಿಳಿದಿರಲಿಲ್ಲ. ಸುಂದರೇಶ್ ಅವರ ಉಕ್ಕುವ ಯೌವನ ಮತ್ತು ಪಟ್ಟುಬಿಡದೆ ಕೆಲಸ ಮಾಡುವ ಕ್ರಿಯಾಶಕ್ತಿ ಅಥವಾ ಕಡಿದಾಳು ಶಾಮಣ್ಣನವರ ವ್ಯಂಗ್ಯವಿಲ್ಲದ ತಮಾಷೆ -ಇವು ಯಾವುವೂ ರುದ್ರಪ್ಪನವರಲ್ಲಿ ಇರಲಿಲ್ಲ. ಪ್ರೊ.ನಂಜುಂಡಸ್ವಾಮಿಯವರಂತೆ ಜಗತ್ತಿನ ಎಲ್ಲ ಸಂಗತಿಗಳನ್ನು ರುದ್ರಪ್ಪ ಬಲ್ಲವರಾಗಿರಲಿಲ್ಲ. ಮಾಕ್ಸರ್್, ಲೋಹಿಯಾ, ಪೆರಿಯಾರ್, ಗೋಪಾಲಗೌಡ ಇತ್ಯಾದಿ ಚಿಂತಕರನ್ನು ಅರೆದುಕುಡಿದಿದ್ದ ನಂಜುಂಡಸ್ವಾಮಿಯವರ ಮುಂದೆ ರುದ್ರಪ್ಪನವರು ಕಳಾಹೀನರಾಗಿಯೇ ಕಾಣಿಸುತ್ತಿದ್ದರು. ಅವರ ಮಾತಿನಲ್ಲಿ ಗುಡುಗಾಗಲಿ, ಸಿಡಿಲಾಗಲಿ, ತತ್ವಚಿಂತನೆಯಾಗಲಿ ಇರಲಿಲ್ಲ.

ಆದರೆ ರುದ್ರಪ್ಪನವರ ಜೀವನಾನುಭವ ಸಮೃದ್ಧವಾಗಿತ್ತು. ಅವರ ಲೋಕಜ್ಞಾನ ಅಪಾರವಾಗಿತ್ತು. ಅಹಿಂಸಾ ತತ್ವದಲ್ಲಿ ಅವರಿಟ್ಟ ನಂಬಿಕೆ ಅಚಲವಾಗಿತ್ತು. ಗ್ರಾಮೀಣ ಜನತೆಯ ಸರಳ ಜೀವನವನ್ನೇ ಮೈದುಂಬಿಕೊಂಡಂತಿದ್ದ ರುದ್ರಪ್ಪನವರನ್ನು ನೋಡಿದ ಕೂಡಲೇ ಎಂಥವರಿಗೂ ವಿಶ್ವಾಸ ಹುಟ್ಟಿಬಿಡುತ್ತಿತ್ತು. ಅವರ ಶಾಂತ ಸ್ವಭಾವ ಇಡೀ ರೈತ ಚಳವಳಿಯನ್ನು ಹಿಂಸೆಯ ಹಾದಿ ಹಿಡಿಯದಂತೆ ನೋಡಿಕೊಂಡಿತ್ತು. ಎಂಥ ಸಂದರ್ಭದಲ್ಲಿಯೂ ರುದ್ರಪ್ಪನವರು ಹಿಂಸೆಯನ್ನು ಒಪ್ಪುತ್ತಿರಲಿಲ್ಲ; ಪ್ರಚೋದಿಸುತ್ತಿರಲಿಲ್ಲ. ರೈತರನ್ನು ಪೊಲೀಸರು ಹಿಂಸಿಸಿದಾಗ, ದೂರದೂರದ ಜೈಲುಗಳಿಗೆ ಕಳುಹಿಸಿದಾಗ, ಪ್ರೊ.ನಂಜುಂಡಸ್ವಾಮಿ ಮತ್ತು ಪ್ರೊ.ರವಿವರ್ಮ ಕುಮಾರ್ ಅವರಂಥವರನ್ನೂ ಪೊಲೀಸ್ ಠಾಣೆಯಲ್ಲಿ ಬಟ್ಟೆಬಿಚ್ಚಿಸಿ ಅವಮಾನಗೊಳಿಸಿದ ಸಂದರ್ಭದಲ್ಲಿಯೂ ರುದ್ರಪ್ಪನವರು ಉದ್ರೇಕಗೊಂಡು ಹಿಂಸೆಯನ್ನು ಪ್ರಚೋದಿಸಲಿಲ್ಲ. ಶಾಂತರೀತಿಯಲ್ಲಿಯೇ ದಿಟ್ಟವಾಗಿ ಪ್ರತಿಭಟಿಸುವ ಅವರ ಛಲ ಮತ್ತು ಮಾರ್ಗಗಳು ರೈತ ಸಮುದಾಯವನ್ನು ನಿಯಂತ್ರಣದಲ್ಲಿಟ್ಟಿದ್ದವು ಮತ್ತು ರೈತ ಚಳವಳಿಯನ್ನು ಮುನ್ನಡೆಸಿದ್ದವು.

ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ರೈತ ಚಳವಳಿಯ ಅದ್ಭುತ ಶಕ್ತಿಗೆ ಬೆಚ್ಚಿಬಿದ್ದು, ಪೊಲೀಸರ ನೆರವಿಂದ ಅಥವಾ ಅನ್ಯ ಮಾರ್ಗಗಳಿಂದ ಈ ಚಳವಳಿಯನ್ನು ಹತ್ತಿಕ್ಕುವುದು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಾಗ ಸಂಧಾನ ಮಾರ್ಗವೊಂದು ಉಳಿದಿರುವ ಆಯ್ಕೆ ಎಂದು ತೀರ್ಮಾನಿಸಿದರು. ಆಗ ಸಂಧಾನಕ್ಕೆ, ಗುಂಡೂರಾವ್ ಅವರ ಸಂಪುಟದಲ್ಲಿದ್ದ ವೀರಪ್ಪ ಮೊಯ್ಲಿ, ಕಾಗೋಡು ತಿಮ್ಮಪ್ಪ ಮೊದಲಾದವರು ಸಂಧಾನಕಾರರಾಗಿ ರೈತ ಸಂಘದ ಬಳಿಗೆ ಬಂದಾಗ ಅವರಿಗೆ ಮೊದಲು ಕಂಡದ್ದು ರೈತ ಸಂಘದ ಅಧ್ಯಕ್ಷ ರುದ್ರಪ್ಪನವರೇ. ನಂಜುಂಡಸ್ವಾಮಿ, ಸುಂದರೇಶ್ ಮೊದಲಾದವರ ಹತ್ತಿರ ಸುಳಿಯುವ ಧೈರ್ಯ ಯಾವ ಮಂತ್ರಿಗೂ ಇರಲಿಲ್ಲ. ಅಲ್ಲದೆ ನಂಜುಂಡಸ್ವಾಮಿಯವರ ವಾದಕ್ಕೆ ಪ್ರತಿವಾದ ಒಡ್ಡುವ ಭೌದ್ಧಿಕ ಸಾಮಥ್ರ್ಯವೂ ಅನೇಕರಿಗೆ ಇರಲಿಲ್ಲ. ಕಡ್ಡಿ ಮುರಿದಂತೆ ಮಾತನಾಡುತ್ತಿದ್ದ ನಂಜುಂಡಸ್ವಾಮಿಯವರ ಮುಂದೆ ಯಾವ ಸಂಧಾನವೂ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ನಂಜುಂಡಸ್ವಾಮಿ, ಸುಂದರೇಶ್ ಮೊದಲಾದ ನಾಯಕರು ಹಳ್ಳಿಹಳ್ಳಿಯ ಸುತ್ತಾಟದಲ್ಲಿ ಯಾವ ಸಂಧಾನಕಾರರ ಕೈಗೂ ಸಿಕ್ಕುವುದು ಕಷ್ಟವಾಗುತ್ತಿತ್ತು. ಅಥವಾ ಜೈಲುಗಳಲ್ಲಿರುತ್ತಿದ್ದ ಅವರೊಂದಿಗೆ ಸಂಧಾನ ನಡೆಸುವುದು ಸುಲಭವೂ ಆಗುತ್ತಿರಲಿಲ್ಲ. ಇಂಥ ಸಂದರ್ಭಗಳಲ್ಲೆಲ್ಲ ಸಮಾಧಾನದಿಂದ ಮಾತನಾಡುತ್ತಿದ್ದ, ಆದರೆ ರೈತರ ಬಗ್ಗೆ ಸಂಪೂರ್ಣ ಕಾಳಜಿಯಿಂದ, ಕಳಕಳಿಯಿಂದ, ಅವರ ಬೇಡಿಕೆಗಳ ಬಗ್ಗೆ ಪೂರ್ಣ ಅರಿವನ್ನಿಟ್ಟುಕೊಂಡು ಮಾತನಾಡುತ್ತಿದ್ದ ಏಕೈಕ ‘ಯಜಮಾನ’ರೆಂದರೆ ರುದ್ರಪ್ಪನವರೇ.

ರುದ್ರಪ್ಪನವರನ್ನು ರೈತಸಂಘದಲ್ಲಿ ‘ಯಜಮಾನ’ರೆಂದೇ ಕರೆಯುತ್ತಿದ್ದರು. ಸಮಾಜವಾದೀ ಸಿದ್ಧಾಂತದಲ್ಲಿ ನಂಬಿಕೆಯಿಟ್ಟ, ಊಳಿಗಮಾನ್ಯ ಪದ್ಧತಿಯನ್ನು ಕಟುವಾಗಿ ವಿರೋಧಿಸುತ್ತಿದ್ದ ಅನೇಕರು ರುದ್ರಪ್ಪನವರ ವಿಚಾರದಲ್ಲಿ ಮಾತ್ರ ಉದಾರಿಗಳಾಗಿದ್ದರು. ಪ್ರೀತಿಯಿಂದ ಯಜಮಾನರೆಂದೇ ಕರೆಯುತ್ತಿದ್ದರು. ಹಾಸನದ ದತ್ತ, ವೆಂಕಟೇಶಮೂರ್ತಿ ಎಲ್ಲರಿಗೂ ಈ ಯಜಮಾನರ ಬಗ್ಗೆ ತುಂಬ ಪ್ರೀತಿಯಿತ್ತು. ಅಂಥ ಪ್ರೀತಿ ಗೌರವಗಳನ್ನು ಅವರು ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು.

ಸಂಧಾನಕಾರರು ಬಂದಾಗ ಪ್ರೊಫೆಸರ್ ಸೇರಿದಂತೆ ಹಲವು ರೈತಮುಖಂಡರಿಗೆ, ಯಜಮಾನರು ಹೇಗೆ ನಿಭಾಯಿಸುತ್ತಾರೊ, ಎಲ್ಲಿ ತಾವು ಸಿಕ್ಕಿಬಿದ್ದು ಕೈಕಟ್ಟಿಸಿಕೊಳ್ಳುತ್ತಾರೋ ಎಂಬ ಬಗ್ಗೆ ಒಂದು ಬಗೆಯ ಅಳುಕು ಇರುತ್ತಿತ್ತು. ಆದರೆ ರುದ್ರಪ್ಪನವರು ರೈತಸಂಘದ ಹಿತಕ್ಕೆ ಧಕ್ಕೆ ಬರುವಂತೆ ಯಾವ ಸಂದರ್ಭದಲ್ಲೂ ನಡೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ ತಮ್ಮ ನಿಲುವಿನಿಂದ ಹಿಂದೆ ಸರಿದು ಸರ್ಕಾರದ ಸಂಧಾನ ಬಲೆಯಲ್ಲಿ ಬೀಳಲಿಲ್ಲ. ತಾವು ಏಕಾಂಗಿಯಾಗಿದ್ದಾಗಲೂ ರುದ್ರಪ್ಪನವರ ವಿಚಾರದಲ್ಲಾಗಲಿ, ನಿಲುವಿನಲ್ಲಾಗಲೀ ಏರುಪೇರುಗಳಾಗುತ್ತಿರಲಿಲ್ಲ. ಸಂಧಾನಕಾರರ ಮಾತಿನ ಮೋಡಿ ಹೇಗೆ ಇದ್ದರೂ ರುದ್ರಪ್ಪನವರ ಸರಳತೆ ಮತ್ತು ಪ್ರಾಮಾಣಿಕತೆ ಎಲ್ಲವನ್ನೂ ಗೆದ್ದುಬಿಡುತ್ತಿತ್ತು. ಈ ಸರಳತೆ ಮತ್ತು ಪ್ರಾಮಾಣಿಕತೆಗಳೇ ರೈತಸಂಘದ ಶಕ್ತಿಯಾಗಿದ್ದವು. ರೈತ ಮುಖಂಡರಲ್ಲಿ ಕೆಲವರು ಒರಟರಂತೆ ಮಾತನಾಡಿದರೂ, ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಗಾಂಧಿ, ಲೋಹಿಯಾ, ಗೋಪಾಲಗೌಡ ಹೀಗೆ ಅನೇಕರ ತತ್ವ ಸಿದ್ಧಾಂತಗಳು ರೈತ ಸಂಘದ ಬೆನ್ನಿಗಿದ್ದದ್ದಕ್ಕೆ ಈ ರೈತಮುಖಂಡರೇ ಕಾರಣ. ರುದ್ರಪ್ಪನವರು ಗಾಂಧಿಯನ್ನು ಇಡಿಯಾಗಿಯೇ ತಂದು ರೈತಸಂಘಕ್ಕೆ ಸೇರಿಸಿದ್ದರು. ಸಹನೆ, ಶಾಂತಿ, ಸತ್ಯಾಗ್ರಹ ಇವುಗಳನ್ನು ರುದ್ರಪ್ಪನವರು ಎಂದೂ ಬಿಟ್ಟುಕೊಡಲಿಲ್ಲ.

ರೈತ ಸಂಘದ ಪಾದಯಾತ್ರೆಗಳಲ್ಲಿ ಭಾಗವಹಿಸಲು ರುದ್ರಪ್ಪನವರಿಗೆ ತ್ರಾಣವಿರಲಿಲ್ಲ. ಅವರಾಗಲೇ ವೃದ್ಧಾಪ್ಯದಲ್ಲಿದ್ದರು. ಹೀಗಾಗಿ ರೈತರ ಜೊತೆಜೊತೆಗೆ ಮೊದಲಿನಿಂದ ಕೊನೆಯವರೆಗೆ ಪಾದಯಾತ್ರೆಗಳಲ್ಲಿ ಹೆಜ್ಜೆಹಾಕುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಆರಂಭದಲ್ಲಿದ್ದು ರೈತರಿಗೆ ನೈತಿಕ ಧೈರ್ಯ ತುಂಬುತ್ತಿದ್ದ ರುದ್ರಪ್ಪನವರು ಕೊನೆಯಲ್ಲಿ ಬಂದು ಕೂಡಿಕೊಳ್ಳುತ್ತಿದ್ದರು. ರುದ್ರಪ್ಪನವರ ಉಪಸ್ಥಿತಿಯೇ ರೈತರಿಗೆ ಹುಮ್ಮಸ್ಸನ್ನು, ಘನತೆಯನ್ನು ತಂದುಕೊಡುತ್ತಿತ್ತು. ಇತರ ರೈತ ಮುಖಂಡರೂ ರುದ್ರಪ್ಪನವರ ಈ ಉಪಸ್ಥಿತಿಯನ್ನು ಗೌರವದಿಂದ ನೋಡುತ್ತಿದ್ದರು. ರೈತರ ವಿಭಿನ್ನ ಹೋರಾಟಗಳಲ್ಲಿ ಭಾಗವಹಿಸಿ ಜೈಲು ಸೇರುವುದು ಕೂಡಾ ಅವರ ಆರೋಗ್ಯದ ದೃಷ್ಟಿಯಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ರೈತಸಂಘದ ‘ಯಜಮಾನ’ರಾಗಿ ಅವರು ಜೈಲಿನ ಹೊರಗಿರಲಿ, ಒಳಗಿರಲಿ ರೈತಸಮುದಾಯದ ಜೊತೆಯಲ್ಲಿದ್ದರು. ಈ ನಂಬಿಕೆ ಇಡೀ ರೈತ ಸಮುದಾಯದಲ್ಲಿತ್ತು. ಈ ನಂಬಿಕೆಯೇ ಚಳವಳಿಯನ್ನು ಮುನ್ನಡೆಸಿತ್ತು.

ರುದ್ರಪ್ಪನವರು ತಳೆಯುತ್ತಿದ್ದ ಶಾಂತಿಯ ನಿಲುವು ಕೆಲವು ಬಾರಿ ಎಳೆಯ ತಲೆಮಾರಿನ ತರುಣರನ್ನು ಸಿಟ್ಟಿಗೇಳಿಸುತ್ತಿತ್ತು. ಹೀಗಿದ್ದರೆ ಸರ್ಕಾರವನ್ನು ಮಣಿಸುವುದು ಸಾಧ್ಯವಾಗುವುದಿಲ್ಲ. ಇನ್ನೆಷ್ಟು ವರ್ಷಗಳ ಕಾಲ ಚಳವಳಿಗಳನ್ನೇ ಮಾಡಿಕೊಂಡಿರುವುದು ಎಂದು ರೇಗುವವರೂ ಇದ್ದರು. ಆದರೆ ಈ ರೇಗಾಟ, ಕೂಗಾಟಗಳೆಲ್ಲ ತಣ್ಣಗಾದ ಮೇಲೆ ‘ಯಜಮಾನರ’ ನಿಲುವಿಗೆ ಎಲ್ಲರೂ ಬದ್ಧರಾಗುತ್ತಿದ್ದರು. ಯಜಮಾನರ ನಿಲುವಿನ ಹಿಂದೆ ಪ್ರೊ.ನಂಜುಂಡಸ್ವಾಮಿಯವರ ಚಿಂತನೆಯೂ ಇರುತ್ತಿತ್ತು. ಸುಂದರೇಶ್ ಮತ್ತು ಶಾಮಣ್ಣನವರ ಕ್ರಿಯಾಶೀಲತೆಯೂ ಇರುತ್ತಿತ್ತು. ದತ್ತ, ವೆಂಕಟೇಶಮೂರ್ತಿ ಅವರ ಯೌವನದ ಕಸುವೂ ಇರುತ್ತಿತ್ತು.

ಕರ್ನಾಟಕದ ಬಹುದೊಡ್ಡ ಚಾರಿತ್ರಿಕ ಚಳವಳಿಯ ನೇತೃತ್ವವನ್ನು ವಹಿಸುವ ಮೂಲಕ ರುದ್ರಪ್ಪನವರ ವ್ಯಕ್ತಿತ್ವವೂ ಹಿಗ್ಗಿತು. ಅವರ ಸುತ್ತ ಪ್ರಭಾವಳಿಯೊಂದು ಇದ್ದರೆ ಅದು ಈ ಚಳವಳಿಯಿಂದಲೇ ಬಂದದ್ದು. ಇಂಥ ಪ್ರಭಾವಳಿಯನ್ನು ಪಡೆದೂ ರುದ್ರಪ್ಪನವರು ಬೀಗಲಿಲ್ಲ. ಅಷ್ಟು ಸರಳತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ತನ್ನನ್ನು ಒಬ್ಬ ಸಾಮಾನ್ಯ ರೈತನ ಪ್ರತಿನಿಧಿಯೆಂದು ಪ್ರಾಮಾಣಿಕವಾಗಿ ಭಾವಿಸುತ್ತಿದ್ದ ರುದ್ರಪ್ಪನವರು ಕೊನೆಯವರೆಗೂ ಹಾಗೆಯೇ ನಡೆದುಕೊಂಡರು; ರೈತ ಸಂಘವನ್ನು ಅದೇ ನಂಬಿಕೆಯಿಂದ ಮುನ್ನಡೆಸಿದರು.

Saturday 26 May 2012

ಜಟ್ಕಾ ಬಂಡಿ ಬದುಕು.




ಲೇಖಕರು- ದಿನೇಶ್ ಕುಮಾರ್. ಎಸ್. ಸಿ
ಸೌಜನ್ಯ:-ವರ್ತಮಾನ

ನೈಜ ಕಥೆ ಎಂದಾದರೂ ,ವರದಿ ಎಂದಾದರೂ, ಮಾಹಿತಿ ಎಂದಾದರೂ ಓದಿಕೊಳ್ಳಿ ಆದರೆ ಲೇಖಕರ ಬದ್ದತೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವದು ಮತ್ತು ಸತ್ಯವನ್ನು ತನಗರಿವಿಗೆ ಬಂದ ಅನುಭವವನ್ನು ಮುಖ್ತವಾಗಿ ತೆರೆದಿಡುವದು ಎಂಬುದು ಪೂರ್ತಿಯಾಗಿ ಓದಿಕೊಂಡಲ್ಲಿ ಸಿಗುವ ಒಟ್ಟಭಿಪ್ರಾಯ.

-ಸಮಾನ


ನಂಗೆ ನನ್ನ ಹೆಂಡತಿ ಬೇಕು ಸಾರ್, ತುಂಬಾ ಒಳ್ಳೆಯವಳು ಸಾರ್…

ಹೀಗಂತನೇ ಮಾತು ಶುರುಮಾಡಿದ ವಾಸುದೇವ. ನೋಡಕ್ಕೆ ಚೆನ್ನಾಗಿದ್ದಾನೆ. ಆರು ವರ್ಷದ ಮುದ್ದಾದ ಮಗಳಿದ್ದಾಳೆ. ಹೆಂಡತಿ ಮನೆ ಬಿಟ್ಟು ತವರಿಗೆ ಹೋಗಿ ಕುಳಿತಿದ್ದಾಳೆ. ವಾಪಾಸು ಬರುವ ಯಾವ ಸಾಧ್ಯತೆಯೂ ಇಲ್ಲದೆ ಅವನು ನನ್ನ ಬಳಿ ಬಂದಿದ್ದ. ಇವನದೊಂದು ಸಮಸ್ಯೆಯಿದೆ, ಏನಾದರೂ ಮಾಡೋದಕ್ಕೆ ಸಾಧ್ಯನಾ ನೋಡಿ ಅಂತ ಗೆಳತಿಯೊಬ್ಬಳು ನನ್ನ ಬಳಿ ಕಳಿಸಿದ್ದಳು.

ಏನಾಯ್ತು? ಯಾಕಾಯ್ತು? ಮಾಮೂಲಿ ಪ್ರಶ್ನೆಗಳು ನನ್ನಿಂದ. ಹತ್ತು ವರ್ಷಗಳ ಸಂಸಾರ, ಆರು ವರ್ಷದ ಮಗಳು, ಸರ್ಕಾರಿ ಉದ್ಯೋಗದಲ್ಲಿರುವ ಗಂಡ ಎಲ್ಲ ಬಿಟ್ಟು ಆ ಹೆಣ್ಣುಮಗಳೇಕೆ ತವರಿಗೆ ಹೋಗಿದ್ದಾಳೆ? ಇದು ನನ್ನ ಸಹಜ ಕುತೂಹಲ.
ಒಂದು ಮಿಸ್ಟೇಕು ಸಾರ್. ಇವಳ ಕಡೆ ಗಮನ ಕಡಿಮೆಯಾಗಿ ಹೋಗಿತ್ತು. ನನ್ನ ಕೆಲಸ ನೋಡಿ, ಊರೂರು ಸುತ್ತಬೇಕು. ಬೆಳಿಗ್ಗೆನೇ ಮನೆ ಬಿಡಬೇಕು, ಗಂಟೆಗಟ್ಟಲೆ ಪ್ರಯಾಣ. ರಾತ್ರಿ ಆಯಾಸವಾಗಿರುತ್ತೆ ಮನೆ ತಲುಪುವಷ್ಟರಲ್ಲಿ. ಇವಳನ್ನು ಮಾತಾಡಿಸುವಷ್ಟೂ ಪುರುಸೊತ್ತು ಇರಲಿಲ್ಲ. ಮನೇಲಿ ಅಮ್ಮ ಮತ್ತು ಇವಳಿಗೆ ಅಷ್ಟಕ್ಕಷ್ಟೆ. ಏನೇನು ಜಗಳ ಆಗ್ತಾ ಇದ್ವೋ ಗೊತ್ತಿಲ್ಲ.

ಅವನು ಹೇಳ್ತಾ ಹೋದ. ಮಧ್ಯೆ ಮಧ್ಯೆ ಕೊಂಚ ಸೆಲ್ಫ್ ಡೆಫೆನ್ಸ್ಗಾಗಿ ಸುಳ್ಳು, ಅಥವಾ ಹಾರಿಕೆಯ ಮಾತು. ಎಷ್ಟೇ ದೊಡ್ಡ ಫಟಿಂಗರು ತಲೆಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದರೂ ಧ್ವನಿಯ ವೈಬ್ರೇಷನ್ನಿಂದಲೇ ಗೊತ್ತಾಗಿಬಿಡುತ್ತೆ ನನಗೆ ಅದು ಸುಳ್ಳು ಅಂತ. ಹೀಗಾಗಿ ಮಧ್ಯೆ ಮಧ್ಯೆ ಕೆಣಕು ಪ್ರಶ್ನೆಗಳು ನನ್ನಿಂದ. ಅವನು ಮುಂದುವರೆಸುತ್ತಾ ಹೋದ. ನನ್ನ ಪ್ರಶ್ನೆಗಳು ಜೋರಾದ ನಂತರ ಪೂತರ್ಿ ಶರಣಾಗತನಂತೆ ಸತ್ಯವನ್ನಷ್ಟೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದವನಂತೆ ಕರುಣಾಜನಕವಾಗಿ ಮಾತನಾಡತೊಡಗಿದ.

ಈ ನಡುವೆ ಅವನು ಬಂದ ಸಾರ್. ಬಾಂಬೆಯವನು. ಯಾರೋ ಏನೋ ಗೊತ್ತಿಲ್ಲ. ಇವಳಿಗೆ ಇಂಟರ್ನೆಟ್ನಿಂದ ಪರಿಚಯ. ಅವನು ಬ್ರಾಥಲ್ ನಡೆಸ್ತಾನೆ ಸಾರ್, ನಂಗೊತ್ತು, ನಾ ತನಿಖೆ ಮಾಡಿದ್ದೇನೆ. ನನ್ನ ಹತ್ರ ಪ್ರೂಫ್ ಇದೆ. ಒಂದ್ ದಿನ ಇವಳ ಮೊಬೈಲ್ ಚೆಕ್ ಮಾಡಿದಾಗ ಎಲ್ಲ ಡೀಟೇಲ್ಸು ಗೊತ್ತಾಯ್ತು. ನನ್ನ ಫ್ರೆಂಡ್ ಅಂತಾಳೆ, ಹೇಗೆ ನಂಬೋದು ಸಾರ್. ಅವನ ಜತೆ ಫೋನಲ್ಲಿ ಮಾತಾಡಿದೆ. ಕೆಟ್ಟದಾಗಿ ಮಾತಾಡಿದ ನಂಜೊಂತೆ, ಬೇಕಾದ್ರೆ ನೋಡಿ ನಾ ರೆಕಾರ್ಡ್ ಮಾಡ್ಕೊಂಡಿದ್ದೀನಿ..

ಮಾತು ಮಾತಿನ ನಡುವೆ ಅವನು ತನ್ನ ಸಾಕ್ಷ್ಯಗಳನ್ನೆಲ್ಲ ನನ್ನ ಮುಂದೆ ಮಂಡಿಸುತ್ತಿದ್ದ. ಬಾಂಬೆಯವನ ಫೇಸ್ ಬುಕ್ ಪೇಜ್ನ ಲಿಂಕುಗಳು, ಅವನು ನಡೆಸುವ ಗ್ರೂಪ್ನ ವಿವರಗಳು, ಇತ್ಯಾದಿ ಇತ್ಯಾದಿ…

ಅವನು ತನ್ನ ಸಾಕ್ಷ್ಯಗಳ ಕುರಿತು ತೋರುತ್ತಿದ್ದ ವಿಪರೀತ ಆಸಕ್ತಿಯಿಂದಲೇ, ಅವನ ಸಾಕ್ಷ್ಯಗಳ ಮೇಲೆ ನನಗೆ ಆಸಕ್ತಿ ಹೊರಟುಹೋಗಿತ್ತು. ಅವುಗಳನ್ನೆಲ್ಲ ನಿರ್ಲಕ್ಷ್ಯದಿಂದ ಪಕ್ಕಕ್ಕೆ ಸರಿಸಿ, ಮುಂದೇನಾಯ್ತು ಹೇಳು ಅಂದೆ.

ಒಂದ್ ತಪ್ ಕೆಲಸ ಮಾಡಿಬಿಟ್ಟೆ ಸಾರ್. ಒಂದು ಮಹಿಳಾ ಸಂಘದ ಅಧ್ಯಕ್ಷರೊಬ್ಬರಿದ್ದಾರೆ ಸಾರ್ ವಿಜಯಮ್ಮ ಅಂತ. ಅವರ ಹತ್ರ ಹೇಳ್ಕೊಂಡೆ. ಅವರು ನಿನ್ನ ಸಮಸ್ಯೆಗೆ ಪರಿಹಾರ ಆಗಬೇಕು ಅಂದ್ರೆ ಒಂದು ಟೀವಿ ಶೋಗೆ ಹೋಗಬೇಕು. ಅನುರಾಧ ಅಂತ ಫಿಲ್ಮ್ ಆಕ್ಟರ್ ಗೊತ್ತರು ತಾನೇ ನಿಂಗೆ? ಸೀರಿಯಲ್ನಲ್ಲೂ ಮಾಡ್ತಾರೆ. ತುಂಬಾ ಒಳ್ಳೆಯವರು. ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ? ಅವರೇ ಕಾರ್ಯಕ್ರಮ ನಡೆಸಿಕೊಡೋದು. ಅವರಿಗೆ ಒಂಥರಾ ಡಿವೈನ್ ಶಕ್ತಿಗಳಿವೆ ಅಂತಾರೆ. ಅವರ ಕೊರಳಲ್ಲಿ ದಪ್ಪದಪ್ಪ ರುದ್ರಾಕ್ಷಿ ಮಾಲೆ ಇರುತ್ತೆ, ಎದುರಿಗೆ ಕೂತವರ ನೆಗಟಿವ್ ಎನರ್ಜಿನೆಲ್ಲ ಆ ಮಣಿಗಳು ಹೀರಿ ಬಿಡ್ತಾವಂತೆ. ಎಲ್ಲರ ಸಮಸ್ಯೆಗಳನ್ನು ಮಾತಾಡಿ ಬಗೆಹರಿಸಿಬಿಡ್ತಾರೆ, ನಿಮ್ಮಿಬ್ಬರ ಸಮಸ್ಯೆ ಪರಿಹಾರವಾಗುತ್ತೆ. ಆದ್ರೆ ಒಂದು ಕಂಡಿಷನ್, ನಿನ್ನ ಹೆಂಡತಿಗೆ ಅಲ್ಲಿಗೆ ಹೋಗೋದು ಗೊತ್ತಾಗೋದು ಬೇಡ, ಹೋದ ಮೇಲೆ ಹೇಗೂ ಗೊತ್ತಾಗುತ್ತೆ. ಏನಾದ್ರೂ ಬೇರೆ ಕಾರಣ ಹೇಳಿ ಕರೆದುಕೊಂಡು ಬಂದುಬಿಡು. ಬಾಂಬೆಯವನ ಫೋನ್ ನಂಬರ್ ಕೊಡು, ಅವನನ್ನು ಕರೆಸೋ ಜವಾಬ್ದಾರಿ ಚಾನಲ್ ನವರದ್ದು. ಅವರು ಹೇಗಾದ್ರೂ ಕರೆಸಿಕೊಳ್ತಾರೆ…

ವಿಜಯಮ್ಮ ಹೇಳಿದ್ದನ್ನು ನಾನು ನಂಬಿದೆ ಸಾರ್, ಅವರು ಹೇಳಿದ ಹಾಗೇನೇ ಮಾಡಿದೆ.
ವಿಷಯನೂ ಹೇಳದೇ ಹೆಂಡತಿನಾ ಯಾಕ್ ಕರ್ಕೊಂಡ್ ಹೋದೆ? ಅಂತ ರೇಗಿದೆ.
ಏನ್ ಮಾಡಲಿ ಸಾರ್, ಅದೇ ನಾನ್ ಮಾಡಿದ ತಪ್ಪು ಎನ್ನುತ್ತ ತಲೆತಗ್ಗಿಸಿಕೊಂಡ. ಕಥೆ ಮುಂದುವರೆಯಿತು.

ಮುಂದಿನದ್ದನ್ನು ನಾನೂ ಟೀವಿಯಲ್ಲಿ ನೋಡಿದ್ದೆ. ಕೌಟುಂಬಿಕ ಸಮಸ್ಯೆಗಳನ್ನು ಒಂಥರಾ ಹಳ್ಳಿ ಪಂಚಾಯ್ತಿ ರೀತಿಯಲ್ಲಿ ಬಗೆಹರಿಸುವ ಕಾರ್ಯಕ್ರಮ ಅದು. ಕಾರ್ಯಕ್ರಮದಲ್ಲಿ ಜಗಳ ಆಗುತ್ತೋ ಅಥವಾ ಜಗಳಕ್ಕಾಗಿ ಕಾರ್ಯಕ್ರಮ ಮಾಡ್ತಾರೋ ಗೊತ್ತಾಗೋದೇ ಇಲ್ಲ. ನಿರೂಪಕಿ ಜಗಳ ಮಾಡಿಕೊಂಡು ಬಂದವರನ್ನು ಪ್ರಶ್ನೆ ಕೇಳುವ ಧಾಟಿಯಲ್ಲೇ ಜಗಳ ಮಾಡಿಸುವ ಸಂಚು ಕಾಣಿಸುತ್ತದೆ. ಆಮೇಲೆ ಚಪ್ಪಲಿಯಲ್ಲಿ ಹೊಡೆಯೋ ಪ್ರೋಗ್ರಾಂ. ಕ್ಯಾಮೆರಾಗಳು ಎಲ್ಲಾ ದಿಕ್ಕುಗಳಿಂದಲೂ ಓಡಾಡುತ್ತೆ. ನಿರೂಪಕಿ ಮಾತ್ರ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿರುತ್ತಾರೆ. ನೆಗೆಟಿವ್ ಎನರ್ಜಿ ಹೀರುವ ಮಣಿಗಳು ಫಳಫಳ ಹೊಳೆಯುತ್ತಾ ಇರುತ್ತವೆ.

ಇವನ ವಿಷಯದಲ್ಲಿ ನಡೆದದ್ದೂ ಅದೇನೇ. ಬಾಂಬೆಯವನನ್ನು ಚಾನಲ್ ನವರೇ ಪುಸಲಾಯಿಸಿ ಏರ್ ಟಿಕೆಟ್ ಮಾಡಿಸಿ ಕರೆಸಿಕೊಂಡಿದ್ದರು. ಹೀಗೆ ಕ್ಯಾಮೆರಾಗಳ ಎದುರು, ಲಕ್ಷಾಂತರ ಕಣ್ಣುಗಳ ಮುಂದೆ ತನ್ನನ್ನು ತಾನು ಸಮರ್ಥಿಸಿಸಿಕೊಳ್ಳಬೇಕಾದ ಅಸಹಾಯಕತೆಯಿಂದಾಗಿ ಈಕೆ ಕಂಗೆಟ್ಟಿದ್ದಳು. ಅನುರಾಧರಿಂದ ಪ್ರಶ್ನೆಗಳ ಕೂರಂಬು ತೂರಿಬರುತ್ತಲೇ ಇತ್ತು. ಆಕೆ ಅಳ್ತಾ ಇದ್ದಳು, ತನ್ನನ್ನು ಯಾವುದೋ ಜ್ಯೋತಿಷಿ ಬಳಿ ಕರೆದುಕೊಂಡು ಹೋಗುವುದಾಗಿ ಹೇಳಿ ಇಲ್ಲಿಗೆ ಕರೆತಂದು ಮರ್ಯಾದೆ ಕಳೆದ ಗಂಡನ ಮೇಲೆ ಅಸಹನೆಯಿಂದ ಮಿಡುಕುತ್ತಿದ್ದಳು. ಪರಪುರುಷನ ಜತೆ ಸ್ನೇಹ ಮಾಡಿದ ಹೆಂಡತಿಯ ಮೇಲೆ ಸೇಡು ತೀರಿಸಿಕೊಂಡ ವಿಕೃತ ಸಂತೋಷ ಇವನ ಮುಖದಲ್ಲಿ.

ಚರ್ಚೆ ನಡೆಯುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಇವನ ತಮ್ಮ ಸಭಿಕರ ಸಾಲಿನಿಂದ ಎದ್ದುಬಂತು ಬಾಂಬೆಯವನ ಮೇಲೆ ಎರಗಿ ದಾಳಿ ಮಾಡುತ್ತಾಳೆ. ಅದರಿಂದ ಸ್ಫೂರ್ತಿ ಪಡೆದ ಇವನು ಹೆಂಡತಿಯನ್ನೇ ಎಲ್ಲರ ಎದುರು ಬಾರಿಸುತ್ತಾನೆ. ಇಬ್ಬರೂ ನೆಲದ ಮೇಲೆ ಬಿದ್ದು ಒದ್ದಾಡುತ್ತಾರೆ. ಅನುರಾಧ ಗಲಾಟೆ ಮಾಡಬೇಡಿ ಎಂದು ಹಣೆಹಣೆ ಚಚ್ಚಿಕೊಂಡು ಹೇಗೋ ಒಂದು ಬ್ರೇಕ್ನ ಬಳಿಕ ಎಲ್ಲರನ್ನೂ ಸಮಾಧಾನಪಡಿಸುತ್ತಾಳೆ.

ಏನಮ್ಮಾ, ಕಡೆದಾಗಿ ಕೇಳ್ತಾ ಇದ್ದೀನಿ, ಏನ್ ಮಾಡ್ತೀಯಾ? ಎಂದು ನಿರೂಪಕಿ ಘಟವಾಣಿ ಹೆಂಗಸಿನ ಶೈಲಿಯಲ್ಲಿ ಈಕೆಯನ್ನು ಕೇಳುತ್ತಾಳೆ. ನಾನು ಬಾಂಬೆಯವನ ಜತೆ ಹೋಗ್ತೀನೋ ಇಲ್ವೋ ಗೊತ್ತಿಲ್ಲ, ಆದರೆ ನನ್ನನ್ನು ಇಲ್ಲಿಗೆ ತಂದು ಮಯರ್ಾದೆ ಕಳೆದ ಗಂಡನ ಮನೆಗಂತೂ ಹೋಗಲಾರೆ ಎಂದು ಆಕೆ ಅಲ್ಲಿಂದ ಎದ್ದುಹೋಗುತ್ತಾಳೆ. ಮತ್ತೆ ಒಂದಷ್ಟು ಗಲಾಟೆ, ಪೊಲೀಸರು, ರಂಪಾಟ. ಅಲ್ಲಿಗೆ ಎಪಿಸೋಡು ಮುಗಿಯುತ್ತದೆ.

ಇವನು ನನ್ನ ಬಳಿ ಬರುವುದಕ್ಕೂ ಮುನ್ನವೇ, ನನ್ನ ಗೆಳತಿ ಈ ಕಾರ್ಯಕ್ರಮದ ವಿಡಿಯೋ ಲಿಂಕ್ಗಳನ್ನು ನನಗೆ ಕಳುಹಿಸಿದ್ದಳಾದ್ದರಿಂದ ಈ ಎಲ್ಲ ಕದನವನ್ನೂ ನೋಡಿದ್ದೆ.
ಅಲ್ಲಪ್ಪ, ಆ ಹೆಣ್ಣುಮಗಳ ಮೇಲೆ ಹಾಗೆ ಕೈ ಮಾಡಿದೆಯಲ್ಲ, ಅಸಹ್ಯ ಅನ್ನಿಸಲ್ವಾ ನಿನ್ನ ಮೇಲೆ ನಿನಗೆ? ಅಂತ ಕೇಳಿದೆ. ನಿಜ ಹೇಳಬೇಕೆಂದರೆ ಇವನನ್ನು ಎದುರಿಗೆ ಕೂರಿಸಿಕೊಂಡು ಮಾತಾಡ್ತಾ ಇದ್ದಿದ್ದಕ್ಕೇ ನನಗೆ ನನ್ನ ಮೇಲೆ ಅಸಹ್ಯ ಹುಟ್ಟುವಂತಾಗಿತ್ತು. ಸಾರ್, ತಪ್ಪಾಯ್ತು, ಹಾಗೆ ಮಾಡಬಾರದಿತ್ತು ಎನ್ನುತ್ತ ಮುಷ್ಠಿ ಬಿಗಿಹಿಡಿದು ತನ್ನ ಬಲಗೈಗೆ ಶಿಕ್ಷೆ ಕೊಡುತ್ತಿರುವಂತೆ ತಿರುಚಿದ.
ಏನ್ ಮಾಡಲಿ ಸಾರ್, ಪ್ರೋಗ್ರಾಂನವರು ಮೊದಲೇ ನನ್ನ ತಮ್ಮನ ಜತೆ ಮಾತಾಡಿದ್ದರಂತೆ. ನಾವು ಸಿಗ್ನಲ್ ಕೊಡ್ತೀವಿ. ಅವಾಗ ಬಂದು ಬಾಂಬೆಯವನಿಗೆ ನಾಲ್ಕು ತದುಕು. ಉಳಿದದ್ದು ನಾವು ನೋಡ್ಕೋತೀವಿ ಅಂತ. ನಾವು ಮಾತಾಡೋ ಟೈಮಿನಲ್ಲಿ ಸಿಗ್ನಲ್ ಬಂದಿದೆ. ಅವನು ಬಂದು ಹೊಡೆದ. ಅದನ್ನು ಇವಳು ಪ್ರತಿಭಟಿಸಿದ್ದು ನಂಗೆ ಸರಿ ಅನಿಸಲಿಲ್ಲ, ಕೋಪದಿಂದ ಹೊಡೆದೆ ಸಾರ್, ಹೊಡೀಬಾರದಿತ್ತು ಸಾರ್ ಅಂದ.

ಸರಿ, ಆಮೇಲೇನಾಯ್ತು, ಅದನ್ನಾದ್ರೂ ಹೇಳು ಅಂದೆ.
ಇನ್ನೇನ್ ಸಾರ್, ಎಲ್ಲಾ ಮುಗಿದುಹೋಯ್ತು. ಇವಳು ಹೋಗಿ ತವರು ಮನೆಯಲ್ಲಿ ಕೂತ್ಕೊಂಡಳು. ವಾಪಾಸ್ ಬಾ ಅಂತ ಫೋನ್ ಮಾಡಿ ಹೇಳಿದೆ. ಕೇಳಲಿಲ್ಲ. ಅವಳು ರಸ್ತೆಯಲ್ಲಿ ಓಡಾಡದಂತೆ ಆಗೋಗಿದೆ ಸಾರ್. ನಿಮಗೇ ಗೊತ್ತಲ್ವಾ ಸಾರ್, ನಮ್ಮ ಎಪಿಸೋಡು ಮೂರು ದಿನ ಪ್ರಸಾರ ಮಾಡಿದ್ರು ಚಾನಲ್ನಲ್ಲಿ. ಅದರ ಮೇಲೆ ರಿಪೀಟ್ ಟೆಲಿಕಾಸ್ಟ್ಗಳು ಬೇರೆ. ತುಂಬಾ ಜನ ನೋಡಿದ್ದಾರೆ. ಯಾರು ಸಿಕ್ಕರೂ ನೀವು ಟೀವಿಯಲ್ಲಿ ಬಂದಿದ್ರಿ ಅಲ್ವಾ ಅಂತಾರೆ. ನನಗೇ ತಲೆ ಎತ್ತಿಕೊಂಡು ತಿರುಗಾಡೋದಕ್ಕೆ ಸಾಧ್ಯವಾಗ್ತಾ ಇಲ್ಲ. ಇನ್ನು ಅವಳ ಕಥೆ ನೀವೇ ಯೋಚನೆ ಮಾಡಿ ಸಾರ್.

ಸಾರ್, ಶೂಟಿಂಗ್ ಆದ ಮೇಲೆ ನಾನು ಮಾಡಿದ್ದು ತಪ್ಪು ಅಂತ ನಂಗೆ ಗೊತ್ತಾಯ್ತು. ಶೋನ ದಯವಿಟ್ಟು ಪ್ರಸಾರ ಮಾಡಬೇಡಿ. ಮಾಡಿದರೆ ನಾನು, ನನ್ನ ಹೆಂಡ್ತಿ ಒಂದಾಗೋದಕ್ಕೆ ಇರೋ ಕಡೆಯ ಅವಕಾಶನೂ ಹಾಳಾಗುತ್ತೆ ಅಂತ ಪರಿಪರಿಯಾಗಿ ಬೇಡಿಕೊಂಡೆ ಸಾರ್. ಅವರು ಕೇಳಲೇ ಇಲ್ಲ. ಕೋಟರ್ಿನಲ್ಲಿ ಸ್ಟೇ ತಗೊಳ್ಳೋದಕ್ಕೆ ಸಮಯ ಇರಲಿಲ್ಲ ಸಾರ್, ರಜೆ ಬಂದಿತ್ತು. ಕಡೆಗೆ ಗಾಂಧಿನಗರದಲ್ಲಿ ಇದ್ದಾರಲ್ಲ ಸಾರ್, ಫೇಮಸ್ ಲಾಯರ್ ಎಸ್.ಸಿ. ಮಥುರಾನಾಥ್ ಅಂತ. ಅವರ ಬಳಿ ಹೋದೆ. ಅವರು ಒಂದು ಲೀಗಲ್ ನೋಟಿಸ್ ಕೊಟ್ರು ಚಾನಲ್ಗೆ. ಯಾವುದೇ ಕಾರಣಕ್ಕೂ ಪ್ರಸಾರ ಮಾಡಬಾರದು ಅಂತ. ಅವರು ಕ್ಯಾರೇ ಅನ್ನಲಿಲ್ಲ ಸಾರ್, ಪ್ರಸಾರ ಮಾಡೇಬಿಟ್ರು.

ಅದ್ಸರಿ ಈಗೇನ್ ಮಾಡೋದು? ಏನ್ ಮಾಡಿದರೆ ನಿನ್ನ ಪತ್ನಿ ವಾಪಾಸ್ ಬರ್ತಾಳೆ ಅಂದುಕೊಂಡಿದ್ದೀಯಾ?
ಗೊತ್ತಾಗ್ತಾ ಇಲ್ಲ ಸಾರ್. ತುಂಬಾ ಜನರ ಹತ್ರ ಹೋಗಿ ಕೇಳಿದೆ. ಎಲ್ಲರೂ ಬೇರೆಬೇರೆಯಾಗಿಬಿಡಿ, ಲೀಗಲ್ ಆಗಿ ಸೆಪರೇಟ್ ಆಗಿಬಿಡಿ ಅಂತಾರೆ. ಅವರಿಗೇನ್ ಗೊತ್ತು ಸಾರ್. ನನ್ನ ಹೆಂಡತಿ ಒಳ್ಳೆಯವಳು. ಹತ್ತು ವರ್ಷ ಸಂಸಾರ ಮಾಡಿದ್ದೀನಿ ಸಾರ್. ಮಗು ತಾಯಿ ನೆನಪಿಸಿಕೊಂಡು ಅಳುತ್ತೆ. ಕೌನ್ಸಿಲಿಂಗ್ ಮಾಡಿಸ್ತಾ ಇದ್ದೀನಿ. ಸರಿ ಹೋಗ್ತಾ ಇಲ್ಲ. ನಂಗೆ ಅವಳು ಬೇಕು ಸಾರ್, ಅವಳು ಬೇಕು….
ಇವನು ಇಷ್ಟೆಲ್ಲ ಮಾತನಾಡುವಾಗ ಡಾ. ನೀಲಾ ನೆನಪಾದರು. ಮಹಿಳೆಯರಿಗೆ ಸಂಬಂಧಿಸಿದ ಎನ್ಜಿಓದಲ್ಲಿ ಕೆಲಸ ಮಾಡ್ತಾ ಇರೋರು ಅವರು. ಲೈಂಗಿಕ ಶೋಷಿತ ಹೆಣ್ಣುಮಕ್ಕಳ ಬಗ್ಗೆ ಹೆಚ್ಚು ಕೆಲಸಮಾಡಿದವರು. ಅವರು ಇವನಿಗೂ ಪರಿಚಯವಿತ್ತು. ಸಮಸ್ಯೆ ಹೀಗಿದೆ ಮೇಡಂ, ಬನ್ನಿ ಮಾತಾಡೋಣ ಅಂದೆ, ಮಾರನೇ ದಿನವೇ ಅವರೂ ಬಂದರು. ಮತ್ತೆ ಅವರೆದುರು ಎಲ್ಲ ವಿಷಯಗಳು ಪ್ರಸ್ತಾಪವಾದವು. ಇವನ ಬ್ಯಾಗ್ ತುಂಬಾ ಬಾಂಬೆಯವನ ವಿರುದ್ಧದ ಸಾಕ್ಷ್ಯಗಳು.

ನಾನೂ, ಮೇಡಂ ಇಬ್ಬರೂ ರೇಗಿದೆವು. ನಿಮ್ಮ ಸಾಕ್ಷ್ಯಗಳನ್ನೆಲ್ಲ ಮೊದಲು ಬೆಂಕಿಗೆ ಹಾಕಿ ಆಮೇಲೆ ನಿಮ್ಮಿಬ್ಬರ ಸಂಬಂಧ ಸುಧಾರಿಸಿಕೊಳ್ಳೋದಕ್ಕೆ ಪ್ರಯತ್ನಪಡು. ನಿನ್ನ ಸಾಕ್ಷ್ಯಗಳು ನಿನ್ನ ವಿರುದ್ಧವೇ ಕೆಲಸ ಮಾಡಿವೆ. ಅವುಗಳಿಂದಾಗಿಯೇ ನೀನು ಕೆಟ್ಟಿದ್ದೀಯ. ನಿನ್ನನ್ನು ನೀನು ಸಮರ್ಥಿಸಿಕೊಳ್ಳುವುದಕ್ಕೆ ಅವಳನ್ನು ಕೆಟ್ಟವಳನ್ನಾಗಿಮಾಡಬೇಕಿತ್ತು. ಅದನ್ನು ನೀನು ಯಶಸ್ವಿಯಾಗಿ ಮಾಡಿದ್ದೀ. ಇನ್ನೇನೂ ಉಳಿದಿಲ್ಲ. ಆಕೆಗೆ ಬದುಕುವ ಮಾರ್ಗವನ್ನೇ ಬಂದ್ ಮಾಡಿದ್ದೀಯ. ಅವಳು ಈಗ ನಿನ್ನ ಜತೆ ನಾಯಿಯಂತೆ ಬದುಕಿರುತ್ತಾಳೆ ಅನ್ನೋದು ನಿನ್ನ ಲೆಕ್ಕಾಚಾರವಾಗಿದ್ದಿರಬೇಕು. ಆದರೆ ಅವಳ ಕಣ್ಣಿನಲ್ಲಿ ನೀನು ಪಾತಾಳಕ್ಕೆ ಇಳಿದುಹೋಗಿದ್ದೀಯಾ. ಹಾಗಾಗಿ ಅವಳು ನಿನ್ನ ಜತೆ ಬದುಕೋದು ಸಾಧ್ಯವೇ ಇಲ್ಲ ಅನ್ನಿಸುತ್ತೆ.

ನಾವಿಬ್ಬರೂ ಅಥವಾ ಇಡೀ ಸಮಾಜವೇ ಬಂದು ಅವಳ ಎದುರು ನಿಂತು, ನಿನ್ನ ತಪ್ಪುಗಳನ್ನು ಮನ್ನಿಸಿ ನಿನ್ನ ಜತೆ ಸಂಸಾರ ಮುಂದುವರೆಸಲು ಹೇಳಿದರೂ ಆಕೆ ಕೇಳಲಾರಳೇನೋ. ಹೀಗಾಗಿ ನಾವು ಮಾತಾಡೋದೂ ಸರಿಯಲ್ಲ. ನಿನ್ನ ಪರವಾಗಿ ಮಾತನಾಡೋದಕ್ಕೂ ಏನೂ ಉಳಿದಿಲ್ಲ.

ಈಗ ನಿನಗಿರೋದು ಒಂದೇ ದಾರಿ. ಅವಳ ಕಾಲು ಹಿಡಿದು ಅವಳನ್ನು ಒಪ್ಪಿಸೋದು. ನಿನ್ನ ಮೇಲಿಟ್ಟ ನಂಬಿಕೆಯನ್ನು ನೀನು ಒಡೆದು ಚೂರು ಮಾಡಿದ್ದೀ. ಅದನ್ನು ಸರಿಪಡಿಸಿಕೊಳ್ಳುವುದು ಒಂದು ಭೇಟಿ, ಒಂದು ಸಿಟ್ಟಿಂಗ್ನಲ್ಲಿ ಆಗುವ ಕೆಲಸವಲ್ಲ. ನೋಡು ಪ್ರಯತ್ನಪಡು, ಉಳಿದದ್ದು ನಿನಗೆ ಸೇರಿದ್ದು…
ಹೀಗೆಂದು ನಾವು ಸುಮ್ಮನಾದೆವು.
ಅವಳು ಒಪ್ಪದಿದ್ದರೆ ನನ್ನ ಮಗಳ ಕತೆ? ಅವಳು ಮಾನಸಿಕ ಅಸ್ವಸ್ಥೆಯಾಗಿಬಿಡ್ತಾಳೆ ಸಾರ್ ಎಂದು ಅವನು ಬಿಕ್ಕಿದ.
ನಮ್ಮ ಬಳಿ ಉತ್ತರವಿರಲಿಲ್ಲ. ಟಿವಿ ಕಾರ್ಯಕ್ರಮದ ನಿರೂಪಕಿ ಅನುರಾಧಾ ಅವರನ್ನೇ ಕೇಳಬೇಕೆನಿಸಿತು. ಆಕೆ ಈಗೀಗ ತುಂಬಾ ಬಿಜಿ. ರಾಜಕೀಯ ಪಕ್ಷವೊಂದರ ಕಾರ್ಯಕರ್ತೆಯಾಗಿ ಅವರು ಸಮಾಜಸೇವೆಯಲ್ಲಿ ತೊಡಗಿದ್ದಾರೆ.



Friday 25 May 2012

ಡಬ್ಬಿಂಗ್ : ಸಮಸ್ಯೆಯ ಆಯಾಮಗಳು, ವಿರೋಧಾಭಾಸಗಳು, ವಿಪರ್ಯಾಸಗಳು - ಎನ್. ಮನು ಚಕ್ರವರ್ತಿ



ಎನ್. ಮನುಚಕ್ರವರ್ತಿ ನಾಡಿನ ಹೆಸರಾಂತ ವಿಮರ್ಶಕರು. ರಾಜ್ಯದಲ್ಲಿ ನಡೆದಿರುವ ಡಬ್ಬಿಂಗ್ ಕುರಿತ ವಾದ ವಿವಾದಗಳ ಸಂದರ್ಭದಲ್ಲಿ ಅವರು 'ದ ಸಂಡೆ ಇಂಡಿಯನ್' ಪತ್ರಿಕೆಗೆ ಬರೆದಿರುವ ಒಂದು ತಲಸ್ಪರ್ಶಿ ಲೇಖನ ಇಲ್ಲಿದೆ... 

ಸಾಹಿತ್ಯ ಕ್ಷೇತ್ರದಲ್ಲಿ ಅನುವಾದಕ್ಕೆ ಬೆಲೆ, ಗೌರವ, ಮನ್ನಣೆ ಅಪಾರವಾಗಿ, ನಿರ್ವಿವಾದವಾಗಿ ದೊರೆತಿದೆ. ಅನುವಾದ ಕ್ರಿಯೆಯನ್ನು ಸೃಜನಶೀಲ ಕ್ರಿಯೆಯಾಗಿಯೇ ಗುರುತಿಸಲಾಗಿದೆ. ಒಂದು ಸಮುದಾಯಕ್ಕೆ ಅನ್ಯ ಭಾಷೆಯ ಕೃತಿಗಳು ಅನುವಾದಗಳ ಮೂಲಕ ಬಂದಾಗ ಅವುಗಳನ್ನು ದೊಡ್ಡ ಕೊಡುಗೆಯಾಗಿ ಎಲ್ಲರೂ ಮುಕ್ತವಾಗಿ ಸ್ವೀಕರಿಸುತ್ತಾರೆ. ತಮ್ಮ ಭಾಷೆಗಳಿಗೆ, ಸಂಸ್ಕೃತಿಗಳಿಗೆ ಅನ್ಯಭಾಷಾ ಕೃತಿಗಳು ಮಾರಕ, ಅಪಾಯ ಎಂದು ಯಾರೂ ಆರೋಪ ಹೊರೆಸುವುದಿಲ್ಲ. ಸ್ಥಳೀಯ ಸಂಸ್ಕೃತಿಗೆ ಅನ್ಯ ಸಂಸ್ಕೃತಿಗಳ ಕೃತಿಗಳು ಬಂದಾಗ ಅವುಗಳನ್ನು ಒಂದು ಸಾಂಸ್ಕೃತಿಕ ಅನುಸಂಧಾನವನ್ನಾಗಿ ಸ್ವೀಕರಿಸಲಾಗುತ್ತದೆ. ಸ್ಥಳೀಯತೆಗೆ ಮತ್ತೊಂದು ಸಾಂಸ್ಕೃತಿಕ ನೆಲೆ ದಕ್ಕಿದಂತೆ ಈ ಪ್ರಕ್ರಿಯೆಯನ್ನು ವ್ಯಾಖ್ಯಾನಿಸಲಾಗುತ್ತದೆ.

ಸಿನೆಮಾ ಜಗತ್ತಿಗೆ ಬಂದಾಗ ನೇರವಾಗಿ ಮತ್ತೊಂದು ಭಾಷೆಯಲ್ಲೇ ಚಿತ್ರಗಳು ಸ್ಥಳೀಯವಾಗಿ ಬಿಡುಗಡೆಯಾದಾಗ ಅದನ್ನು ಯಾರೂ, ಎಂದೂ ದೊಡ್ಡ ಅಪಾಯವೆಂದು ಪರಿಗಣಿಸುವುದಿಲ್ಲ. ಚಿತ್ರಗಳು ಯಾವ ಭಾಷೆ, ಸಂಸ್ಕೃತಿಯಿಂದ ಬಂದರೂ ಅವುಗಳನ್ನು ಸಹಜವಾಗಿಯೇ ಸ್ವೀಕರಿಸುವ ರೀತಿಯನ್ನು ಎಲ್ಲರೂ ಗಮನಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೇರೆ ಭಾಷೆಗಳ ಚಿತ್ತಗಳು ಡಬ್ ಆದಾಗ (ಇದನ್ನು ಮೌಖಿಕ ಅನುವಾದ ಎಂದು ಕರೆಯೋಣ) ಅನೇಕ ಬಗೆಯ ವಿರೋಧಗಳು ಎದ್ದು ಬರುವುದನ್ನು ಕಂಡಿದ್ದೇವೆ. ಕರ್ನಾಟಕದಲ್ಲಿ ಡಬ್ ಆದ ಚಿತ್ರಗಳ ವಿರುದ್ಧ ದೊಡ್ಡ ಆಂದೋಲನವೇ ಪ್ರಾರಂಭವಾಗಿದೆ. ಕೇವಲ ಚಿತ್ರರಂಗದ ಒಳಗಿರುವವರು ಮಾತ್ರ ಈ ವಿರೋಧವನ್ನು ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ಸಾಂಸ್ಕೃತಿಕ ಕ್ಷೇತ್ರದ ಅನೇಕರು ಡಬ್ ಆದ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಒದಗಿ ಬಂದಿರುವ ದೊಡ್ಡ ಶತ್ರುವೆಂದೇ ಕಾಣುತ್ತಿರುವ ಸಂಗತಿಯನ್ನು ನಾವು ಗಮನಿಸಬಹುದು. ಕನ್ನಡ ಭಾಷೆಗೆ, ಸಂಸ್ಕೃತಿಗೆ, ಕನ್ನಡ ಜನರ ಸಂವೇದನೆಗೆ ಡಬ್ ಆದ ಚಿತ್ರಗಳು (ಅದರಲ್ಲೂ ಕೆಳದರ್ಜೆಯ ಹಾಲಿವುಡ್ನ ಚಿತ್ರಗಳು ಮತ್ತು ಹಿಂದಿ, ತಮಿಳು, ತೆಲುಗು ಚಿತ್ರಗಳು) ದೊಡ್ಡ ರೀತಿಯಲ್ಲಿ ಹಾನಿಯನ್ನುಂಟುಮಾಡುವುದರಲ್ಲಿ ಸಂದೇಹವಿಲ್ಲ ಎಂಬ ಆಲೋಚನೆ ಈ ವಾದದ ಹಿಂದೆ ಇದೆ. ಇದನ್ನು ಸಾಂಸ್ಕೃತಿಕ ದುರಂತವೆಂದು ಬಣ್ಣಿಸಲಾಗುತ್ತಿದೆ. ಒಂದು ಸಮುದಾಯದ ಸದಭಿರುಚಿಯನ್ನು ನಾಶಮಾಡುವ ಶಕ್ತಿಯಾಗಿ ಡಬ್ ಆದ ಚಿತ್ರಗಳನ್ನು ಕಾಣಲಾಗುತ್ತಿದೆ. ಅಷ್ಟೇ ಅಲ್ಲದೆ ವ್ಯಾವಹಾರಿಕ ದೃಷ್ಟಿಯಿಂದಲೂ ಡಬ್ ಆದ ಚಿತ್ರಗಳನ್ನು ಕನ್ನಡ ಚಿತ್ರೋದ್ಯಮದ ಮಹಾ ದೊಡ್ಡ ಶತ್ರುವೆಂದೇ ಪರಿಗಣಿಸಲಾಗುತ್ತಿದೆ. ಬೇರೆ ಭಾಷೆಗಳ ಚಿತ್ರಗಳ ರಾಕ್ಷಸಾಕಾರದ ಬಂಡವಾಳದ ಎದುರು ಕನ್ನಡ ಚಿತ್ರಗಳು ಕೊಚ್ಚಿಹೋಗುತ್ತವೆ, ಅವುಗಳಿಗೆ ಮಾರುಕಟ್ಟೆಯಲ್ಲಿ ಯಾವ ಸ್ಥಾನವೂ ದಕ್ಕುವುದಿಲ್ಲ ಎಂಬ ವಾದ ಈ ನಿರ್ದಿಷ್ಟ ವಿರೋಧದಲ್ಲಿದೆ. ಅಂದರೆ ಡಬ್ಬಿಂಗ್ಗೆ ಇರುವ ವಿರೋಧಗಳು ಎರಡು ಬಗೆಯವು. ಮೊದಲನೆಯದು ಸಾರ್ವತ್ರಿಕವಾದ, ಸಾರ್ವಜನಿಕವಾದ ಸಾಂಸ್ಕೃತಿಕ ವಿರೋಧ. ಎರಡನೆಯದು ನಿರ್ದಿಷ್ಟವಾದ ಚಿತ್ರರಂಗದ ಆಂತರಿಕ ವಿರೋಧ. ಒಂದಕ್ಕೆ ತಾತ್ವಿಕ ಆಯಾಮಗಳಿವೆ, ಮತ್ತೊಂದಕ್ಕೆ ವ್ಯಾವಹಾರಿಕ ಗುಣವಿದೆ.

ಡಬ್ಬಿಂಗ್ ವಿರೋಧಕ್ಕೆ ವಿರೋಧ ಹುಟ್ಟಿರುವ ಸಂಗತಿಯನ್ನು ಸರಿಯಾಗಿ ಅರ್ಥೈಸಬೇಕು. ಡಬ್ಬಿಂಗ್ ಪರವಾಗಿ ವಾದಮಾಡುತ್ತಿರುವವರ ನಿಲುವನ್ನು ಪೂರ್ವಾಗ್ರಹಗಳಿಲ್ಲದೆ ಅರಿಯಬೇಕು. ಅಲ್ಲದೆ ಡಬ್ಬಿಂಗ್ ಸಮಸ್ಯೆಯನ್ನು ಬೇಕು-ಬೇಡಗಳ ಗಡಿಯನ್ನು ದಾಟಿ ಸರಿಯಾಗಿ ಅರಿತುಕೊಳ್ಳಬೇಕು. ಇದು ಎಲ್ಲರ ಮೂಲಭೂತ ಕರ್ತವ್ಯ.

ಡಬ್ಬಿಂಗ್ ಪರವಾಗಿ ವಾದ ಮಾಡುತ್ತಿರುವವರು ಸಾಮಾಜಿಕ ನ್ಯಾಯದ ವಾದವನ್ನು ಹೂಡುತ್ತಿದ್ದಾರೆ. ಬೇರೆ ಭಾಷೆಗಳಲ್ಲಿರುವ ಅತ್ಯುತ್ತಮ ಚಿತ್ರಗಳನ್ನು ಕೇವಲ ಒಂದು ವರ್ಗ ಮಾತ್ರ ನೋಡಲು ಈ ಸಮಾಜದಲ್ಲಿ ಅವಕಾಶವಿರಬೇಕೇ ಎಂದು ಈ ಪಂಥದವರು ಕೇಳುತ್ತಿರುವುದನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಭಾರತದ ಅನೇಕ ಭಾಷೆಗಳಲ್ಲಿ ಮತ್ತು ಹೊರ ದೇಶಗಳ ಅನೇಕ ಭಾಷೆಗಳಲ್ಲಿ ಸೃಷ್ಟಿಸಲ್ಪಡುವ ಅತ್ಯುತ್ತಮ ಚಲನಚಿತ್ರಗಳನ್ನು ನಮ್ಮ ಸಾಮಾನ್ಯರು, ಅಂತ್ಯಜರು ಕನ್ನಡದಲ್ಲೇ ಡಬ್ಬಿಂಗ್ ಮೂಲಕ ಯಾವ ಕಾರಣಕ್ಕೆ ನೋಡಬಾರದೆಂಬುದೇ ಅವರ ಪ್ರಶ್ನೆ. ಅತ್ಯುತ್ತಮ ಚಿತ್ರಗಳು ಎಲ್ಲರಿಗೂ ದಕ್ಕಬಾರದೇಕೆ ಎಂಬುದು ಇವರ ತೀಕ್ಷ್ಣವಾದ ಸವಾಲು. ಸಂಸ್ಕೃತಿ, ವ್ಯವಹಾರದ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರ ಇದು ಎಂಬುದೇ ಇವರ ಆರೋಪ. ಸಾಮಾಜಿಕ ನ್ಯಾಯವೆಂಬ ಪರಿಕಲ್ಪನೆಯನ್ನು ಇಟ್ಟುಕೊಂಡೇ ಡಬ್ಬಿಂಗ್ ಪರವಾಗಿ ವಾದಮಾಡುವವರು ತಮ್ಮ ಸಿದ್ಧಾಂತವನ್ನು ಹೀಗೆ ಅಭಿವ್ಯಕ್ತಿಗೊಳಿಸುತ್ತಿರುವುದನ್ನು ನಾವು ಕಡೆಗಣಿಸುವಂತಿಲ್ಲ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಸಾಂಸ್ಕೃತಿಕ ವಲಯಗಳಿಂದ ದೂರ ಉಳಿಯಬೇಕಾಗಿ ಬರುವುದು ಒಂದು ಸಾಮಾಜಿಕ ದುರಂತವೆಂದು ಗಟ್ಟಿಯಾಗಿ ಸಾರುತ್ತ, ಡಬ್ಬಿಂಗ್ ಅನ್ನು ಸ್ವಾಗತಿಸಿ, ಒಪ್ಪಿಕೊಳ್ಳಬೇಕು ಎಂಬುದು ಡಬ್ಬಿಂಗ್ ಪರವಾಗಿ ವಾದ ಮಾಡುವವರ ನಿಲುವಾಗಿದೆ.

ಡಬ್ಬಿಂಗ್ಗೆ ಬರುವ ವಿರೋಧವು ಉಳ್ಳವರ ತಂತ್ರ ಮತ್ತು ಇದೊಂದು ಬಗೆಯ ಬೌದ್ಧಿಕ ಶೋಷಣೆ ಎಂಬುದೇ ಡಬ್ಬಿಂಗ್ೆ ಪರವಾಗಿ ವಾದಮಾಡುತ್ತಿರುವವರ ಖಚಿತ ಸೈದ್ಧಾಂತಿಕ ನಿಲುವಾಗಿದೆ. ಮುಕ್ತ ಸಮಾಜದಲ್ಲಿ ಈ ರೀತಿಯ ನಿಷೇಧಗಳು ಇರಬಾರದೆಂಬುದು ಇವರ ಮತ್ತೊಂದು ವಾದ. ಸಮುದಾಯದಲ್ಲಿ ಜನರಿಗೆ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳುವ ಹಾಗಿಲ್ಲ, ಆ ರೀತಿಯ ಅಧಿಕಾರವನ್ನು ಯಾರೂ ಯಾರಿಗೂ ಪ್ರಜಾಪ್ರಭುತ್ವದಲ್ಲಿ ಕೊಟ್ಟಿಲ್ಲ, ಕೊಡಬಾರದೆಂಬುದೇ ಇವರ ರಾಜಕೀಯ ಸಿದ್ಧಾಂತವೂ ಹೌದು.

ಈ ಎರಡೂ ವಾದಗಳಲ್ಲಿ ಸತ್ಯವಿದೆ. ಎರಡು ಪಂಥಗಳ ವಿಚಾರಗಳಲ್ಲಿ ನಿಜವಾಗಲೂ ಒಪ್ಪಿಕೊಳ್ಳಲೇಬೇಕಾದ ಸಂಗತಿಗಳಿವೆ. ಹಾಗಾದರೆ ಈ ಡಬ್ಬಿಂಗ್ ಪರ/ವಿರೋಧ ನೆಲೆಗಳ ನಡುವೆ ಯಾವ ರೀತಿಯ ಅನುಸಂಧಾನವನ್ನು ಕಟ್ಟಲು ಸಾಧ್ಯ? ಈ ಎರಡೂ ಬಣಗಳನ್ನು ಒಟ್ಟುಮಾಡಬಹುದಾದ ಬುನಾದಿ ಯಾವುದು? ಕನರ್ಾಟಕದಲ್ಲಿ ಚಲನಚಿತ್ರೋದ್ಯಮವನ್ನು ಕಾಪಾಡುತ್ತಲೇ ನಮ್ಮ ಅಲ್ಪಸಂಖ್ಯಾತರಿಗೆ, ಬಹುಜನರಿಗೆ ಅತ್ಯುತ್ತಮವಾದ ಚಲನಚಿತ್ರಗಳನ್ನು ವೀಕ್ಷಿಸುವ ಸೌಲಭ್ಯವನ್ನು ಒದಗಿಸಿಕೊಡುವ ಸಾಧ್ಯತೆಗಳಿವೆಯೆ? ಡಬ್ಬಿಂಗ್ ಪರ/ವಿರೋಧ ಇರುವವರಿಬ್ಬರಲ್ಲೂ ಸತ್ಯಾಂಶಗಳಿವೆ ಎಂಬ ವಿಪರ್ಯಾಸವನ್ನು ಬಗೆಹರಿಸುವುದಾದರೂ ಹೇಗೆ? ಕರ್ನಾಟಕದ ಸಮುದಾಯಗಳು ಈ ವಿಷಯದ ಬಗ್ಗೆ ಇನ್ನಾದರೂ ಬಹಳ ಗಂಭೀರವಾಗಿ ಯೋಚನೆ ಮಾಡಿ ಪರಿಹಾರವನ್ನು ಹುಡುಕಬೇಕು. ಇದು ಇಂದಿನ ಅಗತ್ಯ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

ಡಬ್ಬಿಂಗ್ ವಿಷಯದಲ್ಲಿ ಪರ/ವಿರೋಧಗಳ ನಡುವೆ ಅನುಸಂಧಾನಗಳಿಗೆ ಅನೇಕ ಸಮಾನ ಅಂಶಗಳಿರುವುದನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯ. ವ್ಯಾವಹಾರಿಕ ದೃಷ್ಟಿಯಿಂದ ಡಬ್ಬಿಂಗ್ ವಿರೋಧಿಸುತ್ತಿರುವವರಿಗೂ ಕನ್ನಡ ಚಲನಚಿತ್ರಗಳು ಮಾರುಕಟ್ಟೆಯಲ್ಲಿ ಚೆನ್ನಾಗಿ ನಡೆಯಬೇಕು, ಒಳ್ಳೆಯ ಗುಣಮಟ್ಟವನ್ನು ಹೊಂದಿರಬೇಕೆಂಬ ಕಾಳಜಿ ಕೂಡ ಇದೆ. ಈಗ ಕನ್ನಡದ ಜನಪ್ರಿಯ ಚಲನಚಿತ್ರಗಳಿಗೆ ಹೇಳಿಕೊಳ್ಳುವಂತಹ ಗುಣಮಟ್ಟವಿಲ್ಲ ಎಂದು ಜನಪ್ರಿಯ ಸಿನೆಮಾ ಮಾಡುವವರಲ್ಲಿ ಅನೇಕರು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ.

ಸದಭಿರುಚಿಯ ಚಿತ್ರಗಳು ಕನ್ನಡ ಸಂಸ್ಕೃತಿಯಲ್ಲಿ ಉಳಿಯಬೇಕು ಎಂದು ವಾದ ಮಾಡುವವರು ವ್ಯಾವಹಾರಿಕವಾಗಿಯೂ ಕನ್ನಡ ಚಲನಚಿತ್ರಗಳು ಯಶಸ್ಸನ್ನು ಕಾಣಬೇಕೆಂದು ಬಯಸುವವರೇ. ಕಲಾತ್ಮಕ ಚಿತ್ರಗಳೆಂದುಕೊಂಡು ಅವುಗಳು ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಸೋತರೂ ಪರವಾಗಿಲ್ಲ ಎಂದು ಹೇಳುವವರಲ್ಲ ಇವರು. ಆದ್ದರಿಂದ ಡಬ್ಬಿಂಗ್ ವಿರೋಧಿ ನೆಲೆಯಲ್ಲಿ ಒಂದು ತೆರೆದ ಮನಸ್ಸಿರುವುದನ್ನು ನಾವು ಕಡೆಗಣಿಸುವಂತಿಲ್ಲ.

ಹಾಗೆಯೆ ಡಬ್ಬಿಂಗ್ ಪರ ಇರುವವರು ಕನ್ನಡ ಚಿತ್ರಗಳು ಯಶಸ್ಸನ್ನು ಕಾಣಬೇಕು, ವೀಕ್ಷಕರಲ್ಲಿ ಒಳ್ಳೆಯ ಸಂವೇದನೆಯನ್ನು ಹುಟ್ಟುಹಾಕಬೇಕೆಂಬ ಕಾಳಜಿ ಇರುವವರೇ. ಬೇರೆ ಸಂಸ್ಕೃತಿಗಳಿಂದ, ಭಾಷೆಗಳಿಂದ ಒಳ್ಳೆಯ ಚಲನಚಿತ್ರಗಳು ನಮಗೆ ಲಭ್ಯವಾಗಬೇಕೆಂದ ತಕ್ಷಣ ಕನ್ನಡ ಚಲನಚಿತ್ರಗಳ ಸೋಲನ್ನು ಇವರುಗಳು ಬಯಸುತ್ತಿರುವವರೆಂದು ಯಾರೂ ಹೇಳುವಹಾಗಿಲ್ಲ. ಹಾಗಾದರೆ ಸಮಸ್ಯೆ ಇರುವುದಾದರೂ ಎಲ್ಲಿ?

ನನ್ನ ಪ್ರಕಾರ ಎರಡು ಗುಂಪಿನವರೂ ಅರಿಯಬೇಕಾದ ಒಂದು ಸಂಗತಿಯಿದೆ. ಅದೇನೆಂದರೆ ತಾವು ಪರಸ್ಪರ ವಿರೋಧಿಗಳೆಂದುಕೊಂಡು ತಮ್ಮ ನಡುವೆ ವಾದ-ವಿವಾದಗಳನ್ನು ಹೆಚ್ಚಿಸಿಕೊಳ್ಳದೆ ಡಬ್ಬಿಂಗ್ ವಿಷಯದಲ್ಲಿ ಸಕರ್ಾರ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಕಾಳಜಿ, ಜವಾಬ್ದಾರಿಗಳ ಬಗ್ಗೆ ಎಲ್ಲರ ಗಮನವನ್ನೂ ಸೆಳೆಯಬೇಕು. ಕನ್ನಡದ ಕಲಾತ್ಮಕ ಚಿತ್ರಗಳನ್ನು ಕಡೆಗಣಿಸಿ ಅವುಗಳಿಗೆ ಎಲ್ಲೂ ಅವಕಾಶವಿಲ್ಲದಿರುವ ಪರಿಸ್ಥಿತಿ ಬಂದಿರುವುದು ಶೋಚನೀಯ (ಈ ರೀತಿಯ ಚಿತ್ರಗಳ ಬಿಡುಗಡೆಗೆ ಚಿತ್ರ ಮಂದಿರ ದಕ್ಕುವಂತೆ ಮಾಡುವುದು ತಮ್ಮ ಮೂಲಭೂತ ಜವಾಬ್ದಾರಿ ಎಂದು ಸರ್ಕಾರವಾಗಲಿ, ಚಲನಚಿತ್ರ ವಾಣಿಜ್ಯ ಮಂಡಳಿಯಾಗಲಿ ಇದುವರೆಗೂ ಮನಗಂಡಿಲ್ಲವೆಂಬುದೇ ದುರಂತದ ಸಂಗತಿ). ಹಾಗೆಯೇ, ಜನಪ್ರಿಯ ಸಿನೆಮಾಗಳು ಮತ್ತು ಕಲಾತ್ಮಕ ಸಿನೆಮಾಗಳು ಒಂದಕ್ಕೊಂದು ವಿರೋಧಿ ಎಂಬ ಪ್ರಜ್ಞೆಯು ಎರಡು ಗುಂಪುಗಳನ್ನು ಸೃಷ್ಟಿಸಿರುವುದು ಅನಗತ್ಯವಾದ ಸಾಂಸ್ಕೃತಿಕ ಸಂಗತಿ ಆಗಿಬಿಟ್ಟಿದೆ. ಈ ವಿರೋಧವನ್ನು ಸರ್ಕಾರ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ತಮ್ಮ ಅಸಡ್ಡೆಯಿಂದ ನೇರವಾಗಿ, ಪರೋಕ್ಷವಾಗಿ ಪೋಷಿಸಿವೆ. ಆದ್ದರಿಂದ ಡಬ್ಬಿಂಗ್ ಪರ/ವಿರೋಧಗಳು ತಮ್ಮ ನಿಜವಾದ ಎದುರಾಳಿಗಳನ್ನು ಕಾಣಬೇಕಾದದ್ದು ಸರ್ಕಾರದ ನೀತಿಗಳಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆಯಲ್ಲಿ.

ಜನಪ್ರಿಯ ಸಿನೆಮಾದ ಗುಣಮಟ್ಟ, ಡಬ್ಬಿಂಗ್ ಚಿತ್ರಗಳ ಸಾಂಸ್ಕೃತಿಕ ಗುಣ, ಕಲಾತ್ಮಕ ಚಿತ್ರಗಳ ಯಶಸ್ಸು ಸರ್ಕಾರದ ನೀತಿಗಳಿಗೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆಗೆ ನೇರವಾಗಿ ಸಂಬಂಧಪಟ್ಟ ವಿಷಯಗಳೆಂದು ಅರಿತು ಒಂದು ಆಂದೋಲನವನ್ನು ಒಟ್ಟಿಗೆ ನಡೆಸಬೇಕು. ಆಗ ಡಬ್ಬಿಂಗ್ ಆಗುವ ಚಲನಚಿತ್ರಗಳ ಗುಣವನ್ನು, ಕಲಾತ್ಮಕ ಚಿತ್ರಗಳ ಉಳಿವನ್ನು, ಕನ್ನಡ ಜನಪ್ರಿಯ ಸಿನೆಮಾದ ಒಳಿತನ್ನು ಏಕಕಾಲದಲ್ಲಿ ಕಾಯ್ದುಕೊಳ್ಳಬಹುದು. ಒಂದು ಇನ್ನೊಂದಕ್ಕೆ ವಿರೋಧಿಯಲ್ಲ ಎಂಬ ಪ್ರಾಥಮಿಕ ಸತ್ಯ ಎಲ್ಲರ ಅರಿವಿಗೆ ಬರಬೇಕು. ಅಲ್ಲದೆ, ಒಂದರ ಏಳಿಗೆಯೇ ಇನ್ನೊಂದರ ಏಳಿಗೆಯನ್ನು ಕಾಯುತ್ತದೆ ಎಂಬ ಸತ್ಯ ಮನದಟ್ಟಾಗುತ್ತದೆ. ಈ ಪ್ರಜ್ಞೆ ಎಲ್ಲರಲ್ಲೂ ಜಾಗೃತಗೊಂಡರೆ ಕರ್ನಾಟಕ ಚಲನಚಿತ್ರ ಸಂಸ್ಕೃತಿಯ ಅನೇಕ ದುರಂತಗಳನ್ನು ತಡೆಯಬಹುದು. 

ಸರ್ಕಾರದ ಸಾಂಸ್ಕೃತಿಕ ನೀತಿ (cultural policy) ರೂಪಿತವಾಗಬೇಕು. ಇದು ಎಲ್ಲರ ಸಂಘರ್ಷ. ಕೇವಲ ಎರಡು ಬಣಗಳ, ಪಂಗಡಗಳ, ಗುಂಪುಗಳ ಸಂಘರ್ಷ ಅಲ್ಲ. ಸರ್ಕಾರದ ಸಾಂಸ್ಕೃತಿ ನೀತಿಯಿಂದ ಮಾತ್ರ ಕನ್ನಡದಲ್ಲಿ ಉತ್ತಮ ಚಿತ್ರಗಳು ಬರಲು ಸಾಧ್ಯ ಮತ್ತು ಉತ್ತಮ ಚಿತ್ರಗಳು ಮಾತ್ರ ಡಬ್ ಆಗಿ ಕನ್ನಡಕ್ಕೆ ಬರಲು ಸಾಧ್ಯ. ಈ ವಿವೇಚನೆ ಇಂದು ಮೂಡಿಬರಬೇಕು. ಡಬ್ಬಿಂಗ್ನಿಂದ ಉತ್ತಮ ಕಾಣ್ಕೆಗಳು ನಮ್ಮ ಸಮುದಾಯಕ್ಕೆ ದಕ್ಕಬೇಕಾದರೆ ಅದಕ್ಕೆ ಅಗತ್ಯವಾಗಿ ಪೂರಕವಾದದ್ದು ಸರ್ಕಾರದ ನೀತಿ. ಹಾಗೆಯೆ, ಕನ್ನಡದ ಉತ್ತಮ ಚಿತ್ರಗಳಿಗೆ ಮನ್ನಣೆ ಬರಬೇಕಿದ್ದರೆ (ಅವು ಜನಪ್ರಿಯ ಸಿನೆಮಾಗಳಾಗಲಿ ಕಲಾತ್ಮಕ ಚಿತ್ರಗಳಾಗಲಿ) ಅದಕ್ಕೆ ಅಗತ್ಯವಾದದ್ದು ಸರ್ಕಾರದ ಉತ್ತಮ ನೀತಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ವಿವೇಚನಾಯುಕ್ತ ಸಂಹಿತೆ.

ಡಬ್ಬಿಂಗ್ ವಿರೋಧ/ಪರ ಗುಂಪುಗಳು ತಮ್ಮ ತಮ್ಮ ಕಾಳಜಿಗಳನ್ನು ಎತ್ತಿಹಿಡಿಯಲು ತಮ್ಮ ಒಟ್ಟೂ ನಿಲುವುಗಳನ್ನು ವಿರೋಧಿ ನೆಲೆಯಲ್ಲಿಟ್ಟು ನೋಡದೆ ಒಂದೇ ಕಾಳಜಿಯ ಎರಡು ವಿಭಿನ್ನ ಆದರೆ ಪೂರಕವಾದ ಆಯಾಮಗಳನ್ನಾಗಿ ನೋಡಲು ಕಲಿಯಬೇಕು. ಆದ್ದರಿಂದ ಒಂದು ಸಾಮಾಜಿಕ/ಸಾಂಸ್ಕೃತಿಕ ಆಂದೋಲನವನ್ನು ಒಟ್ಟಿಗೆ ಕೈಗೊಂಡು ಸಕರ್ಾರದ ಸಾಂಸ್ಕೃತಿಕ ನೀತಿಯು ಉಂಟಾಗುವಂತೆ ಪ್ರಯತ್ನಿಸಬೇಕು. ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆಯನ್ನು ಬದಲಿಸಲು ಪ್ರಯತ್ನಿಸಬೇಕು. ಹೀಗಾಗದಿದ್ದಲ್ಲಿ ಅಸಹ್ಯದ ಚಿತ್ರಗಳು ಮಾತ್ರ ಕನ್ನಡಕ್ಕೆ ಡಬ್ ಆಗಿ ಬರುತ್ತವೆ. ಅಲ್ಲದೆ ಕನ್ನಡ ಚಲನಚಿತ್ರ ಸಂಸ್ಕೃತಿ ತನ್ನ ಗುಣಮಟ್ಟವನ್ನು ಏರಿಸಿಕೊಳ್ಳುವುದೂ ಅಸಾಧ್ಯವಾಗುತ್ತದೆ. ಕಳಪೆ ಚಿತ್ರಗಳು ಡಬ್ ಆಗಿ ಬಂದಾಗ ಸ್ಪರ್ಧೆಯಿಂದಾಗಿ ಕನ್ನಡದ ಜನಪ್ರಿಯ ಸಿನೆಮಾ ಇನ್ನೂ ಕೆಳಮಟ್ಟಕ್ಕೆ ಇಳಿಯುವುದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗೆಯೇ ಈಗಲೇ ಮೂಲೆಗುಂಪಾಗಿರುವ ಕಲಾತ್ಮಕ ಚಿತ್ರಗಳೂ ಸಂಪೂರ್ಣವಾಗಿ ವಿನಾಶದ ಅಂಚಿಗೆ ತಳ್ಳಲ್ಪಡುತ್ತವೆ. ಇದು ಎಲ್ಲರ ಸಾಮೂಹಿಕ ದುರಂತವೇ ಸರಿ.

Monday 21 May 2012

ನಟರಾಜ್ ಹುಳಿಯಾರ್ ಸಂದರ್ಶನ


ಹರ್ಷಕುಮಾರ್ ಕುಗ್ವೆ.
ಸೌಜನ್ಯ:-ಹಸಿರೆಲೆ


ಡಾ. ನಟರಾಜ್ ಹುಳಿಯಾರ್ ಅವರು ಕಥೆಗಾರರಾಗಿ, ವಿಮರ್ಶಕರಾಗಿ ಮತ್ತು ಅಂಕಣಕಾರರಾಗಿ ಚಿರಪರಿಚಿತರು. ಲೋಹಿಯಾ ಚಿಂತನೆಗಳನ್ನು ಕನ್ನಡಕ್ಕೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇತ್ತೀಚೆಗಷ್ಟೇ ನಟರಾಜ್ ಹುಳಿಯಾರ್ ಅವರ ಮೂರು ದಶಕಗಳ ಕತೆಗಳ ಸಂಕಲನ ’ಮಾಯಾಕಿನ್ನರಿ’ ಹಾಗೂ ಸಾಂಸ್ಕೃತಿಕ ಬರಹಗಳ ಸಂಕಲನ ’ಗಾಳಿ ಬೆಳಕು’ ಬಿಡುಗಡೆಯಾಗಿವೆ. ಇದೀಗ ಹಲವು ವಿಚಾರಗಳನ್ನು ಕುರಿತು ತಮ್ಮ ನಿಲುವುಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.



ಸಾಹಿತ್ಯ ವಿಮರ್ಶೆಯನ್ನೂ ಬರೆದಿರುವ ನೀವು ಸಾಹಿತ್ಯ ವಿಮರ್ಶೆ ಇಂದು ಪಡೆದುಕೊಂಡಿರುವ ಪ್ರಾಮುಖ್ಯತೆ ಬಗ್ಗೆ ಏನು ಹೇಳುತ್ತೀರಿ?

ಸಾಹಿತ್ಯ ಇರುವವರೆಗೂ ಸಾಹಿತ್ಯ ವಿಮರ್ಶೆ ಇರಲೇಬೇಕಾಗುತ್ತದೆ. ಸಾಹಿತ್ಯ ವಿಮರ್ಶೆ ಇಂದು ಬೇರೆಯದೇ ಸ್ವರೂಪ ತಾಳಿದೆ. ಇಂದು ಅದು ಸಾಹಿತ್ಯ ಸಿದ್ಧಾಂತವಾಗುವ ಕಡೆ ಹೊರಳಿಕೊಂಡಿದೆ. ಸಾಹಿತ್ಯವಿಮರ್ಶೆ ಒಂದು ಸ್ವತಂತ್ರ ಚಿಂತನಾ ಕ್ರಮವೂ ಹೌದು. ಸಂಸ್ಕೃತಿವಿಮರ್ಶೆ ಚಾಲ್ತಿಗೆ ಬಂದಾದ ಮೇಲೆ ಸಾಹಿತ್ಯವಿಮರ್ಶೆ ಕೇವಲ ಕೃತಿಯೊಂದನ್ನು ಕುರಿತ ವಿಮರ್ಶೆಯಾಗಿ ಉಳಿದಿಲ್ಲ. ಅದು ಸಂಸ್ಕೃತಿ, ನಾಗರಿಕತೆಗೆ ಸಂಬಂಧಿಸಿದ ವಿಶಾಲ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕೀರ್ತಿನಾಥ ಕುರ್ತಕೋಟಿಯಂಥವರು ಆರಂಭಿಸಿದ ಸಾಹಿತ್ಯ ವಿಮರ್ಶೆಗೂ ಇಂದಿನ ಸಾಹಿತ್ಯ ವಿಮರ್ಶೆಗೂ ವ್ಯತ್ಯಾಸ ಇಲ್ಲಿದೆ. ಹೀಗಾಗಿ ಇಂದಿನ ಸಾಹಿತ್ಯ ವಿಮರ್ಶೆ ಸಾಹಿತ್ಯ ಕೃತಿಗಳಿಂದ ಹೆಚ್ಚು ಸ್ವತಂತ್ರವಾಗಿದೆ. ಹಾಗೇ ಸಾಹಿತ್ಯ ವಿಮರ್ಶೆ ಸಾಹಿತ್ಯ ಸಂಶೋಧನೆಗೂ ದೊಡ್ಡ ಮಟ್ಟದಲ್ಲಿ ಬಳಕೆಯಾಗುತ್ತಿದೆ.

ಕನ್ನಡದಲ್ಲಿ ಸಾಹಿತ್ಯವೇನೋ ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಆದರೆ ಈ ಸಾಹಿತ್ಯ ಯಾವ ಮೌಲ್ಯಗಳನ್ನು ಬಿಂಬಿಸುತ್ತಿದೆ?

ಇಂದು ಸಹಸ್ರಾರು ಪುಸ್ತಕಗಳು ಬರುತ್ತಿರುವುದರಿಂದ ಎಲ್ಲಾ ಕೃತಿಗಳೂ ಎಲ್ಲರ ಕಣ್ಣಿಗೂ ಬೀಳದಿರಬಹುದು. ಆದರೆ ಎಲ್ಲಾ ಕಾಲದಲ್ಲೂ ಆ ಕಾಲದ ಶ್ರೇಷ್ಠ ಸಾಹಿತ್ಯ ಎನ್ನುವುದು ಬರುತ್ತಲೇ ಇರುತ್ತದೆ. ನಾನು ಜಗತ್‌ಸಾಹಿತ್ಯದ ವಿದ್ಯಾರ್ಥಿಯೂ ಆಗಿರುವುದರಿಂದ ಯಾಕೋ ನಮ್ಮ ಇತ್ತೀಚಿನ ಕೃತಿಗಳು ಆ ಮಟ್ಟವನ್ನು ತಲುಪುತ್ತಿಲ್ಲ್ಲವೇನೋ ಎಂದು ನನಗೆ ಅನ್ನಿಸಿದೆ. ಕುವೆಂಪು,ಅನಂತಮೂರ್ತಿ,ಲಂಕೇಶ್, ತೇಜಸ್ವಿ, ಬೇಂದ್ರೆ, ದೇವನೂರರಂತೆಯೇ ಕನ್ನಡೇತರ ಲೇಖಕರಾದ ಮಾರ್ಕ್ವೆಜ್, ನೆರೂಡ, ಮಿಲನ್ ಕುಂದೇರಾ ಕೂಡ ದೊಡ್ಡ ಲೇಖಕರು ಎಂಬ ಅರಿವು ಕೂಡ ನಮಗೆ ಬೇಕು. ಇದನ್ನು ಗ್ರಹಿಸುವಲ್ಲಿ ಅನೇಕರು ಸ್ಥಗಿತಗೊಂಡಿದ್ದಾರೆ ಅನ್ನಿಸುತ್ತದೆ.

ಬರಹಗಾರರ ಮೇಲೆ ಇರುತ್ತಿದ್ದ ಪಾಶ್ಚಾತ್ಯ ಸಾಹಿತ್ಯ ಸಿದ್ಧಾಂತಗಳ ಪ್ರಭಾವ ಇಂದು ಆ ಮಟ್ಟಕ್ಕಿಲ್ಲ. ಈ ಕುರಿತು ಏನು ಹೇಳುತ್ತೀರಿ?

ಪ್ರಾಯಶಃ ಕನ್ನಡಸಂಸ್ಕೃತಿ ತನ್ನನ್ನು ತಾನು ಸ್ವಯಂಪೂರ್ಣ ಎಂದುಕೊಂಡಿರಬಹುದು.ಆದರೆ,ನೋಮ್ ಚಾಮ್‌ಸ್ಕಿಯಂತಹ ಈ ಕಾಲದ ದೊಡ್ಡ ಸಿದ್ಧಾಂತಿಗಳಿದ್ದಾರೆ. ಅವರಿಂದ ನಾವು ಪಡೆಯದಿದ್ದರೆ ಹೇಗೆ?ಇಂದು ಸಾಹಿತ್ಯದಲ್ಲಿ ಪೂರ್ವ,ಪಶ್ಚಿಮಗಳ ಕಲ್ಪನೆ ಹಿಂದಿನಂತೆ ಇಲ್ಲ. ಯೂರೋಪಿನ ಕಾರ್ಲ್‌ಮಾರ್ಕ್ಸ್ ಸಮಾಜವನ್ನು ನಿರ್ದಿಷ್ಟ ದಿಕ್ಕುಗಳಿಂದ ವಿವರಿಸದಿದ್ದಲ್ಲಿ ನಂತರ ಲೋಹಿಯಾ, ಅಂಬೇಡ್ಕರ್‌ರಿಗಾಗಲೀ, ಸ್ತ್ರೀವಾದಿಗಳಿಗಾಗಲೀ, ಚಾಮ್‌ಸ್ಕಿಯಂತವರಿಗಾಗಲೀ ಹೊಸ ಹಾದಿಗಳು ತೆರೆಯುತ್ತಲೇ ಇರಲಿಲ್ಲ. ವಿಮೋಚನಾ ಸಿದ್ಧಾಂತ ಜಗತ್ತಿನ ಯಾವುದೇ ಮೂಲೆಯಿಂದ ಬರಲಿ,ಅದನ್ನು ನಾವು ಸ್ವೀಕರಿಸಬೇಕಾಗುತ್ತದೆ. ಈಗಿನ ವಸಾಹತೋತ್ತರ ಸನ್ನಿವೇಶವನ್ನು ವಿವರಿಸಲು ಕನ್ನಡದಲ್ಲೇ ಹೆಚ್ಚು ಥಿಯರಿಗಳಿವೆ ಎಂದು ನಾನು ತಿಳಿದಿಲ್ಲ. ಇದೇ ಕಾಲದಲ್ಲೇ ಇರುವ ಆಫ್ರಿಕಾದ ಗೂಗಿ ವಾ ಥಿಯಾಂಗೋ, ಚಿನುವಾ ಅಚಿಬೆ ಕೂಡ ಸಿದ್ಧಾಂತಗಳನ್ನು ಕಟ್ಟುತ್ತಿದ್ದಾರಲ್ಲ? ಎಡ್ವರ್ಡ್ ಸೈದ್ ಪ್ಯಾಲೆಸ್ತೀನಿಯರ ಪರವಾಗಿ ಚಿಂತಿಸ್ತಾ ಇದ್ದರಲ್ಲ? ಪೂರ್ವ, ಪಶ್ಚಿಮ ಎನ್ನುವ ಆಯ್ಕೆ ಕೂಡ ಅನೇಕ ಸಲ ಅವರವರ ಅಭಿರುಚಿ, ಸಂವೇದನೆಗೆ ಬಿಟ್ಟಿದ್ದು. ಉದಾಹರಣೆಗೆ ನನ್ನ ಹದಿನೇಳನೇ ವಯಸ್ಸಿನಲ್ಲಿ ಸಿಕ್ಕಿದ ಆಲ್ಬರ್ಟ್ ಕಾಮುವಿನ ’ಅನ್ಯ’ ನನ್ನನ್ನು ಎಲ್ಲೆಲ್ಲೋ ಕರೆದುಕೊಂಡು ಹೋಯಿತು. ನಮಗೆ ವ್ಯಕ್ತಿಯ ವರ್ತನೆಯನ್ನು ಅರಿಯುವುದಕ್ಕೆ ದೇವನೂರರ ’ದತ್ತ’, ಅನಂತಮೂರ್ತಿಯವರ ’ಕಾರ್ತೀಕ’, ತೇಜಸ್ವಿಯವರ ’ಸ್ವರೂಪ’…ಹೀಗೆ ಎಲ್ಲ ಕತೆಗಳೂ ಬೇಕು;ಹಾಗೆಯೇ ಕಾಫ್ಕಾನ ’ದ ಟ್ರಯಲ್’ ಕೂಡ ಬೇಕು.ಇವತ್ತು ಜಗತ್ತಿನ ಶ್ರೇಷ್ಠ ಲೇಖಕ ಮಾರ್ಕ್ವೆಜ್ ನಮ್ಮೊಂದಿಗಿದ್ದಾರೆ. ಝೆಕೋಸ್ಲವಾಕಿಯಾದ ಮಿಲನ್ ಕುಂದೇರ ನನಗೆ ಪ್ರಿಯವಾದ ಲೇಖಕ. ಅವರೊಂದಿಗೂ ನಾವು ಮಾತಾಡಿಕೊಳ್ಳಬೇಕಲ್ಲವೇ? ನಾವು ಪಶ್ಚಿಮದಿಂದ ಏನನ್ನೂ ಪಡೆಯಬಾರದು ಎಂದು ಒಂದು ತಡೆ ನಿರ್ಮಿಸಿಕೊಂಡು ಬಿಟ್ಟಿದ್ದೇವೆ. ಆದರೆ ಪಶ್ಚಿಮ ಎನ್ನುವುದು ಇಂದು ಏನೇನೋ ಆಗಿಬಿಟ್ಟಿದೆ. ಇಂದು ಇಂಗ್ಲೆಂಡ್‌ನಿಂದ ಯಾವ ದೊಡ್ಡ ಬರಹಗಾರನೂ ಬರುತ್ತಿಲ್ಲ. ಆದರೆ ಇಸ್ತಾನ್‌ಬುಲ್‌ನ ಒರಾನ್ ಪಾಮುಕ್ ಬರೆಯುತ್ತಿರುವುದು ನನಗೆ ಬಹಳ ಮುಖ್ಯ ಅನ್ನಿಸ್ತಿದೆಯಲ್ಲ?

ಬರಹಗಾರನಾದವನು ತನ್ನ ಅನುಭವಗಳಿಗೆ ನಿಷ್ಠನಾಗಿರಬೇಕೋ ಅಥವಾ ಸಮಾಜಕ್ಕೋ?

ಇದು ಯಾವತ್ತಿಗೂ ದೊಡ್ಡ ಪ್ರಶ್ನೆಯೇ. ನನ್ನ ಪ್ರಕಾರ ಬರಹಗಾರ ತಾನು ಕಂಡ ಸತ್ಯಕ್ಕೆ ನಿಷ್ಠವಾಗಿರಬೇಕು; ಜೊತೆಗೆ ಆ ಸತ್ಯವನ್ನು ಪರೀಕ್ಷಿಸುತ್ತಿರಬೇಕು. ನಾನು ಕಂಡ ಸತ್ಯವನ್ನು ಬರೆಯಲು ಸ್ವಾತಂತ್ರ್ಯ ಇರುವುದು ಸಾಹಿತ್ಯದಲ್ಲಿ ಮಾತ್ರ. ಅದು ಪತ್ರಿಕೋದ್ಯಮದಲ್ಲಿಲ್ಲ, ಟೀವಿಯಲ್ಲಿಲ್ಲ, ಟೀಚಿಂಗ್‌ನಲ್ಲೂ ಇಲ್ಲ. ಸಾರ್ವಜನಿಕ ಜೀವನದಲ್ಲಂತೂ ಇಲ್ಲವೇ ಇಲ್ಲ. ಆಳವಾದ, ನಿಷ್ಠುರವಾದ ಸತ್ಯಗಳನ್ನು ಹೇಳುವುದಕ್ಕೆ ಉಳಿದಿರುವ ಏಕಮಾತ್ರ ವೇದಿಕೆ ಸಾಹಿತ್ಯ.

ಲೇಖಕರಿಗೆ ಸಾಮಾಜಿಕ ಬದ್ಧತೆ ಎಂಬುದೊಂದು ಇರಬಾರದೇ?

ಜವಾಬ್ದಾರಿ ಇರಲೇಬೇಕು. ಬದ್ಧತೆ ಎನ್ನುವುದು ಬಹಳ ವಿಸ್ತಾರವಾದ,ಸೂಕ್ಷ್ಮವಾದ ಪ್ರಶ್ನೆ.ನಮಗೆ ಯಾವುದೋ ಒಂದರ ಬಗೆಗೆ ಬದ್ಧತೆ ಇದೆ ಎನ್ನುವ ಕಾರಣಕ್ಕೆ ಸಾಹಿತ್ಯ ರಚನೆಯಲ್ಲಿ ಕೆಲವು ರೀತಿಯ ಪೂರ್ವಗ್ರಹ, ಪಕ್ಷಪಾತಗಳನ್ನು ಮಾಡಬಾರದು. ಅದು ಸಾಹಿತ್ಯರಚನೆಯ ಮನೋಧರ್ಮಕ್ಕೆ ವಿರುದ್ಧವಾಗಿರುತ್ತದೆ. ಆದ್ದರಿಂದ ವ್ಯಕ್ತಿನಿಷ್ಠತೆಯೂ ಅಂತಿಮವಲ್ಲ, ಸಮಾಜ ನಿಷ್ಠತೆಯೂ ಅಂತಿಮವಲ್ಲ. ಎರಡೂ ಅತಿರೇಕಗಳು.



ಸಾಹಿತ್ಯದಲ್ಲಿ ಹಲವಾರು ಸಂವೇದನೆಗಳನ್ನು ಕಂಡಿದ್ದೇವೆ. ಇಂದು ಒಂದು ಬಗೆಯ ನಿರ್ದಿಷ್ಟ ಸಂವೇದನೆಯ ಚೌಕಟ್ಟಿಗೆ ಸಾಹಿತ್ಯವನ್ನು ಒಳಪಡಿಸಬಹುದಾ?

ಇಂದು ಜನರು ವಾಸ್ತವವನ್ನು ನೋಡುವ ಕ್ರಮವೇ ಬದಲಾಗಿದೆ. ಇದಕ್ಕೆ ಕಾರಣ ಮಾರುಕಟ್ಟೆ. ಇದರ ಪ್ರಭಾವದಿಂದಾಗಿ ನಮ್ಮ ದಿನನಿತ್ಯದ ಭಾಷೆಯೊಳಗೆ ಒಂದು ಗಿಲೀಟು ಬಂದು ಸೇರಿಕೊಂಡಿದೆ. ಲಾಭ ಬರುವುದಿದ್ದರೆ ಯಾವ ಭಾಷೆಯನ್ನಾದರೂ ಬಳಸಬಹುದು ಎಂದು ಈಗ ನಂಬಿಸಲು ಯತ್ನಿಸಲಾಗುತ್ತಿದೆ. ’೧೯೨೦ರ ಸುಮಾರಿಗೆ ಪಶ್ಚಿಮದ ಮನುಷ್ಯನ ಸ್ವಭಾವ ಬದಲಾಗಿದೆ’ ಎಂದು ವರ್ಜೀನಿಯಾ ವುಲ್ಫ್ ಹೇಳುತ್ತಿದ್ದರು. ತೊಂಬತ್ತರ ದಶಕದಲ್ಲಿ ಮನುಷ್ಯನ ಭಾಷೆ ಮತ್ತು ಸ್ವಭಾವ ಎರಡೂ ಬದಲಾಗಿರುವುದನ್ನು ನೋಡುತ್ತೇವೆ. ನಗರಗಳಲ್ಲಿ ಮತ್ತು ಸಣ್ಣ ಊರುಗಳಲ್ಲಿ ಮೊಬೈಲ್ ಬಳಕೆ ಹೆಚ್ಚಿದ ಮೇಲೆ ನಾವು ಅಗತ್ಯವೇ ಇಲ್ಲದೇ ಸುಳ್ಳು ಹೇಳುತ್ತಿದ್ದೇವಲ್ಲವೇ? ಆದ್ದರಿಂದ ಒಂದು ಕತೆಯಲ್ಲಿ ಅನುಭವವನ್ನು ಶೋಧಿಸುವಾಗ ಮನುಷ್ಯವರ್ತನೆಯ ಸರಿ-ತಪ್ಪುಗಳನ್ನು ಪುರಾಣಗಳ ಕಾಲದ ರೀತಿ ಗೆರೆ ಕೊಯ್ದು ಹೇಳುವುದು ಕಷ್ಟ. ನೀತಿ, ಅನೀತಿ, ಭ್ರಷ್ಟತೆ ಮುಂತಾದವನ್ನು ಬಹಳ ಸಂಕೀರ್ಣವಾಗಿ ನೋಡುವ ಸ್ಥಿತಿ ಬಂದಿದೆ. ಇದನ್ನೆಲ್ಲಾ ಶೋಧನೆ ಮಾಡಲು ಸಾಹಿತ್ಯದಲ್ಲಿ ಹೆಚ್ಚು ಅವಕಾಶ ಇದೆ. ಇನ್ನು ವಿಶಿಷ್ಟ ಸಂವೇದನೆಗಳ ವಿಷಯಕ್ಕೆ ಬಂದರೆ, ಇಂದು ದಲಿತ ಸಂವೇದನೆ ಒಂದು ಪ್ರತ್ಯೇಕವಾದ ವಿಶಿಷ್ಟ ಸಂವೇದನೆ ಎನ್ನಿಸುವುದಿಲ್ಲ. ಯಾಕೆಂದರೆ ಈಗ ಅದನ್ನು ಎಲ್ಲ ಪ್ರಗತಿಪರರೂ ಒಪ್ಪಿಕೊಂಡಿದ್ದಾರೆ. ಇಂದು ದಲಿತ ಸಂವೇದನೆಯನ್ನು ದಲಿತೇತರ ಬರಹಗಾರರೂ, ಮಹಿಳಾ ಸಂವೇದನೆಯನ್ನು ಪುರುಷ ಬರಹಗಾರರೂ ಸ್ವೀಕರಿಸುತ್ತಿದ್ದಾರೆ. ತೇಜಸ್ವಿಯವರ ’ಕಿರಗೂರಿನ ಗಯ್ಯಾಳಿಗಳು’ ಅಥವಾ ಮಹಾದೇವರ ’ಒಡಲಾಳ’ದ ಸಾಕವ್ವನ ಸೃಷ್ಟಿಗೆ ಸ್ತ್ರೀವಾದವೂ ಕಾರಣವಾಗಿದೆ. ಹೀಗಾಗಿ ಒಂದು ಕಾಲದಲ್ಲಿ ಒಂದು ನಿರ್ದಿಷ್ಟ ಸಂವೇದನೆ ಬೆಳೆದು ಕ್ರಮೇಣ ಅದು ಎಲ್ಲ ಲೇಖಕ,ಲೇಖಕಿಯರಿಗೂ ಹಬ್ಬಿ ಕನ್ನಡ ಸಾಹಿತ್ಯ ಸಂವೇದನೆಯಲ್ಲಿ ಬೆರೆತು ಹೋಗುತ್ತದೆ.

ಲೇಖಕಿಯರ ಸಂಖ್ಯೆ ಹಿಂದೆಂದಿಗಿಂತ ಹೆಚ್ಚಿರುವ ಇಂದಿನ ಸಂದರ್ಭದಲ್ಲಿ ಸ್ತ್ರೀವಾದ ಯಾವ ದಿಕ್ಕಿನಲ್ಲಿ ವಿಸ್ತರಿಸಿಕೊಂಡಿದೆ?

ಇವತ್ತಿನ ಸ್ತ್ರೀವಾದ ಹೊಸ ಹೊಸ ಅಧಿಕಾರ ಕೇಂದ್ರಗಳನ್ನು ಗುರುತಿಸುವ ಪ್ರಯತ್ನದಲ್ಲಿದೆ. ಇಂದು ದಲಿತ ಸ್ತ್ರೀವಾದ ಬರುತ್ತಿದೆ. ಪರಿಸರಕ್ಕೆ ಸಂಬಂಧಿಸಿದ ಸ್ತ್ರೀವಾದ ಬರುತ್ತಿದೆ. ಭಾರತೀಯ ನೆಲದಲ್ಲೇ ದಲಿತ, ಹಿಂದುಳಿದ ವರ್ಗಗಳ ಮಹಿಳೆಯರ ಕಷ್ಟಗಳು ಬೇರೆ ಬೇರೆ ರೀತಿ ಇದೆ. ಅದಕ್ಕೆ ತಕ್ಕಂತೆ ಸ್ತ್ರೀವಾದವೂ ವಿಸ್ತರಿಸುತ್ತಿದೆ. ದುಡಿಯುವ ವರ್ಗದ ಬಡ ಮಹಿಳೆಯರ ದೃಷ್ಟಿಯಿಂದ ಸ್ತ್ರೀವಾದವನ್ನು ವ್ಯಾಖ್ಯಾನಿಸುವ ಅಗತ್ಯವೂ ಇದೆ. ಐವತ್ತರ ದಶಕದಲ್ಲಿ ಸ್ತ್ರೀವಾದ ಹೇಗಿತ್ತೋ ಅದೇ ರೀತಿ ಇಂದು ಇಲ್ಲ.

ಒಂದು ಕಾಲದಲ್ಲಿ ತಾವು ಪ್ರತಿನಿಧಿಸಿದ ಆಶಯಗಳಿಗೇ ವಿರುದ್ಧವಾದ ಸ್ಥಾನದಲ್ಲಿ ಸಿದ್ಧಲಿಂಗಯ್ಯನವರಂತಹ ಸಾಹಿತಿ ನಿಂತಿದ್ದಾರಲ್ಲ?

ಬರಹಗಾರರು ಅಧಿಕಾರ ಮತ್ತು ಅಧಿಕಾರಸ್ಥರನ್ನು ವಿಮರ್ಶೆಗೆ ಒಳಪಡಿಸುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಾಗದಿದ್ದರೆ ತಮ್ಮ ಬರವಣಿಗೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಆಗ ಬರವಣಿಗೆಯಲ್ಲೂ ಸಾರ್ವಜನಿಕತೆ ನುಸುಳುತ್ತದೆ. ಬರಹಗಾರನೊಬ್ಬ ತಾನು ಪ್ರತಿನಿಧಿಸಿದ ಆಶಯಗಳಿಗೆ ವಿರುದ್ಧವಾಗಿ ಹೋದಾಗ ಅವರನ್ನು ಒಪ್ಪಿಕೊಂಡು ಬಂದ ಓದುಗರಿಗೆ ನಿರಾಸೆ ಅಥವಾ ಅಸಹನೆ ಖಂಡಿತಾ ಹುಟ್ಟುತ್ತದೆ. ಪ್ರತಿ ಬರಹಗಾರನೂ ಸಹ ತನಗೆ ಸಾಹಿತ್ಯ ಮುಖ್ಯವೋ ಅಥವಾ ಯಾವುದೋ ಅಧಿಕಾರ ಬೇಕೋ ಎಂಬ ಬಗ್ಗೆ ಖಚಿತವಾಗಿರಬೇಕು.ಮೌಲ್ಯಗಳನ್ನು ಪ್ರತಿಪಾದಿಸುವವರು, ಸಾಹಿತಿಗಳು ಅಧಿಕಾರಕ್ಕೆ, ರಾಜಕಾರಣಕ್ಕೆ ಹೋಗುವುದು ತಪ್ಪಲ್ಲ. ಒಬ್ಬ ಅರ್ಥಶಾಸ್ತ್ರಜ್ಞ, ಒಬ್ಬ ಸಾಫ್ಟ್‌ವೇರ್ ತಂತ್ರಜ್ಞ ಅಥವಾ ಒಬ್ಬ ಸ್ತ್ರೀವಾದಿ ವಿಧಾನ ಸೌಧಕ್ಕೆ ಹೋಗಬೇಕು. ಅದು ಒಳ್ಳೆಯದು ಕೂಡ. ಆದರೆ ಹಾಗೆ ಹೋದವರು ತಮ್ಮ ನಿಲುವು ಹಾಗೂ ಭಾಷೆಗಳನ್ನು ಬಳಸಬೇಕು.ಅದಕ್ಕೆ ಬದಲಾಗಿ ಅಲ್ಲಿನವರು ಕೊಟ್ಟ ಭಾಷೆಯಲ್ಲಿ ಅವರು ಮಾತನಾಡಲಾರಂಭಿಸುವುದು ದುರದೃಷ್ಟಕರ.

ಬರಹಗಾರನೊಬ್ಬನ ಬರಹ ಮತ್ತು ಆತನ ವ್ಯಕ್ತಿತ್ವಗಳಲ್ಲಿ ವೈರುಧ್ಯಗಳು ಕಾಣಿಸಿಕೊಂಡಾಗ ಓದುಗರಾದವರು ಹೇಗೆ ಪ್ರತಿಕ್ರಿಯಿಸಬೇಕೆನ್ನುತ್ತೀರಿ?

ಬರಹ ಎನ್ನುವುದು ವ್ಯಕ್ತಿತ್ವದ ವಿಸ್ತರಣೆಯೂ ಹೌದು. ಬರಹಗಾರ ಒಂದು ರೀತಿಯ ಗಾಢ ಆಶಯಗಳನ್ನು ಕೃತಿಯಲ್ಲಿ ಬರೆದು, ಅದಕ್ಕೆ ತದ್ವಿರುದ್ಧವಾಗಿ ನಡೆಯುವುದು ಸರಿಯಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ನಮ್ಮ ಓದಿನ ಕ್ರಮದಲ್ಲಿ ಕೃತಿಯನ್ನು ಕೃತಿಕಾರನಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಓದಬೇಕು. ಎಷ್ಟೋ ಸಲ ಒಬ್ಬ ಬರಹಗಾರ ತನ್ನ ಹಳೆಯ ನಿಲುವುಗಳನ್ನು ಬದಲಿಸಿಕೊಂಡು ಮುಂದೆ ಹೋದಾಗಲೂ ನಾವು ಆತ ಮೊದಲಿನ ರೀತಿಯಲ್ಲಿಯೇ ಬರೆಯಬೇಕೆಂದು ನಿರೀಕ್ಷಿಸುತ್ತೇವೆ. ಈ ಥರದ ಓದುಗರ ಸರ್ವಾಧಿಕಾರವೂ ಬಹಳ ವಿಚಿತ್ರವಾಗಿರಬಲ್ಲದು. ಹೀಗಾಗಿ ನಾವು ಬಲ್ಲ ಬರಹಗಾರನ ವ್ಯಕ್ತಿತ್ವಕ್ಕೂ ಅವನ ಸಾಹಿತ್ಯ ಕೃತಿಗೂ ವೈರುಧ್ಯ ಏರ್ಪಟ್ಟಾಗ ನಾವು ಆ ಕೃತಿ ಹೇಳುವ ಸತ್ಯವನ್ನೇ ಹೆಚ್ಚು ಅವಲಂಬಿಸಬೇಕು. ಆದರೆ ಕೃತಿಯಾಚೆಗೆ ಲೇಖಕನ ಸಾಮಾಜಿಕ ನಿಲುವಿನಲ್ಲಿ ವೈರುಧ್ಯಗಳು ಕಂಡಾಗ ಖಂಡಿತ ಪ್ರಶ್ನೆ ಮಾಡಬೇಕಾಗುತ್ತದೆ. ಆದರೆ ಮನುಷ್ಯ ಎಂದರೆ ವಿರೋಧಾಭಾಸಗಳ ಮೊತ್ತ ಎಂಬ ಸತ್ಯವನ್ನೂ ನಾವು ಮರೆಯಬಾರದು.

ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಆಡಳಿತ ಮಂಡಳಿಗಳು ಹಿಂದೇಟು ಹಾಕುತ್ತಿವೆಯಲ್ಲ?

ಅವಕಾಶ ಇಲ್ಲದವರಿಗೆ ಅವಕಾಶ ನೀಡದಿದ್ದರೆ ಮುಂದೆ ದೊಡ್ಡ ದಂಗೆಯೇ ಆಗುತ್ತದೆ ಎಂದು ಸರ್ಕಾರವೇ ಎಚ್ಚೆತ್ತುಕೊಂಡಿದೆ. ಆದರೆ ಇಂದು ಖಾಸಗಿ ಆಡಳಿತ ಮಂಡಳಿಗಳು ತಮ್ಮ ವರ್ಗಹಿತಾಸಕ್ತಿಯ ಕಾರಣದಿಂದ ಶಿಕ್ಷಣ ಹಕ್ಕು ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇದರಲ್ಲಿ ಜಾತೀಯತೆಯೂ ಇದೆ. ಆದರೆ ಈ ಕಾಯ್ದೆ ಸರಿಯಾಗಿ ಜಾರಿಯಾಗದಿದ್ದಲ್ಲಿ ಒಂದು ಆಂದೋಲನವೇ ಸೃಷ್ಟಿಯಾಗಬೇಕಾಗುತ್ತದೆ. ಈ ಕಾಯ್ದೆಯಲ್ಲಿ ಲೋಪದೋಷಗಳಿವೆಯೇ ಎನ್ನುವುದನ್ನು ನಂತರ ನೋಡೋಣ. ಮೊದಲು ಅದು ಜಾರಿಯಾಗುವಂತೆ ನೋಡಬೇಕಾದ್ದು ಜಾಗೃತ ಶಕ್ತಿಗಳ ಕೆಲಸ.

ಯಾವುದೇ ಸಾಹಿತ್ಯ ಚಳವಳಿಗಳಿಲ್ಲದಿರುವ ಈ ಕಾಲ ಬರೆಯುವವರಿಗೆ ಪೂರಕವೇ?

ಸಾಮಾನ್ಯವಾಗಿ ದೊಡ್ಡ ವಾಗ್ವಾದಗಳು ನಡೆಯುವುದು ಒಂದು ಸಾಹಿತ್ಯ ಚಳವಳಿ ಹುಟ್ಟುವ ಸಮಯದಲ್ಲಿ. ಆದರೆ ಈ ಕಾಲದಲ್ಲಿ ಎಲ್ಲಾ ಸಾಹಿತ್ಯ ಚಳವಳಿಗಳ ಮಾದರಿಗಳೂ ಇರುವಂತೆ ನಮಗೆ ಕಾಣುತ್ತದೆ. ನಿರ್ದಿಷ್ಟ ಸಾಹಿತ್ಯ ಚಳವಳಿ ಇಲ್ಲದಿರುವುದು ಕೂಡ ಬರೆಯುವವರ ದೃಷ್ಟಿಯಿಂದ ಒಳ್ಳೆಯದೇ ಆಗಬಹುದಲ್ಲ? ಒಂದು ಸಾಹಿತ್ಯ ಚಳವಳಿ ಇದ್ದಾಗ ಯಾವುದೋ ಕಟ್ಟುಪಾಡುಗಳಿಗೆ ಒಳಗಾಗಿ ಬರೆಯುವ ಒತ್ತಡವಿರಬಹುದು. ಅದಿಲ್ಲದಿದ್ದಾಗ ಯಾವುದೇ ಆತಂಕವಿಲ್ಲದೆ ಪ್ರಯೋಗಗಳನ್ನು ನಡೆಸಬಹುದು. ಈ ಕಾಲವನ್ನು ನವಪ್ರಯೋಗಗಳ ಕಾಲ ಅಂತಲೂ ಕರೆಯಬಹುದು.

ಸಾಮಾಜಿಕ ಚಳವಳಿಗಳು ವಿಘಟಿತಗೊಂಡಿರುವುದಕ್ಕೆ ಯಾರು ಕಾರಣ?

ಚಳವಳಿಗಳು ಯಾವಾಗಲೂ ಒಂದೇ ರೀತಿ ನಡೀತಾ ಇರಲ್ಲ. ಕೆಲವೊಮ್ಮೆ ಚಳವಳಿಗಳು ಹೊಸ ರೂಪ ಪಡೆಯುತ್ತವೆ. ಇಂದು ಚಳವಳಿಗಳು ಒಡೆಯುವುದಕ್ಕೆ ಅನೇಕ ಶಕ್ತಿಗಳು ಕಾರಣವಿರಬಹುದು. ಕೆಲವರಿಗೆ ಚಳವಳಿಗಳ ಬಗ್ಗೆ ನಂಬಿಕೆಗಳು ಕುಸಿದಿರಬಹುದಾದರೂ ಹೊಸ ತಲೆಮಾರುಗಳಿಗೆ ಈ ಬಗ್ಗೆ ನಿರೀಕ್ಷೆ ಇದ್ದೇ ಇರುತ್ತದೆ. ಆದರೆ ಅದನ್ನು ಸಾಕಾರಗೊಳಿಸುವ ಪಡೆ ಹೊಸ ತಲೆಮಾರಿನಲ್ಲೂ ಹುಟ್ಟಬೇಕು. ಅದಕ್ಕೆ ಪೂರಕವಾದ ಒಂದು ಇಶ್ಯೂ ಹುಟ್ಟಬೇಕು. ಸಮಾಜದ ಹಲವಾರು ವಲಯಗಳಲ್ಲಿ ಈ ಚಳವಳಿಯ ಶಕ್ತಿಗಳು ಇವೆ. ಆದರೆ ದೊಡ್ಡ ಮಟ್ಟದಲ್ಲಿ ಇವು ಒಂದಾಗಿ ಕ್ರಿಯೆಗಿಳಿಯುವ ಸಾಧ್ಯತೆಗಳು ಎದ್ದು ಕಾಣುತ್ತಿಲ್ಲ. ಹಾಗೆಯೇ ಚಳವಳಿಗಳಿಗೆ ಹಲವು ದಿಕ್ಕುಗಳಿಂದ ಬರುತ್ತಿದ್ದ ಬೆಂಬಲ ನಿಂತುಹೋಗಿದೆ. ನಮ್ಮ ಮಾಧ್ಯಮಗಳಿಗೆ ಈ ಇಶ್ಯೂಗಳು ಮುಖ್ಯ ಎನ್ನಿಸುತ್ತಿಲ್ಲ ಅಥವಾ ಅವು ಚಳವಳಿಗಳ ಬಗ್ಗೆ ಸಿನಿಕತೆ ಬೆಳೆಸಿಕೊಂಡಿವೆ.’ಇಷ್ಟೊಂದು ದಲಿತ ಗುಂಪುಗಳಿವೆ; ನಾವು ಇವರ ಸುದ್ದಿ ಏನು ಹಾಕೋದು?’ ಎನ್ನುವ ಧೋರಣೆ ಕೆಲವು ಪತ್ರಿಕೆಗಳಲ್ಲಿದೆ. ಆದರೆ, ಇಷ್ಟೊಂದು ಜಾತಿ,ಧರ್ಮಗಳ ಗುಂಪುಗಳ ಸುದ್ದಿಗಳನ್ನು ಪ್ರಕಟಿಸುವಾಗ ಅವರು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿಲ್ಲ. ನಮ್ಮ ಮಾಧ್ಯಮಗಳಲ್ಲಿ ಚಳವಳಿಗಳ ಬಗ್ಗೆ ಅಭಿಪ್ರಾಯ ರೂಪಿಸುವ ಕೆಲಸ ನಡೆಯುತ್ತಿಲ್ಲ. ಹಾಗೆಯೇ ಚಳವಳಿಗಳಿಗೆ ಕಾಲೇಜು, ಯೂನಿವರ್ಸಿಟಿಗಳಿಂದ ಒದಗುತ್ತಿದ್ದ ದೊಡ್ಡ ಬೌದ್ಧಿಕ ಬೆಂಬಲ ನಿಂತುಹೋಗಿದೆ. ಚಳವಳಿಗಳು ಹಿನ್ನೆಲೆಗೆ ಸರಿಯಲು ಚಳವಳಿಗಾರರು ಮಾತ್ರ ಕಾರಣವಲ್ಲ. ಅವರು ಚಳವಳಿಗಳನ್ನೇ ಮಾಡಿಕೊಂಡಿರಲಿ ಎಂದು ನಾವು ಅವರನ್ನು ನೇಮಿಸಿಲ್ಲ ಮತ್ತು ಹಾಗೆ ಹೇಳಲು ನನಗೆ ಹಕ್ಕಿಲ್ಲ. ನಾನು ಸಂಬಳ ತೆಗೆದುಕೊಳ್ಳುತ್ತೇನೆ.ಚಳವಳಿಗಾರರಿಗೆ ಸಂಬಳ ಬರುತ್ತಿಲ್ಲವಲ್ಲ?ಅದರ ಜೊತೆಗೆ, ಚಳವಳಿಗಳಿಗೆ ಹಿಂದಿನಂತೆ ತಾತ್ವಿಕ ಸ್ಪೂರ್ತಿಮೂಲಗಳೂ ಕಡಿಮೆಯಾಗಿವೆ. ಉಳಿದ ವರ್ಗಗಳು ತಾವು ಆರಾಮಾಗಿದ್ದು, ಚಳವಳಿಗಾರರ ಮೇಲೆಯೇ ಎಲ್ಲ ಹೊಣೆ ಹೊರಿಸಿ ಅವರು ಮಾತ್ರ ಈ ಕೆಲಸ ಮಾಡಬೇಕು ಎನ್ನುವುದು ಸರಿಯಲ್ಲ.

ಲೋಹಿಯಾವಾದ ಒಂದು ಸಾಮಾಜಿಕ ತತ್ವವಾಗಿ ಕರ್ನಾಟಕದಲ್ಲಿ ಬೀರಿರುವ ಪರಿಣಾಮ ಎಂಥದ್ದು?

ನಮ್ಮ ರೈತ ಚಳವಳಿ ಮಹಾರಾಷ್ಟ್ರ ಅಥವಾ ಉತ್ತರ ಪ್ರದೇಶದ ರೈತ ಚಳವಳಿಗಿಂತ ಭಿನ್ನವಾಗಿರಲು ಅದನ್ನು ಇಲ್ಲಿ ಮುನ್ನಡೆಸಿದ ನಂಜುಂಡಸ್ವಾಮಿಯವರು ಲೋಹಿಯಾವಾದಿಯಾಗಿದ್ದು ಕೂಡ ಕಾರಣ. ರೈತರನ್ನು ಒಂದು ವರ್ಗವಾಗಿ ರೂಪಿಸಿ ವ್ಯವಸ್ಥೆಯ ವಿರುದ್ಧದ ಚಳವಳಿಗೆ ತೊಡಗಿಸುವುದು ಲೋಹಿಯಾರ ಕನಸಾಗಿತ್ತು. ನಂಜುಂಡಸ್ವಾಮಿ ಅದನ್ನು ಇಲ್ಲಿ ಸಾಕಾರಗೊಳಿಸಿದರು. ಅವರು ದಲಿತ ಚಳವಳಿಯ ಪ್ರೇರಕರಲ್ಲೊಬ್ಬರಾಗಿದ್ದರು. ದಲಿತ ಸಂಘರ್ಷ ಸಮಿತಿಯಲ್ಲಿ ಲೋಹಿಯಾವಾದವೂ ಇದ್ದುದರಿಂದ ಅದು ಎಲ್ಲ ವರ್ಗದವರನ್ನೂ ಒಳಗೊಳ್ಳಲು ಸಾಧ್ಯವಾಯಿತು. ಹಾಗೆಯೇ ಸಾಹಿತಿಗಳು ನೋಡುವ ಕ್ರಮವನ್ನೇ ಅದು ಬದಲಿಸಿತು. ಚಿಂತಕರು, ಬರಹಗಾರರು ಲೋಹಿಯಾ ಚಿಂತನೆಯನ್ನು ತಾವೇ ಹುಡುಕಿಕೊಂಡು ಹೋಗಿ ಪ್ರಸಾರ ಮಾಡಿದ ಕಾಲದಲ್ಲಿ ಅದು ಹೆಚ್ಚು ಪ್ರಭಾವಶಾಲಿಯಾಗಿತ್ತು. ಆದರೆ ಸರ್ಕಾರವೇ ಕನ್ನಡ ಸಂಸ್ಕೃತಿ ಇಲಾಖೆಯಿಂದ ಲೋಹಿಯಾ ಕೃತಿಗಳನ್ನು ತಂದಾಗ (ಅದರ ಸಂಪಾದಕನಾಗಿ ನಾನು ಹೇಳುತ್ತಿರುವ ಮಾತಿದು) ಅದರ ಪ್ರಭಾವ ಕಡಿಮೆ ಎನಿಸುತ್ತದೆ. ಲೋಹಿಯಾವಾದವನ್ನು ಕೂಡ ನಾವು ಮರು ಓದಿಗೆ ಒಳಪಡಿಸಬೇಕು. ಪ್ರತಿ ತಲೆಮಾರಿನವರೂ ತಮ್ಮ ಲೋಹಿಯಾ, ತಮ್ಮ ಅಂಬೇಡ್ಕರ್‌ರನ್ನು ಹುಡುಕಿಕೊಳ್ಳಬೇಕಾಗುತ್ತದೆ.

ನಿಮ್ಮ ಮೇಲೆ ಪ್ರಭಾವ ಬೀರಿದ ಕನ್ನಡದ ಲೇಖಕ ಮತ್ತು ಜಾಗತಿಕ ಲೇಖಕರು ಯಾರು?

ನನಗೆ ಹದಿ ಹರೆಯದಲ್ಲಿ ಬಹಳ ಪ್ರಭಾವ ಬೀರಿದವನು ಆಲ್ಬರ್ಟ್ ಕಾಮು. ಆ ನಂತರ, ವ್ಯಕ್ತಿಗಳ ವರ್ತನೆಗಳನ್ನು, ಅನೇಕ ಬಗೆಯ ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ಶೇಕ್ಸ್‌ಪಿಯರ್ ನೆರವಾಗಿದ್ದಾನೆ. ಕನ್ನಡದಲ್ಲಿ ಲಂಕೇಶ್. ನನ್ನ ಜೀವನದ ಕೆಲವು ಶ್ರೇಷ್ಠ ಗಳಿಗೆಗಳನ್ನು ಲಂಕೇಶರ ಜೊತೆ ಕಳೆದಿರುವ ಬಗ್ಗೆ ನನಗೆ ಖುಷಿ ಇದೆ.


Friday 18 May 2012

ಮನುಷ್ಯರಾಗಿ ಸಲ್ಲೋಣ ಮನಸ್ಸುಗಳನ್ನು ಗೆಲ್ಲೋಣ..- ರಾಘವೇಂದ್ರ ತೆಕ್ಕಾರ್ ಬರಹ

ಸೌಜನ್ಯ:  ಲೇಖನಾನುಭವ




ಸಮಾಜದಲ್ಲಿ ಕೀಳು ಮೇಲು ಎಂಬುದನ್ನು ಸೃಷ್ಟಿಸಿದ್ದೆ ಒಂದು ಕಾಲಘಟ್ಟದಲ್ಲಿ ಬ್ರಾಹ್ಮಣ ಪಂಗಡಗಳು ಎಂಬುದು ಸರ್ವ ವಿಧಿತ.ತನ್ನ ಪೌರೋಹಿತಶಾಹಿ ನೀತಿಯನ್ನು ಹೇರುತ್ತಾ ಸಮಾಜವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಅಧಿಕಾರಶಾಹಿತ್ವ ಮೆರೆಯಲು ಬ್ರಾಹ್ಮಣ್ಯ ನೀತಿಯನ್ನು ಹೇರುತ್ತಾ ಹೋಗಿದ್ದು ಕೂಡ ಸತ್ಯ.ಆದರೆ ಇಂದಿನ ದಿನಗಳಲ್ಲಿ ಬ್ರಾಹ್ಮಣ್ಯ ಎಂಬುದು ಒಂದು ಜಾತೀಯ ಪಂಗಡಕ್ಕೆ ಸೀಮೀತವಾಗಿ ಉಳಿದಿಲ್ಲ, ಈ ಜಾತಿ ಸನ್ನಿಗಳು ಹೆಮ್ಮರವಾಗಿ ಬೆಳೆದು ನಿಂತಿದೆ.ವಿಜ್ಞಾನ, ತಂತ್ರಜ್ಞಾನ ಯುಗದಲ್ಲೂ ಜಾತಿಯ ಸನ್ನಿಗೆ ಆ ಮೂಲಕ ಡಂಬಾಚಾರಕ್ಕೆ ಕೊರತೆ ಏನು ಇಲ್ಲ. ಆದರೆ ಇಂತದೆ ಮೇಲ್ಜಾತಿಯೆಂದು ಕರೆಸಿಕೊಳ್ಳುವ ಬ್ರಾಹ್ಮಣ ಪಂಗಡಕ್ಕೆ ಸೇರಿದವನೊಬ್ಬ ಜಾತಿಯತೆಯಿಂದ ಬೇಸತ್ತು ಮನುಷ್ಯ ಮಾತ್ರನಾಗಿ ಇರುತ್ತೇನೆ ಎಂಬ ನೀತಿಗೆ ಬದ್ಧನಾಗಿ ಬದುಕು ನಡೆಸುವಾಗ, ಸಮಾಜ ಎಂಬುದು ಆತನನ್ನ ಜಾತಿಯಿಂದ ಹೊರತಾಗಿ ನೋಡಲು ಇಚ್ಚೆ ಪಡುವದೆ ಇಲ್ಲ.ಆ ಮಟ್ಟಿಗೆ ಜಾತಿಕತೆ ಸಮಾಜವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದರೆ ತಪ್ಪಿಲ್ಲ. ಈ ಪರಿಸ್ಥಿತಿ ಬ್ರಾಹ್ಮಣ ಹುಡುಗ ಅಂತ ಕರೆಸಿಕೊಳ್ಳೊ ಅವನಿಗಷ್ಟೆ ಸೀಮಿತವಾಗಿ ಅಲ್ಲದಿದ್ದರೂ, ಆತನ ಜಾತಿಯೆ ಇವೆಲ್ಲದಕ್ಕೂ ಮೂಲವಾದುದರಿಂದ ಇತರರಿಗಿಂತ ಆತನಿಗೆ ಜಾತಿಯತೆ ಹೊರತಾಗಿ ಮನುಷ್ಯ ಮಾತ್ರನಾಗಿ ತನ್ನ ಗುರುತಿಸಿಕೊಳ್ಳೊದು ಒಂದು ಸವಾಲೆ ಸರಿ. 

ಸಮಾಜದ ಮಾತುಗಳು ಒತ್ತಟ್ಟಿಗಿರಲಿ ತನ್ನದೆ ಕುಟುಂಬದ ತನ್ನವರೆ ಅನಿಸಿಕೊಂಡವರ ಸಂಪ್ರದಾಯಿಕ ಕಟ್ಟುಪಾಡುಗಳ ಹೇರಿಕೆಯನ್ನು ಇತ್ತ ಕಡೆ ಸ್ವೀಕರಿಸಲು ಆಗದೆ ತ್ಯಜಿಸಲು ಆಗದೆ ಅವನೊಳಗೆ ನಡೆಯುವ ತೊಳಲಾಟಗಳ ಭಾದೆಯು ಕೂಡ ಅಲ್ಪವಾದುದೇನಲ್ಲ. ಅರಿವಿನ ತಿಳುವಳಿಕೆಯಿಂದ ಒಡಮೂಡಿದ ತನ್ನದೆ ಆದ ನೀತಿಗಳನ್ನು ಪರಿಪಾಲಿಸುವಲ್ಲಿ ಕೂಡ ಆತ ತನ್ನಲ್ಲೆ ದೊಡ್ಡ ಘರ್ಷಣೆಗೆ ಎದುರುಗೊಳ್ಳಬೇಕು ಎನ್ನುವದು ವಾಸ್ತವ.ಇವೆಲ್ಲವಕ್ಕೂ ಕಾರಣ ಆತ ಗುರುತಿಸಿಕೊಂಡ ಜಾತಿ.ಈ ಸಮೀಕರಣದೊಳಗೆ ತನ್ನ ನೀತಿಯನ್ನು ಬಿಟ್ಟು ಕೊಡದೆ ಹೊಂದಿಕೊಳ್ಳಲು ನಡೆಸಬಹುದಾದ ಒಂದಷ್ಟು ಅಡ್ಜೆಷ್ಟ್ ಮೆಂಟ್ ಕ್ರಿಯೆಗಳೂ ಕೂಡ “ನೋಡಲ್ಲಿ ಅವ ಇನ್ನೂ ಅಲ್ಲೆ ಇದ್ದಾನೆ ಅವನೊಳಗಿನ ಜಾತಿ ಸತ್ತಿಲ್ಲ”ಅನ್ನೊ ಕುಹಕಗಳನ್ನ , ಅಪಹಾಸ್ಯಗಳನ್ನ ಅನಿವಾರ್ಯವಾಗಿ ಎದುರುಗೊಳ್ಳಬೇಕಾಗುತ್ತೆ. 

ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲ ಇದು ಒಂದು ತರ ಜೊತೆ ಜೊತೆಗೆ ಇರುವಂತದ್ದು ಎನ್ನೋ ವಾದ ಒಂದು ಕಡೆ ಇದೆ.ಒಂದು ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಇದು ಸೂಕ್ತವೆ ಆಗಿದ್ದರು ಮೇಲೆ ಹೇಳಿದಂತೆ ಇವತ್ತು ಬ್ರಾಹ್ಮಣ್ಯ ಎನ್ನುವದು ಈ ಒಂದು ಜಾತಿಗೆ ಸೀಮಿತವಾಗಿ ಉಳಿದಿಲ್ಲ ಅನ್ನುವದು ಕೂಡ ಅಷ್ಟೆ ವಾಸ್ತವ. ಇದಕ್ಕೆ ಕಾರಣೀಭೂತರಾರು ಎಂಬುದಕ್ಕೆ ಮತ್ತೆ ಸಿಗುವ ಉತ್ತರ ಕೂಡ ಬ್ರಾಹ್ಮಣ ಪುರೋಹಿತಶಾಹಿ ವರ್ಗ ಎನ್ನುವದು ಹೌದಾದರು ಜಾತೀಯತೆಯಿಂದ ಹೊರತಾಗಿ ಯೋಚಿಸುವ ಆತನಿಗೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವ ಎಂಭ ಕಾರಣಕ್ಕೆ ಮನುಷ್ಯ ಸಂವೇದಿತನದಿಂದ ಸಮಾಜವನ್ನು ಎದುರುಗೊಳ್ಳಲು ಈ ಪ್ರಮೇಯಗಳನ್ನ ಬಿಡಿಸಿಕೊಂಡು ನಿಲ್ಲಲೇಬೇಕಾಗುತ್ತೆ.ಆದರೆ ಈ ಎಲ್ಲಾ ಸವಾಲುಗಳನ್ನು ತನ್ನದಾಗಿಸಿಕೊಂಡು ಸಮಾಜಮುಖಿಯಾಗಿ ಮುನುಷ್ಯರನ್ನ ಮನುಷ್ಯರಂತೆ ಕಾಣುವ ಬಯಸುವ ಮಂದಿಗಳೆಷ್ಟು? ಅನ್ನೋದು ಪ್ರಶ್ನೆಯಾಗೆ ಉಳಿದು ಬಿಡುತ್ತೆ, ಬಹುಶಃ ಈ ಬಳಗ ಇನ್ನೂ ಅಲ್ಪ ಮಟ್ಟದ್ದೆ.ಹುಟ್ಟಿನಿಂದ ಹೇರಿಕೆ ಮೂಲಕ ಆಪೋಶನಗೊಂಡ ನೀತಿಗಳನ್ನು ತಿರಸ್ಕರಿಸಿ ನಿಲ್ಲವದು ಬಹಳ ಮಂದಿಗೆ ಕಷ್ಟ, ಇನ್ನೂ ವಿಸ್ತರಿಸುವದಾದರೆ ತನ್ನ ಎರವಲು ಪಡೆದ ನೀತಿಗಳಲ್ಲಿ ಹಲವಷ್ಟು ಎಡವಟ್ಟುಗಳಿವೆ ಎಂಬುದರ ಅರಿವು ಕೂಡ ಬಾರದಷ್ಟು ಹೇರಿಕೆಯ ಕಟ್ಟುಪಾಡುಗಳನ್ನೊಳಗೊಂಡ ಸಂಸ್ಕೃತಿ ಎಂದು ಕರೆಸಿಕೊಳ್ಳೊ ಸಂಪ್ರದಾಯಗಳು ಅತನನ್ನು ಜಾತಿಯತೆಯೊಳಗಿನ ಕೂಪದಲ್ಲಿ ಮುಳುಗಿಸಿರುತ್ತದೆ.  ನಿಜವಾಗಿ ಮುಳುಗಿರುವದು ತನ್ನೊಳಗಿನ ಮಾನವೀಯ ಸಂವೇದನೆಗಳು ಎಂಬುದರ ಅರಿವು ಬಾರದಷ್ಟು ತಡೆಯೊಡ್ಡುವದು ಆತನಲ್ಲಿ ಆಪೋಶನಗೊಂಡು ಹೆಮ್ಮರವಾಗಿ ನಿಂತ ಜಾತೀಯತೆ ಎಂಭ ಕಾರ್ಕೋಟಕ ವಿಷ. 

ಇನ್ನೂ ಕೆಲವರು ಒಡಂಬಡಿಕೆಗೆ ಮಾನವೀಯತೆಯ ನೆಲೆಗಟ್ಟಿನ ಸೋಗಿನಲ್ಲಿ ನಾವೆಲ್ಲರೂ ಒಂದು ಎನ್ನುತ್ತಾ ,ಏರು ಪೇರುಗಳನ್ನು ಸರಿ ಪಡಿಸುತ್ತೇವೆ ಎನ್ನುತ್ತಾ ಮುನ್ನಡೆಯುವವರು ಇದ್ದಾರೆ. ಇದು ಹೇಗೆ ಅಂದರೆ ದೇವನೂರು ಮಹಾದೇವ ಅವರು ಹೇಳುವಂತೆ ರೋಟರಿ ಸಂಸ್ಕೃತಿಯ ತರ.ರೋಟರಿಯವರಿಗೆ ಏಸಿ ರೂಮಿನಲ್ಲಿ ಐಷಾರಾಮಿ ಹೋಟೆಲಲ್ಲಿ ಕುಳಿತು ಬಡವರ ಬಗ್ಗೆ ಚಿಂತೆ ಮಾಡುವದಕ್ಕೆ ಬಡವರು ಬೇಕು. ಅಂದರೆ ಬಡವ ಇದ್ದಲ್ಲಿ ಇವರ ಸೇವೆ ಆ ಮೂಲಕ ಸಂಸ್ಥೆ ಜೀವಂತ.ಅದೆ ತರನೆ ಸಮಾಜದ ಏರು ಪೇರು ಅಸ್ಪ್ರಶ್ಯತೆಯಂತ ನೀತಿಗಳು ಇದ್ದಲ್ಲಿ ಮಾತ್ರ ಇವರುಗಳ ರಾಜಕೀಯ ಆಕಾಂಕ್ಷೆಗಳ ಜೀವಂತಿಕೆ. ಗಮನಿಸಬೇಕಾದ ಒಂದು ಅಂಶವೆಂದರೆ ಮಾನವೀಯತೆ ಜೊತೆ ಆದರ್ಶವೆಂಬುದು ಕೂಡ ಜೊತೆಗೆ ತಳುಕು ಹಾಕಿಕೊಳ್ಳುತ್ತದೆ. ಆದರ್ಶ ಮೆರೆಯೋದಕ್ಕಾಗೆ ಸಮಾಜಸುಧಾರಣೆ ಅನ್ನೋದನ್ನ ಮಾನವೀಯತೆ ಅನ್ನೋ ನೆಲೆಯಲ್ಲಿ ನೋಡೋದು ಕಷ್ಟನೆ ಸರಿ. ಅದು ಮಾನವ ಕಾಳಜಿಯ ಸೋಗು ಅಷ್ಟೆ. ಮಾನವೀಯತೆಯೆ ಮೊದಲ್ಗೊಂಡು ಅದು ಇತರರಿಗೆ ಮಾನವೀಯತೆಯ ನಿಟ್ಟಿನಿಂದ ಆದರ್ಶವಾಗಿ ಕಂಡರೆ ಅದು ಬೇರೆ ಮಾತು. 

ಇವೆಲ್ಲದರ ಹೊರತಾಗಿ ಒಂದಂತೂ ಸತ್ಯ, ಬ್ರಾಹ್ಮಣ ಅಂತ ಸಮಾಜದಿಂದ ಕರೆಸಿಕೊಂಡ ಮಾತ್ರಕ್ಕೆ ಆತ ಬ್ರಾಹ್ಮಣನಾಗಬೇಕಾದ್ದಿಲ್ಲ, ಜಾತೀಯ ಬಂಧನಗಳನ್ನು ಬಿಡಿಸಿಕೊಂಡು ಆತನೂ ಮಾನವನಾಗಬಲ್ಲ, ಆದರೆ ಅವನಿಗೆ ಬೇಡದ ಆತನ ಜಾತಿ ಸಮಾಜಕ್ಕೆ ಬೇಕಿರುತ್ತದೆ.ಆತ ಯಾವ ಜಾತಿಗೂ ನಾ ಒಳಪಟ್ಟವನಲ್ಲ ಎಂಬುದನ್ನು ಎಷ್ಟೆ ಬೊಬ್ಬಿರುದು ಅಂದರು ಸಮಾಜಕ್ಕದು ಕೇಳಿಸುವದೆ ಇಲ್ಲ. ಆತನ ಜಾತಿಯಿಂದ ನಡೆದ ದುರಾಚಾರಗಳು, ಸಮಾಜದ ಏರು ಪೇರುಗಳಿಗೆ ಕಾರಾಣಿಭೂತರಾದ ಆತನ ಹಿರಿಯಿಕರ ಮೂಲಕ ಬಳವಳಿಯೆಂಬಂತೆ ಅವನಿಗೆ ಗೊತ್ತಿಲ್ಲದೆಯೆ ಅದರ ಪಾಪವನ್ನು ಅವನುಣ್ಣುತ್ತಿರಬೇಕು. ಜಾತಿ ಬಂಧನದಿಂದ ಬಿಡಿಸಿಕೊಂಡ ಆತನೂ ಜಾತಿಯ ಕಾರಣದಿಂದ ತನ್ನದಲ್ಲದ ತಪ್ಪಿಗೆ ಪಾಪವೆಂಬಂತೆ ತುಚ್ಚ ಮಾತುಗಳು, ದೃಷ್ಟಿಗಳನ್ನು ಎದುರಿಸಬೇಕಾಗುತ್ತೆ. ಹಾಗಿದ್ದಾಗ ಆತನಿಗೆ ಉಳಿದಿರುವ ದಾರಿ ಎಂದರೆ ಇದೆಲ್ಲವನ್ನೂ ಸಹಿಸುತ್ತೆಲೆ ಜಾತಿಯ ಸೋಗಲಾಡಿತನವನ್ನು ದಾಟಿ ಮನುಷ್ಯನಾಗಿ ಎಲ್ಲಾ ಕಠಿಣ ಹಾದಿಯನ್ನು ದಾಟಿ ಕ್ರಮಿಸುವದಕ್ಕೆ ತನ್ನಿಂದಾದ ಪ್ರಯತ್ನ ಪಡೋದೆ ಆಗಿರುತ್ತದೆ.ಅತನ ಮನಸ್ಸು ಪರಿಶುದ್ದವಾಗಿದ್ದಲ್ಲಿ ಜಾತಿ ಧರ್ಮದಿಂದ ಹೊರತಾಗಿ ಒಂದಲ್ಲ ಒಂದು ದಿನ ಎಲ್ಲರೀಗೂ ಸಲ್ಲುವವನಾಗುತ್ತಾನೆ ಅನ್ನೊ ನಂಬಿಕೆಯೆ ಆತನ ದಾರಿದೀಪವಾಗಬೇಕು.ತನ್ನ ಜಾತಿಯಿಂದ ಅವಮಾನಿತ ಮಂದಿ ಬಳಗದ ಮುಂದು ತನ್ನ ಅವಮಾನ ತೃಣ ಮಾತ್ರದ್ದು ಎಂಬ ಸತ್ಯದ ಅರಿವು ಇರಬೇಕಷ್ಟೆ.

Thursday 17 May 2012

ಮೋದೂರ ತೇಜ ಬರೆದ ವೇದಾವತಿ ತೀರದಲ್ಲಿ' ಕಾದಂಬರಿ:ಅರುಣ್ ಜೋಳದ ಪರಿಚಯ

ಪುಸ್ತಕ ಪರಿಚಯ:-ಅರುಣ್ ಜೋಳದ ಕೂಡ್ಲಿಗಿ
ಕೃಪೆ:- ಕೆಂಡಸಂಪಿಗೆ




ಚಳ್ಳಕೆರೆ ಸಮೀಪದ ಮೋದೂರು ಗ್ರಾಮದ ದಲಿತ ಯುವಕ ದುರುಗಪ್ಪ (ಮೋದೂರು ತೇಜ) ಅವರ ‘ವೇದಾವತಿ ತೀರದಲ್ಲಿ’ ಕಾದಂಬರಿಯ ಘಟನೆಯೊಂದು ಹೀಗಿದೆ: ಹಳ್ಳಿಯೊಂದರ ಶಿಕ್ಷಿತ ದಲಿತ ಯುವಕ ಗೋವಿಂದ ತನಗಿಂತ ಮೇಲು ಜಾತಿಯ ಗೆಳೆಯನ ಮದುವೆಯ ಊಟದ ಪಂಕ್ತಿಯಲ್ಲಿ ಕೂತಿರುತ್ತಾನೆ. ಆಗ ಮೇಲ್ಜಾತಿಯ ಯಜಮಾನ ಬಂದು ಒಂದೇ ಪಂಕ್ತಿಯಲ್ಲಿ ದಲಿತರಿಗೆ ಊಟ ಹಾಕಿ ಊರ ಮಾನ ತೆಗೆಯುತ್ತಿದ್ದೀರಿ ಎಂದು ಕಿಡಿಕಾರುತ್ತಾನೆ. ಇದಕ್ಕೆ ಗೆಳೆಯರು ಸೊಪ್ಪುಹಾಕದೆ ಗೋವಿಂದನನ್ನು ಸಂತೈಸಿ ಊಟ ಮಾಡುವಂತೆ ಒತ್ತಾಯಿಸುತ್ತಾರೆ. ಗೋವಿಂದ ಅವಮಾನದಿಂದ ಬೇಯುತ್ತಾನೆ. ಊಟ ಹೊಟ್ಟೆಯೊಳಗೆ ಇಳಿಯುವುದಿಲ್ಲ. ಇದು ಬದಲುಗೊಂಡ ಗ್ರಾಮೀಣ ಬದುಕಿನಲ್ಲಿ ಜಾತಿ ಶ್ರೇಣೀಕರಣದ ಹೊಸ ಮುಖವೊಂದನ್ನು ಅನಾವರಣ ಮಾಡುತ್ತದೆ. ಇಂದಿನ ದಲಿತ ಯುವಕರ ಸಾಹಿತ್ಯ ಅಭಿವ್ಯಕ್ತಿ ಯಾವ ತೆರನಾಗಿರುತ್ತದೆ ಎನ್ನುವುದಕ್ಕೆ ಈ ಘಟನೆ ಉತ್ತರದಂತೆ ಬಂದಿದೆ.

ಹೊಸ ತಲೆಮಾರಿನ ಬರಹಗಾರ ಮೋದೂರು ತೇಜ ಅವರು ಮರದೊಳಗಳ ಕಿಚ್ಚು ಎನ್ನುವ ಕಥಾ ಸಂಕಲನ, ಬುದ್ಧನ ಮೇಲೂ ಯುದ್ಧ, ಭೂಮಿ ತೂಕದ ಪ್ರೀತಿ ಎಂಬ ಕವನ ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಅವರ ಮೊದಲ ಕಾದಂಬರಿ ವೇದಾವತಿ ತೀರದಲ್ಲಿ. ಕಾದಂಬರಿ ಕ್ಷೇತ್ರಕ್ಕೆ ಹೆಚ್ಚು ತೆರೆದುಕೊಳ್ಳದ ಯುವ ಲೇಖಕರ ಮಧ್ಯೆ ತೇಜ ಅವರು ಭಿನ್ನರಾಗಿ ಕಾಣುತ್ತಾರೆ. ಈ ಕಾದಂಬರಿಯಲ್ಲಿ ಚಳ್ಳಕೆರೆ ಭಾಗದ ವೇದಾವತಿ ನದಿ ತೀರದ ಗ್ರಾಮೀಣ ಬದುಕಿನ ಚಿತ್ರಣವನ್ನು ಕಟ್ಟಿಕೊಡಲು ಯತ್ನಿಸಿದ್ದಾರೆ. ಇದು ೩೨೧ ಪುಟದ ೨೫ ಉಪ ಘಟಕಗಳನ್ನೊಳಗೊಂಡ ದೀರ್ಘ ಕಾದಂಬರಿ.

ಈ ಕಾದಂಬರಿ ಹಲವು ಕುಟುಂಬಗಳ ಬದುಕಿನ ಚಲನವಲನಗಳನ್ನು ದಾಖಲಿಸುತ್ತದೆ. ಯುಗಾದಿಯ ಬೇಟೆಯೊಂದಿಗೆ ಆರಂಭವಾಗಿ, ಮತ್ತೊಂದು ಯುಗಾದಿ ಬೇಟೆಯೊಂದಿಗೆ ಮುಕ್ತಾಯವಾಗುತ್ತದೆ. ಈ ಒಂದು ವರ್ಷದ ಅವಧಿಯಲ್ಲಿನ ಗ್ರಾಮೀಣ ಬದುಕಿನ ನಾಲ್ಕು ಕುಟುಂಬಗಳ ನಡುವೆ ನಡೆವ ಕೌಟುಂಬಿಕ ಏರುಪೇರುಗಳನ್ನು ಇಲ್ಲಿ ದಾಖಲಿಸಲಾಗಿದೆ. ಮುಖ್ಯವಾಗಿ ವೇದಾವತಿ ನದಿ ತೀರದ ಹಳ್ಳಿಗಳ ಹಬ್ಬ ಆಚರಣೆ ಜಗಳ ವೈಷಮ್ಯ ಮುಂತಾದವುಗಳ ಮೂಲಕ ಇಲ್ಲಿನ ಜನಜೀವನದ ದಟ್ಟ ವಿವರಗಳನ್ನು ಕಟ್ಟಿಕೊಡುತ್ತಾರೆ. ಹಾಗಾಗಿ ಇಲ್ಲಿ ಗ್ರಾಮೀಣ ಬದುಕಿನ ಸದ್ಯದ ಪಲ್ಲಟಗಳನ್ನು ಗ್ರಹಿಸಬಹುದು. ಇಡೀ ಕಾದಂಬರಿ ವಿವರಣೆಯಲ್ಲಿ ವಾಚ್ಯವಾದರೂ ಮಾತುಕತೆಯಲ್ಲಿ ಬರುವ ಗಾದೆಗಳೆ ಇಲ್ಲಿನ ಒಳ ದ್ವನಿಯಂತೆ ಬಳಕೆಯಾಗಿದೆ.

ಇಂದು ಗ್ರಾಮೀಣ ಪ್ರದೇಶದಲ್ಲಿ ಅರೆವಿದ್ಯಾವಂತರ ಸಂಖ್ಯೆ ಹೆಚ್ಚಿದೆ. ಅಂದರೆ ಇತ್ತ ನೌಕರಿಗೆ ಹೋಗುವಷ್ಟು ವಿದ್ಯೆಯೂ ಇಲ್ಲದೆ, ಇತ್ತ ಕೃಷಿ ಮಾಡುವ ಕೌಶಲ್ಯ, ಮನಸ್ಸೂ ಇಲ್ಲದೆ ಅಂಡಲೆಯುವ ಒಂದು ಯುವ ವರ್ಗ ಕರ್ನಾಟಕದಲ್ಲಿ ಹೆಚ್ಚಾಗಿದೆ. ಈ ವರ್ಗದ ಆಯ್ಕೆ ಏನಾಗಿದೆ? ಈ ವರ್ಗ ಆಯ್ದುಕೊಳ್ಳುವ ಹೊಸ ಉದ್ಯೋಗ ಯಾವ ಬಗೆಯದು, ಈ ವರ್ಗ ಬದುಕನ್ನು ಕಟ್ಟಿಕೊಳ್ಳಲು ತಾನು ಕಲೆತ ವಿದ್ಯೆಯನ್ನು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದನ್ನು ಅಭ್ಯಸಿಸುವ ಅಗತ್ಯವಿದೆ.

ತೇಜ ಅವರ ಕಾದಂಬರಿಯಲ್ಲಿ ಇಪ್ಪತ್ತರಿಂದ ಮುವತ್ತೈದು ವರ್ಷದ ಒಳಗಿನ ಯುವ ಸಮುದಾಯದ ತಳಮಳಗಳ ಪ್ರಾತಿನಿಧಿಕವಾಗಿ ಇಲ್ಲಿನ ಬಸವರಾಜು, ಮೇಘರಾಜು, ರಘುರಾಮ, ಆನಂದ, ಗೋವಿಂದ, ಸಾರಿಕಾ, ವೇದಾವತಿ ಮುಂತಾದವರ ಪಾತ್ರಗಳು ಬರುತ್ತವೆ. ಈ ವರ್ಗದ ತಳಮಳಗಳನ್ನು ಹುಡುಕಾಟ ಮಾಡುವ ಕಾರಣಕ್ಕೆ ಈ ಕಾದಂಬರಿ ಮುಖ್ಯವಾಗುತ್ತದೆ.

ಪ್ರಾದೇಶಿಕ ವಿವರಗಳ ಸಾವಯವ ಸಂಬಂಧದೊಂದಿಗೆ ನಮ್ಮ ಕಾಲದ ಗ್ರಾಮೀಣ ಬದುಕನ್ನು ಕಟ್ಟಿಕೊಡುವಲ್ಲಿ ಮೋದುರು ತೇಜ ಪಟ್ಟಿರುವ ಶ್ರಮ ಮೆಚ್ಚುವಂಥದ್ದು. ಆದರೆ ಈ ಕಾದಂಬರಿಗೆ ಗಂಭೀರ ಮಿತಿಗಳಿವೆ. ಸಮೃದ್ಧ ಜೀವನಾನುಭವವನ್ನು ಒಂದು ತಾತ್ವಿಕ ಎಳೆಯಲ್ಲಿ ಪೋಣಿಸುವಲ್ಲಿ ಕಾದಂಬರಿ ಸೋತಿದೆ. ಇಲ್ಲಿನ ಬಹುತೇಕ ಪಾತ್ರಗಳು ಆದರ್ಶ ವ್ಯಕ್ತಿಚಿತ್ರಣದಂತೆ ಕಾಣುತ್ತವೆ. ತೇಜ (ದುರುಗಪ್ಪ) ಸ್ವತಃ ದಲಿತನಾಗಿ ತನ್ನದೇ ಹಳ್ಳಿಗಳಲ್ಲಿ ಅನುಭವಿಸಿದ ಅಸ್ಪೃಶ್ಯತೆಯ ನೋವುಗಳನ್ನು ಕಾದಂಬರಿಯಲ್ಲಿ ದಾಖಲಿಸಲು ಸಾಧ್ಯವಾಗಿಲ್ಲ. ಇಲ್ಲಿ ಲೇಖಕರು ದಲಿತ ಐಡೆಂಟಿಟಿಯಲ್ಲಿ ಗುರುತಿಸಿಕೊಳ್ಳದ ಇಕ್ಕಟ್ಟನ್ನು ಅನುಭವಿಸಿದಂತೆ ಕಾಣುತ್ತದೆ.

ದಲಿತ ಯವಕನೊಬ್ಬ ಗ್ರಾಮೀಣ ಬದುಕನ್ನು ನೋಡುವ ವಿಶಿಷ್ಟ ನೋಟಕ್ರಮವೂ ಇಲ್ಲಿ ಕಾಣುವುದಿಲ್ಲ. ಹಾಗೆಯೆ ಗ್ರಾಮೀಣ ಭಾಗದ ಸಾಮಾಜಿಕ ನಾಟಕಗಳ ಪ್ರಭಾವ ಕಾದಂಬರಿಯ ಸಂಭಾಷಣೆಗಳಲ್ಲಿ ಎದ್ದು ಕಾಣುತ್ತದೆ. ಈ ಬಗೆಯ ನಾಟಕೀಯತೆಯನ್ನು ಮೀರುವ ಅಗತ್ಯವಿತ್ತು. ಪ್ರಾದೇಶಿಕ ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾದಂಬರಿಕಾರ ಸೋತಿದ್ದಾನೆ. ಎಲ್ಲವೂ ಕಳೆದುಹೋಗುತ್ತಿವೆ ಅವುಗಳನ್ನು ಸಂಗ್ರಹಿಸಿಡಬೇಕು, ಹಳೆಯದೆಲ್ಲಾ ಸಮೃದ್ಧವಾದುದು, ಸಾಮರಸ್ಯದ್ದು ಎನ್ನುವ ಹಳಹಳಿಕೆ ಕಾದಂಬರಿಯ ನಿರೂಪಣೆಯಲ್ಲಿದೆ. ಇದು ಕೂಡ ಕಾದಂಬರಿಯ ಮಿತಿಯಾಗಿದೆ. ಇಂತಹ ಹಲವು ಮಿತಿಗಳು ಈ ಕಾದಂಬರಿಗಿವೆ.
ಮೋದೂರು ತೇಜ

ಮೋದೂರು ತೇಜ ಅವರ ಮೊದಲ ಕಾದಂಬರಿ ಇದಾಗಿದ್ದರಿಂದ ಇಂತಹ ಮಿತಿಗಳು ಉಳಿದಿರಬಹುದು. ತೇಜ ಅವರ ಕಥೆಗಳಲ್ಲಿ ಕಾಣುವ ಬಿಗಿ ಬಂಧ, ಕಥನ ಕ್ರಮ, ನಿರೂಪಣೆಯ ತಂತ್ರ ಇಲ್ಲಿಯೂ ಸಾಧ್ಯವಾಗಿದ್ದರೆ, ಇದೊಂದು ಮಹತ್ವದ ಕಾದಂಬರಿಯಾಗುತ್ತಿತ್ತು. ತೇಜ ಅವರು ತಮ್ಮ ಮುಂದಿನ ಬರಹದಲ್ಲಿ ಇಂತಹ ಮಿತಿಗಳನ್ನು ಮೀರಿದರೆ ಅವರಿಂದ ಮಹತ್ವದ ಕಾದಂಬರಿಯನ್ನು ನಿರೀಕ್ಷಿಸಬಹುದು. ಕಾದಂಬರಿಯಂತಹ ದೊಡ್ಡ ಕ್ಯಾನ್ವಾಸಿನಲ್ಲಿ ತನ್ನ ಸೃಜನಶೀಲ ಹುಡುಕಾಟ ಮಾಡಿದ ತೇಜ ಅವರನ್ನು ಈ ಕಾರಣಕ್ಕೆ ಅಭಿನಂದಿಸಬೇಕು.

ಕೃತಿ: ವೇದಾವತಿ ತೀರದ ಜನಬದುಕಿನ ಚಿತ್ರಲೋಕ (ಕಾದಂಬರಿ)
ಲೇಖಕರು: ಮೋದುರು ತೇಜ
ಪುಟ:೩೪೦, ಬೆಲೆ: ರೂ.೨೦೦
ಪ್ರ: ಅಕ್ಷಯ ಪ್ರಕಾಶನ, ಚಿತ್ರದುರ್ಗ

Wednesday 16 May 2012

ಸ್ತ್ರೀವಾದ ಎನ್ನುವುದು ಬದುಕಿನ ಒಂದು ಕ್ರಮ – ಆಶಾ ದೇವಿ

ಹರ್ಷ ಕುಮಾರ್ ಕುಗ್ವೆ
ಸೌಜನ್ಯ:- ದ ಸಂಡೇ ಇಂಡಿಯನ್



ಕನ್ನಡ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯರ ಸಾಹಿತ್ಯ ರಚನೆ ಇಂದು ಯಾವ ಘಟ್ಟವನ್ನು ತಲುಪಿದೆ ಎಂದು ನಿಮ್ಮ ಅನಿಸಿಕೆ?

ಎಲ್ಲ ಬಗೆಯ ಶೋಷಿತ ಸಮುದಾಯಗಳ ಸಂಕಥನದಲ್ಲಿ ಗುರುತಿಸಬಹುದಾದ ಸಾಮಾನ್ಯ ಲಕ್ಷಣಗಳು ಇಲ್ಲೂ ಇವೆ. ಮೊದಲನೆಯದು ಆತ್ಮ ಮರುಕದ ಘಟ್ಟವಾದರೆ ಎರಡನೆಯದು ಸ್ವ-ಅರಿವಿನ ಘಟ್ಟ, ಮೂರನೆಯದು ಅಧಿಕೃತತೆಯನ್ನು ದಾಖಲಿಸುವ ಘಟ್ಟ. ಹೀಗೆ ಇಂದು ಲೇಖಕಿಯರು ತಮ್ಮ ಅನುಭವಕ್ಕೂ, ತಮ್ಮ ಬರವಣಿಗೆಗೂ, ಒಟ್ಟಾರೆ ತಮ್ಮ ಅಭಿವ್ಯಕ್ತಿಗೆ ಅಧಿಕೃತತೆಯನ್ನು ಪಡೆದುಕೊಳ್ಳುವ ಒಂದು ಘಟ್ಟದಲ್ಲಿದ್ದಾರೆ. ನಮ್ಮ ಎದುರಿಗಿರುವ ಸವಾಲೆಂದರೆ ಲೋಕದೃಷ್ಟಿಯಿಂದ ಪಡೆದುಕೊಳ್ಳಬೇಕಾದ ಬಿಡುಗಡೆಗಿಂತ ಸ್ವ-ಬಿಡುಗಡೆ ತುಂಬ ಮೂಲಭೂತವಾದದ್ದು ಅನ್ನಿಸುತ್ತೆ. ಇವತ್ತಿನ ಲೇಖಕಿಯರು ಅವರವರ ಬದುಕಿನ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ತುಂಬ ಮುಖ್ಯವಾದದ್ದೆನ್ನುವ ಹಾಗೆ, ಅದೇ ಅವರ ಅನುಭವ ಲೋಕ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಹಾಗೆ ಬರೆಯುವಾಗ ಅವರಿಗಿರುವ ಆತ್ಮವಿಶ್ವಾಸ ಒಂದು ಗುರುತರವಾದ ಬದಲಾವಣೆಯನ್ನು ತಂದುಕೊಡುತ್ತಿದೆ.

ಮಹಿಳೆಯರ ಸಾಹಿತ್ಯ ಸೃಷ್ಟಿಗೆ ಯಾವ ಪ್ರತಿಸ್ಪಂದನೆ ಸಿಗುತ್ತಿದೆ?

ಇಂದು ಮಹಿಳೆಯ ಸಾಹಿತ್ಯಕ್ಕೆ ಸಿಗ್ತಾ ಇರೋ ಸ್ಥಾನ ಬೇರೆ. ಮಹಿಳೆಯ ಸಾಹಿತ್ಯ ಮತ್ತು ಸಾಹಿತ್ಯದ ಸ್ವರೂಪ ಎರಡಕ್ಕೂ ಹತ್ತಿರದ ಸಂಬಂಧವಿದೆ. ಮಹಿಳೆಯ ಸಾಹಿತ್ಯವನ್ನು ಸಾಹಿತ್ಯ ಅಂತ ಮಾತ್ರ ನೋಡಬೇಕು ಎನ್ನುವುದು ನಮ್ಮ ಹಂಬಲ. ಸಾಹಿತ್ಯದಲ್ಲಿ ಒಳ್ಳೆ ಸಾಹಿತ್ಯ, ಕೆಟ್ಟ ಸಾಹಿತ್ಯ ಎಂದು ಮಾತ್ರ ಇರಬೇಕು ಎಂಬುದರ ಕಡೆಗೆ ನಮ್ಮ ಚಲನೆ ಇರಬೇಕು. ಅದು ತುಂಬ ದೂರದ ದಾರಿ ನಿಜ. ಆದರೆ ಸಮಾಧಾನದ ಸಂಗತಿ ಏನೆಂದರೆ ಮಹಿಳೆಯ ಸಾಹಿತ್ಯವನ್ನು ನೋಡುವ ದೃಷ್ಟಿಕೋನದಲ್ಲಿ ತುಂಬಾ ಖಚಿತ ಹಾಗೂ ಗುಣಾತ್ಮಕ ಬದಲಾವಣೆಗಳಾಗುತ್ತಿರುವುದು. ಇಂದು ಹಿಂದೆ ನಿರ್ಲಕ್ಷಿಸಲ್ಪಟ್ಟ ಲೇಖಕಿಯರನ್ನೂ ಮುಂದೆ ಇಟ್ಟುಕೊಂಡು ಚರ್ಚಿಸುತ್ತಿದ್ದೇವೆ ಎಂಬುದು ಮೊದಲನೆಯದು. ಎರಡನೆಯದಾಗಿ, ಲೇಖಕಿಯರನ್ನು ಬೇರೆ ಬೇರೆ ನೆಲೆಗಳಲ್ಲಿ, ಅಂದರೆ ಲೇಖಕಿ ಎನ್ನುವ ನಿರ್ದಿಷ್ಟತೆಯನ್ನು ಬಿಟ್ಟು ಚರ್ಚಿಸುವ ನೆಲೆಗಳನ್ನು ಕಟ್ಟಿಕೊಡುವುದರಲ್ಲಿ ಇವತ್ತಿನ ಕನ್ನಡ ವಿದ್ವತ್ ಲೋಕಕ್ಕೆ ಆಸಕ್ತಿ ಇದೆ. ತುಂಬಾ ಮೂಲಭೂತ ಸವಾಲುಗಳು ಇನ್ನೂ ಹಾಗೇ ಉಳಿದುಕೊಂಡಿವೆ ಎಂಬುದೇನೋ ನಿಜ.

ಇತ್ತೀಚೆಗೆ ನಾನು ಕಟ್ಟಲು ಯತ್ನಿಸುತ್ತಿರುವ ಪ್ರಮೇಯ ಏನು ಎಂದರೆ ಕನ್ನಡ ವಿಮರ್ಶೆಯಲ್ಲಿ ಯಾವಾಗಲೂ ಸ್ತ್ರೀ ದೃಷ್ಟಿಕೋನವಿದೆ, ಆದರೆ ಸ್ತ್ರೀ ಸಂವೇದನೆ ಇಲ್ಲ ಎಂಬುದು. ನಮ್ಮ ಎಷ್ಟೋ ಮಹತ್ವದ ಲೇಖಕಿಯರನ್ನು ಅವರ ನಿಜವಾದ ನೆಲೆ ಮತ್ತು ಬೆಲೆಯಲ್ಲಿ ಗುರುತಿಸಲು ಏಕೆ ಸಾಧ್ಯವಾಗಲಿಲ್ಲ ಎಂದರೆ ದೃಷ್ಟಿಕೋನ ಸಾಧ್ಯವಾಗಿ ಸಂವೇದನೆ ಸಾಧ್ಯವಾಗದಿರುವುದರಿಂದಾಗಿ.

ಕನ್ನಡ ಸಾಹಿತ್ಯದ ಪುನರ್‌ಮೌಲ್ಯೀಕರಣ ಮಾಡುತ್ತಿರುವ ಈ ದಿನಗಳಲ್ಲಿ ಲೇಖಕಿಯರಿಗೆ ಬಹುಶಃ ಇಲ್ಲಿಯವರೆಗೆ ಸಿಗದೇ ಹೋದ ಸ್ಥಾನ ಇನ್ನು ಸಿಗುತ್ತೆ ಅಂತ ನನಗನ್ನಿಸುತ್ತಿದೆ.

ಇಂದು ಮಹಿಳೆಯರ ದೃಷ್ಟಿಕೋನದಲ್ಲಿ ಯಾವ ರೀತಿಯ ಬದಲಾವಣೆ ಕಂಡು ಬರುತ್ತಿದೆ? ಅದು ಕೇವಲ ವ್ಯಕ್ತಿನಿಷ್ಠವಾಗಿದೆಯೇ?

ಸಾಹಿತ್ಯ ಸೃಷ್ಟಿಗೆ ತೊಡಗಿಕೊಂಡಿರುವವರಲ್ಲಿ ಹಲವರು ಸಮಷ್ಟಿ ನೆಲೆಯಲ್ಲೂ ಬರೆಯುತ್ತಿದ್ದಾರೆ. ಅದಕ್ಕೇ ನಾನು ಹೇಳಿದ್ದು. ಇಂದು ಬರೆಹ ಸ್ತ್ರೀ ಕೇಂದ್ರಿತಕ್ಕಿಂತ ಬದುಕಿನ ಕೇಂದ್ರಿತ ಸಾಹಿತ್ಯವಾಗಿದೆ. ಇದೇ ಒಂದು ಬದಲಾವಣೆ. ಆತ್ಮ ಮರುಕ ಮತ್ತು ಸ್ವ-ಗ್ರಹಿಕೆಯಿಂದ ಹೊರಟು ಅಧಿಕೃತತೆಯೆಡೆ ಬಂದಿರುವುದೇ ಒಂದು ಬದಲಾವಣೆ. ಇಂದು ತುಂಬ ದೊಡ್ಡದಾಗಿರುವುದು ಯಾವುದೆಂದರೆ ಬದುಕು. ತಾನುಂಟೋ ಮೂರು ಲೋಕವುಂಟೋ ಎಂದು ನೋಡುತ್ತಿದ್ದವರಿಗೆ ಇಂದು ಕಣ್ಣು ಹೊರಳಿಸಿ ಹೊರಳಿಸಿ ನೋಡಲಿಕ್ಕಾಗುತ್ತಿದೆ. ಹಾಗೆ ನೋಡಲಿಕ್ಕೆ ಬೇಕಾಗಿರುವ ಆತ್ಮಸಮ್ಮಾನ ಇಂದು ಸಾಧ್ಯವಾಗಿದೆ. ಕಟ್ಟಿಕೊಳ್ಳುತ್ತಿರುವ ಬದುಕಿನ ಬಗ್ಗೆ ಯಾವ ಕೀಳರಿಮೆಯೂ ಇಲ್ಲದ ವಿಶ್ವಾಸ ಇಂದು ಸಾಧ್ಯವಾಗಿದೆ. ಹೀಗಾಗಿ ಇಂದು ಹೆಣ್ಣು ಕಂಡುಕೊಳ್ಳುತ್ತಿರುವುದು ಹೊರಗಿನದ್ದೂ ಹೌದು ಒಳಗಿನದ್ದೂ ಹೌದು. ಆದರೆ ಕೆಲವೊಮ್ಮೆ ಬಿಡುಗಡೆಯ ದಾರಿಗಳಾಗಿ ಕಂಡಿರುವುದು ಎಷ್ಟೋ ಸಲ ಬಿಡುಗಡೆಯ ದಾರಿಗಳಾಗಿರುವುದಿಲ್ಲ. ಅವು ನಮ್ಮನ್ನು ಇನ್ನೂ ಹೆಚ್ಚೆಚ್ಚು ಆಳವಾಗಿ ಹುಗಿಯುವ (ಪುರುಷ ಪ್ರಧಾನತೆಯೊಳಗೆ) ಹುನ್ನಾರಗಳಾಗಿರುತ್ತವೆ. ಆದರೆ ಸಮಾಧಾನದ ಸಂಗತಿ ಎಂದರೆ ಇಂದು ಪುರುಷ ಪ್ರಾಧಾನ್ಯತೆಯ ಈ ಛದ್ಮವೇಷವು ಅರ್ಥವಾಗುತ್ತಿದೆ. ಒಂದು ಕಾಲದಲ್ಲಿ ಅದು ಅರಿವಿಗೇ ಬರುತ್ತಿಲ್ಲ.


ನಮ್ಮ ಸಮಾಜದಲ್ಲಿ ಸ್ತ್ರೀವಾದ ಇಂದು ಯಾವ ಹಂತದಲ್ಲಿದೆ? ಸ್ತ್ರೀವಾದಕ್ಕೆ ನಿಮ್ಮ ವ್ಯಾಖ್ಯಾನವೇನು?

ಸ್ತ್ರೀವಾದ ಎನ್ನುವುದು ಒಂದು ಬದುಕಿನ ಕ್ರಮ ಅಷ್ಟೆ. ಸಮಾನತೆ, ಸ್ವಾತಂತ್ರ್ಯ ಯಾವುದೂ ಇಲ್ಲದ, ಬದಲಿಗೆ ಪರಸ್ಪರ ಸ್ವಾಯತ್ತತೆಯಿಂದ ಒಪ್ಪಿ ಗೌರವಿಸುವ ಒಂದು ಜೀವನ ವಿಧಾನ ಎನ್ನುವುದು ನನ್ನ ಗ್ರಹಿಕೆ. ಆದರೆ ಸ್ತ್ರೀವಾದ ಎನ್ನುವುದು ಮಹಿಳೆಯರಿಗೇ ಸಂಬಂಧಿಸಿದ್ದಲ್ಲ. ಆ ಬದುಕಿನ ಕ್ರಮವನ್ನು ಗಂಡು ಮತ್ತು ಹೆಣ್ಣು ಇಬ್ಬರೂ ಬಹಳ ಶ್ರಮ ಹಾಗೂ ಪ್ರೀತಿಯಲ್ಲಿ ಮಾತ್ರ ಕಟ್ಟಿಕೊಳ್ಳಲು ಆಗುತ್ತೆ.

ಸ್ತ್ರೀವಾದದಲ್ಲಿ ಖಂಡಿತವಾಗಿಯೂ ಒಂದು ಬೆಳವಣಿಗೆ ಇದೆ. ಸ್ತ್ರೀವಾದಿ ಚಳವಳಿಯನ್ನು ಪ್ರತ್ಯೇಕವಾಗಿ ನೋಡಬೇಕಿಲ್ಲ ಎನ್ನುವುದೇ ನನಗನ್ನಿಸಿದ್ದು. ಒಂದು ಕಾಲದಲ್ಲಿ ಸ್ತ್ರೀವಾದ ಭಾರತಕ್ಕೆ ಪ್ರವೇಶ ಮಾಡಿದಾಗ ಅದು ಎಲ್ಲಾ ಸೌಲಭ್ಯ ಪಡೆದ ವರ್ಗದ ಪ್ರಯತ್ನವಾಗಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದು ಬೇರೆ ಬೇರೆ ಸ್ತರಗಳಲ್ಲಿರುವವರಿಗೂ ಅದು ತಲುಪಿದೆ. ವಿದ್ಯಾವಂತರು, ಅವಿದ್ಯಾವಂತರು, ಗಾರ್ಮೆಂಟ್ ಕಾರ್ಮಿಕರು- ಹೀಗೆ ಎಲ್ಲರಲ್ಲಿ ಒಂದು ಜಾಗೃತಿ ಕಾಣಿಸುತ್ತಿದೆ. ಅದೇ ಹೊತ್ತಿಗೆ ಈ ಜಾಗೃತಿ ಅಥವಾ ಅರಿವು ಎನ್ನುವುದು ಆಧುನಿಕ ಹೆಣ್ಣಿನ ಹಿಂಸೆಯನ್ನು ಹಿಂದೆಂದೂ ಇರದಷ್ಟು ಹೆಚ್ಚಿಸಿದೆ ಎನ್ನುವುದೂ ಅಷ್ಟೇ ವಾಸ್ತವ. ಅರಿವಿನ ಹಿಂಸೆಯ ಘಟ್ಟವನ್ನು ದಾಟುವುದು ಯಾವ ಶೋಷಿತ ವರ್ಗಕ್ಕೂ ತುಂಬ ನಿರ್ಣಾಯಕವಾದ ಘಟ್ಟ. ಬಹಳ ಕಷ್ಟದ ಕಾಲ ಅದು. ಆದರೆ ಹೆಣ್ಣಿನದು ಅಸಾಧಾರಣವಾದ ಆತ್ಮ ಸ್ಥೈರ್ಯದ ವ್ಯಕ್ತಿತ್ವವಾದ್ದರಿಂದ ಈ ಹಿಂಸೆಗೂ ಆಕೆ ತನ್ನನ್ನು ತಾನು ಒಡ್ಡಿಕೊಂಡಿದ್ದಾಳೆ.

ಪುರುಷ ಲೇಖಕರಲ್ಲಿ ಸ್ತ್ರೀ ಸಂವೇದನೆ ಎಷ್ಟರ ಮಟ್ಟಕ್ಕೆ ವ್ಯಕ್ತಗೊಂಡಿದೆ?

ಹೆಣ್ಣನ್ನು ತನ್ನ ನಿಜದಲ್ಲಿ ಗುರುತಿಸಲು ಪ್ರಯತ್ನಿಸಿದವರಲ್ಲಿ ಮೊದಲಿಗನಾಗಿ ನನಗೆ ಕಾಣುವುದು ಅಲ್ಲಮ. ದಾಸಿಮಯ್ಯ ಕೂಡಾ ಅದೇ ಪ್ರಯತ್ನ ನಡೆಸಿದವನು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾರಂತರಿದ್ದಾರೆ. ಅದೆಷ್ಟೇ ಬೌದ್ಧಿಕ ನೆಲೆಯದ್ದಾಗಿರಬಹುದಾದರೂ ಕಾರಂತರು ತುಂಬಾ ಪ್ರ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕುವೆಂಪು ಅವರಲ್ಲಿ ಕೆಲವೊಮ್ಮೆ ಅಪ್ರಯತ್ನಪೂರ್ವಕವಾಗಿ ಸ್ತ್ರೀ ಸಂವೇದನೆ ಕಾಣಿಸುತ್ತದೆ. ಸ್ತ್ರೀ ಸಂವೇದನೆಯನ್ನು ತುಂಬಾ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ ಲೇಖಕ ಎಂದರೆ ಲಂಕೇಶ್ ಅನ್ನಿಸುತ್ತೆ.

ಮಹಿಳಾ ಸಂವೇದನೆ ಎಲ್ಲಿ ಕೊರತೆ ಅನುಭವಿಸುತ್ತಿದೆ?

ನೀವು ಈ ಥರದ ಪ್ರಶ್ನೆಗಳನ್ನು ಬೇರೆಯವರಿಗೂ ಕೇಳಬೇಕು. ಇದಿಷ್ಟೂ ಪ್ರಶ್ನೆಗಳನ್ನು ರಹಮತ್‌ರವರಿಗೂ ಕೇಳಬೇಕೆಂದು ಬಯಸುತ್ತೇನೆ. ನನಗೆ ರಹಮತ್‌ರೊಂದಿಗೂ ಸಮಸ್ಯೆ ಇದೆ. ಅವರು ಅಷ್ಟು ಪ್ರಾಮಾಣಿಕವಾಗಿದ್ದೂ, ಸ್ತ್ರೀಯರ ಬಗ್ಗೆ ಆಳವಾದ ಗೌರವ ವಿಶ್ವಾಸ ಎಲ್ಲಾ ಇದ್ದರೂ ಯಾಕೆ ಅವರು ಕನ್ನಡದ ಯಾವೊಬ್ಬ ಮಹತ್ವದ ಲೇಖಕಿಯ ಬಗ್ಗೆ ಬರೆದಿಲ್ಲ. ಬರೆದೇ ಇಲ್ಲವೆಂದಲ್ಲ. ಆದರೆ ಬೇರೆ ವಿಷಯಗಳ ಬಗ್ಗೆ ಅಷ್ಟಷ್ಟು ಬರೆದವರು ಈ ಬಗ್ಗೆ ಎಷ್ಟು ಬರೆಯಲು ಸಾಧ್ಯವಾಗಿದೆ ಎನ್ನುವುದು ನನ್ನ ತಕರಾರು. ಇದೇ ಪ್ರಶ್ನೆಯನ್ನು ನಾನು ಬಸವಣ್ಣನವರ ಬಗ್ಗೆಯೂ ಎತ್ತಿದಾಗ ಇವಳನ್ನು ಕೆಲಸದಿಂದ ತೆಗೀರಿ ಎಂದು ಹೇಳಿದರು. ಯಾಕೆಂದರೆ ದಲಿತರ ಸಣ್ಣಸಣ್ಣ ನೋವುಗಳನ್ನೂ ಅಷ್ಟು ಸೂಕ್ಷ್ಮವಾಗಿ ಆವಾಹಿಸಿಕೊಳ್ಳಲು ಬಸವಣ್ಣ ಪ್ರಯತ್ನಿಸುತ್ತಾರೆ. ಚೆನ್ನಯ್ಯನ ಮನೆಯ ದಾಸಿಯ ಮಗ ಎಂದಾಗ ಅವರು ತಮ್ಮನ್ನು ತಾವು ದಲಿತರೊಂದಿಗೆ ಸಮೀಕರಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಹೆಣ್ಣನ್ನು ನೂರು ಸಲ ನಾಯಿ ಎಂದು ಕರೆಯುತ್ತಾರೆ. ನಮ್ಮ ವಿಮರ್ಶೆಯಲ್ಲೂ ಅಷ್ಟೆ. ಸಂಸ್ಕಾರಕ್ಕೆ ಸಿಗಬೇಕಾದ ಸ್ಥಾನಮಾನ ’ಫಣಿಯಮ್ಮ’ಗೆ ಸಿಗಲಿಲ್ಲ? ಫಣಿಯಮನನ್ನು ಹೇಗೆ ಚರ್ಚೆ ಮಾಡಬೇಕಿತ್ತೋ ಹಾಗೆ ಮಾಡಿದ್ದರೆ ಇಂದು ಫಣಿಯಮ್ಮದ ಸ್ಥಾನ ಎಲ್ಲಿರುತ್ತಿತ್ತು? ಹೆಚ್ಚೂ ಕಡಿಮೆ ಸಂಸ್ಕಾರ ಎತ್ತಿದಷ್ಟೇ ಮೂಲಭೂತ ಪ್ರಶ್ನೆಗಳನ್ನು ಹೆಣ್ಣಿನ ವಿಷಯದಲ್ಲಿ ಫಣಿಯಮ್ಮ ಎತ್ತಿರಲಿಲ್ಲವೇ?.

ನಾನು ಎಷ್ಟೋ ವಿಚಾರ ಸಂಕಿರಣಗಳನ್ನು ಈ ಕಾರಣಕ್ಕೆ ತಿರಸ್ಕರಿಸಿದ್ದೀನಿ. ಏಕೆಂದರೆ ನಮಗೆ ಅದೇ ವಿಷಯ ಮೀಸಲಿಟ್ಟಿರುತ್ತಾರೆ. ಈಗ ಪಂಪನ ಬಗ್ಗೆ ವಿಚಾರ ಸಂಕಿರಣದಲ್ಲಿ ಸ್ತ್ರೀವಾದಿ ದೃಷ್ಟಿಕೋನದಲ್ಲಿ ಪಂಪ ಎಂದು ಒಂದು ವಿಷಯ ಮಂಡನೆ ಇರಬೇಕಪ್ಪ. ಇಲ್ಲ ಅಂದರೆ ಯಾಕೆ ರಂಪ ಎಂದು ಸುಮಿತ್ರಾಬಾಯಿನೋ, ಆಶಾದೇವಿನೋ, ಗಾಯತ್ರಿನೋ ಯಾರನ್ನೋ ಒಬ್ಬರನ್ನು ಕರೆಯೋದು. ಈ ವಿಷಯದ ಬಗ್ಗೆ ಪುರುಷರೂ ಮಾತನಾಡುವಂತಾಗಬೇಕು ಎಂದು ನನ್ನ ಒತ್ತಾಯ.

ಆಧುನಿಕ ತಂತ್ರಜ್ಞಾನದ ಜಗತ್ತು ತಂದಿರುವ ಬದಲಾವಣೆ ಯಾವ ಬಗೆಯದ್ದು ಎಂದು ನಿಮ್ಮ ಭಾವನೆ?

ಇಂದು ಕಾರ್ಪೊರೇಟ್ ಪ್ರಪಂಚ ಹೆಣ್ಣಿಗೆ ಎಲ್ಲದನ್ನೂ ಕೊಟ್ಟುಬಿಟ್ಟಿರುವಂತೆ ಕಾಣಿಸುತ್ತದೆ. ಆದರೆ ಇದು ಲಿಂಗ ರಾಜಕೀಯಕ್ಕಿಂತ ಹೆಚ್ಚಿನ ಕ್ರೌರ್ಯವನ್ನು ಹೆಣ್ಣುಮಕ್ಕಳ ವಿಷಯದಲ್ಲಿ ಈ ಕಾರ್ಪೊರೇಟ್ ಲೋಕ ತೋರಿಸುತ್ತಿರುವುದನ್ನು ಕಾಣುತ್ತೇವೆ. ಅಲ್ಲಿ ಒಂದು ಡಿಜೆಂಡರೈಜೇಷನ್ (ಲಿಂಗಸೂಕ್ಷ್ಮರಾಹಿತ್ಯತೆ) ಕಾಣಿಸುತ್ತಿದೆ. ಗಂಡು ಹೆಣ್ಣು ಯಾವುದೂ ಅಲ್ಲ. ಕೆಲಸ ಮಾಡಿದರೆ ಉಳಿದುಕೊಳ್ತಾರೆ ಇಲ್ಲವೇ ತೆಗೆದು ಹಾಕೋದಷ್ಟೇ. ಇದು ಅಲ್ಲಿನ ಮೂಲಭೂತ ಪರಿಕಲ್ಪನೆ. ತನ್ನ ತಾಯ್ತನದ ಮೂಲಭೂತ ಪ್ರಶ್ನೆಯನ್ನು ಇಟ್ಟುಕೊಂಡು ಆಕೆ ಕೆಲಸದಲ್ಲಿ ಗಂಡಿನ ಜೊತೆ ತನ್ನ ಸಮಾನ ಸ್ಪರ್ಧೆ ನಡೆಸಬೇಕಾಗಿದೆ. ಕೆಲಸ ಹಾಗೂ ತಾಯ್ತನಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಂಡರೂ ಅದು ತುಂಬ ನೋವಿನ ಅಯ್ಕೆಯಾಗಿರುತ್ತದೆ. ಯಾವುದನ್ನು ಆರಿಸಿಕೊಂಡರೂ ಅದರಲ್ಲಿ ಅವಳಿಗೆ ಸಂತೋಷ ಸಿಗುತ್ತಾದರೂ ಇನ್ನೊಂದು ಕಳೆದುಕೊಂಡ ದುಃಖ ಇರುತ್ತದೆ. ಇದನ್ನು ಒಂದು ಮಾನವೀಯ ಹಿನ್ನೆಲೆಯಲ್ಲಿ ಈ ಕಾರ್ಪೊರೇಟ್ ವ್ಯವಸ್ಥೆ ನೋಡೋದೇ ಇಲ್ಲ. ತನ್ನ ಆತ್ಮಸ್ಥೈರ್ಯ ಉಳಿಸಿಕೊಂಡು, ತನ್ನ ಅನನ್ಯತೆಯನ್ನು ಉಳಿಸಿಕೊಂಡು, ತನ್ನ ಸುಖದ ಮೂಲಗಳನ್ನುಳಿಸಿಕೊಂಡು ಹೋಗೋದು ಆಕೆಯ ಪಾಲಿಗೆ ದೊಡ್ಡ ಸವಾಲಾಗಿದೆ. ಇದರಿಂದ ಆಧುನಿಕತೆಯಲ್ಲಿ ಯಾವುದು ಬಿಡುಗಡೆ ಎಂದು ಹೇಳುವುದು ಕಷ್ಟದ್ದು. ಹೀಗಿರುವಾಗ ತಾಯ್ತನದ ಸುಖ ಏನೂ ಅಲ್ಲ, ಅದನ್ನು ಬಿಟ್ಟುಕೊಟ್ಟು ಬಿಡ್ತೀನಿ ಎಂದುಕೊಳ್ಳುವುದು ಆಕೆಗೆ ಸಾಧ್ಯವಾಗ್ತಾನೇ ಇಲ್ವಲ್ಲ. ಅದು ಸಾಧ್ಯವಾಗಿಬಿಟ್ಟರೆ ಎಲ್ಲ ಸರಿಹೋಗಿಬಿಡುತ್ತೆ ಎಂದಲ್ಲ. ಆದರೆ, ಅವಕಾಶ ಸಿಕ್ಕರೆ ಅದು ಎಲ್ಲರಿಗೂ ಬೇಕು; ಜಗತ್ತಿನ ಅಪೂರ್ವ ಸುಖ ಅದು ಎಂದು ಕಾಣುತ್ತೆ. ಅದು ಒಂದು ರೀತಿ ನಿಜವೂ ಹೌದು. ಮುಖ್ಯವಾಗಿ ಇಲ್ಲಿ ಆಕೆಯ ಎದುರಿಗಿರುವ ಸವಾಲೆಂದರೆ ಯಾವಾಗಲೂ ಕೆಲಸ ಮಾಡುವ ಮಹಿಳೆ ತನ್ನ ಮೇಲೆ ತಾನೇ ಒಂದು ಕೀಳರಿಮೆಯನ್ನು ಹೇರಿಕೊಳ್ತಾಳೆ. ತಾನೆಲ್ಲೋ ಇದನ್ನು ಸರಿಯಾಗಿ ನಿಭಾಯಿಸಲಿಲ್ಲವೇನೋ, ಅದನ್ನು ಸರಿಯಾಗಿ ನಿಭಾಯಿಸಲಿಲ್ವೇನೋ, ಎಂದು. ಯಾಕೆಂದರೆ ಈಗಾಗಲೇ ಸ್ಥಾಪಿತ ಪರಿಕಲ್ಪನೆಗಳು ನಮ್ಮ ಮನಸ್ಥಿತಿಯನ್ನು ಹಾಗೆ ರೂಪಿಸಿರುತ್ತವೆ. ಮಹಿಳೆ ಎಲ್ಲವನ್ನೂ ಸರಿಯಾಗಿ ತೂಗಿಸೋದಕ್ಕೆ ನೋಡುತ್ತಾಳೆ. ಆಕೆಗೆ ಧಾರಣ ಶಕ್ತಿ ಅಸಾಧಾರಣವಾಗಿರತ್ತೆ ಎನ್ನುವುದು ಬೇರೆ ವಿಷಯ. ಆದರೆ ಆ ಧಾರಣ ಶಕ್ತಿಗೆ ಸರಿಯಾದ ಬೆಂಬಲ ರಚನೆಯಿಲ್ಲದೇ ಹೋದಾಗ ಒಂದು ಸಮಯದಲ್ಲಿ ಆಕೆ ಕುಸಿದು ಹೋಗುತ್ತಾಳೆ.

ಇಂದು ಭ್ರಷ್ಟಾಚಾರದ ವಿಷಯ ಚರ್ಚೆಗೊಳಗಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?

ಇಂದು ಅತ್ಯಂತ ಭ್ರಷ್ಟ ಎಂದು ಹೇಳಲು ಒಂದು ವ್ಯಾಖ್ಯಾನ ಇದೆಯಾ? ಇಂದು ಭ್ರಷ್ಟಾಚಾರವನ್ನು ಒಂದು ವ್ಯವಸ್ಥೆಯಾಗಿ ಒಪ್ಪಿಕೊಂಡುಬಿಟ್ಟಿರುವ ದುರಂತ ನಮ್ಮೆದುರಿಗಿದೆ. ಅಣ್ಣಾ ಹಜಾರೆಯಂತವರು ಆರಂಭಿಸಿರುವ ಚಳವಳಿ ಒಂದು ಆಶಾಕಿರಣವಾಗಿ ಕಾಣುತ್ತಿರುವುದು ನಿಜ. ಎಲ್ಲೋ ಜೆಪಿ ಶುರು ಮಾಡಿದ ತರದ ಚಳವಳಿ ಭವಿಷ್ಯದಲ್ಲಿ ಇದೆ ಎಂದೇ ನನ್ನ ಅನಿಸಿಕೆ. ನಾವು ಆಶಾವಾದಿಯಾಗಿರಲು ಎಲ್ಲೋ ಸಣ್ಣ ಅವಕಾಶವಿದೆ.

ಜಾತಿ ಸಮಾವೇಶಗಳು ಜರುಗುತ್ತಿವೆ. ಒಂದು ಜಾತಿ ಮಠಾಧೀಶರು ನೇರವಾಗಿ ಸರ್ಕಾರದ ರಕ್ಷಣೆಯಲ್ಲಿ ತೊಡಗಿದ್ದಾರಲ್ಲಾ?

ಇಂದು ಜಾತಿ ಎನ್ನುವುದು ಆಧುನಿಕತೆಯ ಒಂದು ಶಾಪವೇ ಅಲ್ಲವೇ? ಆಧುನಿಕತೆಯ ಹಲವು ಶಾಪಗಳಲ್ಲಿ ಜಾತಿಯನ್ನು ವ್ಯವಸ್ಥೆಯ ಭದ್ರ ಭಾಗವಾಗಿಸಿದ್ದೂ ಒಂದು. ಹೇಗೆ ಕೋಮುವಾದ ಸಹ ಆಧುನಿಕತೆ ಮತ್ತು ವಿಜ್ಞಾನದ ನೆರವಿನಿಂದ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆಯೋ ಹಾಗೆ ಜಾತಿ ವಿಷಯದಲ್ಲೂ ಸಹ ಅದರ ಉಪ ಉತ್ಪನ್ನವಾಗಿದೆ. ನಾವು ಮತ್ತೆ ಮತ್ತೆ ಜಾತಿ ವಿಷಯಕ್ಕೆ ಬರುತ್ತೇವೆಂದರೆ ಭಾರತದ ಮಟ್ಟಿಗೆ ಅದು ತೇಜಸ್ವಿ ಹೇಳುವ ರೀತಿ ಚರ್ಮವೇ ಆಗಿದೆ. ಅದು ಅಷ್ಟು ಸುಲಭವಾಗಿ ಹೋಗುವಂತಾದ್ದಲ್ಲ.

ಯಾವುದೇ ಒಂದು ಸಾಮಾಜಿಕ ಚಳವಳಿಯ ಅನುಪಸ್ಥಿತಿ ಸಾಹಿತ್ಯದ ಮೇಲೆ ಬೀರಿರುವ ಪರಿಣಾಮ ಎಂಥದು?

ಇಂದು ಒಂದು ಮೂರ್ತವಾದ ಚಳವಳಿ ಇಲ್ಲ. ಎಲ್ಲ ಚಳವಳಿಗಳನ್ನು ರೂಪಿಸುವುದು ಒಂದು ತಾತ್ವಿಕ ಆಕೃತಿಯೇ ಅಲ್ಲವೇ? ಆದರೆ ಇಂದು ನಾವಿರುವ ಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲೇ ಯಾವುದೇ ಒಂದು ನಿರ್ದಿಷ್ಟ ತಾತ್ವಿಕ ಆಕೃತಿ ಮೆಲಿನ ನಂಬಿಕೆ ಎನ್ನುವುದು ಹೊರಟುಹೋಗಿದೆ. ಎಲ್ಲ ತಾತ್ವಿಕ ಆಕೃತಿಗಳು ಒಡೆದು ಹೋಗಿರುವ ಅಥವಾ ಎಲ್ಲವೂ ಸೇರಿ ಬೆರೆಯುತ್ತಿರುವ ಸನ್ನಿವೇಶ ಇದು. ಹೀಗೆ ಎಲ್ಲ ತಾತ್ವಿಕ ಆಕೃತಿಗಳು ಬೆರೆತು ಅಖಂಡವಾದ ಮಾನವೀಯ ನೆಲೆಯನ್ನು ಕಟ್ಟಿಕೊಳ್ಳಲು ಪ್ರಯತ್ನ ಪಡುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಒಂದು ಚಳವಳಿ ಎನ್ನುವುದು ಸ್ಪಷ್ಟ ರೂಪದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಚಳವಳಿಗಳು ಇಲ್ಲದ ಕಾಲ ಒಂದು ಬರವಣಿಗೆಯಲ್ಲಿ ಯಾವತ್ತಾದರೂ ಇರುತ್ತೆ ಎಂದು ನನಗೆ ತೋರಿಬಂದಿಲ್ಲ. ಉದಾಹರಣೆಗೆ ತೇಜಸ್ವಿಯವರು ಒಮ್ಮೆ ಮಾತನಾಡುತ್ತಾ ಈ ಸಿದ್ಧಾಂತಗಳಿಗೆಲ್ಲಾ ನನಗೆ ಪ್ರವೇಶವೇ ಇಲ್ಲ ಎಂದರು. ಅದಕ್ಕೆ ನಾನು, ಹಾಗಿಲ್ಲವಾದರೆ ನಿಮ್ಮ ಕಿರಗೂರಿನ ಗಯ್ಯಾಳಿಗಳು ಓದಿ ಸ್ತ್ರೀವಾದಿ ಚರ್ಚೆ ಕಟ್ಟಿಕೋತೇನೆ ಬಿಡಿ ಎಂದಿದ್ದೆ. ಕೃತಿಯನ್ನು ಅವರು ಅರ್ಪಿಸಿರುವುದೂ ಸಹ ತಮ್ಮ ಆತ್ಮಗೌರವಕ್ಕಾಗಿ ಅವಿರತವಾಗಿ ಹೋರಾಡುತ್ತಿರುವ ಮಹಿಳೆಯರಿಗೆ. ಅಲ್ಲಿ ಒಂದು ತತ್ವಶಾಸ್ತ್ರೀಯ ಮಂಡನೆ ಇಲ್ಲವೇ? ಅವರು ಒಪ್ಪಿಕೊಳ್ಳದಿರಬಹುದು. ಲಂಕೇಶ್‌ಗೆ ಕೇಳಿದ್ದಿದ್ರೆ ನನಗೂ ಸಿದ್ಧಾಂತಕ್ಕೂ ಸಂಬಂಧವಿಲ್ಲ ಎಂತಲೇ ಅವರೂ ಹೇಳುತ್ತಿದ್ದರೇನೋ??ಕನ್ನಡ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯರ  ಸಾಹಿತ್ಯ ರಚನೆ ಇಂದು ಯಾವ ಘಟ್ಟವನ್ನು ತಲುಪಿದೆ ಎಂದು ನಿಮ್ಮ ಅನಿಸಿಕೆ?ಎಲ್ಲ ಬಗೆಯ ಶೋಷಿತ ಸಮುದಾಯಗಳ ಸಂಕಥನದಲ್ಲಿ ಗುರುತಿಸಬಹುದಾದ ಸಾಮಾನ್ಯ ಲಕ್ಷಣಗಳು ಇಲ್ಲೂ ಇವೆ. ಮೊದಲನೆಯದು ಆತ್ಮ ಮರುಕದ ಘಟ್ಟವಾದರೆ ಎರಡನೆಯದು ಸ್ವ-ಅರಿವಿನ ಘಟ್ಟ, ಮೂರನೆಯದು ಅಧಿಕೃತತೆಯನ್ನು ದಾಖಲಿಸುವ ಘಟ್ಟ. ಹೀಗೆ ಇಂದು ಲೇಖಕಿಯರು ತಮ್ಮ ಅನುಭವಕ್ಕೂ, ತಮ್ಮ ಬರವಣಿಗೆಗೂ, ಒಟ್ಟಾರೆ ತಮ್ಮ ಅಭಿವ್ಯಕ್ತಿಗೆ ಅಧಿಕೃತತೆಯನ್ನು ಪಡೆದುಕೊಳ್ಳುವ ಒಂದು ಘಟ್ಟದಲ್ಲಿದ್ದಾರೆ. ನಮ್ಮ ಎದುರಿಗಿರುವ ಸವಾಲೆಂದರೆ ಲೋಕದೃಷ್ಟಿಯಿಂದ ಪಡೆದುಕೊಳ್ಳಬೇಕಾದ ಬಿಡುಗಡೆಗಿಂತ ಸ್ವ-ಬಿಡುಗಡೆ ತುಂಬ ಮೂಲಭೂತವಾದದ್ದು ಅನ್ನಿಸುತ್ತೆ. ಇವತ್ತಿನ ಲೇಖಕಿಯರು ಅವರವರ ಬದುಕಿನ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ತುಂಬ ಮುಖ್ಯವಾದದ್ದೆನ್ನುವ ಹಾಗೆ, ಅದೇ ಅವರ ಅನುಭವ ಲೋಕ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಹಾಗೆ ಬರೆಯುವಾಗ ಅವರಿಗಿರುವ ಆತ್ಮವಿಶ್ವಾಸ ಒಂದು ಗುರುತರವಾದ ಬದಲಾವಣೆಯನ್ನು ತಂದುಕೊಡುತ್ತಿದೆ.

ಸಾಹಿತ್ಯ ರಚನೆ ಇಂದು ಯಾವ ಘಟ್ಟವನ್ನು ತಲುಪಿದೆ ಎಂದು ನಿಮ್ಮ ಅನಿಸಿಕೆ?
ಎಲ್ಲ ಬಗೆಯ ಶೋಷಿತ ಸಮುದಾಯಗಳ ಸಂಕಥನದಲ್ಲಿ ಗುರುತಿಸಬಹುದಾದ ಸಾಮಾನ್ಯ ಲಕ್ಷಣಗಳು ಇಲ್ಲೂ ಇವೆ. ಮೊದಲನೆಯದು ಆತ್ಮ ಮರುಕದ ಘಟ್ಟವಾದರೆ ಎರಡನೆಯದು ಸ್ವ-ಅರಿವಿನ ಘಟ್ಟ, ಮೂರನೆಯದು ಅಧಿಕೃತತೆಯನ್ನು ದಾಖಲಿಸುವ ಘಟ್ಟ. ಹೀಗೆ ಇಂದು ಲೇಖಕಿಯರು ತಮ್ಮ ಅನುಭವಕ್ಕೂ, ತಮ್ಮ ಬರವಣಿಗೆಗೂ, ಒಟ್ಟಾರೆ ತಮ್ಮ ಅಭಿವ್ಯಕ್ತಿಗೆ ಅಧಿಕೃತತೆಯನ್ನು ಪಡೆದುಕೊಳ್ಳುವ ಒಂದು ಘಟ್ಟದಲ್ಲಿದ್ದಾರೆ. ನಮ್ಮ ಎದುರಿಗಿರುವ ಸವಾಲೆಂದರೆ ಲೋಕದೃಷ್ಟಿಯಿಂದ ಪಡೆದುಕೊಳ್ಳಬೇಕಾದ ಬಿಡುಗಡೆಗಿಂತ ಸ್ವ-ಬಿಡುಗಡೆ ತುಂಬ ಮೂಲಭೂತವಾದದ್ದು ಅನ್ನಿಸುತ್ತೆ. ಇವತ್ತಿನ ಲೇಖಕಿಯರು ಅವರವರ ಬದುಕಿನ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ತುಂಬ ಮುಖ್ಯವಾದದ್ದೆನ್ನುವ ಹಾಗೆ, ಅದೇ ಅವರ ಅನುಭವ ಲೋಕ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಹಾಗೆ ಬರೆಯುವಾಗ ಅವರಿಗಿರುವ ಆತ್ಮವಿಶ್ವಾಸ ಒಂದು ಗುರುತರವಾದ ಬದಲಾವಣೆಯನ್ನು ತಂದುಕೊಡುತ್ತಿದೆ.

ಮಹಿಳೆಯರ ಸಾಹಿತ್ಯ ಸೃಷ್ಟಿಗೆ ಯಾವ ಪ್ರತಿಸ್ಪಂದನೆ ಸಿಗುತ್ತಿದೆ?

ಇಂದು ಮಹಿಳೆಯ ಸಾಹಿತ್ಯಕ್ಕೆ ಸಿಗ್ತಾ ಇರೋ ಸ್ಥಾನ ಬೇರೆ. ಮಹಿಳೆಯ ಸಾಹಿತ್ಯ ಮತ್ತು ಸಾಹಿತ್ಯದ ಸ್ವರೂಪ ಎರಡಕ್ಕೂ ಹತ್ತಿರದ ಸಂಬಂಧವಿದೆ. ಮಹಿಳೆಯ ಸಾಹಿತ್ಯವನ್ನು ಸಾಹಿತ್ಯ ಅಂತ ಮಾತ್ರ ನೋಡಬೇಕು ಎನ್ನುವುದು ನಮ್ಮ ಹಂಬಲ. ಸಾಹಿತ್ಯದಲ್ಲಿ ಒಳ್ಳೆ ಸಾಹಿತ್ಯ, ಕೆಟ್ಟ ಸಾಹಿತ್ಯ ಎಂದು ಮಾತ್ರ ಇರಬೇಕು ಎಂಬುದರ ಕಡೆಗೆ ನಮ್ಮ ಚಲನೆ ಇರಬೇಕು. ಅದು ತುಂಬ ದೂರದ ದಾರಿ ನಿಜ. ಆದರೆ ಸಮಾಧಾನದ ಸಂಗತಿ ಏನೆಂದರೆ ಮಹಿಳೆಯ ಸಾಹಿತ್ಯವನ್ನು ನೋಡುವ ದೃಷ್ಟಿಕೋನದಲ್ಲಿ ತುಂಬಾ ಖಚಿತ ಹಾಗೂ ಗುಣಾತ್ಮಕ ಬದಲಾವಣೆಗಳಾಗುತ್ತಿರುವುದು. ಇಂದು ಹಿಂದೆ ನಿರ್ಲಕ್ಷಿಸಲ್ಪಟ್ಟ ಲೇಖಕಿಯರನ್ನೂ ಮುಂದೆ ಇಟ್ಟುಕೊಂಡು ಚರ್ಚಿಸುತ್ತಿದ್ದೇವೆ ಎಂಬುದು ಮೊದಲನೆಯದು. ಎರಡನೆಯದಾಗಿ, ಲೇಖಕಿಯರನ್ನು ಬೇರೆ ಬೇರೆ ನೆಲೆಗಳಲ್ಲಿ, ಅಂದರೆ ಲೇಖಕಿ ಎನ್ನುವ ನಿರ್ದಿಷ್ಟತೆಯನ್ನು ಬಿಟ್ಟು ಚರ್ಚಿಸುವ ನೆಲೆಗಳನ್ನು ಕಟ್ಟಿಕೊಡುವುದರಲ್ಲಿ ಇವತ್ತಿನ ಕನ್ನಡ ವಿದ್ವತ್ ಲೋಕಕ್ಕೆ ಆಸಕ್ತಿ ಇದೆ. ತುಂಬಾ ಮೂಲಭೂತ ಸವಾಲುಗಳು ಇನ್ನೂ ಹಾಗೇ ಉಳಿದುಕೊಂಡಿವೆ ಎಂಬುದೇನೋ ನಿಜ.


ಇತ್ತೀಚೆಗೆ ನಾನು ಕಟ್ಟಲು ಯತ್ನಿಸುತ್ತಿರುವ ಪ್ರಮೇಯ ಏನು ಎಂದರೆ ಕನ್ನಡ ವಿಮರ್ಶೆಯಲ್ಲಿ ಯಾವಾಗಲೂ ಸ್ತ್ರೀ ದೃಷ್ಟಿಕೋನವಿದೆ, ಆದರೆ ಸ್ತ್ರೀ ಸಂವೇದನೆ ಇಲ್ಲ ಎಂಬುದು. ನಮ್ಮ ಎಷ್ಟೋ ಮಹತ್ವದ ಲೇಖಕಿಯರನ್ನು ಅವರ ನಿಜವಾದ ನೆಲೆ ಮತ್ತು ಬೆಲೆಯಲ್ಲಿ ಗುರುತಿಸಲು ಏಕೆ ಸಾಧ್ಯವಾಗಲಿಲ್ಲ ಎಂದರೆ ದೃಷ್ಟಿಕೋನ ಸಾಧ್ಯವಾಗಿ ಸಂವೇದನೆ ಸಾಧ್ಯವಾಗದಿರುವುದರಿಂದಾಗಿ.



ಕನ್ನಡ ಸಾಹಿತ್ಯದ ಪುನರ್‌ಮೌಲ್ಯೀಕರಣ ಮಾಡುತ್ತಿರುವ ಈ ದಿನಗಳಲ್ಲಿ ಲೇಖಕಿಯರಿಗೆ ಬಹುಶಃ ಇಲ್ಲಿಯವರೆಗೆ ಸಿಗದೇ ಹೋದ ಸ್ಥಾನ ಇನ್ನು ಸಿಗುತ್ತೆ ಅಂತ ನನಗನ್ನಿಸುತ್ತಿದೆ.

ಇಂದು ಮಹಿಳೆಯರ ದೃಷ್ಟಿಕೋನದಲ್ಲಿ ಯಾವ ರೀತಿಯ ಬದಲಾವಣೆ ಕಂಡು ಬರುತ್ತಿದೆ? ಅದು ಕೇವಲ ವ್ಯಕ್ತಿನಿಷ್ಠವಾಗಿದೆಯೇ?


ಸಾಹಿತ್ಯ ಸೃಷ್ಟಿಗೆ ತೊಡಗಿಕೊಂಡಿರುವವರಲ್ಲಿ ಹಲವರು ಸಮಷ್ಟಿ ನೆಲೆಯಲ್ಲೂ ಬರೆಯುತ್ತಿದ್ದಾರೆ. ಅದಕ್ಕೇ ನಾನು ಹೇಳಿದ್ದು. ಇಂದು ಬರೆಹ ಸ್ತ್ರೀ ಕೇಂದ್ರಿತಕ್ಕಿಂತ ಬದುಕಿನ ಕೇಂದ್ರಿತ ಸಾಹಿತ್ಯವಾಗಿದೆ. ಇದೇ ಒಂದು ಬದಲಾವಣೆ. ಆತ್ಮ ಮರುಕ ಮತ್ತು ಸ್ವ-ಗ್ರಹಿಕೆಯಿಂದ ಹೊರಟು ಅಧಿಕೃತತೆಯೆಡೆ ಬಂದಿರುವುದೇ ಒಂದು ಬದಲಾವಣೆ. ಇಂದು ತುಂಬ ದೊಡ್ಡದಾಗಿರುವುದು ಯಾವುದೆಂದರೆ ಬದುಕು. ತಾನುಂಟೋ ಮೂರು ಲೋಕವುಂಟೋ ಎಂದು ನೋಡುತ್ತಿದ್ದವರಿಗೆ ಇಂದು ಕಣ್ಣು ಹೊರಳಿಸಿ ಹೊರಳಿಸಿ ನೋಡಲಿಕ್ಕಾಗುತ್ತಿದೆ. ಹಾಗೆ ನೋಡಲಿಕ್ಕೆ ಬೇಕಾಗಿರುವ ಆತ್ಮಸಮ್ಮಾನ ಇಂದು ಸಾಧ್ಯವಾಗಿದೆ. ಕಟ್ಟಿಕೊಳ್ಳುತ್ತಿರುವ ಬದುಕಿನ ಬಗ್ಗೆ ಯಾವ ಕೀಳರಿಮೆಯೂ ಇಲ್ಲದ ವಿಶ್ವಾಸ ಇಂದು ಸಾಧ್ಯವಾಗಿದೆ. ಹೀಗಾಗಿ ಇಂದು ಹೆಣ್ಣು ಕಂಡುಕೊಳ್ಳುತ್ತಿರುವುದು ಹೊರಗಿನದ್ದೂ ಹೌದು ಒಳಗಿನದ್ದೂ ಹೌದು. ಆದರೆ ಕೆಲವೊಮ್ಮೆ ಬಿಡುಗಡೆಯ ದಾರಿಗಳಾಗಿ ಕಂಡಿರುವುದು ಎಷ್ಟೋ ಸಲ ಬಿಡುಗಡೆಯ ದಾರಿಗಳಾಗಿರುವುದಿಲ್ಲ. ಅವು ನಮ್ಮನ್ನು ಇನ್ನೂ ಹೆಚ್ಚೆಚ್ಚು ಆಳವಾಗಿ ಹುಗಿಯುವ (ಪುರುಷ ಪ್ರಧಾನತೆಯೊಳಗೆ) ಹುನ್ನಾರಗಳಾಗಿರುತ್ತವೆ. ಆದರೆ ಸಮಾಧಾನದ ಸಂಗತಿ ಎಂದರೆ ಇಂದು ಪುರುಷ ಪ್ರಾಧಾನ್ಯತೆಯ ಈ ಛದ್ಮವೇಷವು ಅರ್ಥವಾಗುತ್ತಿದೆ. ಒಂದು ಕಾಲದಲ್ಲಿ ಅದು ಅರಿವಿಗೇ ಬರುತ್ತಿಲ್ಲ.



ನಮ್ಮ ಸಮಾಜದಲ್ಲಿ ಸ್ತ್ರೀವಾದ ಇಂದು ಯಾವ ಹಂತದಲ್ಲಿದೆ? ಸ್ತ್ರೀವಾದಕ್ಕೆ ನಿಮ್ಮ ವ್ಯಾಖ್ಯಾನವೇನು?

ಸ್ತ್ರೀವಾದ ಎನ್ನುವುದು ಒಂದು ಬದುಕಿನ ಕ್ರಮ ಅಷ್ಟೆ. ಸಮಾನತೆ, ಸ್ವಾತಂತ್ರ್ಯ ಯಾವುದೂ ಇಲ್ಲದ, ಬದಲಿಗೆ ಪರಸ್ಪರ ಸ್ವಾಯತ್ತತೆಯಿಂದ ಒಪ್ಪಿ ಗೌರವಿಸುವ ಒಂದು ಜೀವನ ವಿಧಾನ ಎನ್ನುವುದು ನನ್ನ ಗ್ರಹಿಕೆ. ಆದರೆ ಸ್ತ್ರೀವಾದ ಎನ್ನುವುದು ಮಹಿಳೆಯರಿಗೇ ಸಂಬಂಧಿಸಿದ್ದಲ್ಲ. ಆ ಬದುಕಿನ ಕ್ರಮವನ್ನು ಗಂಡು ಮತ್ತು ಹೆಣ್ಣು ಇಬ್ಬರೂ ಬಹಳ ಶ್ರಮ ಹಾಗೂ ಪ್ರೀತಿಯಲ್ಲಿ ಮಾತ್ರ ಕಟ್ಟಿಕೊಳ್ಳಲು ಆಗುತ್ತೆ.


ಸ್ತ್ರೀವಾದದಲ್ಲಿ ಖಂಡಿತವಾಗಿಯೂ ಒಂದು ಬೆಳವಣಿಗೆ ಇದೆ. ಸ್ತ್ರೀವಾದಿ ಚಳವಳಿಯನ್ನು ಪ್ರತ್ಯೇಕವಾಗಿ ನೋಡಬೇಕಿಲ್ಲ ಎನ್ನುವುದೇ ನನಗನ್ನಿಸಿದ್ದು. ಒಂದು ಕಾಲದಲ್ಲಿ ಸ್ತ್ರೀವಾದ ಭಾರತಕ್ಕೆ ಪ್ರವೇಶ ಮಾಡಿದಾಗ ಅದು ಎಲ್ಲಾ ಸೌಲಭ್ಯ ಪಡೆದ ವರ್ಗದ ಪ್ರಯತ್ನವಾಗಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದು ಬೇರೆ ಬೇರೆ ಸ್ತರಗಳಲ್ಲಿರುವವರಿಗೂ ಅದು ತಲುಪಿದೆ. ವಿದ್ಯಾವಂತರು, ಅವಿದ್ಯಾವಂತರು, ಗಾರ್ಮೆಂಟ್ ಕಾರ್ಮಿಕರು- ಹೀಗೆ ಎಲ್ಲರಲ್ಲಿ ಒಂದು ಜಾಗೃತಿ ಕಾಣಿಸುತ್ತಿದೆ. ಅದೇ ಹೊತ್ತಿಗೆ ಈ ಜಾಗೃತಿ ಅಥವಾ ಅರಿವು ಎನ್ನುವುದು ಆಧುನಿಕ ಹೆಣ್ಣಿನ ಹಿಂಸೆಯನ್ನು ಹಿಂದೆಂದೂ ಇರದಷ್ಟು ಹೆಚ್ಚಿಸಿದೆ ಎನ್ನುವುದೂ ಅಷ್ಟೇ ವಾಸ್ತವ. ಅರಿವಿನ ಹಿಂಸೆಯ ಘಟ್ಟವನ್ನು ದಾಟುವುದು ಯಾವ ಶೋಷಿತ ವರ್ಗಕ್ಕೂ ತುಂಬ ನಿರ್ಣಾಯಕವಾದ ಘಟ್ಟ. ಬಹಳ ಕಷ್ಟದ ಕಾಲ ಅದು. ಆದರೆ ಹೆಣ್ಣಿನದು ಅಸಾಧಾರಣವಾದ ಆತ್ಮ ಸ್ಥೈರ್ಯದ ವ್ಯಕ್ತಿತ್ವವಾದ್ದರಿಂದ ಈ ಹಿಂಸೆಗೂ ಆಕೆ ತನ್ನನ್ನು ತಾನು ಒಡ್ಡಿಕೊಂಡಿದ್ದಾಳೆ.

ಪುರುಷ ಲೇಖಕರಲ್ಲಿ ಸ್ತ್ರೀ ಸಂವೇದನೆ ಎಷ್ಟರ ಮಟ್ಟಕ್ಕೆ ವ್ಯಕ್ತಗೊಂಡಿದೆ?

ಹೆಣ್ಣನ್ನು ತನ್ನ ನಿಜದಲ್ಲಿ ಗುರುತಿಸಲು ಪ್ರಯತ್ನಿಸಿದವರಲ್ಲಿ ಮೊದಲಿಗನಾಗಿ ನನಗೆ ಕಾಣುವುದು ಅಲ್ಲಮ. ದಾಸಿಮಯ್ಯ ಕೂಡಾ ಅದೇ ಪ್ರಯತ್ನ ನಡೆಸಿದವನು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾರಂತರಿದ್ದಾರೆ. ಅದೆಷ್ಟೇ ಬೌದ್ಧಿಕ ನೆಲೆಯದ್ದಾಗಿರಬಹುದಾದರೂ ಕಾರಂತರು ತುಂಬಾ ಪ್ರ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕುವೆಂಪು ಅವರಲ್ಲಿ ಕೆಲವೊಮ್ಮೆ ಅಪ್ರಯತ್ನಪೂರ್ವಕವಾಗಿ ಸ್ತ್ರೀ ಸಂವೇದನೆ ಕಾಣಿಸುತ್ತದೆ. ಸ್ತ್ರೀ ಸಂವೇದನೆಯನ್ನು ತುಂಬಾ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ ಲೇಖಕ ಎಂದರೆ ಲಂಕೇಶ್ ಅನ್ನಿಸುತ್ತೆ.

ಮಹಿಳಾ ಸಂವೇದನೆ ಎಲ್ಲಿ ಕೊರತೆ ಅನುಭವಿಸುತ್ತಿದೆ?

ನೀವು ಈ ಥರದ ಪ್ರಶ್ನೆಗಳನ್ನು ಬೇರೆಯವರಿಗೂ ಕೇಳಬೇಕು. ಇದಿಷ್ಟೂ ಪ್ರಶ್ನೆಗಳನ್ನು ರಹಮತ್‌ರವರಿಗೂ ಕೇಳಬೇಕೆಂದು ಬಯಸುತ್ತೇನೆ. ನನಗೆ ರಹಮತ್‌ರೊಂದಿಗೂ ಸಮಸ್ಯೆ ಇದೆ. ಅವರು ಅಷ್ಟು ಪ್ರಾಮಾಣಿಕವಾಗಿದ್ದೂ, ಸ್ತ್ರೀಯರ ಬಗ್ಗೆ ಆಳವಾದ ಗೌರವ ವಿಶ್ವಾಸ ಎಲ್ಲಾ ಇದ್ದರೂ ಯಾಕೆ ಅವರು ಕನ್ನಡದ ಯಾವೊಬ್ಬ ಮಹತ್ವದ ಲೇಖಕಿಯ ಬಗ್ಗೆ ಬರೆದಿಲ್ಲ. ಬರೆದೇ ಇಲ್ಲವೆಂದಲ್ಲ. ಆದರೆ ಬೇರೆ ವಿಷಯಗಳ ಬಗ್ಗೆ ಅಷ್ಟಷ್ಟು ಬರೆದವರು ಈ ಬಗ್ಗೆ ಎಷ್ಟು ಬರೆಯಲು ಸಾಧ್ಯವಾಗಿದೆ ಎನ್ನುವುದು ನನ್ನ ತಕರಾರು. ಇದೇ ಪ್ರಶ್ನೆಯನ್ನು ನಾನು ಬಸವಣ್ಣನವರ ಬಗ್ಗೆಯೂ ಎತ್ತಿದಾಗ ಇವಳನ್ನು ಕೆಲಸದಿಂದ ತೆಗೀರಿ ಎಂದು ಹೇಳಿದರು. ಯಾಕೆಂದರೆ ದಲಿತರ ಸಣ್ಣಸಣ್ಣ ನೋವುಗಳನ್ನೂ ಅಷ್ಟು ಸೂಕ್ಷ್ಮವಾಗಿ ಆವಾಹಿಸಿಕೊಳ್ಳಲು ಬಸವಣ್ಣ ಪ್ರಯತ್ನಿಸುತ್ತಾರೆ. ಚೆನ್ನಯ್ಯನ ಮನೆಯ ದಾಸಿಯ ಮಗ ಎಂದಾಗ ಅವರು ತಮ್ಮನ್ನು ತಾವು ದಲಿತರೊಂದಿಗೆ ಸಮೀಕರಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಹೆಣ್ಣನ್ನು ನೂರು ಸಲ ನಾಯಿ ಎಂದು ಕರೆಯುತ್ತಾರೆ. ನಮ್ಮ ವಿಮರ್ಶೆಯಲ್ಲೂ ಅಷ್ಟೆ. ಸಂಸ್ಕಾರಕ್ಕೆ ಸಿಗಬೇಕಾದ ಸ್ಥಾನಮಾನ ’ಫಣಿಯಮ್ಮ’ಗೆ ಸಿಗಲಿಲ್ಲ? ಫಣಿಯಮನನ್ನು ಹೇಗೆ ಚರ್ಚೆ ಮಾಡಬೇಕಿತ್ತೋ ಹಾಗೆ ಮಾಡಿದ್ದರೆ ಇಂದು ಫಣಿಯಮ್ಮದ ಸ್ಥಾನ ಎಲ್ಲಿರುತ್ತಿತ್ತು? ಹೆಚ್ಚೂ ಕಡಿಮೆ ಸಂಸ್ಕಾರ ಎತ್ತಿದಷ್ಟೇ ಮೂಲಭೂತ ಪ್ರಶ್ನೆಗಳನ್ನು ಹೆಣ್ಣಿನ ವಿಷಯದಲ್ಲಿ ಫಣಿಯಮ್ಮ ಎತ್ತಿರಲಿಲ್ಲವೇ?.


ನಾನು ಎಷ್ಟೋ ವಿಚಾರ ಸಂಕಿರಣಗಳನ್ನು ಈ ಕಾರಣಕ್ಕೆ ತಿರಸ್ಕರಿಸಿದ್ದೀನಿ. ಏಕೆಂದರೆ ನಮಗೆ ಅದೇ ವಿಷಯ ಮೀಸಲಿಟ್ಟಿರುತ್ತಾರೆ. ಈಗ ಪಂಪನ ಬಗ್ಗೆ ವಿಚಾರ ಸಂಕಿರಣದಲ್ಲಿ ಸ್ತ್ರೀವಾದಿ ದೃಷ್ಟಿಕೋನದಲ್ಲಿ ಪಂಪ ಎಂದು ಒಂದು ವಿಷಯ ಮಂಡನೆ ಇರಬೇಕಪ್ಪ. ಇಲ್ಲ ಅಂದರೆ ಯಾಕೆ ರಂಪ ಎಂದು ಸುಮಿತ್ರಾಬಾಯಿನೋ, ಆಶಾದೇವಿನೋ, ಗಾಯತ್ರಿನೋ ಯಾರನ್ನೋ ಒಬ್ಬರನ್ನು ಕರೆಯೋದು. ಈ ವಿಷಯದ ಬಗ್ಗೆ ಪುರುಷರೂ ಮಾತನಾಡುವಂತಾಗಬೇಕು ಎಂದು ನನ್ನ ಒತ್ತಾಯ.

ಆಧುನಿಕ ತಂತ್ರಜ್ಞಾನದ ಜಗತ್ತು ತಂದಿರುವ ಬದಲಾವಣೆ ಯಾವ ಬಗೆಯದ್ದು ಎಂದು ನಿಮ್ಮ ಭಾವನೆ?

ಇಂದು ಕಾರ್ಪೊರೇಟ್ ಪ್ರಪಂಚ ಹೆಣ್ಣಿಗೆ ಎಲ್ಲದನ್ನೂ ಕೊಟ್ಟುಬಿಟ್ಟಿರುವಂತೆ ಕಾಣಿಸುತ್ತದೆ. ಆದರೆ ಇದು ಲಿಂಗ ರಾಜಕೀಯಕ್ಕಿಂತ ಹೆಚ್ಚಿನ ಕ್ರೌರ್ಯವನ್ನು ಹೆಣ್ಣುಮಕ್ಕಳ ವಿಷಯದಲ್ಲಿ ಈ ಕಾರ್ಪೊರೇಟ್ ಲೋಕ ತೋರಿಸುತ್ತಿರುವುದನ್ನು ಕಾಣುತ್ತೇವೆ. ಅಲ್ಲಿ ಒಂದು ಡಿಜೆಂಡರೈಜೇಷನ್ (ಲಿಂಗಸೂಕ್ಷ್ಮರಾಹಿತ್ಯತೆ) ಕಾಣಿಸುತ್ತಿದೆ. ಗಂಡು ಹೆಣ್ಣು ಯಾವುದೂ ಅಲ್ಲ. ಕೆಲಸ ಮಾಡಿದರೆ ಉಳಿದುಕೊಳ್ತಾರೆ ಇಲ್ಲವೇ ತೆಗೆದು ಹಾಕೋದಷ್ಟೇ. ಇದು ಅಲ್ಲಿನ ಮೂಲಭೂತ ಪರಿಕಲ್ಪನೆ. ತನ್ನ ತಾಯ್ತನದ ಮೂಲಭೂತ ಪ್ರಶ್ನೆಯನ್ನು ಇಟ್ಟುಕೊಂಡು ಆಕೆ ಕೆಲಸದಲ್ಲಿ ಗಂಡಿನ ಜೊತೆ ತನ್ನ ಸಮಾನ ಸ್ಪರ್ಧೆ ನಡೆಸಬೇಕಾಗಿದೆ. ಕೆಲಸ ಹಾಗೂ ತಾಯ್ತನಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಂಡರೂ ಅದು ತುಂಬ ನೋವಿನ ಅಯ್ಕೆಯಾಗಿರುತ್ತದೆ. ಯಾವುದನ್ನು ಆರಿಸಿಕೊಂಡರೂ ಅದರಲ್ಲಿ ಅವಳಿಗೆ ಸಂತೋಷ ಸಿಗುತ್ತಾದರೂ ಇನ್ನೊಂದು ಕಳೆದುಕೊಂಡ ದುಃಖ ಇರುತ್ತದೆ. ಇದನ್ನು ಒಂದು ಮಾನವೀಯ ಹಿನ್ನೆಲೆಯಲ್ಲಿ ಈ ಕಾರ್ಪೊರೇಟ್ ವ್ಯವಸ್ಥೆ ನೋಡೋದೇ ಇಲ್ಲ. ತನ್ನ ಆತ್ಮಸ್ಥೈರ್ಯ ಉಳಿಸಿಕೊಂಡು, ತನ್ನ ಅನನ್ಯತೆಯನ್ನು ಉಳಿಸಿಕೊಂಡು, ತನ್ನ ಸುಖದ ಮೂಲಗಳನ್ನುಳಿಸಿಕೊಂಡು ಹೋಗೋದು ಆಕೆಯ ಪಾಲಿಗೆ ದೊಡ್ಡ ಸವಾಲಾಗಿದೆ. ಇದರಿಂದ ಆಧುನಿಕತೆಯಲ್ಲಿ ಯಾವುದು ಬಿಡುಗಡೆ ಎಂದು ಹೇಳುವುದು ಕಷ್ಟದ್ದು. ಹೀಗಿರುವಾಗ ತಾಯ್ತನದ ಸುಖ ಏನೂ ಅಲ್ಲ, ಅದನ್ನು ಬಿಟ್ಟುಕೊಟ್ಟು ಬಿಡ್ತೀನಿ ಎಂದುಕೊಳ್ಳುವುದು ಆಕೆಗೆ ಸಾಧ್ಯವಾಗ್ತಾನೇ ಇಲ್ವಲ್ಲ. ಅದು ಸಾಧ್ಯವಾಗಿಬಿಟ್ಟರೆ ಎಲ್ಲ ಸರಿಹೋಗಿಬಿಡುತ್ತೆ ಎಂದಲ್ಲ. ಆದರೆ, ಅವಕಾಶ ಸಿಕ್ಕರೆ ಅದು ಎಲ್ಲರಿಗೂ ಬೇಕು; ಜಗತ್ತಿನ ಅಪೂರ್ವ ಸುಖ ಅದು ಎಂದು ಕಾಣುತ್ತೆ. ಅದು ಒಂದು ರೀತಿ ನಿಜವೂ ಹೌದು. ಮುಖ್ಯವಾಗಿ ಇಲ್ಲಿ ಆಕೆಯ ಎದುರಿಗಿರುವ ಸವಾಲೆಂದರೆ ಯಾವಾಗಲೂ ಕೆಲಸ ಮಾಡುವ ಮಹಿಳೆ ತನ್ನ ಮೇಲೆ ತಾನೇ ಒಂದು ಕೀಳರಿಮೆಯನ್ನು ಹೇರಿಕೊಳ್ತಾಳೆ. ತಾನೆಲ್ಲೋ ಇದನ್ನು ಸರಿಯಾಗಿ ನಿಭಾಯಿಸಲಿಲ್ಲವೇನೋ, ಅದನ್ನು ಸರಿಯಾಗಿ ನಿಭಾಯಿಸಲಿಲ್ವೇನೋ, ಎಂದು. ಯಾಕೆಂದರೆ ಈಗಾಗಲೇ ಸ್ಥಾಪಿತ ಪರಿಕಲ್ಪನೆಗಳು ನಮ್ಮ ಮನಸ್ಥಿತಿಯನ್ನು ಹಾಗೆ ರೂಪಿಸಿರುತ್ತವೆ. ಮಹಿಳೆ ಎಲ್ಲವನ್ನೂ ಸರಿಯಾಗಿ ತೂಗಿಸೋದಕ್ಕೆ ನೋಡುತ್ತಾಳೆ. ಆಕೆಗೆ ಧಾರಣ ಶಕ್ತಿ ಅಸಾಧಾರಣವಾಗಿರತ್ತೆ ಎನ್ನುವುದು ಬೇರೆ ವಿಷಯ. ಆದರೆ ಆ ಧಾರಣ ಶಕ್ತಿಗೆ ಸರಿಯಾದ ಬೆಂಬಲ ರಚನೆಯಿಲ್ಲದೇ ಹೋದಾಗ ಒಂದು ಸಮಯದಲ್ಲಿ ಆಕೆ ಕುಸಿದು ಹೋಗುತ್ತಾಳೆ.

ಇಂದು ಭ್ರಷ್ಟಾಚಾರದ ವಿಷಯ ಚರ್ಚೆಗೊಳಗಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?

ಇಂದು ಅತ್ಯಂತ ಭ್ರಷ್ಟ ಎಂದು ಹೇಳಲು ಒಂದು ವ್ಯಾಖ್ಯಾನ ಇದೆಯಾ? ಇಂದು ಭ್ರಷ್ಟಾಚಾರವನ್ನು ಒಂದು ವ್ಯವಸ್ಥೆಯಾಗಿ ಒಪ್ಪಿಕೊಂಡುಬಿಟ್ಟಿರುವ ದುರಂತ ನಮ್ಮೆದುರಿಗಿದೆ. ಅಣ್ಣಾ ಹಜಾರೆಯಂತವರು ಆರಂಭಿಸಿರುವ ಚಳವಳಿ ಒಂದು ಆಶಾಕಿರಣವಾಗಿ ಕಾಣುತ್ತಿರುವುದು ನಿಜ. ಎಲ್ಲೋ ಜೆಪಿ ಶುರು ಮಾಡಿದ ತರದ ಚಳವಳಿ ಭವಿಷ್ಯದಲ್ಲಿ ಇದೆ ಎಂದೇ ನನ್ನ ಅನಿಸಿಕೆ. ನಾವು ಆಶಾವಾದಿಯಾಗಿರಲು ಎಲ್ಲೋ ಸಣ್ಣ ಅವಕಾಶವಿದೆ.


ಜಾತಿ ಸಮಾವೇಶಗಳು ಜರುಗುತ್ತಿವೆ. ಒಂದು ಜಾತಿ ಮಠಾಧೀಶರು ನೇರವಾಗಿ ಸರ್ಕಾರದ ರಕ್ಷಣೆಯಲ್ಲಿ ತೊಡಗಿದ್ದಾರಲ್ಲಾ?



ಇಂದು ಜಾತಿ ಎನ್ನುವುದು ಆಧುನಿಕತೆಯ ಒಂದು ಶಾಪವೇ ಅಲ್ಲವೇ? ಆಧುನಿಕತೆಯ ಹಲವು ಶಾಪಗಳಲ್ಲಿ ಜಾತಿಯನ್ನು ವ್ಯವಸ್ಥೆಯ ಭದ್ರ ಭಾಗವಾಗಿಸಿದ್ದೂ ಒಂದು. ಹೇಗೆ ಕೋಮುವಾದ ಸಹ ಆಧುನಿಕತೆ ಮತ್ತು ವಿಜ್ಞಾನದ ನೆರವಿನಿಂದ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆಯೋ ಹಾಗೆ ಜಾತಿ ವಿಷಯದಲ್ಲೂ ಸಹ ಅದರ ಉಪ ಉತ್ಪನ್ನವಾಗಿದೆ. ನಾವು ಮತ್ತೆ ಮತ್ತೆ ಜಾತಿ ವಿಷಯಕ್ಕೆ ಬರುತ್ತೇವೆಂದರೆ ಭಾರತದ ಮಟ್ಟಿಗೆ ಅದು ತೇಜಸ್ವಿ ಹೇಳುವ ರೀತಿ ಚರ್ಮವೇ ಆಗಿದೆ. ಅದು ಅಷ್ಟು ಸುಲಭವಾಗಿ ಹೋಗುವಂತಾದ್ದಲ್ಲ.

ಯಾವುದೇ ಒಂದು ಸಾಮಾಜಿಕ ಚಳವಳಿಯ ಅನುಪಸ್ಥಿತಿ ಸಾಹಿತ್ಯದ ಮೇಲೆ ಬೀರಿರುವ ಪರಿಣಾಮ ಎಂಥದು?


ಇಂದು ಒಂದು ಮೂರ್ತವಾದ ಚಳವಳಿ ಇಲ್ಲ. ಎಲ್ಲ ಚಳವಳಿಗಳನ್ನು ರೂಪಿಸುವುದು ಒಂದು ತಾತ್ವಿಕ ಆಕೃತಿಯೇ ಅಲ್ಲವೇ? ಆದರೆ ಇಂದು ನಾವಿರುವ ಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲೇ ಯಾವುದೇ ಒಂದು ನಿರ್ದಿಷ್ಟ ತಾತ್ವಿಕ ಆಕೃತಿ ಮೆಲಿನ ನಂಬಿಕೆ ಎನ್ನುವುದು ಹೊರಟುಹೋಗಿದೆ. ಎಲ್ಲ ತಾತ್ವಿಕ ಆಕೃತಿಗಳು ಒಡೆದು ಹೋಗಿರುವ ಅಥವಾ ಎಲ್ಲವೂ ಸೇರಿ ಬೆರೆಯುತ್ತಿರುವ ಸನ್ನಿವೇಶ ಇದು. ಹೀಗೆ ಎಲ್ಲ ತಾತ್ವಿಕ ಆಕೃತಿಗಳು ಬೆರೆತು ಅಖಂಡವಾದ ಮಾನವೀಯ ನೆಲೆಯನ್ನು ಕಟ್ಟಿಕೊಳ್ಳಲು ಪ್ರಯತ್ನ ಪಡುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಒಂದು ಚಳವಳಿ ಎನ್ನುವುದು ಸ್ಪಷ್ಟ ರೂಪದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಚಳವಳಿಗಳು ಇಲ್ಲದ ಕಾಲ ಒಂದು ಬರವಣಿಗೆಯಲ್ಲಿ ಯಾವತ್ತಾದರೂ ಇರುತ್ತೆ ಎಂದು ನನಗೆ ತೋರಿಬಂದಿಲ್ಲ. ಉದಾಹರಣೆಗೆ ತೇಜಸ್ವಿಯವರು ಒಮ್ಮೆ ಮಾತನಾಡುತ್ತಾ ಈ ಸಿದ್ಧಾಂತಗಳಿಗೆಲ್ಲಾ ನನಗೆ ಪ್ರವೇಶವೇ ಇಲ್ಲ ಎಂದರು. ಅದಕ್ಕೆ ನಾನು, ಹಾಗಿಲ್ಲವಾದರೆ ನಿಮ್ಮ ಕಿರಗೂರಿನ ಗಯ್ಯಾಳಿಗಳು ಓದಿ ಸ್ತ್ರೀವಾದಿ ಚರ್ಚೆ ಕಟ್ಟಿಕೋತೇನೆ ಬಿಡಿ ಎಂದಿದ್ದೆ. ಕೃತಿಯನ್ನು ಅವರು ಅರ್ಪಿಸಿರುವುದೂ ಸಹ ತಮ್ಮ ಆತ್ಮಗೌರವಕ್ಕಾಗಿ ಅವಿರತವಾಗಿ ಹೋರಾಡುತ್ತಿರುವ ಮಹಿಳೆಯರಿಗೆ. ಅಲ್ಲಿ ಒಂದು ತತ್ವಶಾಸ್ತ್ರೀಯ ಮಂಡನೆ ಇಲ್ಲವೇ? ಅವರು ಒಪ್ಪಿಕೊಳ್ಳದಿರಬಹುದು. ಲಂಕೇಶ್‌ಗೆ ಕೇಳಿದ್ದಿದ್ರೆ ನನಗೂ ಸಿದ್ಧಾಂತಕ್ಕೂ ಸಂಬಂಧವಿಲ್ಲ ಎಂತಲೇ ಅವರೂ ಹೇಳುತ್ತಿದ್ದರೇನೋ?